(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಬಿ.ಎ. ನಾಲ್ಕನೆಯ ಚತುರ್ಮಾಸಕ್ಕೆ ನಿಗದಿಪಡಿಲಾಗಿರುವ ಪದ್ಯಭಾಗ) (ಭಾಗ – ೧)
ಕವಿ-ಕಾವ್ಯ ಪರಿಚಯ:
ಕುಮಾರವ್ಯಾಸ ಕನ್ನಡದ ಪ್ರತಿಭಾನ್ವಿತ ಹಾಗೂ ಅಗ್ರಗಣ್ಯ ಕವಿಗಳಲ್ಲಿ ಒಬ್ಬ. ಗದುಗಿನ ಸಮೀಪದ ಕೋಳಿವಾಡ ಈತನ ಜನ್ಮಸ್ಥಳ. ಈತನ ಕಾಲ ೧೪ನೆಯ ಶತಮಾನ. ಗದುಗಿನ ವೀರನಾರಾಯಣನ ಪರಮಭಕ್ತನಾಗಿದ್ದ ಕುಮಾರವ್ಯಾಸನ ನಿಜನಾಮಧೇಯ ಗದುಗಿನ ನಾರಣಪ್ಪ. ಸಂಸ್ಕೃತದಲ್ಲಿನ ವ್ಯಾಸಭಾರತವನ್ನು ಕನ್ನಡದಲ್ಲಿ ಮರುನಿರ್ಮಾಣ ಮಾಡಿದ್ದರಿಂದ ಆತ “ಕುಮಾರವ್ಯಾಸ” ಎನಿಸಿಕೊಂಡ. ಆ ಮೂಲಕ ವ್ಯಾಸಭಾರತವನ್ನು ಜನಸಾಮಾನ್ಯರಿಗೂ ತಲುಪುವಂತೆ ಮಾಡಿ ಅಪೂರ್ವ ಯಶಸ್ಸನ್ನು ಗಳಿಸಿದ ಕವಿ ಕುಮಾರವ್ಯಾಸ ಕನ್ನಡದ “ಜನಮಾನಸಕವಿ” ಎನಿಸಿಕೊಂಡಿದ್ದಾನೆ. “ಕರ್ಣಾಟ ಭಾರತ ಕಥಾಮಂಜರಿ” ಈತನ ಕಾವ್ಯ. ಇದಕ್ಕೆ ’ಕುಮಾರವ್ಯಾಸ ಭಾರತ’, ’ಗದುಗಿನ ಭಾರತ’, ’ಕನ್ನಡ ಭಾರತ’, ’ದಶಪರ್ವ ಭಾರತ’, ’ಕರ್ಣಾಟ ಭಾರತ’ ಮೊದಲಾದ ನಾಮಾಂತರಗಳಿವೆ. ವ್ಯಾಸಭಾರತದ ಮೊದಲ ಹತ್ತು ಪರ್ವಗಳನ್ನು ಈತ ಕನ್ನಡದಲ್ಲಿ ಕಾವ್ಯವಾಗಿ ನಿರೂಪಿಸಿದ್ದಾನೆ. ಹಾಗಾಗಿಯೇ ಇದಕ್ಕೆ “ದಶಪರ್ವ ಭಾರತ” ಎಂದು ಹೆಸರು. ಮಹಾಭಾರತದ ಉಳಿದ ಎಂಟೂ ಪರ್ವಗಳನ್ನು ಕಾವ್ಯವಾಗಿ ನಿರೂಪಿಸುತ್ತಿದ್ದರೆ ಕನ್ನಡದಲ್ಲಿ ಇದೊಂದು ಬೃಹತ್ ಕಾವ್ಯವಾಗಿ ಉನ್ನತ ಪ್ರಶಂಸೆಗೆ ಪಾತ್ರವಾಗುತ್ತಿತ್ತು.
ಕನ್ನಡದಲ್ಲಿ ಭಾಮಿನಿ ಷಟ್ಪದಿಯನ್ನು ಸಮಗ್ರವಾಗಿ ಬಳಸಿ, ಕಾವ್ಯರಚಿಸಿದ ಕವಿಗಳಲ್ಲಿ ಈತನೇ ಮೊದಲಿಗ. ಭಾಮಿನಿಯನ್ನು ಹೇಗೋ ಕಾವ್ಯಭಾಮಿನಿಯನ್ನೂ ಹಾಗೆಯೇ ಥಳುಕಿ ಬಳುಕಿಸಬಲ್ಲ ಕವಿ ಕುಮಾರವ್ಯಾಸ. ಕಾವ್ಯದಲ್ಲಿ ಉಪಮಾದಿ ಅಲಂಕಾರಗಳನ್ನು ಬಳಸಿದರೂ ರೂಪಕಾಲಂಕಾರವನ್ನು ಯಥೇಷ್ಟವಾಗಿ ಬಳಸಿ “ರೂಪಕಸಾಮ್ರಾಜ್ಯ ಚಕ್ರವರ್ತಿ” ಎಂದು ಕರೆಸಿಕೊಂಡಿದ್ದಾನೆ. ಈ ಕಾವ್ಯವನ್ನು ಬಹಳ ಭಕ್ತಿ-ಗೌರವಗಳಿಂದ ವಾಚನಮಾಡುವ ಪರಂಪರೆಯೊಂದು ಕರ್ನಾಟಕದಾದ್ಯಂತ ಬೆಳೆದಿರುವುದನ್ನು ಕಂಡಾಗ ಈ ಕಾವ್ಯದ ಮಹತ್ವ ಹಾಗೂ ಅದು ಜನಮಾನಸದಲ್ಲಿ ಪಡೆದುಕೊಂಡಿರುವ ಸ್ಥಾನಮಾನಗಳು ಏನು? ಎಷ್ಟು? ಎಂಬುದು ಸ್ಪಷ್ಟವಾಗುತ್ತದೆ. ಎಳೆಯರಿಂದ ಹಿಡಿದು ವಿದ್ವಾಂಸರವರೆಗೂ ಅವರವರ ನೆಲೆಯಲ್ಲಿ ತಲುಪುವ, ಕಾವ್ಯಾಸ್ವಾದವನ್ನು ಉಂಟುಮಾಡುವ ಈ ಕಾವ್ಯ ಕನ್ನಡ ಸಾಹಿತ್ಯದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಕನ್ನಡ ಭಾಷೆಯ ಪದಭಂಡಾರವನ್ನು ಸೂರೆಮಾಡಿದ ಪ್ರಮುಖ ಕವಿಗಳಲ್ಲಿ ಕುಮಾರವ್ಯಾಸನೂ ಒಬ್ಬ. ಈತ ಭಕ್ತಕವಿ ಮಾತ್ರವಲ್ಲ, ದಾರ್ಶನಿಕ ಕವಿಯೂ ಹೌದು. ಭಾರತ ಕಥೆಯನ್ನು ನಿರೂಪಿಸುತ್ತಿದ್ದರೂ ಆತ ಅದನ್ನು ಕೃಷ್ಣಕಥೆಯನ್ನಾಗಿ ಪರಿವರ್ತಿಸಿದ್ದಾನೆ.
ಕಾವ್ಯಭಾಗದ ಹಿನ್ನೆಲೆ:
ಪಗಡೆಯಾಟದಲ್ಲಿ ಸೋತ ಪಾಂಡವರು ತಮ್ಮ ರಾಜ್ಯವೆಲ್ಲವನ್ನು ಕಳೆದುಕೊಂಡು ಹನ್ನೆರಡು ವರ್ಷಗಳ ಕಾಲ ವನವಾಸವನ್ನೂ ವಿರಾಟನಗರಿಯಲ್ಲಿ ಒಂದು ವರ್ಷ ಕಾಲ ಅಜ್ಞಾತವಾಸವನ್ನೂ ಮುಗಿಸಿದರು. ಅಜ್ಞಾತವಾಸದ ಅವಧಿಯಲ್ಲಿ ಪಾಂಡವರನ್ನು ಪತ್ತೆಹಚ್ಚಿ ಶಾಶ್ವತವಾಗಿ ಅವರನ್ನು ಕಾಡುಪಾಲುಮಾಡಬೇಕೆಂಬ ದುರ್ಯೋಧನನ ತಂತ್ರಗಳು ಫಲಿಸಲಿಲ್ಲ. ನಿಯಮದ ಪ್ರಕಾರ ಪಾಂಡವರು ತಾವು ಹಿಂದೆ ಕಳೆದುಕೊಂಡ ರಾಜ್ಯವನ್ನು ಮರಳಿ ಪಡೆದುಕೊಳ್ಳುವುದಕ್ಕಾಗಿ ಸಂಧಾನಕಾರನನ್ನಾಗಿ ಕೃಷ್ಣನನ್ನು ನಿಯೋಜಿಸಿ, ತಾವು ಹಿಂದೆ ಆಳುತ್ತಿದ್ದ ಇಂದ್ರಪ್ರಸ್ಥವನ್ನು ತಮಗೆ ಬಿಟ್ಟುಕೊಡುವಂತೆಯೂ ಅದಾಗದಿದ್ದರೆ ಕನಿಷ್ಠಪಕ್ಷ ತಮಗೆ ಐದು ಊರುಗಳನ್ನಾದರೂ ನೀಡಬೇಕೆಂದೂ ತಿಳಿಸಿ ಹಸ್ತಿನಾವತಿಗೆ ಕಳುಹಿಸಿಕೊಟ್ಟರು. ಸಂಧಾನಕಾರನಾಗಿ ಹಸ್ತಿನಾವತಿಗೆ ಬಂದ ಕೃಷ್ಣ ದುರ್ಯೋಧನ ರಾಜಮಂದಿರದಲ್ಲಿ ಉಳಿದುಕೊಳ್ಳದೆ ವಿದುರನ ಮನೆಯಲ್ಲಿ ಉಳಿದುಕೊಂಡ. ಇದರಿಂದ ದುರ್ಯೋಧನನಿಗೆ ಅವಮಾನವಾದಂತಾಯಿತು. ಅದಕ್ಕಾಗಿ ಸೇಡುತೀರಿಸಿಕೊಳ್ಳಬೇಕೆಂದು ದುರ್ಯೋಧನ ತೀರ್ಮಾನಿಸಿದ. ಮರುದಿನದ ಸಂಧಾನಸಭೆಯಲ್ಲಿ ನಡೆಯುವ ಕಲಾಪಗಳನ್ನು ಕುಮಾರವ್ಯಾಸ ಈ ಮುಂದಿನ ಭಾಗದಲ್ಲಿ ವರ್ಣಿಸಿದ್ದಾನೆ. ಈ ಕಾವ್ಯಭಾಗದ ಮೊದಲ ಮೂರು ಪದ್ಯಗಳನ್ನು ಆದಿಪರ್ವದ ಪೀಠಿಕಾ ಸಂಧಿಯಿಂದಲೂ ಅನಂತರದ ಪದ್ಯಗಳನ್ನು ಉದ್ಯೋಗ ಪರ್ವದ ಒಂಬತ್ತನೆಯ ಸಂಧಿಯಿಂದಲೂ ಆರಿಸಿಕೊಳ್ಳಲಾಗಿದೆ.
ಶ್ರೀವನಿತೆಯರಸನೆ ವಿಮಲ ರಾ
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನನಿಕರ ದಾತಾರ
ರಾವಣಾಸುರ ಮಥನ ಶ್ರವಣಸು
ಧಾ ವಿನೂತನ ಕಥನ ಕಾರಣ
ಕಾವುದಾನತ ಜನವ ಗದುಗಿನ ವೀರನಾರಯಣ ೧
ಪದ್ಯದ ಅನ್ವಯಕ್ರಮ:
ಶ್ರೀವನಿತೆಯ ಅರಸನೆ, ವಿಮಲ ರಾಜೀವಪೀಠನ ಪಿತನೆ, ಜಗಕೆ ಅತಿ ಪಾವನನೆ, ಸನಕಾದಿ ಸಜ್ಜನ ನಿಕರ ದಾತಾರ, ರಾವಣಾಸುರ ಮಥನ, ಶ್ರವಣಸುಧಾ ವಿನೂತನ ಕಥನ ಕಾರಣ, ಕಾವುದು ಆನತ ಗದುಗಿನ ವೀರನಾರಯಣ.
ಪದ-ಅರ್ಥ:
ಶ್ರೀವನಿತೆಯರಸ –ಲಕ್ಷ್ಮೀಯ ಗಂಡ(ವಿಷ್ಣು); ವಿಮಲ-ಪರಿಶುದ್ಧ; ರಾಜೀವಪೀಠನ-ಕಮಲವನ್ನು ಪೀಠವನ್ನಾಗಿ ಮಾಡಿಕೊಂಡವನು(ಬ್ರಹ್ಮ); ಪಿತ-ತಂದೆ (ವಿಷ್ಣು); ಜಗಕತಿಪಾವನನೆ (ಜಗಕೆ+ಅತಿ+ ಪಾವನನೆ)-ಜಗತ್ತಿಗೆ ಅತ್ಯಂತ ಪುಣ್ಯಪ್ರದನಾದವನೆ; ಸನಕಾದಿ(ಸನಕ+ಆದಿ)-ಸನಕ ಮೊದಲಾದ; ಸಜ್ಜನನಿಕರ-ಸಭ್ಯರ ಸಮೂಹ, ಶ್ರೇಷ್ಠರಾದ ಮುನಿಗಳ ಸಮೂಹ; ದಾತಾರ-ದಾನಿ, ನೀಡುವವನು(ವಿಷ್ಣು); ರಾವಣಾಸುರ ಮಥನ –ಲಂಕಾಧಿಪತಿಯಾದ ರಾವಣನನ್ನು ಕೊಂದವನು; ಶ್ರವಣಸುಧಾ-ಕಿವಿಗಳಿಗೆ ಅಮೃತದಂತಿರುವ; ವಿನೂತನ-ಅತ್ಯಂತ ಹೊಸತಾದ, ಹೊಚ್ಚಹೊಸತಾದ; ಕಥನ ಕಾರಣ-ಕಥೆಗೆ ಕಾರಣಕರ್ತನಾದವನು; ಕಾವುದಾನತ ಜನವ -ಶರಣಾದವರನ್ನು ಕಾಪಾಡಬೇಕು.
ಲಕ್ಶ್ಮೀದೇವಿಯ ಗಂಡನೂ ಪರಿಶುದ್ಧವಾದ ಕಮಲವನ್ನು ಆಸನವನ್ನಾಗಿ ಮಾಡಿಕೊಂಡಿರುವ ಬ್ರಹ್ಮನ ತಂದೆಯೂ ಜಗತ್ತಿಗೆ ಅತ್ಯಂತ ಪುಣ್ಯಪ್ರದನಾದವನೂ ಸನಕ ಮೊದಲಾದ ಶ್ರೇಷ್ಠ ಮುನಿಗಳಿಗೆ ಬಯಸಿದ್ದನ್ನು ನೀಡುವವನೂ ರಾವಣಾಸುರನನ್ನು ನಾಶಮಾಡಿ ಕಿವಿಗಳಿಗೆ ಅಮೃತದಂತಿರುವ ವಿನೂತನವಾದ ಕಥೆ(ರಾಮಾಯಣ)ಗೆ ಕಾರಣಕರ್ತನೂ ಆಗಿರುವ ವಿಷ್ಣುವೇ ನಿನಗೆ ಶರಣಾದ ಲೋಕದ ಜನರನ್ನು ಕಾಪಾಡು.
ವಿಷ್ಣು ಸಂಪತ್ತಿನ ಅಧಿದೇವತೆಯಾಗಿರುವ ಲಕ್ಷ್ಮೀಯ ಗಂಡನಾಗಿದ್ದು ಆದಿಪುರುಷನೆನಿಸಿಕೊಂಡವನು. ಸೃಷ್ಟಿಕರ್ತನೆನಿಸಿರುವ ಬ್ರಹ್ಮನನ್ನು ತನ್ನ ನಾಭಿಕಮಲದಲ್ಲಿ ನೆಲೆಗೊಳಿಸಿ ಆತನ ಜನಕ ಎಂದೆನಿಸಿಕೊಂಡಿದ್ದಾನೆ. ಲೋಕಕ್ಕೆ ಆದಿಪುರುಷನೂ ಲೋಕಪರಿಪಾಲಕನೂ ಎನಿಸಿರುವುದರಿಂದ ಲೋಕದ ಜನರ ಪಾಪವನ್ನು ಕಳೆದು ಪುಣ್ಯವನ್ನು ದಯಪಾಲಿಸಿ ಮೋಕ್ಷವನ್ನು ಕರುಣಿಸುವವನು ಎನಿಸಿಕೊಂಡಿದ್ದಾನೆ. ಮುನಿಶ್ರೇಷ್ಠರಾದ ಸನಕ, ಸನಂದನ ಮೊದಲಾದ ಸಜ್ಜನ ಋಷಿಮುನಿಗಳ ಮನಸ್ಸಿನ ಅಭಿಲಾಷೆಯನ್ನು ಈಡೇರಿಸಿ ದಯಾಮಯಿ ಎನಿಸಿಕೊಂಡಿದ್ದಾನೆ. ತ್ರೇತಾಯುಗದಲ್ಲಿ ರಾಮನಾಗಿ ತನ್ನ ಹೆಂಡತಿ ಸೀತೆಯನ್ನು ಅಪಹರಿಸಿ ನೀತಿಬಾಹಿರನಾಗಿ ನಡೆದುಕೊಂಡ ರಾವಣಾಸುರನನ್ನು ವಧಿಸಿ ಲಂಕೆಯಲ್ಲಿ ಮತ್ತೆ ಧರ್ಮಸಂಸ್ಥಾಪನೆ ಮಾಡಿ ಕೇಳುಗರ ಕಿವಿಗಳಿಗೆ ಅಮೃತದಂತಹ ರಾಮಾಯಣ ಎಂಬ ಕಥೆಯ ಸೃಷ್ಟಿಗೆ ಕಾರಣಕರ್ತನಾಗಿದ್ದಾನೆ. ಹೀಗೆ ಹಲವು ವಿಧಗಳಿಂದ ಉನ್ನತನೂ ಸಂರಕ್ಷಕನೂ ಲೋಕಪರಿಪಾಲಕನೂ ಆಗಿರುವ ವಿಷ್ಣುವು ಶರಣಾಗತರಾದ ಲೋಕದ ಜನರ ಪಾಪಗಳನ್ನು ಕಳೆದು ಪುಣ್ಯವನ್ನು ದಯಪಾಲಿಸುತ್ತ ಕಾಪಾಡಲಿ ಎಂದು ಕುಮಾರವ್ಯಾಸ ಕಾವ್ಯಾರಂಭದಲ್ಲಿ ಪ್ರಾರ್ಥಿಸಿಕೊಳ್ಳುತ್ತಾನೆ.
ಅರಸುಗಳಿಗಿದು ವೀರ ದ್ವಿಜರಿಗೆ
ಪರಮ ವೇದದ ಸಾರ ಯೋಗೀ
ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ
ವಿರಹಿಗಳ ಶೃಂಗಾರ ವಿದ್ಯಾ
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ ೨
ಪದ್ಯದ ಅನ್ವಯಕ್ರಮ:
ಅರಸುಗಳಿಗೆ ಇದು ವೀರ, ದ್ವಿಜರಿಗೆ ಪರಮ ವೇದದ ಸಾರ, ಯೋಗೀಶ್ವರರ ತತ್ವವಿಚಾರ, ಮಂತ್ರಿಜನಕ್ಕೆ ಬುದ್ಧಿಗುಣ, ವಿರಹಿಗಳ ಶೃಂಗಾರ, ವಿದ್ಯಾ ಪರಿಣತರ ಅಲಂಕಾರ, ಕಾವ್ಯಕೆ ಗುರು ಎನಲು ಕುಮಾರವ್ಯಾಸ ಭಾರತವ ರಚಿಸಿದ.
ಪದ-ಅರ್ಥ:
ಅರಸುಗಳಿಗೆ-ರಾಜರಿಗೆ; ವೀರ-ನವರಸಗಳಲ್ಲಿ ಒಂದು; ದ್ವಿಜರಿಗೆ-ಬ್ರಾಹ್ಮಣರಿಗೆ; ಪರಮ-ಶ್ರೇಷ್ಠವಾದ; ವೇದದ ಸಾರ-ವೇದಗಳ ಸತ್ವವನ್ನು ಒಳಗೊಂಡಿರುವ; ಯೋಗೀಶ್ವರರ-ಶ್ರೇಷ್ಠರಾದ ಮುನಿಗಳ; ತತ್ವವಿಚಾರ-ತಾತ್ವಿಕ ವಿಚಾರಗಳನ್ನು ಒಳಗೊಂಡಿರುವ; ಮಂತ್ರಿಜನ-ರಾಜರಿಗೆ ಮಾರ್ಗದರ್ಶನ ಮಾಡುವವರು; ಬುದ್ಧಿಗುಣ-ಜಾಣ್ಮೆಯನ್ನು ನೀಡುವಂತಹುದು; ವಿರಹಿಗಳ -ತಮ್ಮವರನ್ನು ಕಳೆದುಕೊಂಡು ದುಃಖಿಸುವವರ; ಶೃಂಗಾರ-ನವರಸಗಳಲ್ಲಿ ಒಂದು; ವಿದ್ಯಾಪರಿಣತರ –ವಿದ್ಯೆಯನ್ನು ಬಲ್ಲವರ; ಅಲಂಕಾರ-ಅಲಂಕಾರ ಶಾಸ್ತ್ರ, ಕಾವ್ಯಕೆ ಗುರು-ಕಾವ್ಯರಚನೆಗೆ ಮಾರ್ಗದರ್ಶಕವಾಗಿರುವ.
ತನ್ನ ಕಾವ್ಯವಾದ ಕರ್ಣಾಟ ಭಾರತ ಕಥಾಮಂಜರಿಯು ಅರಸುಮಕ್ಕಳಿಗೆ ಶೌರ್ಯ, ಪ್ರತಾಪಗಳನ್ನು ಕಲಿಸಿಕೊಡುವ, ಬ್ರಾಹ್ಮಣರಿಗೆ ಶ್ರೇಷ್ಠವಾದ ವೇದಗಳ ಸಾರವನ್ನು ಪರಿಚಯಿಸುವ, ಶ್ರೇಷ್ಠರಾದ ಮುನಿಗಳಿಗೆ ತತ್ತ್ವವಿಚಾರಗಳನ್ನು ಮನದಟ್ಟುಮಾಡಿಸುವ, ಮಂತ್ರಿಗಳಾದವರಿಗೆ ಬೌದ್ಧಿಕ ಬೆಳವಣಿಗೆಯನ್ನು ಪ್ರಚೋದಿಸುವ, ವಿರಹಿಗಳಿಗೆ ಶೃಂಗಾರರಸವನ್ನು ಪರಿಚಯಿಸುವ, ವಿದ್ಯೆಯನ್ನು ಬಲ್ಲವರಿಗೆ ಅಲಂಕಾರ ಮೊದಲಾದ ಶಾಸ್ತ್ರ ವಿಷಯಗಳನ್ನು ಪರಿಚಯಿಸುವ, ಸಕಲ ಕಾವ್ಯಗಳ ರಚನೆಗೆ ಮಾರ್ಗದರ್ಶಕವಾಗುವಂತೆ ಕುಮಾರವ್ಯಾಸನು ಮಹಾಭಾರತ ಕಾವ್ಯವನ್ನು ರಚಿಸಿದನು.
ಕುಮಾರವ್ಯಾಸ ತನ್ನ ಕಾವ್ಯದ ಹೆಗ್ಗಳಿಕೆಯನ್ನು ಕಾವ್ಯಾರಂಭದಲ್ಲಿ ಹೇಳಿಕೊಂಡಿದ್ದಾನೆ. ತಾನು ಕಾವ್ಯವನ್ನು ಕೇವಲ ಒಂದೆರಡು ವರ್ಗಗಳ ಜನರಿಗೆ ಮಾತ್ರ ಅನ್ವಯಿಸುವಂತೆ ರಚಿಸಿಲ್ಲ. ಹತ್ತಾರು ವರ್ಗದವರಿಗೆ ಅನುಕೂಲವಾಗುವಂತೆ, ರಸಗ್ರಾಹ್ಯವಾಗುವಂತೆ ರಚಿಸಿದ್ದೇನೆ ಎಂದು ಮೊದಲಲ್ಲಿ ನಿವೇದಿಸಿಕೊಂಡಿದ್ದಾನೆ. ಆತನ ಪ್ರಕಾರ ತನ್ನ ಕಾವ್ಯದ ಕಥೆಯು ಅರಸುಮಕ್ಕಳಿಗೆ ಶೌರ್ಯ, ಪ್ರತಾಪಗಳನ್ನು ಕಲಿಸಿಕೊಟ್ಟು ಅವರನ್ನು ಇನ್ನಷ್ಟು ಪರಾಕ್ರಮಶಾಲಿಯರನ್ನಾಗಿ ರೂಪಿಸುತ್ತದೆ. ಬ್ರಾಹ್ಮಣರು ಎಲ್ಲಾ ವೇದಗಳನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡುವುದರ ಬದಲು ತನ್ನ ಕಾವ್ಯವನ್ನು ಓದುವುದರಿಂದ ಅವರಿಗೆ ನಾಲ್ಕು ವೇದಗಳ ಸಾರವು ಇದೊಂದರಲ್ಲಿಯೇ ದೊರೆಯುತ್ತದೆ. ಋಷಿ-ಮುನಿಗಳಿಗೆ ತಾತ್ವಿಕ ವಿಚಾರಗಳನ್ನು ಪರಿಚಯಿಸಿ ತತ್ತ್ವಜಿಜ್ಞಾಸೆಗಳನ್ನು ಪರಿಹರಿಸುತ್ತದೆ. ಮಂತ್ರಿಗಳಿಗೆ ತಮ್ಮ ಕಾರ್ಯನೀತಿಗಳಿಗೆ ಸಂಬಂಧಿಸಿದ ನೂರಾರು ವಿಚಾರಗಳು ಈ ಕಾವ್ಯದಲ್ಲಿರುವುದರಿಂದ ಅವರ ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿದೆ. ಯುದ್ಧದಲ್ಲಿ ತಮ್ಮವರನ್ನು ಕಳೆದುಕೊಂಡು ಪರಿತಪಿಸುತ್ತಿರುವ ವಿರಹಿಗಳ ವಿಪ್ರಲಂಭ ಶೃಂಗಾರ ರಸಕ್ಕೆ ವಿಪುಲ ಅವಕಾಶಗಳೂ ಇಲ್ಲಿ ಪ್ರಾಪ್ತವಾಗಿವೆ. ವಿದ್ಯಾಪರಿಣತರಿಗೆ ಅಲಂಕಾರ ಮೊದಲಾದ ಶಾಸ್ತ್ರಗಳ ಆಳ ಹರಹುಗಳನ್ನು ಪರಿಚಯಿಸುತ್ತದೆ. ಹೀಗೆ ಹತ್ತಾರು ವಿಚಾರಗಳನ್ನು ಒಳಗೊಂಡು ಗುರುಸ್ಥಾನದಲ್ಲಿದ್ದು ಈ ಕಾವ್ಯವನ್ನು ಮುಂದೆ ಕಾವ್ಯಗಳನ್ನು ರಚಿಸುವ ಕವಿಗಳಿಗೆ ಮಾರ್ಗದರ್ಶಕವಾಗುವಂತೆ ತಾನು ರಚಿಸಿದ್ದೇನೆ ಎಂದು ಕುಮಾರವ್ಯಾಸ ನಿವೇದಿಸಿಕೊಂಡಿದ್ದಾನೆ.
ವೇದ ಪಾರಾಯಣದ ಫಲ ಗಂ
ಗಾದಿ ತೀರ್ಥಸ್ನಾನಫಲ ಕೃ
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗ ಫಲ
ಮೇದಿನಿಯನೊಲಿದಿತ್ತ ಫಲ ವ
ಸ್ತ್ರಾದಿ ಕನ್ಯಾದಾನ ಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ ೩
ಪದ್ಯದ ಅನ್ವಯಕ್ರಮ:
ಆದರಿಸಿ ಭಾರತದೊಳ್ ಒಂದು ಅಕ್ಷರವ ಕೇಳ್ದರಿಗೆ ವೇದ ಪಾರಾಯಣದ ಫಲ, ಗಂಗಾದಿ ತೀರ್ಥಸ್ನಾನ ಫಲ, ಕೃಚ್ಛ್ರಾದಿ ತಪಸಿನ ಫಲವು, ಜ್ಯೋತಿಷ್ಟೋಮಯಾಗ ಫಲ, ಮೇದಿನಿಯನ್ ಒಲಿದು ಇತ್ತ ಫಲ, ವಸ್ತ್ರಾದಿ ಕನ್ಯಾದಾನ ಫಲವಹುದು.
ಪದ-ಅರ್ಥ:
ವೇದಪಾರಾಯಣದ ಫಲ-ವೇದಗಳನ್ನು ಪಠಿಸುವುದರಿಂದ ದೊರೆಯುವ ಫಲ; ಗಂಗಾದಿ-ಗಂಗಾ ಮೊದಲಾದ ನದಿಗಳು; ತೀರ್ಥಸ್ನಾನ ಫಲ-ಪವಿತ್ರ ನದಿಗಳ ನೀರಿನಲ್ಲಿ ಸ್ನಾನಮಾಡಿದ ಫಲ; ಕೃಚ್ಛ್ರಾದಿ ತಪಸಿನ ಫಲ– ಕೃಚ್ಛ್ರ ಮೊದಲಾದ ತಪಸ್ಸಿನ ಫಲ (ಕಚ್ಛ್ರ ಎಂಬುದು ತಪಸ್ಸಿನ ಒಂದು ವಿಧ); ಜ್ಯೋತಿಷ್ಟೋಮಯಾಗ-ಒಂದು ಬಗೆಯ ಯಾಗ; ಮೇದಿನಿಯನ್-ಭೂಮಿಯನ್ನು; ಒಲಿದಿತ್ತ-ಒಲಿದು ದಾನನೀಡಿದ; ವಸ್ತ್ರಾದಿ-ಬಟ್ಟೆ ಮೊದಲಾದ; ಕನ್ಯಾದಾನ ಫಲವಹುದು-ಕನ್ಯೆಯನ್ನು ದಾನಮಾಡಿದ(ವಿವಾಹ ಸಂದರ್ಭದಲ್ಲಿ) ಫಲ ದೊರೆಯುತ್ತದೆ; ಆದರಿಸಿ-ಭಕ್ತಿಯಿಂದ, ಗೌರವದಿಂದ; ಭಾರತದೊಳ್-ಮಹಾಭಾರತ ಕಾವ್ಯದಲ್ಲಿ; ಒಂದಕ್ಷರವ ಕೇಳ್ದರಿಗೆ– ಒಂದು ಅಕ್ಷರವನ್ನು ಕೇಳಿದವರಿಗೂ.
ಈ ಕಾವ್ಯದ ಒಂದಕ್ಷರವನ್ನೂ ಬಿಡದೆ ಓದುವುದರಿಂದ ಹಾಗೂ ಕೇಳುವುದರಿಂದ ವೇದಗಳ ಪಾರಾಯಣದ ಫಲ ದೊರೆಯುತ್ತದೆ. ಗಂಗೆ ಮೊದಲಾದ ಪವಿತ್ರನದಿಗಳಲ್ಲಿ ತೀರ್ಥಸ್ನಾನ ಮಾಡಿದ ಫಲ ದೊರೆಯುತ್ತದೆ. ಈ ಕಾವ್ಯದ ಓದು ಕಚ್ಛ್ರ ಮೊದಲಾದ ವಿಶೇಷ ತಪಸ್ಸಿನ ಫಲವನ್ನೂ ಜ್ಯೋತಿಷ್ಟೋಮಯಾಗ ಮೊದಲಾದ ಯಾಗಗಳ ಫಲವನ್ನೂ ದೊರಕಿಸಿಕೊಡುತ್ತದೆ. ಭೂದಾನ, ವಸ್ತ್ರದಾನ ಹಾಗೂ ಕನ್ಯಾದಾನಗಳಿಂದ ದೊರಕುವ ಫಲವನ್ನೂ ದೊರಕಿಸಿಕೊಡುತ್ತದೆ.
ಕುಮಾರವ್ಯಾಸನ ಪ್ರಕಾರ ತನ್ನ ಕಾವ್ಯ ಸಾಮಾನ್ಯವಾದುದಲ್ಲ. ಅದು ಹತ್ತಾರು ಬಗೆಗಳಿಂದ ದೊರಕುವ ಫಲವನ್ನು ದೊರಕಿಸಿಕೊಡುತ್ತದೆ. ನಾಲ್ಕು ವೇದಗಳನ್ನು ದಿನನಿತ್ಯ ಪಾರಾಯಣ ಮಾಡುವುದರಿಂದ ಯಾವ ಫಲ ದೊರೆಯುತ್ತದೆಯೋ ಆ ಫಲವನ್ನು ಇದೊಂದೇ ಕಾವ್ಯ ದೊರಕಿಸಿಕೊಡುತ್ತದೆ. ನಾಲ್ಕು ವೇದಗಳಲ್ಲಿನ ಪುಣ್ಯಫಲಗಳೆಲ್ಲವೂ ಈ ಒಂದು ಕಾವ್ಯದೊಳಗೆ ಅಂತರ್ಗತವಾಗಿವೆ. ತೀರ್ಥಸ್ನಾನವೇ ಪರಮಶ್ರೇಷ್ಠವೆಂದುಕೊಂಡು ಗಂಗಾದಿ ನದಿಗಳಲ್ಲಿ ತೀರ್ಥಸ್ನಾನ ಮಾಡುವುದರಿಂದ ದೊರೆಯುವ ಫಲಗಳೆಲ್ಲವೂ ಈ ಕಾವ್ಯದ ವಾಚನದಿಂದ, ಮಾತ್ರವಲ್ಲ ಕೇಳುವುದರಿಂದಲೂ ದೊರೆಯುತ್ತದೆ. ಕೆಲವರು ವಿವಿಧ ಸ್ವರೂಪದ ತಪಸ್ಸಿನ ಮೂಲಕ ಇಷ್ಟದೇವಾನುಗ್ರಹವನ್ನು, ಇನ್ನು ಕೆಲವರು ಜ್ಯೋತಿಷ್ಟೋಮಯಾಗ ಮೊದಲಾದವುಗಳನ್ನು ಕೈಗೊಂಡು ಇಷ್ಟದೇವಾನುಗ್ರಹವನ್ನು ಪಡೆಯಲು ಹಂಬಲಿಸುತ್ತಾರೆ. ಅಂತಹ ತಪಸ್ಸು ಹಾಗೂ ಯಾಗಗಳಿಂದ ದೊರೆಯುವ ಫಲಗಳೆಲ್ಲವೂ ಈ ಕಾವ್ಯದ ಒಂದಕ್ಷರವನ್ನೂ ಬಿಡದೆ ಓದುವುದರಿಂದ ದೊರೆಯುತ್ತವೆ. ಲೋಕದಲ್ಲಿ ಹತ್ತಾರು ಬಗೆಯ ದಾನಗಳಿದ್ದು ಅವುಗಳಲ್ಲಿ ಭೂದಾನ, ವಸ್ತ್ರದಾನ, ಕನ್ಯಾದಾನ ಮೊದಲಾದವು ಅತ್ಯಂತ ಶ್ರೇಷ್ಠ ದಾನಗಳೆನಿಸಿಕೊಂಡಿವೆ. ಅವೆಲ್ಲವುಗಳಿಂದ ದೊರೆಯುವ ಫಲಗಳೆಲ್ಲವೂ ಈ ಭಾರತ ಕಾವ್ಯವನ್ನು ಓದುವುದರಿಂದ ದೊರೆಯುತ್ತವೆ. ಈ ಕಾವ್ಯದ ಒಂದಕ್ಷರವನ್ನು ಬಿಡದೆ ಆದರದಿಂದ ವಾಚನಮಾಡುವುದರಿಂದ ಮಾತ್ರವಲ್ಲ, ಒಂದಕ್ಷರವನ್ನೂ ಬಿಡದೆ ಕೇಳುವುದರಿಂದಲೂ ಉಳಿದವುಗಳಿಗಿಂತಲೂ ಅಧಿಕ ಫಲ ದೊರೆಯುತ್ತದೆ ಎಂಬುದು ಕುಮಾರವ್ಯಾಸನ ನಿವೇದನೆಯ ಮಾತು.
ಅವಧಿ ಸವೆದುದು ಪಾಂಡವರು ನಿ
ನ್ನವರು ವನವಾಸ ಪ್ರವಾಸದೊ
ಳವರು ನವೆದರು ಕೂಡಿ ಕೊಂಡಿಹುದಧಿಕ ಗುಣ ನಿನಗೆ
ಅವನಿಯರ್ಧವನೀವುದೀಯ
ಧ್ರುವದ ಬಾಳಿಕೆಯೊಳಗೆ ಪುರುಷಾ
ರ್ಥವನು ಸಂಚಿಸೆ ಕಲಿಯಬೇಹುದು ಭೂಪ ಕೇಳೆಂದ ೪
ಪದ್ಯದ ಅನ್ವಯಕ್ರಮ:
ಭೂಪ, ಅವಧಿ ಸವೆದುದು, ಪಾಂಡವರು ನಿನ್ನವರು, ವನವಾಸ ವ್ರವಾಸದೊಳ್ ಅವರು ನವೆದರು, ಕೂಡಿ ಕೊಂಡು ಇಹುದು ನಿನಗೆ ಅಧಿಕ ಗುಣ, ಅವನಿಯ ಅರ್ಧವನ್ನು ಈವುದು, ಈ ಅಧ್ರುವದ ಬಾಳಿಕೆಯೊಳಗೆ ಪುರುಷಾರ್ಥವನು ಸಂಚಿಸೆ ಕಲಿಯಬೇಹುದು ಕೇಳೆಂದ.
ಪದ-ಅರ್ಥ:
ಅವಧಿ ಸವೆದುದು– ಅವಧಿ ಮುಗಿಯಿತು; ವನವಾಸ-ಅರಣ್ಯವಾಸ; ಪ್ರವಾಸದೊಳ್-ಪರ್ಯಟನೆಯಲ್ಲಿ; ನವೆದರು-ಸೊರಗಿದರು; ಕೂಡಿಕೊಂಡಿಹುದು-ಒಟ್ಟಿಗೆ ಬಾಳುವುದು; ಅಧಿಕ ಗುಣ-ಹೆಚ್ಚು ಒಳಿತು; ಅವನಿಯರ್ಧವನು-ಭೂಮಿಯ ಅರ್ಧಭಾಗವನ್ನು; ಈವುದು-ಕೊಡಬೇಕು; ಅಧ್ರುವದ ಬಾಳಿಕೆಯೊಳಗೆ-ಅಸ್ಥಿರವಾದ ಬದುಕಿನಲ್ಲಿ; ಪುರುಷಾರ್ಥವನು-ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು; ಸಂಚಿಸೆ-ಕೂಡಿಕೊಳ್ಳಲು; ಕಲಿಯಬೇಹುದು-ಅರಿತುಕೊಳ್ಳಬೇಕು; ಭೂಪ-ರಾಜ (ಧೃತರಾಷ್ಟ್ರ).
ಪಾಂಡವರ ವನವಾಸದ ಅವಧಿ ಮುಗಿಯಿತು. ಹನ್ನೆರಡು ವರ್ಷಗಳ ವನವಾಸ ಹಾಗೂ ಒಂದು ವರ್ಷದ ಅಜ್ಞಾತವಾಸದ ಅವಧಿಯಲ್ಲಿ ಅವರು ಸೊರಗಿದ್ದಾರೆ. ಪಾಂಡವರು ನಿನಗೆ ಹೊರಗಿನವರಲ್ಲ, ಅವರು ನಿನ್ನವರು, ನೀನು ಅವರನ್ನು ಕೂಡಿಕೊಂಡು ಬಾಳುವುದರಿಂದ ಹಾಗೂ ಹಿಂದೆ ಅವರು ಆಳಿಕೊಂಡಿದ್ದ ಅರ್ಧರಾಜ್ಯವನ್ನು ಅವರಿಗೆ ಹಿಂತಿರುಗಿಸುವುದರಿಂದ ನಿನಗೆ ಹೆಚ್ಚು ಒಳಿತಿದೆ. ಅಸ್ಥಿರವಾದ ಈ ಬದುಕಿನಲ್ಲಿ ಪುರುಷಾರ್ಥಗಳು ನಮ್ಮನ್ನು ಕೂಡಿಕೊಳ್ಳುವಂತೆ ಸಾಧಿಸಿಕೊಂಡು ಬದುಕುವುದರಲ್ಲಿಯೇ ಬದುಕಿನ ಸಾರ್ಥಕತೆಯಿದೆ ಎಂದು ಕೃಷ್ಣನು ದುರ್ಯೋಧನನಿಗೆ ತಿಳಿಹೇಳಿದನು.
ಪಗಡೆಯಾಟದ ನಿಯಮಗಳ ಪ್ರಕಾರ ಪಾಂಡವರು ಹನ್ನೆರಡು ವರ್ಷಗಳ ಕಾಲ ಕಾಡಿನಲ್ಲಿ ಅಲೆದಾಡಿ ಬದುಕು ಸಾಗಿಸುವುದಕ್ಕೆ ಹೆಣಗಾಡಿದರು, ಹಾಗೂ ಒಂದು ವರ್ಷದ ಕಾಲ ತಮ್ಮ ಗುರುತನ್ನು ಮರೆಮಾಚಿಕೊಂಡು ಅಜ್ಞಾತವಾಸವನ್ನು ಮುಗಿಸುವುದರಲ್ಲಿ ಸೊರಗಿಹೋಗಿದ್ದಾರೆ. ಅವರೇನೂ ಪರಕೀಯರಲ್ಲ. ನಿನ್ನ ದಾಯಾದರು. ಪರಾಕ್ರಮಶಾಲಿಗಳೂ ಅದಕ್ಕಿಂತಲೂ ಮಿಗಿಲಾಗಿ ಧರ್ಮಿಷ್ಠರೂ ಆಗಿದ್ದಾರೆ. ರಾಜ್ಯಭಾರದ ವಿಷಯದಲ್ಲಿ ನಿನಗೆ ಅವರಿಂದ ಹೆಚ್ಚು ಅನುಕೂಲವಿದೆ. ನಿಯಮದ ಪ್ರಕಾರ ಅವರು ಷರತ್ತನ್ನು ಪೂರೈಸಿರುವುದರಿಂದ, ಅವರು ಹಿಂದೆ ಆಳಿಕೊಂಡಿದ್ದ ಅರ್ಧರಾಜ್ಯವನ್ನು ಅವರಿಗೆ ಮರಳಿ ನೀಡಿದರೆ ನಿನ್ನ ಔದಾರ್ಯವನ್ನು ತೋರಿಸಿದಂತಾಗುತ್ತದೆ. ಮಾತ್ರವಲ್ಲ, ಅದರಿಂದ ನಿನಗೆ ಹೆಚ್ಚು ಒಳಿತೂ ಇದೆ, ಗೌರವವೂ ಇದೆ. ಬದುಕು ಎಂಬುದು ಅಸ್ಥಿರವಾದುದು. ಮನುಷ್ಯನಿಗೆ ತನ್ನ ಬದುಕು ಎಷ್ಟು ದಿನ? ಸಾವು ಯಾವಾಗ? ಎಂಬುದು ತಿಳಿಯದು. ಹುಟ್ಟಿ ಸಾಯುವುದರೊಳಗೆ ಪುರುಷಾರ್ಥಗಳನ್ನು ಸಾಧಿಸಿಕೊಂಡು ಅದರಿಂದ ದೊರಕಬಹುದಾದ ಫಲಗಳನ್ನು ಸ್ವೀಕರಿಸಿಕೊಂಡು ಗೌರವದಿಂದ, ಲೋಕ ಮೆಚ್ಚುವಂತೆ ಬಾಳುವುದು ರಾಜವಂಶಜರಿಗೆ ಹೆಚ್ಚು ಒಳಿತೂ ಹೌದು, ಶ್ರೇಯಸ್ಸೂ ಕೂಡಾ. ಹಾಗಾಗಿ ಪಾಂಡವರೊಂದಿಗೆ ದ್ವೇಷವಾಗಲೀ ವೈಮಸ್ಸಾಗಲೀ ಸಲ್ಲದು. ಕೂಡಿಕೊಂಡು ಬಾಳುವುದರಲ್ಲಿಯೇ ನಿಮ್ಮ ವಂಶದ ಯಶಸ್ಸು ಅಡಗಿದೆ ಎಂದು ಕೃಷ್ಟ ದುರ್ಯೋಧನನಿಗೆ ತಿಳಿಸಿ ಹೇಳಿದನು.
ಸಾಮವೆಂಬುದು ರಾಜನೀತಿಗೆ
ತಾ ಮನೋಹರ ರೂಪು ಬದುಕುವ
ಭೂಮಿಪಾಲರನಂತ ವಿಭವಕೆ ಬೀಜಮಂತ್ರವಿದು
ಸಾಮತಪ್ಪಿದ ಬಳಿಕ ನೀತಿ ವಿ
ರಾಮವಾಗದೆ ಬಿಡದು ದಂಡದ
ಸೀಮೆಯೆಂಬುದುಪಾಯದಲಿ ಸಾಮಾನ್ಯ ತರವೆಂದ ೫
ಪದ್ಯದ ಅನ್ವಯಕ್ರಮ:
ಸಾಮ ಎಂಬುದು ರಾಜನೀತಿಗೆ ತಾ ಮನೋಹರ ರೂಪು, ಇದು ಬದುಕುವ ಭೂಮಿಪಾಲರ ಅನಂತ ವಿಭವಕೆ ಬೀಜಮಂತ್ರ, ಸಾಮ ತಪ್ಪಿದ ಬಳಿಕ ನೀತಿ ವಿರಾಮವಾಗದೆ ಬಿಡದು. ದಂಡದ ಸೀಮೆ ಎಂಬುದು ಉಪಾಯದಲಿ ಸಾಮಾನ್ಯ ತರವೆಂದ.
ಪದ-ಅರ್ಥ:
ಸಾಮ-ಚತುರೋಪಾಯಗಳಲ್ಲಿ ಒಂದು, ಒಡಂಬಡಿಕೆ; ರಾಜನೀತಿ-ರಾಜಕಾರಣ; ಆಡಳಿತಕ್ಕೆ ಸಂಬಂಧಿಸಿದ ನೀತಿ ನಿಯಮಗಳು ಮತ್ತು ಅವುಗಳ ಅನುಷ್ಠನ; ಮನೋಹರ ರೂಪು-ಸುಂದರವಾದ ಶೋಭೆ; ಭೂಮಿಪಾಲರ-ರಾಜರ; ಅನಂತ ವಿಭವಕೆ-ಅಗಣಿತವಾದ ವೈಭವಕ್ಕೆ; ಬೀಜಮಂತ್ರ-ಮೂಲಮಂತ್ರ; ಸಾಮತಪ್ಪಿದ ಬಳಿಕ-ಸಾಮೋಪಾಯ ಮೀರಿದ ಅನಂತರ; ನೀತಿ ವಿರಾಮವಾಗದೆ ಬಿಡದು-ರಾಜನೀತಿ ಕುಸಿಯದೆ ಇರದು; ದಂಡ-ಚತುರೋಪಾಯಗಳಲ್ಲಿ ಕೊನೆಯದು, ಶಿಕ್ಷೆ; ಸೀಮೆ-ಮಿತಿ; ಉಪಾಯದಲಿ-ತಂತ್ರದಲ್ಲಿ; ಸಾಮಾನ್ಯತರ-ಕ್ಷುಲ್ಲಕವಾದ.
ರಾಜನೀತಿಯ ವಿಚಾರದಲ್ಲಿ ಚತುರೋಪಾಯಗಳು ಅತ್ಯಂತ ಮುಖ್ಯ. ಅದರಲ್ಲೂ ಸಾಮೋಪಾಯಕ್ಕೆ ಮೊದಲ ಮನ್ನಣೆ. ಅದು ರಾಜನೀತಿಯ ಮೊದಲ ಅಸ್ತ್ರ. ರಾಜ್ಯಭಾರವನ್ನು ನಿರ್ವಹಿಸುವ ಸಕಲ ರಾಜರ ಆಡಳಿತನೀತಿಗೆ ಸಂಬಂಧಿಸಿದಂತೆ ಸುಗಮವಾದ ರಾಜ್ಯಪರಿಪಾಲನೆಗೆ ಅದುವೇ ಮೂಲಮಂತ್ರ. ಸಾಮೋಪಾಯವನ್ನು ಬಿಟ್ಟುಬಿಟ್ಟು ಏಕಾಏಕಿ ದಂಡೋಪಾಯವನ್ನು ಪ್ರಯೋಗಿಸಿದರೆ ಅದರಿಂದ ರಾಜನೀತಿ ಕುಸಿಯದೆ ಇರಲಾರದು. ಸಾಮೋಪಾಯವನ್ನು ಬಿಟ್ಟುಬಿಟ್ಟು ದಂಡೋಪಾಯವನ್ನು ಪ್ರಯೋಗಿಸುವುದು ರಾಜನೀತಿಗೆ ವಿರುದ್ಧವಾದ ತೀರಾ ಕ್ಷುಲ್ಲಕವಾದ ಸಂಗತಿ ಎಂದು ಕೃಷ್ಣ ಧೃತರಾಷ್ಟ್ರನಿಗೆ ತಿಳಿಸುತ್ತಾನೆ.
ಪ್ರತಿಯೊಬ್ಬ ರಾಜನೂ ತನ್ನ ರಾಜ್ಯದ ಆಡಳಿತವನ್ನು ಸುಗಮವಾಗಿ ನಡೆಸಬೇಕಾದರೆ ಆತನಿಗೆ ಸಾಮ, ದಾನ, ಭೇದ ಹಾಗೂ ದಂಡಗಳೆಂಬ ಚತುರೋಪಾಯಗಳ ಮಹತ್ವ ಹಾಗೂ ಅವುಗಳನ್ನು ಸಮಯಾನುಸಾರ ಶಾಸನಬದ್ಧವಾಗಿ ಪ್ರಯೋಗಿಸುವುದನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ. ಕೆಲವು ಸಮಸ್ಯೆಗಳ, ಪ್ರಸಂಗಗಳ ಇತ್ಯರ್ಥದ ವಿಚಾರದಲ್ಲಿ ಸಾಮೋಪಾಯಕ್ಕೆ ಮೊದಲ ಮನ್ನಣೆ. ಅದನ್ನು ರಾಜನೀತಿಯ ಮೊದಲ ಅಸ್ತ್ರ ಎಂದೂ ಕರೆಯಲಾಗುತ್ತದೆ. ಮಾತ್ರವಲ್ಲ, ರಾಜ್ಯಭಾರವನ್ನು ಸಮರ್ಥವಾಗಿ ನಿರ್ವಹಿಸಬೇಕೆನ್ನುವ, ರಾಜ್ಯದಲ್ಲಿ ಸುಭಿಕ್ಷತೆ, ಸುರಕ್ಷತೆಗಳು ಸ್ಥಿರವಾಗಿರಬೇಕೆನ್ನುವ ರಾಜರು ತಮ್ಮ ರಾಜನೀತಿಗೆ ಸಂಬಂಧಿಸಿದಂತೆ ಸುಗಮವಾದ ರಾಜ್ಯಪರಿಪಾಲನೆಗೆ ಸಾಮೋಪಾಯವನ್ನೇ ಮೂಲಮಂತ್ರವನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಸಾಮೋಪಾಯವು ಫಲನೀಡದೇ ಇದ್ದಾಗ ಎರಡನೆಯದಾಗಿ ದಾನೋಪಾಯದ ಪ್ರಯೋಗ, ಅದೂ ಫಲಕಾರಯಾಗಿದೇ ಇದ್ದರೆ ಅನಂತರ ಭೇದೋಪಾಯ. ಇವು ಮೂರರಿಂದಲೂ ಕಾರ್ಯಸಾಧನೆಯಾಗದಿದ್ದಾಗ ಮಾತ್ರ ಕೊನೆಯ ಅಸ್ತ್ರವೇ ದಂಡೋಪಾಯ. ಆದರೆ ಸಾಮೋಪಾಯವನ್ನು ಬಿಟ್ಟುಬಿಟ್ಟು ಕೊನೆಯ ಅಸ್ತ್ರ ದಂಡೋಪಾಯವನ್ನು ಪ್ರಯೋಗಿಸಿದರೆ ರಾಜನೀತಿ ಕುಸಿಯಿತು ಎಂದರ್ಥ. ಮಾತ್ರವಲ್ಲ, ಸಾಮೋಪಾಯವನ್ನು ಬಿಟ್ಟುಬಿಟ್ಟು ಮೊದಲಲ್ಲೇ ದಂಡೋಪಾಯವನ್ನು ಪ್ರಯೋಗಿಸುವುದು ರಾಜನೀತಿಗೆ ವಿರುದ್ಧವಾದ ಮತ್ತು ಕ್ಷುಲ್ಲಕವಾದ ಸಂಗತಿ. ಹಾಗಾಗಿ ತಿಳಿದೂ ತಿಳಿದೂ ದಂಡೋಪಾಯವನ್ನು ಪ್ರಯೋಗಿಸುವ ಆತುರ ಬೇಡ ಎಂದು ಕೃಷ್ಣ ದುರ್ಯೋಧನನಿಗೆ ತಿಳಿಹೇಳುತ್ತಾನೆ.
ಮಾವ ಮೊದಲು ಸಹಾಯ ಮಧ್ಯದೊ
ಳಾ ವಿರಾಟನ ಸಖ್ಯ ಕಡೆಯಲಿ
ನೀವು ಮಮ ಜೀವಾಹಿ ಎಂಬಿರಿ ನಿಮ್ಮ ಪಾಂಡವರ
ನಾವು ಕಡೆಯಲಿ ಹೊಱಗು ನಮಗಿ
ನ್ನಾವ ಭೂಪರ ಸಖ್ಯವಿದ್ದುದು
ದೇವ ನಾಚಿಸಬೇಡ ಸಂಧಿಯ ಮಾತ ಮಱೆಯೆಂದ ೬
ಪದ್ಯದ ಅನ್ವಯಕ್ರಮ:
ಮಾವ ಮೊದಲು ಸಹಾಯ, ಮಧ್ಯದೊಳ್ ಆ ವಿರಾಟನ ಸಖ್ಯ, ಕಡೆಯಲಿ ನೀವು ನಿಮ್ಮ ಪಾಂಡವರ ಮಮ ಜೀವಾಹಿ ಎಂಬಿರಿ. ನಾವು ಕಡೆಯಲಿ ಹೊಱಗು. ದೇವ, ನಮಗೆ ಇನ್ನಾವ ಭೂಪನ ಸಖ್ಯವು ಇದ್ದುದು? ನಾಚಿಸಬೇಡ ಸಂಧಿಯ ಮಾತ ಮಱೆ ಎಂದ.
ಪದ-ಅರ್ಥ:
ಮೊದಲು-ಮೊದಲ ಹಂತದಲ್ಲಿ(ವನವಾಸ ಕಾಲದಲ್ಲಿ); ಮಧ್ಯದೊಳ್-ಎರಡನೆಯ ಹಂತದಲ್ಲಿ(ಅಜ್ಞಾತವಾಸದ ಕಾಲದಲ್ಲಿ); ವಿರಾಟನ ಸಖ್ಯ-ವಿರಾಟರಾಜನ ಸ್ನೇಹ; ಕಡೆಯಲಿ-ಮೂರನೆಯ ಹಂತದಲ್ಲಿ(ಸಂಧಾನದ ಹೊತ್ತಿನಲ್ಲಿ); ಮಮ ಜೀವಾಹಿ ಎಂಬಿರಿ -ನನ್ನ ಜೀವವಾಗಿದ್ದಾರೆ ಎನ್ನುವಿರಿ; ಕಡೆಯಲಿ ಹೊಱಗು-ಕೊನೆಗೂ ಲೆಕ್ಕಕ್ಕಿಲ್ಲ; ಭೂಪರ ಸಖ್ಯ-ರಾಜರ ಸ್ನೇಹ; ಸಂಧಿಯ ಮಾತ– ಸಂಧಾನದ ವಿಚಾರವನ್ನು; ಮಱೆ-ಮರೆತುಬಿಡು.
ಕೃಷ್ಣನೇ, ಪಾಂಡವರು ರಾಜ್ಯಭ್ರಷ್ಟರಾಗಿ ವನವಾಸವನ್ನು ಅನುಭವಿಸುತ್ತಿರುವಾಗ ನೀನು ಅವರ ಬೆಂಗಾವಲಾಗಿ ನಿಂತು ಸಹಾಯಮಾಡಿದೆ. ವನವಾಸ ಮುಗಿದು ವಿರಾಟನಗರಿಯಲ್ಲಿ ಅಜ್ಞಾತವಾಸದ ಅವಧಿಯಲ್ಲಿದ್ದಾಗ ವಿರಾಟರಾಜನು ಸಹಾಯಮಾಡಿದ. ಈಗ ಅವೆಲ್ಲವೂ ಮುಗಿದು ಮರಳಿ ರಾಜ್ಯವನ್ನು ಪಡೆಯಬೇಕೆನ್ನುವಾಗ ನೀನು ಬೆಂಗಾವಲಾಗಿ ನಿಂತು ಪಾಂಡವರು ನನಗೆ ಪ್ರಾಣವಾಗಿದ್ದಾರೆ ಎನ್ನುತ್ತಿರುವೆ. ಪಾಂಡವರಿಗೆ ಸಹಾಯಕ್ಕಾಗಿ ಹಲವು ಮಂದಿ ಇದ್ದಾರೆ. ಆದರೆ ಕೊನೆಯಲ್ಲಿ ನಾವು ಮಾತ್ರ ಲೆಕ್ಕಕ್ಕಿಲ್ಲ ಎಂಬಂತಾಗಿದ್ದೇವೆ. ಕೃಷ್ಣ, ಸುಮ್ಮನೆ ಏನೇನೋ ಅಂದುಕೊಂಡು ನಮ್ಮನ್ನು ನಾಚುವಂತೆ ಮಾಡಬೇಡ. ಸಂಧಾನದ ಮಾತುಗಳನ್ನು ಮರೆತುಬಿಡು ಎಂದನು.
ದುರ್ಯೋಧನನ ಪ್ರಕಾರ ಪಾಂಡವರ ಸಹಾಯಕ್ಕೆ ಮತ್ತು ಅವರನ್ನು ಸಮಯ ಹಾಗೂ ಸಂದರ್ಭಾನುಸಾರ ಕಾಪಾಡುವುದಕ್ಕೆ ಹಲವು ರಾಜರೂ ಇದ್ದಾರೆ, ಕೃಷ್ಣನೂ ಇದ್ದಾನೆ. ಪಾಂಡವರು ಪಗಡೆಯಾಟದಲ್ಲಿ ಎಲ್ಲವನ್ನೂ ಕಳೆದುಕೊಂಡಾಗಲೂ ಕೃಷ್ಣನೇ ಬಂದು ಸಹಾಯಮಾಡಿದ್ದಾನೆ. ವನವಾಸದ ಕಾಲದಲ್ಲಿ ಕಾಡಿನಲ್ಲಿ ಪಾಡುಪಡುತ್ತಿರುವ ಕಾಲದಲ್ಲಿಯೂ ಕೃಷ್ಣನೇ ಸಹಾಯಕನಾಗಿ ನಿಂತಿದ್ದಾನೆ. ಅನಂತರ ಅಜ್ಞಾತವಾಸದ ಅವಧಿಯಲ್ಲಿ ವಿರಾಟರಾಜನ ಆಸ್ಥಾನವನ್ನು ಸೇರಿದ ಮೇಲೆ ಒಂದು ವರ್ಷದ ಕಾಲ ಆತ ಸಹಾಯಕನಾಗಿದ್ದಾನೆ. ಜೊತೆಗೆ ಕೃಷ್ಣನೂ ಪಾಂಡವರನ್ನು ಅನುಗ್ರಹಿಸಿದ್ದಾನೆ. ಈಗ ಅದೆಲ್ಲವೂ ಕಳೆದು ರಾಜ್ಯವನ್ನು ಮರಳಿ ಪಡೆದುಕೊಳ್ಳಬೇಕೆಂಬ ಹಂಬಲದಲ್ಲಿದ್ದಾಗಲೂ ಕೃಷ್ಣನೇ ಸಹಾಯಕನಾಗಿ ನಿಂತು ಪಾಂಡವರ ಅಪೇಕ್ಷೆಯಂತೆ ಸಂಧಾನಕಾರನಾಗಿ ಬಂದಿದ್ದಾನೆ. ಈಗ ಅದೇ ಕೃಷ್ಣ ಪಾಂಡವರೇ ನನ್ನ ಪ್ರಾಣ ಎಂದೂ ಹೇಳುತ್ತಿದ್ದಾನೆ. ಪಾಂಡವರ ಹಾಗೆಯೇ ನಾವು ನೆಂಟರಾಗಿದ್ದರೂ ಕೃಷ್ಣ ತಮಗೇನೂ ಸಹಾಯಮಾಡಲಿಲ್ಲ. ನಮ್ಮನ್ನು ಹಾರೈಸಲೂ ಇಲ್ಲ. ನಾವು ಮಾತ್ರ ಕೊನೆಗೂ ಕೃಷ್ಣನ ದೃಷ್ಟಿಯಲ್ಲಿ ಲೆಕ್ಕಕ್ಕಿಲ್ಲದಂತಾದೆವು. ಕೃಷ್ಣ ಈ ರೀತಿಯಲ್ಲಿ ಪಾಂಡವ ಪಕ್ಷಪಾತಿಯಾಗಿ ಕೇವಲ ಅವರ ಒಳಿತನ್ನೇ ಬಯಸುವುದಾದರೆ ನಾವು ಸಂಧಿಯ ಮಾತನ್ನು ಏಕೆ ಒಪ್ಪಿಕೊಳ್ಳಬೇಕು? ಕೃಷ್ಣನ ಈ ಸಂಧಿಯ ಮಾತುಗಳಿಂದ ನಮಗೆ ಮುಜುಗರ ಉಂಟಾಗುತ್ತಿದೆ. ಹಾಗಾಗಿ ಸಂಧಿಯ ಮಾತನ್ನು ಮರೆತುಬಿಡು. ಪಾಂಡವರೊಂದಿಗೆ ಸಂಧಿ ಸಾಧ್ಯವೇ ಇಲ್ಲ ಎಂದು ದುರ್ಯೋಧನ ಸ್ಪಷ್ಟಪಡಿಸುತ್ತಾನೆ.
ಮಾಡು ಸಂಧಿಯನೆಮ್ಮ ವಚನಕೆ
ಕೋಡದಿರು ಸವಿವಾತುಗಳ ನಿನ
ಗಾಡುವವರಿಗೆ ಚಿತ್ತಗೊಡದಿರು ಹಿಸುಣ ಹೊಗಿಸದಿರು
ನಾಡನಾಲಗೆ ಗೆಳೆಯರೆಂಬುದ
ಮಾಡದಿರು ಪಾಂಡವ ನೃಪಾಲರ
ಕೂಡುವಾಳಿಕೆ ಪಥ್ಯ ಕೇಳೆಂದಸುರರಿಪು ನುಡಿದ ೭
ಪದ್ಯದ ಅನ್ವಯಕ್ರಮ:
ಸಂಧಿಯನ್ ಮಾಡು, ಎಮ್ಮ ವಚನಕೆ ಕೋಡದಿರು, ನಿನಗೆ ಸವಿ ಮಾತುಗಳ ಆಡುವವರಿಗೆ ಚಿತ್ತಗೊಡದಿರು, ಹಿಸುಣ ಹೊಗಿಸದಿರು, ನಾಡನಾಲಗೆ ಗೆಳೆಯರ್ ಎಂಬುದ ಮಾಡದಿರು ಪಾಂಡವ ನೃಪಾಲರ ಕೂಡುವಾಳಿಕೆ ಪಥ್ಯ ಕೇಳ್ ಎಂದು ಅಸುರರಿಪು ನುಡಿದ.
ಪದ-ಅರ್ಥ:
ಸಂಧಿ-ಸಂಧಾನ, ಒಪ್ಪಂದ; ಎಮ್ಮ-ನಮ್ಮ; ವಚನಕೆ-ಮಾತಿಗೆ; ಕೋಡದಿರು-ಭಯಪಡಬೇಡ; ಸವಿಮಾತುಗಳ -ಮನಸೆಳೆಯುವ ಮಾತುಗಳನ್ನು; ಚಿತ್ತಗೊಡದಿರು-ಮನಸ್ಸು ಕೊಡಬೇಡ; ಹಿಸುಣ-ಚಾಡಿಕೋರ; ಹೊಗಿಸದಿರು-ಮನಸ್ಸಿಗೆ ತಂದುಕೊಳ್ಳಬೇಡ; ನಾಡನಾಲಗೆ ಗೆಳೆಯರ್-ಬೇಜವಾಬ್ದಾರಿ ಮಾತುಗಳನ್ನಾಡುವ ಗೆಳೆಯರು; ವಿವೇಚನೆಯಿಲ್ಲದ ಮಾತುಗಳನ್ನಾಡುವ ಗೆಳೆಯರು; ಎಂಬುದ-ಅನ್ನುವುದನ್ನು, ಹೇಳುವುದನ್ನು; ನೃಪಾಲ-ರಾಜ; ಕೂಡುವಾಳಿಕೆ(ಕೂಡು+ಬಾಳಿಕೆ)-ಒಗ್ಗಟ್ಟಿನ ಬದುಕು; ಪಥ್ಯ-ಯೋಗ್ಯವಾದುದು, ಹಿತವಾದುದು; ಅಸುರರಿಪು-ರಾಕ್ಷಸರ ವೈರಿ (ಕೃಷ್ಣ).
ಪಾಂಡವರೊಂದಿಗೆ ಸಂಧಾನವನ್ನು ಒಪ್ಪಿಕೊಳ್ಳು, ನನ್ನ ಮಾತುಗಳಿಗೆ ನೀನು ಭಯಪಡುವ ಅವಶ್ಯಕತೆಯಿಲ್ಲ. ಮನಸೆಳೆಯುವ ಮಾತುಗಳ ಮೂಲಕ ನಿನಗೆ ಮೋಸಮಾಡುವವರ ಬಗ್ಗೆ ಎಚ್ಚರದಿಂದಿರು, ಅವರ ಮಾತುಗಳಿಗೆ ಮನಸ್ಸುಕೊಡಬೇಡ. ಚಾಡಿಕೋರರ ಮಾತುಗಳನ್ನು ಮನಸ್ಸಿಗೆ ತಂದುಕೊಳ್ಳಬೇಡ. ಬೇಜವಾಬ್ದಾರಿ ಮಾತುಗಳನ್ನಾಡುವ ಗೆಳೆಯರು ಹೇಳುವ ಮಾತುಗಳನ್ನು, ಕಾರ್ಯಗಳನ್ನು ಕೈಗೊಳ್ಳಬೇಡ. ಪಾಂಡವರೊಂದಿಗೆ ಕೂಡಿಕೊಂಡು ಒಗ್ಗಟ್ಟಿನಿಂದ ಬಾಳುವುದೇ ನಿನಗೆ ಯೋಗ್ಯವಾದುದು ಎಂದು ಅಸುರವೈರಿಯಾದ ಕೃಷ್ಣನು ದುರ್ಯೋಧನನಿಗೆ ಬುದ್ಧಿಹೇಳಿದನು.
ಕೃಷ್ಣನ ಪ್ರಕಾರ ದುರ್ಯೋಧನ ಇದುವರೆಗೂ ಇನ್ಯಾರದ್ದೋ ಮಾತುಗಳನ್ನು ಕೇಳಿ ಯುಕ್ತಾಯುಕ್ತ ವಿವೇಚನೆಯಿಲ್ಲದೆ ಕಾರ್ಯವನ್ನು ಕೈಗೊಂಡವನು. ಇದರಿಂದಾಗಿ ಹಲವು ಅಪವಾದಗಳನ್ನು ಎದುರಿಸಬೇಕಾಯಿತು. ಪಾಂಡವರೊಂದಿಗೆ ಸಂಧಾನವನ್ನು ಒಪ್ಪಿಕೊಳ್ಳುವುದರಿಂದ ನಿನಗೆ ಒಳಿತಿದೆ. ಸಂಧಾನದ ನನ್ನ ಮಾತುಗಳನ್ನು ಕೇಳಿಕೊಂಡು ನೀನು ಭಯಪಡುವ ಅವಶ್ಯಕತೆಯಿಲ್ಲ. ಸಂಧಾನದ ಬಗೆಗಿನ ನನ್ನ ಮಾತುಗಳು ನಿನ್ನ ಸ್ನೇಹಿತರ ಮಾತುಗಳಿಗೆ ವಿರುದ್ಧವೆನಿಸಬಹುದು. ಅವರೆಲ್ಲರೂ ಮನಸೆಳೆಯುವ ಮಾತುಗಳ ಮೂಲಕ ನಿನಗೆ ಮೋಸಮಾಡುವವರು. ಆದುದರಿಂದ ಅವರ ಮಾತುಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಅವರೆಲ್ಲರ ಬಗ್ಗೆಯೂ ಎಚ್ಚರದಿಂದಿರುವುದು ಒಳಿತು. ಇನ್ನು ಕೆಲವರು ಚಾಡಿಮಾತುಗಳನ್ನಾಡುವ ಚಾಡಿಕೋರರು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವುದಕ್ಕೆ, ಲಾಭಗಳಿಸುವುದಕ್ಕೆ ಹಾತೊರೆಯುವವರು. ಮತ್ತೆ ಕೆಲವರು ಬೇಜವಾಬ್ದಾರಿಯ ಮಾತುಗಳನ್ನಾಡುತ್ತ ರಾಜನೀತಿಗೆ ವಿರುದ್ಧವಾದ ಕಾರ್ಯಗಳನ್ನು ಕೈಗೊಳ್ಳುವುದಕ್ಕೆ ಪ್ರಚೋದಿಸುವವರು. ಇಂತಹವರ ಮಾತುಗಳನ್ನು ಕೇಳುವುದಾಗಲೀ, ಅವರು ಸಲಹೆಯ ಕಾರ್ಯಗಳನ್ನು ಕೈಗೊಳ್ಳುವುದಾಗಲೀ ಅವನತಿಯ ಕಡೆಗೆ ಹೆಜ್ಜೆಹಾಕಿದಂತೆ. ಈಗಾಗಲೇ ಇಂತಹವರ ಮಾತುಗಳನ್ನು ಕೇಳಿ, ಅವರು ಹೇಳಿದಂತೆ ಕಾರ್ಯಗಳನ್ನು ಕೈಗೊಂಡು ಸಾಕಷ್ಟು ಅಪವಾದಗಳು ಒದಗಿವೆ. ಅವೆಲ್ಲವನ್ನೂ ಬಿಟ್ಟುಬಿಟ್ಟು ನಿನ್ನ ಸಹೋದರರಾದ ಪಾಂಡವರನ್ನು ಕೂಡಿಕೊಂಡು ಒಗ್ಗಟ್ಟಿನಿಂದ ಬಾಳಿದರೆ ಅದು ನಿನಗೂ ಒಳ್ಳೆಯ ಮನ್ನಣೆಯನ್ನು ತಂದುಕೊಡುತ್ತದೆ ಎಂದು ಕೃಷ್ಣ ದುರ್ಯೋಧನನಿಗೆ ತಿಳಿಹೇಳುತ್ತಾನೆ.
ಅವರಿಗಿಂದ್ರಪ್ರಸ್ಥದಲಿ ರಾ
ಜ್ಯವನು ಕುಳಸಹಿತಿತ್ತು ನೀ ಪಾಂ
ಡವ ಪ್ರತಿಷ್ಠಾಚಾರ್ಯನೆಂಬೀ ಬಿರುದ ಸಲಿಸಿದೊಡೆ
ಅವನಿಯಲಿ ನಿನ್ನೊಡನೆ ತಲೆಯೆ
ತ್ತುವ ನೃಪಾಲಕರಿಲ್ಲ ನುಡಿಗಳು
ಕಿವಿಗೆ ಕರ್ಕಶವೀಗಲಾದೊಡೆ ಮುಂದೆ ಲೇಸೆಂದ ೮
ಪದ್ಯದ ಅನ್ವಯಕ್ರಮ:
ಅವರಿಗೆ ಇಂದ್ರಪ್ರಸ್ಥದಲಿ ರಾಜ್ಯವನು ಕುಳ ಸಹಿತ ಇತ್ತು ನೀ ಪಾಂಡವ ಪ್ರತಿಷ್ಠಾಚಾರ್ಯನೆಂಬ ಈ ಬಿರುದ ಸಲಿಸಿದೊಡೆ ಅವನಿಯಲಿ ನಿನ್ನೊಡನೆ ತಲೆ ಎತ್ತುವ ನೃಪಾಲಕರು ಇಲ್ಲ, ಈಗ ನುಡಿಗಳು ಕಿವಿಗೆ ಕರ್ಕಶವು, ಆದೊಡೆ ಮುಂದೆ ಲೇಸು ಎಂದ.
ಪದ-ಅರ್ಥ:
ಅವರಿಗೆ-ಪಾಂಡವರಿಗೆ; ಇಂದ್ರಪ್ರಸ್ಥದಲಿ-ಪಾಂಡವರು ಹಿಂದೆ ಆಳಿಕೊಂಡಿದ್ದ ಭೂಭಾಗದಲ್ಲಿ; ಕುಳಸಹಿತಿತ್ತು(ಕುಳ+ಸಹಿತ+ಇತ್ತು)-ಅರಮನೆ ಸಹಿತವಾಗಿ ಕೊಟ್ಟು; ಪಾಂಡವ ಪ್ರತಿಷ್ಠಾಚಾರ್ಯ-ಪಾಂಡವರನ್ನು ರಾಜ್ಯದಲ್ಲಿ ನೆಲೆಗೊಳಿಸಿದವನು; ಬಿರುದ ಸಲಿಸಿದೊಡೆ-ಬಿರುದನ್ನು ಧರಿಸಿದರೆ, ಬಿರುದಿಗೆ ಪಾತ್ರನಾದರೆ; ಅವನಿಯಲಿ-ಭೂಮಿಯಲ್ಲಿ; ನಿನ್ನೊಡನೆ-ನಿನಗೆ ಎದುರಾಗಿ; ತಲೆಯೆತ್ತುವ-ವಿರೋಧಿಸುವ, ಪ್ರತಿಭಟಿಸುವ; ನೃಪಾಲಕರಿಲ್ಲ-ರಾಜರು ಇರುವುದಿಲ್ಲ; ನುಡಿಗಳು-ಮಾತುಗಳು; ಕಿವಿಗೆ ಕರ್ಕಶವೀಗ-ಕಿವಿಗಳಿಗೆ ಈಗ ಕರ್ಕಶವಾಗಿರುತ್ತವೆ; ಮುಂದೆ ಲೇಸು-ಭವಿಷ್ಯದಲ್ಲಿ ಒಳಿತು.
ಕೃಷ್ಣನು ದುರ್ಯೋಧನನನ್ನು ಕುರಿತು, “ನೀನು ಪಾಂಡವರಿಗೆ ಅವರು ಹಿಂದೆ ಆಳಿಕೊಂಡಿದ್ದ ಇಂದ್ರಪ್ರಸ್ಥವನ್ನು ಅರಮನೆ ಸಹಿತವಾಗಿ ಅವರಿಗೆ ನೀಡಿ ನೀನು ಪಾಂಡವ ಪ್ರತಿಷ್ಠಾಚಾರ್ಯ ಎಂಬ ಗೌರವಕ್ಕೆ ಪಾತ್ರನಾದರೆ, ಮುಂದೆ ಈ ಭೂಮಿಯಲ್ಲಿ ನಿನ್ನನ್ನು ವಿರೋಧಿಸುವ, ನಿನ್ನೊಡನೆ ಯುದ್ಧಹೂಡುವ ಯಾವ ರಾಜರೂ ಇರುವುದಿಲ್ಲ. ನನ್ನ ಮಾತುಗಳು ಈಗ ನಿನ್ನ ಕಿವಿಗಳಿಗೆ ಕರ್ಕಶವೆನಿಸಬಹುದು. ಆದರೆ ಮುಂದೆ ಭವಿಷ್ಯದಲ್ಲಿ ನಿನಗೆ ಇದರಿಂದ ಒಳಿತಾಗುತ್ತದೆ” ಎಂದನು.
ಪಾಂಡವರೊಂದಿಗೆ ಸಂಧಿಮಾಡಿಕೊಳ್ಳುವ ವಿಚಾರದಲ್ಲಿ ಹಿಂದೇಟುಹಾಕುತ್ತಿರುವ ದುರ್ಯೋಧನನಿಗೆ ಕೃಷ್ಣ ಬುದ್ಧಿಹೇಳುತ್ತಾನೆ. ಇಂದ್ರಪ್ರಸ್ಥ ಈ ಹಿಂದೆ ಪಾಂಡವರಿಗೆ ಕೊಡಲಾಗಿದ್ದ ರಾಜ್ಯ. ಪಗಡೆಯಾಟದಲ್ಲಿ ಅದನ್ನು ಕಳೆದುಕೊಂಡಿದ್ದರೂ ಷರತ್ತಿನ ಪ್ರಕಾರ ಅವರು ವನವಾಸ, ಅಜ್ಞಾತವಾಸಗಳನ್ನು ಯಶಸ್ವಿಯಾಗಿ ಪೂರೈಸಿರುವುದರಿಂದ ಈಗ ಅವರು ಆ ರಾಜ್ಯಕ್ಕೆ ಹಕ್ಕುದಾರರು ಎನಿಸಿಕೊಳ್ಳುತ್ತಾರೆ. ಅದನ್ನು ಪಡೆಯುವ ಹಕ್ಕು ಅವರಿಗೂ ಇದೆ, ಕೊಡುವ ಹಕ್ಕು ನಿನಗೂ ಇದೆ. ಹಾಗಾಗಿ ನೀನು ಅದನ್ನು ಪಾಂಡವರಿಗೆ ಅರಮನೆ ಸಹಿತವಾಗಿ ಹಿಂದಿರುಗಿಸಬೇಕೆಂದೂ ಅದರಿಂದ ನಿನಗೆ ಪಾಂಡವ ಪ್ರತಿಷ್ಠಾಚಾರ್ಯ ಎಂಬ ಗೌರವವೂ ಬಿರುದೂ ಸಲ್ಲುತ್ತದೆ ಎಂಬುದೂ ಕೃಷ್ಣನ ನಿಲುವು. ಇದರಿಂದಾಗಿ ಮುಂದೆ ಭವಿಷ್ಯದಲ್ಲಿ ನಿನಗೆ ಪಾಂಡವರ ಒಡನಾಟವಿದೆ ಎಂಬುದು ಲೋಕಕ್ಕೆ ತಿಳಿದ ಮೇಲೆ ನಿನ್ನೊಂದಿಗೆ ಯಾವ ರಾಜನೂ ಯುದ್ಧಕ್ಕೆ ಮನಸ್ಸು ಮಾಡುವುದಾಗಲೀ ವಿರೋಧಿಸುವುದಕ್ಕಾಗಲೀ ಸಾಧ್ಯವಾಗುವುದಿಲ್ಲ. ಇದರಿಂದ ನೀನೂ ಸುರಕ್ಷಿತನಾಗಿ ರಾಜ್ಯಭಾರ ನಡೆಸಿಕೊಂಡಿರಲು ಸಾಧ್ಯ. ಮೇಲಾಗಿ ಎರಡೂ ವಂಶದೊಳಗೆ ಬಾಂಧವ್ಯ ಇನ್ನಷ್ಟು ಗಟ್ಟಿಗೊಳ್ಳುತ್ತದೆ. ಈಗ ನನ್ನ ಮಾತುಗಳು ನಿನ್ನ ಕಿವಿಗಳಿಗೆ ಕರ್ಕಶವೆನಿಸಬಹುದಾದರೂ ಮುಂದೆ ಭವಿಷ್ಯದಲ್ಲಿ ಅದರಿಂದ ಒಳಿತಾಗುತ್ತದೆ ಎಂದು ಕೃಷ್ಣ ತನ್ನ ಅಭಿಪ್ರಾಯವನ್ನು ದುರ್ಯೋಧನನಿಗೆ ಮತ್ತೆ ಮನದಟ್ಟುಮಾಡಿಸುತ್ತಾನೆ.
ಧರೆಯ ನೃಪರಿಗೆ ಹಸ್ತಿನಾಪುರ
ದರಮನೆಯ ಬಾಗಿಲಲಿ ಸಮಯವು
ದೊರಕಲಂತದು ಪುಣ್ಯವೆಂಬೀ ಸಾರ್ವಭೌಮತೆಯ
ಸಿರಿಗೆ ಪಾಂಡವರನ್ಯರಾದೊಡೆ
ಮೆಱೆಯಲಱಿದೆ ನಿಮ್ಮ ಸಿರಿ ಕಾ
ತರಿಗತನವನು ಮಾಣು ಕೇಳೆಂದಸುರರಿಪು ನುಡಿದ ೯
ಪದ್ಯದ ಅನ್ವಯಕ್ರಮ:
ಧರೆಯ ನೃಪರಿಗೆ ಹಸ್ತಿನಾಪುರದ ಅರಮನೆಯ ಬಾಗಿಲಲಿ ಸಮಯವು ದೊರಕಲ್ ಅಂತದು ಪುಣ್ಯವು ಎಂಬ ಈ ಸಾರ್ವಭೌಮತೆಯ ಸಿರಿಗೆ ಪಾಂಡವರ್ ಅನ್ಯರ್ ಆದೊಡೆ ಮೆಱೆಯಲ್ ಅಱಿದೆ ನಿಮ್ಮ ಸಿರಿ, ಕಾತರಿಗತನವನು ಮಾಣು ಕೇಳ್ ಎಂದು ಅಸುರರಿಪು ನುಡಿದ.
ಪದ-ಅರ್ಥ:
ಧರೆಯ ನೃಪರಿಗೆ-ಭೂಪಾಲಕರಿಗೆ, ಭೂಮಿಯನ್ನಾಳುವ ರಾಜರಿಗೆ; ಹಸ್ತಿನಾಪುರದ-ಕೌರವರ ರಾಜ್ಯದ ರಾಜಧಾನಿಯ; ಅರಮನೆಯ ಬಾಗಿಲಲಿ-ಅರಮನೆಯ ದ್ವಾರದಲ್ಲಿ; ಸಮಯವು ದೊರಕಲ್-ಭೇಟಿಗೆ ಅವಕಾಶ ದೊರೆತರೆ; ಅಂತದು-ಹಾಗೆ ಅದು; ಸಾರ್ವಭೌಮತೆಯ ಸಿರಿಗೆ-ಚಕ್ರವರ್ತಿತನದ ಮೇಲ್ಮೆಗೆ, ಪಾಂಡವರನ್ಯರಾದೊಡೆ (ಪಾಂಡವರ್+ಅನ್ಯರ್+ಆದೊಡೆ)-ಪಾಂಡವರು ಹೊರಗಿವವರು ಎಂದಾದರೆ; ಮೆಱೆಯಲಱಿದೆ-ಗೌರವಕ್ಕೆ ಪಾತ್ರವಾಗುವುದೆ, ಮೆರೆಯಲು ಸಾಧ್ಯವೆ; ಕಾತರಿಗತನವನು ಮಾಣು-ಕಳವಳವನ್ನು ಬಿಟ್ಟುಬಿಡು; ಅಸುರರಿಪು-ರಾಕ್ಷಸವೈರಿ (ಕೃಷ್ಣ).
ದುರ್ಯೋಧನ ಪಾಂಡವರಿಗೆ ಅವರ ರಾಜ್ಯವನ್ನು ಮರಳಿ ನೀಡಿದರೆ ನಿನ್ನ ಸಾರ್ವಭೌಮತ್ವಕ್ಕೆ(ಚಕ್ರವರ್ತಿತನಕ್ಕೆ) ಇನ್ನಷ್ಟು ಗೌರವ ಪ್ರಾಪ್ತವಾಗುತ್ತದೆ. ಎಲ್ಲಾ ಸಾಮಂತ ರಾಜರಿಗೂ ಹಸ್ತಿನಾವತಿಯ ಅರಮನೆಯ ಬಾಗಿಲಲ್ಲಿ ಭೇಟಿಗೆ ಅವಕಾಶವೂ ದೊರಕುತ್ತದೆ. ಮಾತ್ರವಲ್ಲ, ನಿನ್ನ ಹಾಗೂ ನಿನ್ನ ಅರಮನೆಯ ಘನತೆ, ಗೌರವಗಳು ಹೆಚ್ಚಾಗುತ್ತವೆ. ಒಂದು ವೇಳೆ ಈ ಚಕ್ರವರ್ತಿತನದ ಮೇಲ್ಮೆಗೆ ಪಾಂಡವರು ಹೊರಗಿನವರು ಎಂದಾದರೆ ಈ ರೀತಿಯ ಗೌರವಕ್ಕೆ ಪಾತ್ರನಾಗಲು ಸಾಧ್ಯವೆ? ಹಾಗಾಗಿ ನಿನ್ನ ಮನಸ್ಸಿನಲ್ಲಿನ ಕಳವಳವನ್ನು ಬಿಟ್ಟುಬಿಡು ಎಂದು ಕೃಷ್ಣ ಸ್ಪಷ್ಟಪಡಿಸುತ್ತಾನೆ.
ಸಾರ್ವಭೌಮರಿಗೂ ಸಾಮಂತ ರಾಜರಿಗೂ ಮಾಂಡಳಿಕರಿಗೂ ಅಂತಸ್ತಿನಲ್ಲಿ ತುಂಬಾ ಭೇದವಿರುತ್ತದೆ. ಸಾರ್ವಭೌಮರು ಅತ್ಯಂತ ಪರಾಕ್ರಮಿಗಳು, ಧರ್ಮಿಷ್ಟರು, ನೀತಿವಂತರು ಎಂದಾದರೆ ಸಾಮಂತ ರಾಜರಾಗಲೀ ಮಾಂಡಳಿಕರಾಗಲೀ ಸಾರ್ವಭೌಮರ ಅರಮನೆಯ ಬಾಗಿಲಲ್ಲಿ ಭೇಟಿಗೆ ಕಾತರಿಸುತ್ತಿರುತ್ತಾರೆ. ಹಾಗೆ ಸಾರ್ವಭೌಮರನ್ನು ಭೇಟಿಮಾಡುವುದೂ ಅವರ ಪಾಲಿಗೆ ಘನತೆಯ, ಗೌರವದ ಮಾತ್ರವಲ್ಲ, ಹೆಮ್ಮೆಯ ವಿಚಾರವೆನಿಸಿಕೊಳ್ಳುತ್ತದೆ. ನೀನು ಪಾಂಡವರೊಂದಿಗೆ ಸಂಧಾನಮಾಡಿಕೊಂಡು ಅವರ ರಾಜ್ಯವನ್ನು ಹಿಂದಿರುಗಿಸಿ ಪಾಂಡವರೊಂದಿಗೆ ಅತ್ಯಂತ ಪ್ರೀತಿ ವಿಶ್ವಾಸಗಳಿಂದ ಕೂಡಿ ಬಾಳುತ್ತಾನೆ ಎಂದಾದರೆ ಅದು ನಿನ್ನ ಸಾಮಂತ ರಾಜರಿಗೂ ಮಾಂಡಳಿಕರಿಗೂ ಅತ್ಯಂತ ಹೆಮ್ಮೆಯ, ಮಹತ್ವದ ಸಂಗತಿ ಎನಿಸಿಕೊಂಡು ಅವರೆಲ್ಲರೂ ಆಗಾಗ ಬಂದು ನಿನ್ನನ್ನು ಭೇಟಿಯಾಗಿ ರಾಜತಾಂತ್ರಿಕ ವಿಚಾರಗಳನ್ನು ವಿನಿಮಯಮಾಡಿಕೊಳ್ಳಬಹುದು. ಇದರಿಂದ ನಿನ್ನ ಅರಮನೆಯ ಘನತೆಯೂ ಗೌರವವೂ ಹೆಚ್ಚುತ್ತದೆ. ಒಂದು ವೇಳೆ ಪಾಂಡವರೊಂದಿಗೆ ಸಂಧಾನಮಾಡಿಕೊಳ್ಳದೆ ಅವರ ರಾಜ್ಯವನ್ನು ತಿರುಗಿ ಒಪ್ಪಿಸದಿದ್ದರೆ ಆ ರೀತಿಯ ಗೌರವಕ್ಕೆ ಪಾತ್ರನಾಗಲು ಸಾಧ್ಯವೇ? ಸಾರ್ವಭೌಮನಾದವನು ಕೇವಲ ಪರಾಕ್ರಮಿಯಾಗಿದ್ದರಷ್ಟೇ ಸಾಲದು. ಅದಕ್ಕಿಂತಲೂ ಹೆಚ್ಚಾಗಿ ಅತ್ಯಂತ ಉದಾರಿಯೂ ಪರೋಪಕಾರಿಯೂ ಚತುರನೂ ಆಗಿರಬೇಕು. ಹಾಗಾಗಿ ಪಾಂಡವರೊಂದಿಗೆ ರಾಜ್ಯವನ್ನು ಹಂಚಿಕೊಳ್ಳುವುದರಲ್ಲಿ ನಿನಗೆ ಒಳಿತಿದೆ. ಪಾಂಡವರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಬೆಸೆದಂತಾಗುತ್ತದೆ ಮಾತ್ರವಲ್ಲ, ಅದರಿಂದ ಪಾಂಡವರಿಗೂ ಒಂದು ಭದ್ರತೆ ದೊರೆತಂತಾಗುತ್ತದೆ ಎಂದು ಕೃಷ್ಣ ಸ್ಪಷ್ಟಪಡಿಸುತ್ತಾನೆ.
ಯಮಜ ನಿನಗೊಳ್ಳಿದನು ಪಾರ್ಥನ
ಮಮತೆ ನಿನ್ನಲಿ ಹಿರಿದು ಭೀಮನ
ತಮದ ನುಡಿ ಹಿಂಗಿದವು ನಕುಲನು ನಿನ್ನೊಳೆರಡಱಿಯ
ತಮತಮಗೆ ತಮ್ಮೈವರೂ ನಿ
ನ್ನಮಲ ವಚನವ ಹಾರಿಹರು ಉ
ಭ್ರಮಿತನವನು ಮಾಡದಿರು ಸೋದರರ ಸಲಹೆಂದ ೧೦
ಪದ್ಯದ ಅನ್ವಯಕಮ:
ನಿನಗೆ ಯಮಜ ಒಳ್ಳಿದನು, ನಿನ್ನಲಿ ಪಾರ್ಥನ ಮಮತೆ ಹಿರಿದು, ಭೀಮನ ತಮದ ನುಡಿ ಹಿಂಗಿದವು, ನಿನ್ನೊಳ್ ನಕುಲನು ಎರಡಱಿಯ, ತಮತಮಗೆ ತಮ್ಮೈವರೂ ನಿನ್ನ ಅಮಲ ವಚನವ ಹಾರಿಹರು ಉಭ್ರಮಿತವನು ಮಾಡದಿರು, ಸೋದರರ ಸಲಹೆಂದ.
ಪದ-ಅರ್ಥ:
ಯಮಜ-ಧರ್ಮರಾಯ; ನಿನಗೊಳ್ಳಿದನು-ನಿನಗೆ ಒಳಿತನ್ನು ಬಯಸುವವನು; ಪಾರ್ಥ-ಅರ್ಜುನ; ಹಿರಿದು-ದೊಡ್ಡದು; ತಮದ ನುಡಿ-ಸಿಟ್ಟಿನ ಮಾತು; ಹಿಂಗಿದವು-ಕಳೆದುಹೋದವು, ಮರೆತುಹೋದವು; ನಿನ್ನೊಳ್-ನಿನ್ನಲ್ಲಿ; ಎರಡಱಿಯ-ಭೇದಭಾವ ತೋರಿಸಲಾರ; ತಮತಮಗೆ-ತಮ್ಮಷ್ಟಕ್ಕೆ; ತಮ್ಮೈವರೂ-ಐದು ಮಂದಿ ಪಾಂಡವರು; ನಿನ್ನಮಲ-ನಿನ್ನ ಪರಿಶುದ್ಧವಾದ; ವಚನವ-ಮಾತನ್ನು; ಹಾರಿಹರು-ನಿರೀಕ್ಷಿತ್ತಿದ್ದಾರೆ; ಉಭ್ರಮಿತವನು-ಅತಿಯಾದ ಭ್ರಾಂತಿಯನ್ನು; ಮಾಡದಿರು-ತೋರಿಸಬೇಡ.
ಪಾಂಡವರು ಕಳೆದ ಹದಿಮೂರು ವರ್ಷಗಳಿಂದ ಬಳಲಿದರೂ ಧರ್ಮರಾಯ ನಿನಗೆ ಒಳಿತನ್ನೇ ಬಯಸುತ್ತಿದ್ದಾನೆ, ಅರ್ಜುನ ನಿನ್ನಲ್ಲಿ ಹಿರಿದಾದ ಮಮತೆಯನ್ನೇ ಇರಿಸಿಕೊಂಡಿದ್ದಾನೆ. ಭೀಮ ನಿನ್ನ ಮೇಲಿರುವ ಎಲ್ಲಾ ದ್ವೇಷವನ್ನೂ ಮರೆತ್ತಿದ್ದಾನೆ. ಇನ್ನು ನಕುಲ ನಿನ್ನಲ್ಲಿ ಯಾವ ಭೇದಭಾವನನ್ನೂ ತೋರಿಸಲಾರ. ತಮ್ಮಷ್ಟಕ್ಕೆ ಐದು ಮಂದಿ ಪಾಂಡವರೂ ನಿನ್ನ ಪರಿಶುದ್ಧವಾದ ಕೂಡಿಬಾಳುವಿಕೆಯ ಮಾತುಗಳನ್ನು ನಿರೀಕ್ಷಿಸುತ್ತಿದ್ದಾರೆ. ಹಾಗಾಗಿ ನಿನ್ನಲ್ಲಿರುವ ಅತಿಯಾದ ಭ್ರಾಂತಿಯನ್ನು ಪ್ರದರ್ಶಿಸಬೇಡ ಎಂದು ಕೃಷ್ಣನು ದುರ್ಯೋಧನನಿಗೆ ತಿಳಿಹೇಳಿದನು.
ಕೌರವ ಹಾಗೂ ಕೌರವರೊಳಗಿನ ವೈರುಧ್ಯದಿಂದಾಗಿ, ವಿಷಮ್ಯದಿಂದಾಗಿ ಹಲವಾರು ಅಚಾತುರ್ಯಗಳು ನಡೆದುಹೋಗಿವೆ. ಪಾಂಡವರು ಪಗಡೆಯನ್ನಾಡಿ ಎಲ್ಲವನ್ನೂ ಸೋತು ವನವಾಸ, ಅಜ್ಞಾತವಾಸಗಳಲ್ಲಿ ಹದಿಮೂರು ವರ್ಷಗಳ ಕಾಲ ಕಾಡಿನಲ್ಲಿ ಮತ್ತು ಎಲ್ಲೋ ನಗರದಲ್ಲಿ ಗೊತ್ತುಗುರಿಯಿಲ್ಲದೆ ನವೆಯಬೇಕಾಯಿತು. ಆದರೂ ಪಾಂಡವರು ನಿಮ್ಮೊಂದಿಗೆ ದ್ವೇಷವನ್ನಿಟ್ಟುಕೊಂಡಿಲ್ಲ. ಧರ್ಮರಾಯ ಇನ್ನೂ ನಿನಗೆ ಒಳಿತನ್ನೇ ಬಯಸುತ್ತಿದ್ದಾನೆ. ಅವನೇನೂ ದುರ್ಯೋಧನನ ಸಮಸ್ತ ರಾಜ್ಯವನ್ನು ಬಯಸುತ್ತಿಲ್ಲ. ಒಳ್ಳೆಯ ಮನಸ್ಸಿನಿಂದ ನೀಡುವುದಾದರೆ ಹಿಂದಿನ ಅರ್ಧರಾಜ್ಯವನ್ನು, ಅದೂ ಸಾಧ್ಯವಿಲ್ಲವೆಂದಾದರೆ ಕನಿಷ್ಠ ಐದು ಗ್ರಾಮಗಳನ್ನಾದರೂ ನೀಡಿದರೆ ತಮ್ಮಷ್ಟಕ್ಕೆ ತಾವು ಇರುತ್ತೇವೆ ಎನ್ನುವುದರಲ್ಲಿಯೇ ಆತನಿಗೆ ನಿನ್ನ ಮೇಲಿರುವ ಒಳ್ಳೆಯ ಭಾವನೆ, ಸೋದರತ್ವವನ್ನು ಗುರುತಿಸಿಕೊಳ್ಳಬಹುದು. ಇನ್ನು ಕಳೆದ ಹದಿಮೂರು ವರ್ಷಗಳಲ್ಲಿ ಅರ್ಜುನನಾದರೂ ನಿಮ್ಮೆಲ್ಲರ ಮೇಲಿನ ಸಿಟ್ಟನ್ನು ಮರೆತು ಉನ್ನತವಾದ ಮಮತೆಯನ್ನು ಇರಿಸಿಕೊಂಡಿದ್ದಾನೆ. ಇಷ್ಟು ವರ್ಷಗಳಲ್ಲಿ ಭೀಮನ ಸಿಟ್ಟೂ ಅದರ ತೀವ್ರತೆಯೂ ಮತ್ತು ಆ ಸಂಬಂಧವಾದ ಆತನ ಮಾತುಗಳೂ ಕಡಿಮೆಯಾಗಿವೆ. ನಕುಲನೂ ನಿಮ್ಮ ಬಗ್ಗೆ ಯಾವ ಭೇದಭಾವವನ್ನೂ ತೋರಸಲಾರ. ವನವಾಸ, ಅಜ್ಞಾತವಾಸಗಳಿಂದಾಗಿ ಅವರ ಬದುಕು ಸಾಕಷ್ಟು ನವೆದಿದೆ. ಅವರು ಯಾರೂ ದ್ವೇಷವನ್ನು ಸಾಧಿಸುವ ಸ್ಥಿತಿಯಲ್ಲೂ ಇಲ್ಲ. ನೀನು ಪಾಂಡವರ ಪಾಲಿನ ರಾಜ್ಯವನ್ನು ಮರಳಿಸಿದರೆ ಅವರು ತಮ್ಮಷ್ಟಕ್ಕೆ ತಾವಿರುವುದಕ್ಕೆ ಪ್ರಯತ್ನಿಸುತ್ತ ನಿಮ್ಮೊಂದಿಗೆ ಕೂಡಿ ಬಾಳುವುದಕ್ಕೆ ನಿನ್ನ ತುಂಬುಮನಸ್ಸಿನ ಸಮ್ಮತಿಯನ್ನು ನಿರೀಕ್ಷಿಸುತ್ತಿದ್ದಾರೆ. ಹಾಗಾಗಿ ದುರ್ಯೋಧನ ನೀನು ಮನಸ್ಸಿನಲ್ಲಿ ಯಾವುದೇ ಅತಿಯದ ಭ್ರಾಂತಿಯನ್ನು ಇಟ್ಟುಕೊಳ್ಳದೆ ಪಾಂಡವರೊಂದಿಗೆ ಕೂಡಿಬಾಳುವುದರಲ್ಲಿ ಎರಡೂ ವಂಶಗಳ ಯಶಸ್ಸು ಅಡಗಿದೆ ಎನ್ನುವುದನ್ನು ತಿಳಿದುಕೊಳ್ಳು ಎಂದು ಕೃಷ್ಣ ದುರ್ಯೋಧನನಿಗೆ ತಿಳಿಸಿಹೇಳುತ್ತಾನೆ.
(೨ನೇ ಭಾಗದಲ್ಲಿ ಮುಂದುವರಿದಿದೆ)
ಡಾ. ವಸಂತ್ ಕುಮಾರ್, ಉಡುಪಿ
******