ಸಾಹಿತ್ಯಾನುಸಂಧಾನ

ಗಾಂಗೇಯನ್ ನಡಪಿದ ಕೂಸುಗಳ್-ಪಂಪ – (ಭಾಗ – ೨)

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಎ. ನಾಲ್ಕನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ  ಪದ್ಯಭಾಗ) (ಭಾಗ – ೨)

ಉಳ್ಳೋದುಗಳೊಳಗನಿತಱಿ

ವುಳ್ಳರ್ಗಂ ತಿಳಿಪಲರಿಯದೆನಿಪೆಡೆಗಳುಮಂ

ತೆಳ್ಳಗಿರೆ ತಿಳಿಪುಗುಂ ಬೆಸ

ಗೊಳ್ಳ ಗುಣಾರ್ಣವನ ಲೆಕ್ಕಮಂ ಪೊಕ್ಕಮುಮುಂ  ೫

ಪದ್ಯದ ಅನ್ವಯಕ್ರಮ:

ಗುಣಾರ್ಣವನ ಉಳ್ಳ ಓದುಗಳೊಳಗೆ ಅನಿತು ಅಱಿವು ಉಳ್ಳರ್ಗಂ ತಿಳಿಪಲ್ ಅರಿಯದು ಎನಿಪ ಎಡೆಗಳುಂ ತೆಳ್ಳಗೆ ಇರೆ, ತಿಳಿಪುಗುಂ ಬೆಸಗೊಳ್ಳ ಲೆಕ್ಕಮಂ ಪೊಕ್ಕಮುಮಂ

ಪದ-ಅರ್ಥ:

ಉಳ್ಳೋದುಗಳೊಳಗೆ(ಉಳ್ಳ+ಓದುಗಳ+ಒಳಗೆ)- ಪ್ರಚಲಿತವಾಗಿರುವ ವಿದ್ಯೆಗಳಲ್ಲಿ;  ಅನಿತು –ಅಷ್ಟು;  ಅಱಿವುಳ್ಳರ್ಗಂ– ತಿಳಿವಳಿಕೆ ಇರುವವರಿಗೆ;  ತಿಳಿಪಲರಿಯದು-ತಿಳಿಸಲು ಕಷ್ಟವಾಗದು; ಎನಿಪ-ಎನ್ನುವಂತಹ;  ಎಡೆಗಳುಮಂ-ಅವಕಾಶಗಳನ್ನು;  ತೆಳ್ಳಗಿರೆ-ತಿಳಿಯಾಗಿ, ಸೂಕ್ಷ್ಮವಾಗಿ;  ತಿಳಿಪುಗುಂ-ತಿಳಿಸುತ್ತದೆ;  ಬೆಸಗೊಳ್ಳ-ಪರಿಭಾವಿಸಿದರೆ;  ಗುಣಾರ್ಣವನ-ಅರ್ಜುನನ;  ಲೆಕ್ಕಮಂ ಪೊಕ್ಕಮುಮಂ –ಲೆಕ್ಕಪಕ್ಕಗಳನ್ನು.       

            ಲೋಕದಲ್ಲಿ ಪ್ರಚಲಿತವಾಗಿರುವ ವಿದ್ಯೆಗಳಲ್ಲಿ ಅಷ್ಟಿಷ್ಟು ತಿಳಿವಳಿಕೆ ಇರುವವರಿಗೆ ಯಾವುದೇ ವಿದ್ಯೆಯನ್ನು ತಿಳಿಸಿಕೊಡುವುದಕ್ಕೆ ಕಷ್ಟವಾಗಲಾರದು ಎನ್ನುವಂತಿರುವ ಗುಣಾರ್ಣವನಾದ ಅರ್ಜುನನ ಲೆಕ್ಕಪೊಕ್ಕಗಳನ್ನು ಪರಿಭಾವಿಸಿದರೆ ಕಲಿಕೆಯ ಅವಕಾಶಗಳು ಆತನ ತಿಳಿವಳಿಕೆಯ ಸೂಕ್ಷ್ಮತೆಯನ್ನು ಮನದಟ್ಟುಮಾಡಿಸುತ್ತವೆ.

            ಅರ್ಜುನ ಸಕಲ ಶಾಸ್ತ್ರಗಳಲ್ಲಿ, ವಿದ್ಯೆಗಳಲ್ಲಿ ಗುಣಾರ್ಣವನೆನಿಸಿಕೊಂಡಿದ್ದಾನೆ. ಆತ ಲೋಕದಲ್ಲಿ ಪ್ರಚಲಿತವಾಗಿರುವ ಎಲ್ಲಾ ವಿದ್ಯೆಗಳಲ್ಲೂ ಅಷ್ಟಿಷ್ಟು ಜ್ಞಾನವನ್ನು ಹೊಂದಿದ್ದಾನೆ. ಮಿಕ್ಕಿದುದನ್ನು ಕೆಲವೇ ಸಮಯದೊಳಗೆ ಅರಿತುಕೊಳ್ಳುವಷ್ಟು ಮೇಧಾವಿಯೂ ಆಗಿದ್ದಾನೆ.  ಹೀಗೆ ತಿಳಿವಳಿಕೆ ಇರುವ ಅರ್ಜುನನಂತಹವರಿಗೆ ಯಾವುದೇ ವಿದ್ಯೆಯನ್ನು, ಶಾಸ್ತ್ರವನ್ನು ತಿಳಿಸಿಕೊಡುವುದಕ್ಕೆ ಕಷ್ಟವೆನಿಸಲಾರದು. ಅರ್ಜುನನ ಗ್ರಹಿಕೆ, ಅಭ್ಯಾಸ, ಅನುಷ್ಠಾನಗಳೆಲ್ಲವೂ ಸುಲಭಸಾಧ್ಯವಾದವು. ಆತನ ದಿನಚರಿ, ಅಭ್ಯಾಸಗಳೆಲ್ಲವೂ ಆತನ ಲೆಕ್ಕಪೊಕ್ಕಗಳನ್ನು, ಆತನ ಸಾಧನೆಯ, ಆರ್ಜನೆಯ ಆದ್ಯಂತಗಳನ್ನು ಸಮರ್ಥವಾಗಿ ಪ್ರಸ್ತುತಪಡಿಸುತ್ತವೆ. ಮಾತ್ರವಲ್ಲ, ಆತನ ಶಿಕ್ಷಣಾಭ್ಯಾಸವನ್ನು ಪರಿಭಾವಿಸಿದರೆ ಆತನ ಕಲಿಕೆಯ ಅವಕಾಶಗಳು ಆತನ ತಿಳಿವಳಿಕೆಯ, ಸಾಧನೆಯ ಸೂಕ್ಷ್ಮತೆಯನ್ನು ಮನದಟ್ಟುಮಾಡಿಸುತ್ತವೆ.

 

ಗದ್ಯ: ಎಂದು ಲೋಕಮೆಲ್ಲಂ ಪೊಗೞೆ ನೆಗೞ್ದ ಪೊಗೞ್ತೆಗಂ ನೆಗೞ್ತೆಗಂ ತಾನೆ ಗುಱಿಯಾಗಿ

ಗದ್ಯದ ಅನ್ವಯಕ್ರಮ:

ಎಂದು ಲೋಕಂ ಎಲ್ಲಂ ಪೊಗೞೆ ನೆಗೞ್ದ ಪೊಗೞ್ತೆಗಂ ನೆಗೞ್ತೆಗಂ ತಾನೆ ಗುಱಿಯಾಗಿ

ಪದ-ಅರ್ಥ:

ಲೋಕಂ-ಲೋಕದ ಜನರು;  ಪೊಗೞೆ-ಹೊಗಳಲು, ಮೆಚ್ಚಿಕೊಳ್ಳಲು;  ನೆಗೞ್ದ-ಉಂಟಾದ, ಪ್ರಾಪ್ತವಾದ;  ಪೊಗೞ್ತೆಗಂ-ಹೊಗಳಿಕೆಗೆ;  ನೆಗೞ್ತೆಗಂ-ಪ್ರಸಿದ್ಧಿಗೆ, ಕೀರ್ತಿಗೆ;   ಗುಱಿಯಾಗಿ-ಗುರಿಯಾಗಿ, ಭಾದ್ಯನಾಗಿ.

ಎಂದು ಲೋಕದ ಜನರೆಲ್ಲರೂ ಹೊಗಳುತ್ತಿರಲು ಅದರಿಂದ ಪ್ರಾಪ್ತವಾದ ಹೊಗಳಿಕೆಗೆ ಹಾಗೂ ಕೀರ್ತಿಗೆ ಅರ್ಜುನನು ಭಾದ್ಯನಾಗಿ-

 

ಮಾನಸದೊಳ್ ಹಂಸೆಯವೋಲ್

ಮಾನಸ ವಾಗ್ವನಿತೆ ತನ್ನ ಮಾನಸದೊಳಿವಂ

ಮಾನಸನೆಂದಗಲದೆ ನಿಲೆ

ಮಾನಸನಾದಂ ಸರಸ್ವತೀ ಕಳಹಂಸಂ  ೬

ಪದ್ಯದ ಅನ್ವಯಕ್ರಮ:

ಮಾನಸ ವಾಕ್ ವನಿತೆ ಇವಂ ಮಾನಸನ್ ಎಂದು ಮಾನಸದೊಳ್ ಹಂಸೆಯವೋಲ್  ತನ್ನ ಮಾನಸದೊಳ್ ಅಗಲದೆ ನಿಲೆ ಸರಸ್ವತೀ ಕಳಹಂಸಂ ಮಾನಸನ್ ಆದಂ  

ಪದ-ಅರ್ಥ:

ಮಾನಸದೊಳ್-ಮನಸ್ಸಿನಲ್ಲಿ;  ಹಂಸೆಯವೋಲ್-ಹಂಸಪಕ್ಷಿಯ ಹಾಗೆ;  ಮಾನಸವಾಗ್ವನಿತೆ-ಮನಸ್ಸಿನಲ್ಲಿ ನೆಲೆಗೊಂಡಿರುವ ಸರಸ್ವತಿ;  ಮಾನಸದೊಳ್-ಮನಸ್ಸಿನಲ್ಲಿ;  ಇವಂ-ಇವನು(ಅರ್ಜುನನು);  ಮಾನಸನೆಂದು-ಮನುಷ್ಯಶ್ರೇಷ್ಠನೆಂದು;  ಅಗಲದೆ-ಬಿಟ್ಟುಹೋಗದೆ;  ಸ್ಥಿರವಾಗಿ ನೆಲೆನಿಂತು;  ನಿಲೆ-ನೆಲೆನಿಲ್ಲಲು;  ಮಾನಸನಾದಂ-ಮನುಷ್ಯನಾದನು, ಶ್ರೇಷ್ಠನಾದನು;  ಸರಸ್ವತೀ ಕಳಹಂಸಂ-ಜ್ಞಾನಸರೋವರದಲ್ಲಿ ವಿಹರಿಸುವ ಹಂಸ.

            ಮೇಧಾವಿಗಳ ಮನಸ್ಸಿನಲ್ಲಿ ಹಂಸದಂತೆ ಸ್ವಚ್ಛಂದವಾಗಿ ವಿಹರಿಸುವ ಸರಸ್ವತಿಯು ಅರ್ಜುನನು ಸರ್ವಶಾಸ್ತ್ರಬಲ್ಲಿದನಾಗಿರುವುದರಿಂದ ಇವನು ಮನುಷ್ಯಶ್ರೇಷ್ಠನಾಗಿದ್ದಾನೆ ಎಂದು ಎಂದು ಅರಿತುಕೊಂಡು ಅರ್ಜುನನನ್ನು ಬಿಟ್ಟುಹೋಗದೆ ಆತನ ಮನಸ್ಸಿನಲ್ಲಿಯೇ ಶಾಶ್ವತವಾಗಿ ನೆಲೆನಿಂತುದರಿಂದ ಜ್ಞಾನಸರೋವರದಲ್ಲಿ ವಿಹರಿಸುವ ಹಂಸದಂತಿರುವ ಅರ್ಜುನನು ಪರಿಪೂರ್ಣನಾದ ಮನುಷ್ಯನೆನಿಸಿಕೊಂಡನು.

            ಸರಸ್ವತಿಯ ಕೃಪಾಕಟಾಕ್ಷ ಪ್ರಾಪ್ತವಾಗಬೇಕೆಂದಾದರೆ, ಆತನಲ್ಲಿ ಜ್ಞಾನಸಂಪತ್ತು, ಮೇಧಾವಿತನ, ಶಾಸ್ತ್ರಗಳ ಕುರಿತಾದ ಆಳವಾದ ಅಭ್ಯಾಸ, ಸಾಧನೆ ಹಾಗೂ ಅವೆಲ್ಲವುಗಳಿಂದ ಪ್ರಾಪ್ತವಾಗುವ ಔನ್ನತ್ಯಗಳು ಅತ್ಯಂತ ಅವಶ್ಯಕ. ಅವೆಲ್ಲವೂ ಅರ್ಜುನನಲ್ಲಿ ನೆಲೆಗೊಂಡಿವೆ. ಇಂತಹ ಮೇಧಾವಿಗಳ ಮನಸ್ಸಿನಲ್ಲಿ ವಾಗ್ದೇವಿಯಾದ ಸರಸ್ವತಿಯು ಶಾಶ್ವತವಾಗಿ, ಸ್ಥಿರವಾಗಿ ನೆಲೆನಿಲ್ಲುತ್ತಾಳೆ. ಅರ್ಜುನನ ಸಾಧನೆ, ಶಾಸ್ತ್ರಜ್ಞಾನ, ಸಾಧಿಸಬೇಕೆಂಬ ಛಲ, ಅವುಗಳಿಗನುಗುಣವಾದ ಅಭ್ಯಾಸಗಳು ಸರಸ್ವತಿಗೂ ಪ್ರಿಯವೆನಿಸಿವೆ. ಆಕೆ ಆತನ ಮಾನಸ ಸರೋವರದಲ್ಲಿ ಹಂಸದಂತೆ ಸ್ವಚ್ಛಂದವಾಗಿ ವಿಹರಿಸಿಕೊಂಡಿರಲು ಬಯಸುತ್ತಾಳೆ. ಇನ್ನೊಂದರ್ಥದಲ್ಲಿ ಅರ್ಜುನನ ಮನಸ್ಸೇ ತನಗೆ ಶಾಶ್ವತವಾಗಿ ನೆಲೆನಿಲ್ಲಲು ಯುಕ್ತವಾದ ನೆಲೆ ಎಂದುಕೊಂಡು ತನ್ನೆಲ್ಲ ಕೃಪಾಕಟಾಕ್ಷವನ್ನು ಆತನ ಮೇಲೆ ಕೇಂದ್ರೀಕರಿಸಿದ್ದಾಳೆ. ಹೀಗಿರುವುದರಿಂದಲೇ ಅರ್ಜುನ ಸರಸ್ವತೀ ಕಳಹಂಸ ಎನಿಸಿಕೊಂಡು ಪ್ರಸಿದ್ಧನಾಗುತ್ತಿದ್ದಾನೆ.  

 

ಗದ್ಯ: ಅಂತಯ್ವರುಂ ಸಮಸ್ತ ಶಸ್ತ್ರ ಶಾಸ್ತ್ರ ಪ್ರಯೋಗ ಪ್ರವೀಣರಾಗೆ ಧರ್ಮಪುತ್ರಂ ಧರ್ಮಶಾಸ್ತ್ರಂಗಳೊಳಂ ಶ್ರುತಿಸ್ಮೃತಿಗಳೊಳಂ ಪ್ರವೀಣನಾದಂ ಭೀಮಸೇನಂ ವ್ಯಾಕರಣದೊಳಾರಿಂದಮಗ್ಗಳಂ ಕುಶಲನಾದಂ ನಕುಲಂ ಕುಂತ ಶಸ್ತ್ರದೊಳತಿ ಪ್ರವೀಣನುಮಾಗಿ ಅಶ್ವವಿದ್ಯೆಯೊಳಾರಿಂದಂ ಪಿರಿಯನಾದಂ ಸಹದೇವಂ ಜ್ಯೋತಿರ್ಜ್ಞಾನದೊಳತಿ ಪರಿಣತನಾದಂ

ಗದ್ಯದ ಅನ್ವಯಕ್ರಮ:

ಅಂತು ಐವರುಂ ಸಮಸ್ತ ಶಸ್ತ್ರ, ಶಾಸ್ತ್ರ ಪ್ರಯೋಗ ಪ್ರವೀಣರುಂ ಆಗೆ ಧರ್ಮಪುತ್ರಂ ಧರ್ಮಶಾಸ್ತ್ರಂಗಳೊಳಂ ಶ್ರುತಿ ಸ್ಮೃತಿಗಳೊಳಂ ಪ್ರವೀಣನಾದಂ, ಭೀಮಸೇನಂ ವ್ಯಾಕರಣದೊಳ್ ಆರಿಂದ ಅಗ್ಗಳಂ ಕುಶಲನಾದಂ, ನಕುಲಂ ಕುಂತ ಶಸ್ತ್ರದೊಳ್ ಅತಿ ಪ್ರವೀಣನುಂ ಆಗಿ, ಅಶ್ವವಿದ್ಯೆಯೊಳ್ ಆರಿಂದಂ ಪಿರಿಯನಾದಂ, ಸಹದೇವಂ ಜ್ಯೋತಿರ್ ಜ್ಞಾನದೊಳ್ ಅತಿ ಪರಿಣತನಾದಂ.

ಪದ-ಅರ್ಥ:

ಅಂತು-ಹಾಗೆ;  ಐವರುಂ-ಐದು ಮಂದಿ(ಧರ್ಮರಾಯ, ಭೀಮ, ಅರ್ಜುನ, ನಕುಲ, ಸಹದೇವ);  ಸಮಸ್ತಶಸ್ತ್ರಶಾಸ್ತ್ರಪ್ರಯೋಗ-ಎಲ್ಲಾ ರೀತಿಯ ಆಯುಧ, ಶಾಸ್ತ್ರಗಳ ಅಧ್ಯಯನ ಹಾಗೂ ಅನುಷ್ಠಾನ;  ಪ್ರವೀಣರಾಗೆ-ನಿಪುಣರಾದರು;  ಧರ್ಮಪುತ್ರಂ-ಧರ್ಮರಾಯನು;  ಧರ್ಮಶಾಸ್ತ್ರಂಗಳೊಳಂ-ಧರ್ಮಶಾಸ್ತ್ರಗಳಲ್ಲಿ;  ಶ್ರುತಿಸ್ಮೃತಿಗಳೊಳಂ– ವೇದ ಹಾಗೂ ಧರ್ಮಶಾಸ್ತ್ರಗಳಲ್ಲಿ;  ವ್ಯಾಕರಣದೊಳ್-ಭಾಷೆಯ ನಿಯಮವನ್ನು ಹೇಳುವ ಶಾಸ್ತ್ರದಲ್ಲಿ;   ಆರಿಂದಮಗ್ಗಳಂ-ಎಲ್ಲರಿಂದಲೂ ಶ್ರೇಷ್ಠನಾದನು;  ಕುಶಲನಾದಂ-ಚತುರನಾದನು;  ಕುಂತಶಸ್ತ್ರದೊಳ್-ಈಟಿ ಅಥವಾ ಭರ್ಚಿಯೆಂಬ ಆಯುಧದಲ್ಲಿ;  ಆಶ್ವವಿದ್ಯೆಯೊಳ್-ಕುದುರೆಯನ್ನು ಕುರಿತ ಶಾಸ್ತ್ರದಲ್ಲಿ;   ಪಿರಿಯನಾದಂ– ಪರಿಣತನಾದನು;  ಜ್ಯೋತಿರ್ಜ್ಞಾನದೊಳ್-ಜ್ಯೋತಿಷ್ಯ ಶಾಸ್ತ್ರದಲ್ಲಿ;  ಅತಿಪರಿಣತನಾದಂ-ಅತ್ಯಂತ ಪ್ರಾವೀಣ್ಯವನ್ನು ಪಡೆದುಕೊಂಡನು. 

            ಹಾಗೆ ಐದು ಮಂದಿ ಪಾಂಡವರು ಎಲ್ಲಾ ಆಯುಧ, ಶಾಸ್ತ್ರ ಹಾಗೂ ಅವುಗಳ ಪ್ರಯೋಗಗಳಲ್ಲಿ ಪರಿಣತರಾದರು. ಧರ್ಮರಾಯನು ಧರ್ಮಶಾಸ್ತ್ರಗಳಲ್ಲಿಯೂ ಶ್ರುತಿ ಸ್ಮೃತಿಗಳಲ್ಲಿಯೂ ಪರಿಣತಿಯನ್ನು ಹೊಂದಿದನು. ಭೀಮಸೇನನು ವ್ಯಾಕರಣ ಶಾಸ್ತ್ರದಲ್ಲಿ ಅತ್ಯಂತ ಶ್ರೇಷ್ಠನೆನಿಸಿಕೊಂಡನು. ನಕುಲನು ಈಟಿಯನ್ನು ಪ್ರಯೋಗಿಸುವುದರಲ್ಲಿ ಅತ್ಯಂತ ನಿಷ್ಣಾತನೂ ಅಶ್ವವಿದ್ಯೆಯಲ್ಲಿ ಎಲ್ಲರಿಗಿಂತಲೂ ಮಿಗಿಲೆನಿಸಿಕೊಂಡನು. ಹಾಗೆಯೇ ಸಹದೇವನು ಜ್ಯೋತಿಷ್ಯಶಾಸ್ತ್ರದಲ್ಲಿ ದೊಡ್ಡ ಜ್ಞಾನಿ ಎನಿಸಿಕೊಂಡನು.

 

ಬಳೆದುವು ತೋಳ್ಗಳೆಕ್ಕೆಯಿನಮಳ್ ಬಳೆವಂತಿರೆ ಮುಯ್ವುಗಳ್ ಕುಳಾ

ಚಳ ಶಿಖರಂಗಳಂ  ಮಸುಳೆವಂದುವು ಪರ್ವಿದ ವಕ್ಷಮೀ ಕ್ಷಮಾ

ತಳ ಕುಳಲಕ್ಷ್ಮೀಗಾಯ್ತು ಕುಳಮಂದಿರಮೆಂದು ಮಹೀತಳಂ ಮನಂ

ಗೊಳೆ ನೆಱೆದತ್ತುದಾತ್ತ ನವಯೌವನಮೊರ್ಮೆಯೆ ಧರ್ಮಪುತ್ರನಾ  ೭

ಪದ್ಯದ ಅನ್ವಯಕ್ರಮ:

ಎಕ್ಕೆಯಿನ್ ಅಮಳ್ ಬಳೆವಂತಿರೆ ತೋಳ್ಗಳ್ ಬಳೆದುವು, ಮುಯ್ವುಗಳ್ ಕುಳಾಚಳ ಶಿಖರಂಗಳಂ ಮಸುಳೆವಂದುವು, ಪರ್ವಿದ ವಕ್ಷಂ ಈ  ಕ್ಷಮಾತಳ ಕುಳಲಕ್ಷೀಗೆ  ಕುಳಮಂದಿರಂ ಆಯ್ತು  ಎಂದು ಧರ್ಮಪುತ್ರನಾ ಉದಾತ್ತ ನವಯೌವನಂ ಮಹೀತಳಂ ಮನಂಗೊಳೆ ಒರ್ಮೆಯೆ ನೆಱೆದತ್ತು.

ಪದ-ಅರ್ಥ:

ತೋಳ್ಗಳ್– ಬಾಹುಗಳು; ಎಕ್ಕೆಯಿನ್- ಜೊತೆಜೊತೆಯಾಗಿ; ಸಾಂಗತ್ಯದಲ್ಲಿ; ಬಳೆದುವು-ಬೆಳೆದವು;  ಅಮಳ್-ಅವಳಿಗಳು;  ಬಳೆವಂತೆ-ಬೆಳೆಯುವಂತೆ;  ಮುಯ್ವುಗಳ್-ಹೆಗಳುಗಳು;  ಕುಳಾಚಳ-ಕುಲಪರ್ವತ;  ಶಿಖರಂಗಳಂ-ತುದಿಗಳನ್ನು;  ಮಸುಳೆವಂದುವು-ಮಸುಕಾದವು;  ಪರ್ವಿದ ವಕ್ಷಂ-ಹರವಾದ ಎದೆ; ವಿಶಾಲವಾದ ಎದೆ;  ಕ್ಷಮಾತಳ-ಭೂಮಿ;  ಕುಳಲಕ್ಷ್ಮೀ-ವಂಶವೆಂಬ ಲಕ್ಷ್ಮೀ;  ಕುಳಮಂದಿರಂ– ಶ್ರೇಷ್ಠವಾದ ಮಂದಿರ; ಮಹೀತಳಂ-ಭೂಮಿ;  ಮನಂಗೊಳೆ-ಮನಸ್ಸನ್ನು ತೃಪ್ತಿಪಡಿಸುವಂತೆ;  ನೆಱೆದತ್ತು-ಕೂಡಿತ್ತು, ಹೊಂದಿತ್ತು;  ಒರ್ಮೆಯೆ-ಒಮ್ಮೆಗೆ;    ಉದಾತ್ತ-ಶ್ರೇಷ್ಠವಾದ;  ನವಯೌವನಂ-ಹೊಸತಾರುಣ್ಯ, ಆಕರ್ಷಿಸುವ ತಾರುಣ್ಯ; ಒರ್ಮೆಯೆ-ಒಮ್ಮಿಂದೊಮ್ಮೆಗೆ;   ಧರ್ಮಪುತ್ರನ-ಧರ್ಮರಾಯನ.

            ಅವಳಿಗಳು ಜೊತೆಜೊತೆಯಾಗಿ ಬೆಳೆಯುವಂತೆ ಧರ್ಮರಾಯನ ತೋಳುಗಳು ಜೊತೆಜೊತೆಯಾಗಿ ಬೆಳೆದವು. ಆತನ ಬಾಹುಗಳು ಕುಲಪರ್ವತಗಳಂತೆ ಬಲಿಷ್ಠವಾಗಿ ಬೆಳೆದು ಕುಲಪರ್ವತಗಳ  ಶಿಖರಗಳನ್ನೇ ಮಸುಕಾಗಿಸಿದವು. ಆತನ ವಿಶಾಲವಾದ ಎದೆಯು ಭೂಮಿಯಲ್ಲಿನ ವಂಶವೆಂಬ ಲಕ್ಷ್ಮೀಮಂದಿರದಂತೆ ಶೋಭಿಸಿತು. ಹೀಗೆ ಒಮ್ಮಿಂದೊಮ್ಮೆಗೆ ಬೆಳವಣಿಗೆಯಾದ ಧರ್ಮರಾಯನ ಈ ರೀತಿಯ ಅಮೋಘವಾದ ದೈಹಿಕ ಸೌಂದರ್ಯವು ಸಮಸ್ತ ಭೂಮಿಯನ್ನೇ ತೃಪ್ತಿಪಡಿಸುವಂತೆ, ಆಕರ್ಷಿಸುವಂತೆ ಇದ್ದವು.

            ಲೋಕದಲ್ಲಿ ಅವಳಿಮಕ್ಕಳು ಹೇಗೆ ಅನ್ಯೋನ್ಯವಾಗಿ ಪರಸ್ಪರ ಕೂಡಿಕೊಂಡು ಬೆಳೆಯುತ್ತವೆಯೋ ಹಾಗೆಯೇ ಧರ್ಮರಾಯನ ತೋಳುಗಳು ಅವಳಿಗಳಂತೆ  ಜೊತೆಜೊತೆಯಾಗಿ ಪರಸ್ಪರ ಕೂಡಿಕೊಂಡು ಒಂದು ಇನ್ನೊಂದಕ್ಕಿಂತ ಮಿಗಿಲೆಂಬಂತೆ ಬೆಳೆದವು. ಆತನ ಬಲಿಷ್ಠವಾದ ಬಾಹುಗಳು ಕುಲಪರ್ವತಗಳಂತೆ ಅತ್ಯಂತ ಶಕ್ತಿಶಾಲಿಯಾಗಿ ಬೆಳೆದು ಕುಲಪರ್ವತಗಳ ಶಿಖರಗಳ ಶಕ್ತಿ ಹಾಗೂ ಸೊಬಗನ್ನೇ ಮಸುಳಿಸಿದವು. ಆತನ ವಿಶಾಲವಾದ ಎದೆಯು ಸಕಲ ಭೂಮಂಡಲವೆಂಬ ಲಕ್ಶ್ಮೀಮಂದಿರದಂತೆ ಶೋಭಿಸಿತು. ಒಟ್ಟಾರೆಯಾಗಿ ಧರ್ಮರಾಯನ ಎಲ್ಲಾ ಅವಯವಗಳು ಆತನ ಸ್ವಭಾವ, ಪ್ರರಾಕ್ರಮ, ಅಭಿರುಚಿಗಳಿಗನುಗುಣವಾಗಿ ಬೆಳವಣಿಗೆಯನ್ನು ಹೊಂದಿ ಏಕಾಏಕಿ ಸಮಸ್ತ ಭೂಮಂಡಲದ ನೋಟವನ್ನೇ ತನ್ನತ್ತ ಆಕರ್ಷಿಸುವಂತೆ, ಲೋಕದ ಜನರೆಲ್ಲರೂ ಆತನ ದೈಹಿಕ ಸೊಬಗನ್ನು ಮೆಚ್ಚುವಂತೆ, ಮೆಚ್ಚಿ ತಲೆದೂಗುವಂತೆ ಇದ್ದು, ಬರಬರುತ್ತ ಧರ್ಮರಾಯ ಕ್ರಮೇಣ ಲೋಕವಿಖ್ಯಾತನಾಗತೊಡಗಿದನು.

 

ಗದ್ಯ: ಅಂತು ಸೊಗಯಿಸುವ ರೂಪಿನೊಳ್ ಪೊನ್ನ ಬಣ್ಣದಂತಪ್ಪ ತನ್ನ ಮೆಯ್ಯ ಬಣ್ಣಮಳವಲ್ಲದೊಪ್ಪೆ-

ಗದ್ಯದ ಅನ್ವಯಕ್ರಮ:

ಅಂತು ಸೊಗಯಿಸುವ ರೂಪಿನೊಳ್ ಪೊನ್ನ ಬಣ್ಣದಂತೆ ಅಪ್ಪ ತನ್ನ ಮೆಯ್ಯ ಬಣ್ಣಂ ಅಳವಲ್ಲದೆ ಒಪ್ಪೆ

ಪದ-ಅರ್ಥ:

ಅಂತು-ಹಾಗೆ;  ಸೊಗಯಿಸುವ-ಸುಂದರವಾಗಿ ಕಾಣುವ;  ರೂಪಿನೊಳ್-ರೂಪದಲ್ಲಿ, ಸೌಷ್ಠವದಲ್ಲಿ;  ಪೊನ್ನ ಬಣ್ಣದಂತೆ-ಹೊನ್ನಿನ ಬಣ್ಣದಂತೆ, ಚಿನ್ನದ ಬಣ್ಣದಂತೆ;  ಮೆಯ್ಯ-ದೇಹದ;  ಬಣ್ಣಮಳವಲ್ಲದೆದೊಪ್ಪೆ-ಬಣ್ಣವು ಸಾಟಿಯಿಲ್ಲದೆ ಶೋಭಿಸಿತು. 

            ಹಾಗೆ ಸುಂದರವಾಗಿ ಕಾಣುವ ಧರ್ಮರಾಯನ ಅಂಗಸೌಷ್ಠವದಲ್ಲಿ ಚಿನ್ನದ ಬಣ್ಣದಂತಿರುವ ಆತನ ದೇಹದ ಬಣ್ಣವು ಸಾಟಿಯಿಲ್ಲದೆ ಶೋಭಿಸಿತು.

 

ಕುಳಗಿರಿಯಂ ಸರೋಜನಿಲಯಂ ಮನುಜಾಕೃತಿಯಾಗೆ ಮಾಡಿದಂ

ತೊಳವೆನಿಪಂತುಟಪ್ಪ ಪೊಸ ಬಣ್ಣದೊಳೊಂದಿದ ಪಾರಿಜಾತಮ

ಗ್ಗಳಮೆಸೆದೊಪ್ಪುವಂತೆ ತಳಿರಿಂ ಮುಗುಳಿಂ ನವಯೌವನಂ ಮನಂ

ಗೊಳೆ ಕರಮೊಪ್ಪಿದಂ ದಶ ಸಹಸ್ರ ಮದೇಭ ಬಳಂ ವೃಕೋದರಂ  ೮

ಪದ್ಯದ ಅನ್ವಯಕ್ರಮ:

ಸರೋಜನಿಲಯಂ ಕುಳಗಿರಿಯಂ ಮನುಜ ಆಕೃತಿಯಾಗೆ ಮಾಡಿದಂತೊಳವು ಎನಿಪಂತುಟು ಅಪ್ಪ ಪೊಸ ಬಣ್ಣದೊಳೊಂದಿದ ಪಾರಿಜಾತಂ ತಳಿರಿಂ ಮುಗುಳಿಂ ಅಗ್ಗಳಂ ಎಸೆದು ಒಪ್ಪುವಂತೆ ನವಯೌವನಂ ಮನಂಗೊಳೆ ದಶ ಸಹಸ್ರ ಮದೇಭ ಬಳಂ ವೃಕೋದರಂ ಕರಂ ಒಪ್ಪಿದಂ.

ಪದ-ಅರ್ಥ:

ಸರೋಜನಿಲಯಂ-ತಾವರೆಯನ್ನು ಮನೆಯನ್ನಾಗಿ ಮಾಡಿಕೊಂಡವನು(ಬ್ರಹ್ಮ);  ಕುಳಗಿರಿಯಂ-ಕುಲಪರ್ವತವನ್ನು;  ಮನುಜಾಕೃತಿಯಾಗೆ-ಮನುಷ್ಯರೂಪವಾಗುವಂತೆ;  ಮಾಡಿದಂತೊಳವು-ಸೃಷ್ಟಿಸಿದಂತಿತ್ತು;  ಎನಿಪಂತುಟಪ್ಪ-ಎನ್ನುವಂತಿರುವ; ಪೊಸ-ಹೊಸ;  ಬಣ್ಣದೊಳೊಂದಿದ-ಬಣ್ಣದಿಂದ ಕೂಡಿದ;  ಪಾರಿಜಾತಮಗ್ಗಳಂ-ಪಾರಿಜಾತಕ್ಕಿಂತಲೂ ಶ್ರೇಷ್ಠವಾಗಿರುವ;  ಎಸೆದೊಪ್ಪುವಂತೆ-ಶೋಭಿಸಿ ಪ್ರಕಾಶಿಸುವಂತೆ;  ತಳಿರಿಂ-ಚಿಗುರೆಲೆಗಳಿಂದ;  ಮುಗುಳಿಂ-ಮೊಗ್ಗುಗಳಿಂದ;  ನವಯೌವನಂ-ನವತಾರುಣ್ಯ;  ಮನಂಗೊಳೆ-ಮನಸ್ಸನ್ನು ಆಕರ್ಷಿಸುವಂತೆ;  ಕರಮೊಪ್ಪಿದಂ-ಅಧಿಕವಾಗಿ ಶೋಭಿಸಿದನು;  ದಶ ಸಹಸ್ರ ಮದೇಭ ಬಳಂ-ಹತ್ತು ಸಾವಿರ ಮದ್ದಾನೆಗಳ ಶಕ್ತಿಯುಳ್ಳವನು(ಭೀಮಸೇನ);  ವೃಕೋದರಂ-ಭೀಮಸೇನ.

            ಸೃಷ್ಟಿಕರ್ತನಾದ ಬ್ರಹ್ಮನು ಕುಲಪರ್ವತವನ್ನೇ ಮನುಷ್ಯರೂಪನ್ನಾಗಿ ಸೃಷ್ಟಿಸಿದ್ದಾನೋ ಎನ್ನುವಂತಿರುವ, ಹೊಸ ಬಣ್ಣದಿಂದಲೂ ಚಿಗುರೆಲೆಗಳಿಂದಲೂ ಮೊಗ್ಗುಗಳಿಂದಲೂ ಕೂಡಿಕೊಂಡು ಶೋಭಿಸುವ ಪಾರಿಜಾತಕ್ಕಿಂತಲೂ ಶ್ರೇಷ್ಠವೆನಿಸಿಕೊಂಡು ಶೋಭಿಸಿ ಪ್ರಕಾಶಿಸುವಂತೆ ಮನಸ್ಸನ್ನು ಆಕರ್ಷಿಸುವಂತೆ  ಹೊಸಯೌವನವು ಮನಸ್ಸನ್ನು ಆಕರ್ಷಿಸುವಂತೆ ಹತ್ತು ಸಾವಿರ ಮದ್ದಾನೆಗಳ ಶಕ್ತಿಯನ್ನು ಪಡೆದುಕೊಂಡ ಭೀಮಸೇನನು ಅಧಿಕವಾಗಿ ಶೋಭಿಸಿದನು.   

            ಧರ್ಮರಾಯನಂತೆ ಭೀಮಸೇನನೂ ಬೆಳೆಯುತ್ತ ಯೌವನವನ್ನು ಪಡೆದುಕೊಳ್ಳತೊಡಗಿದನು. ಐದು ಮಂದಿ ಪಾಂಡವರೊಳಗೆ ಸೃಷ್ಟಿಕರ್ತನಾದ ಬ್ರಹ್ಮನು ಭೀಮಸೇನನನ್ನು ಉಳಿದವರಿಗಿಂತಲೂ ಭಿನ್ನನನ್ನಾಗಿ ಸೃಷ್ಟಿಸಿದ್ದಾನೆ. ಬ್ರಹ್ಮ ಕುಲಪರ್ವತಕ್ಕೆ  ಮನುಷ್ಯರೂಪವನ್ನು ನೀಡಿ   ಭೀಮನ ದೇಹಾಕೃತಿಯನ್ನು ಸೃಷ್ಟಿಸಿದ್ದಾನೆಯೋ ಎನ್ನುಂತಿತ್ತು. ಮಾತ್ರವಲ್ಲದೆ,  ಹೊಸತಾದ ಬಣ್ಣವನ್ನು ಹೊಂದಿ ಚಿಗುರೆಲೆಗಳಿಂದಲೂ ಸುಂದರವಾದ ಮೊಗ್ಗುಗಳಿಂದಲೂ ಕೂಡಿದ ಪಾರಿಜಾತ ವೃಕ್ಷವು ಶೋಭಾಯಮಾನವಾಗಿ ಶ್ರೇಷ್ಠವೆನಿಸಿಕೊಳ್ಳುವ ಹಾಗೆ  ಭೀಮಸೇನನ  ಅಂಗಸೌಷ್ಠವವು ಪಾರಿಜಾತಕ್ಕಿಂತಲೂ ಮಿಗಿಲಾಗಿ ಪ್ರಕಾಶಮಾನವಾಗಿ, ಲೋಕದ ಜನರ ಮನಸ್ಸನ್ನು ಆಕರ್ಷಿಸುವಂತೆ ರೂಪುಗೊಂಡಿತು. ಭೀಮಸೇನ ಸಾಮಾನ್ಯನಲ್ಲ, ಆತ ಹತ್ತು ಸಾವಿರ ಮದದಾನೆಗಳ ಶಕ್ತಿ ಸಾಮರ್ಥ್ಯವುಳ್ಳವನು. ಆತನ ದೇಹದಾರ್ಢ್ಯ, ಮೈಬಣ್ಣ, ಶಾರೀರ ಸೊಬಗು, ಅಂಗಸೌಷ್ಠವಗಳೆಲ್ಲವೂ ಒಂದರಿಂದ ಇನ್ನೊಂದು ಮಿಗಿಲೆನಿಸಿಕೊಂಡು ಲೋಕಕ್ಕೆ ಆಕರ್ಷಕವಾಗಿದ್ದವು.

 

ಗದ್ಯ: ಅಂತೊಪ್ಪುವ ಗಂಡಗಾಡಿಯೊಳಿಂದ್ರನೀಲದಂತಪ್ಪ ಬಣ್ಣಂ ಕಣ್ಗೆವರೆ-

ಗದ್ಯದ ಅನ್ವಯಕ್ರಮ:

ಅಂತು ಒಪ್ಪುವ ಗಂಡಗಾಡಿಯೊಳ್ ಇಂದ್ರನೀಲದಂತಪ್ಪ ಬಣ್ಣಂ ಕಣ್ಗೆ ಬರೆ-

ಪದ-ಅರ್ಥ:

ಅಂತೊಪ್ಪುವ-ಹಾಗೆ ಶೋಭಿಸುವ;  ಗಂಡಗಾಡಿಯೊಳ್-ಪುರುಷನ ವಿಶೇಷವಾದ ಸೊಬಗಿನಲ್ಲಿ;  ಇಂದ್ರನೀಲದಂತಪ್ಪ-ಆಕಾಶದ ಕಡುನೀಲಿ ಬಣ್ಣವನ್ನು ಹೊಂದಿರುವ ಒಂದು ರತ್ನ; ಕಣ್ಗೆವರೆ-ಕಣ್ಣುಗಳಿಗೆ ಶೋಭಿಸಿದಾಗ.

            ಹಾಗೆ ಶೋಭಿಸುವ ಭೀಮಸೇನನ ಪೌರುಷಯುಕ್ತವಾದ ಸೊಬಗಿನಲ್ಲಿ ಇಂದ್ರನೀಲದಂತಿರುವ ಪ್ರಕಾಶಮಾನವಾದ ಬಣ್ಣವೊಂದು ನೋಡುವವರ ಕಣ್ಣುಗಳಿಗೆ ಶೋಭಿಸಿದಾಗ-

 

ಶರದದ ಚಂದ್ರನಂ ವಿಮಲ ಚಂದ್ರಿಕೆ ಬಾಲದಿನೇಶನಂ  ತಮೋ

ಹರಕಿರಣಂ ಕಿಶೋರ ಹರಿಯಂ ನವಕೇಸರ ರಾಜಿ ಮಿಕ್ಕ ದಿ

ಕ್ಕರಿಯನನೂನ ದಾನ ಪರಿಶೋಭೆ ಮನಂಗೊಳೆ  ಪೊರ್ದುವಂತೆ ಸುಂ

ದರ ನವಯೌವನಂ ನೆಱೆಯೆ ಪೊರ್ದೆ ಗುಣಾರ್ಣವನೊಪ್ಪಿ ತೋಱಿದಂ  ೯

ಪದ್ಯದ ಅನ್ವಯಕ್ರಮ:

ಶರದದ ಚಂದ್ರನಂ ವಿಮಲ ಚಂದ್ರಿಕೆ, ಬಾಲದಿನೇಶನಂ ತಮೋ ಹರಕಿರಣಂ, ಕಿಶೋರ ಹರಿಯಂ ನವಕೇಸರ ರಾಜಿ, ಮಿಕ್ಕ ದಿಕ್ಕರಿಯನ್ ಅನೂನ ದಾನ ಪರಿಶೋಭೆ ಮನಂಗೊಳೆ ಪೊರ್ದುವಂತೆ, ಸುಂದರ ನವಯೌವನಂ ನೆಱೆಯೆ ಪೊರ್ದೆ ಗುಣಾರ್ಣವನ್ ಒಪ್ಪಿ ತೋಱಿದಂ.

ಪದ-ಅರ್ಥ:

ಶರದದ ಚಂದ್ರನಂ-ಶರತ್ಕಾಲದ ಚಂದ್ರನನ್ನು;  ವಿಮಲ ಚಂದ್ರಿಕೆ–ಪರಿಶುದ್ಧವಾದ ಬೆಳದಿಂಗಳು;  ಬಾಲದಿನೇಶನಂ-ಬಾಲಸೂರ್ಯನನ್ನು;  ತಮೋಹರಕಿರಣಂ-ಕತ್ತಲೆಯನ್ನು ಪರಿಹರಿಸುವ ಕಿರಣವು;  ಕಿಶೋರ ಹರಿಯಂ-ಎಳೆಯ ಸಿಂಹವನ್ನು;  ನವಕೇಸರ ರಾಜಿ-ಆಗತಾನೇ ಮೂಡುತ್ತಿರುವ ಸಿಂಹಗಳ ಕತ್ತಿನ ಮೇಲಿರುವ ಜೂಲು ಕೂದಲಿನ ಸಮೂಹ;  ಮಿಕ್ಕ-ಮಿತಿಯಿಲ್ಲದ; ದಿಕ್ಕರಿಯನ್– ದಿಗ್ಗಜವನ್ನು;  ಅನೂನ-ಅಪರಿಮಿತವಾದ, ಕೊರತೆಯಿಲ್ಲದ;  ದಾನ ಪರಿಶೋಭೆ-ದಾನಗುಣದಿಂದ ಉಂಟಾಗಿರುವ ಸೌಂದರ್ಯ; ಮನಂಗೊಳೆ-ಮನಸ್ಸನ್ನು ಆಕರ್ಷಿಸಿ;  ಪೊರ್ದುವಂತೆ-ಹೊಂದುವಂತೆ, ಸೇರುವಂತೆ;  ನೆಱೆಯೆ-ಚೆನ್ನಾಗಿ;  ಪೊರ್ದೆ-ಕೂಡಿಕೊಂಡು;  ಒಪ್ಪಿ-ಶೋಭಿಸಿ;  ತೋಱಿದಂ-ಕಾಣಿಸಿದನು.

            ಪರಿಶುದ್ಧವಾದ ಬೆಳದಿಂಗಳು ಶರತ್ಕಾಲದ ಚಂದ್ರನನ್ನೂ ಕತ್ತಲೆಯನ್ನು ಪರಿಹರಿಸುವ  ಕಿರಣಗಳು ಬಾಲಸೂರ್ಯನನ್ನೂ ಕತ್ತಿನ ಮೇಲಿರುವ ಜೂಲುಕೂದಲಿನ ಸಮೂಹವು ಎಳೆಯ ಸಿಂಹವನ್ನೂ ಅಪರಿಮಿತವಾದ ದಾನಗುಣವು ದಿಗ್ಗಜವನ್ನೂ ಸೇರಿಕೊಂಡು  ನೋಡುವವರ ಮನಸ್ಸನ್ನು ಆಕರ್ಷಿಸುವಂತೆ ಸುಂದರವಾದ ಹೊಸಯೌವನವು ಗುಣಾರ್ಣವನಾದ ಅರ್ಜುನನಲ್ಲಿ ಅಧಿಕವಾಗಿ ಸೇರಿಕೊಂಡು ಆತ  ಲೋಕದ ಜನರ ಕಣ್ಣುಗಳಿಗೆ  ಸುಂದರಾಂಗನಾಗಿ ಕಾಣಿಸಿದನು.  

            ಗುಣಾರ್ಣವನೆನಿಸಿದ ಅರ್ಜುನ ಬೆಳೆಯುತ್ತಿದ್ದಂತೆಯೇ ಆತನಲ್ಲಿ ಹಲವು ಆಕರ್ಷಣೆಗಳು ನೆಲೆಗೊಂಡವು. ಪರಿಶುದ್ಧವಾದ ಬೆಳದಿಂಗಳು ಶರತ್ಕಾಲದ ಚಂದ್ರನನ್ನು ಇನ್ನಷ್ಟು ಸುಂದರನನ್ನಾಗಿ ಬೆಳಗಿಸುತ್ತವೆ. ಕತ್ತಲೆಯನ್ನು ಪರಿಹರಿಸುವ ಸೌಮ್ಯವಾದ ಕಿರಣಗಳು ಬಾಲಸೂರ್ಯನ ಗಾಂಭೀರ್ಯವನ್ನು ಇನ್ನಷ್ಟು ಬೆಳಗಿಸುತ್ತವೆ. ಕತ್ತಿನ ಮೇಲೆ ಬೆಳೆಯುತ್ತಿರುವ ಜೂಲುಕೂದಲಿನ ಸಮೂಹವು ಎಳೆಯ ಸಿಂಹದ ಗಾಂಭೀರ್ಯವನ್ನು ಇನ್ನಷ್ಟು ಹೆಚ್ಚಿಸಿ ಅದನ್ನು ಶೋಭಾಯಮಾನವನ್ನಾಗಿ ಮಾಡುತ್ತವೆ. ಹಾಗೆಯೇ ಅಪರಿಮಿತವಾದ ದಾನಗುಣವನ್ನು ಹೊಂದಿ ದಿಗ್ಗಜವು ತನ್ನ ಗಂಭೀರವಾದ ನಡೆಯಿಂದಾಗಿ ನೋಡುವವರ ಮನಸ್ಸನ್ನು ಅತಿಯಾಗಿ ಆಕರ್ಷಿಸುತ್ತದೆ. ಅರ್ಜುನನಲ್ಲಿಯೂ ಇದೇ ರೀತಿ ಆಕರ್ಷಕವಾದ ಹೊಸಯೌವನವು ಚೆನ್ನಾಗಿ ಸೇರಿಕೊಂಡು ಆತ ಶರತ್ಕಾಲದ ಚಂದ್ರನಂತೆ ಬೆಳಗತೊಡಗಿದನು. ಸೌಮ್ಯವಾದ ಕಿರಣಗಳನ್ನು ಪಸರಿಸುವ ಬಾಲಸೂರ್ಯನಂತೆ ಆತನ ನೋಟ ಆಕರ್ಷಕವೆನಿಸತೊಡಗಿತು.  ಕತ್ತಿನ ಮೇಲೆ ಜೂಲುಕೂದಲನ್ನು ಬೆಳೆಸಿಕೊಳ್ಳುತ್ತಿರುವ ಎಳೆಯ ಸಿಂಹವು ಕ್ರಮೇಣ ಗಾಂಭೀರ್ಯವನ್ನೂ ಪರಾಕ್ರಮವನ್ನೂ ಮೈಗೂಡಿಸಿಕೊಳ್ಳುವಂತೆ ಅರ್ಜುನನ ಅಂಗಾಂಗಗಳಲ್ಲಿ ಹೊಸ ಶಕ್ತಿ, ಸಾಮಥ್ಯಗಳು ಸೇರಿಕೊಂಡು ಆತ ಮಹಾಪರಾಕ್ರಮಶಾಲಿ ಎನ್ನುವುದನ್ನು ಲೋಕಕ್ಕೆ ಸಾರಿದವು.  

 

ಗದ್ಯ: ಅಂತು ನವಯೌವನಂ ನೆಱೆಯೆ ನೆಱೆಯೆ ನಿಱಿ ನಿಱೆಗೊಂಡ ಗುಣಾರ್ಣವನ ತಲೆನವಿರ್ಗಳ್ ಲಾವಣ್ಯರಸಮನಿಡಿದಿಡಿದು ತೀವಿದ ಕಮಲಾಸನನ ಬೆರಲಚ್ಚುಗಳನ್ನವಾದುವು ಮೂಱುಂ ಲೋಕದ ಮೂಱು ಪಟ್ಟಮನಾಳಲ್ಕೆ ತಕ್ಕ ಲಕ್ಷಣ ಸಂಪೂರ್ಣಮಪ್ಪ ಸಹಜಮನೋಜನ ಲಲಾಟಂ ಪಟ್ಟಂಗಟ್ಟಿದ ನೊಸಲ್ಗೆ ಲಕ್ಷಣಮನಱಸಲ್ವೇಡೆಂಬಂತಾದುದು ಕರ್ಬಿನ ಬಿಲ್ಲ ಕೊಂಕಿನಂತೆ ಕೊಂಕಿಯುಂ ಪರವನಿತೆಯರೆರ್ದೆಗೆ ಕೊಂಕಿಲ್ಲದೆಯುಂ ಸೊಗಯಿಸುವ ಸುರತ ಮಕರಧ್ವಜನ ಪುರ್ವುಗಳ್ ಕಾಮದೇವನ ವಿಜಯ ವೈಜಯಂತಿಗಳಂತಾದುವು ನೀಳ್ಪಂ ಬೆಳ್ಪುಮಂ  ತಾಳ್ದಿ ಪರವನಿತೆಯರ ದೆಸೆಗೆ ಕಿಸುಗಣ್ಚಿದಂತೆ ಕಿಸು ಸೆರೆವರಿದು ಸೊಗಯಿಸುವ ಶೌಚಾಂಜನೇಯನ ಕಣ್ಗಳೆಂಬರಲಂಬುಗಳ್ ಗಣಿಕಾಜನಂಗಳೆರ್ದೆಯಂ ನಟ್ಟು  ಕೆಂಕಮಾದಂತಾದುವು ರಿಪುಜನದ ಪೆರ್ಚಿಂಗಂ ಪರಾಂಗನಾ ಜನದ ಮೆಚ್ಚಿಂಗಂ ಮೂಗಿಱಿವಂತೆ ಸೊಗಯಿಸುವ ಗಂಧೇಭ ವಿದ್ಯಾಧರನ ಮೂಗು ತನ್ನ ಸುಯ್ಯ ಕಂಪನಲ್ಲದೆ ಪೆಱರ ಕಂಪನಾಸೆವಡದಂತಾದುದು ಪೊಸ ಜವ್ವನದ ಮುಂಬಣ್ಣದಂತೆ ಕರ್ಪಂ ಕೈಗೊಂಡು ಕತ್ತುರಿಯೊಳ್ ಬರೆದಂತಪ್ಪ ವಿಕ್ರಾಂತ ತುಂಗನ ಮೀಸೆಗಳಾತನ ತೀವ್ರ ಪ್ರತಾಪಾನಳ ಧೂಮಲೇಖೆಯಂತಾದುವು ಪುಳಿಯೊಳಲೆದ ಪವಳದ ಬಟ್ಟಿನಂತೆ ಸೊಗಯಿಸುವ ಸಂಸಾರಸಾರೋದಯನ ಬಿಂಬಾಧರಮನಂಗರಾಗರಸದುರುಳಿಯಂತಾದುದು ರಸದಾಡಿಮದ ಬಿತ್ತುಮಂ ಪೊಸ ಮುತ್ತುಮಂ ಮುಕ್ಕುಳಿಸಿದಂತಪ್ಪ ವಿಬುಧವನಜವನ ಕಳಹಂಸನ ದಂತಪಂಕ್ತಿಗಳಮೃತಕಿರಣನ ಕಾಂತಿಗಳನಿಳಿಸುವಂತಾದುವು ಮಡಿದು ತಂದಿಟ್ಟ  ಪೊಸನೆಯ್ದಿಲ ಕಾವನಾವಗಂ ಗೆಲ್ದ ರತ್ನಕುಂಡಲಂಗಳ ಪೊಳಪನೊಳಕೊಂಡಂತೆ ನಸುನೇಲ್ವ ಕರ್ಣಾಟೀ ಕರ್ಣಪೂರನ ಪಾಲೆಗಳುಂ ಸರಸ್ವತಿಯಾಡುವ ಲೀಲಾಂದೋಳದಂತಾದುವು ಬಳ್ವಳ ಬೆಳದೆಳಗೌಂಗಿನಂತೆ ಲೋಕದ ಚೆಲ್ವೆಲ್ಲಮನೊಳಕೊಂಡು ರೇಖೆಗೊಂಡ ಲಾಟೀ ಲಲಾಮನ ಪರಿಣದ್ಧ ಕಂಧರಂ ಯುವರಾಜ ಕಂಠಿಕಾಭರಣಮಂ ಕಟ್ಟುವುದರ್ಕೆ ನೋಂತು ತನ್ನ ಚೆಲ್ವನಲ್ಲದೆ ಪೆಱರ ಚೆಲ್ವನಾಸೆವಡದಂತಾದುದು ಕುಲದ ಚಲದ ಮೈಮೆಯೊಳ್  ತನ್ನನೆ ನೋಡಿದ ಸಂತೋಷದೊಳುತ್ಸಾಹಮಾದಂತೆ ಸೊಗಯಿಸುವ ಸಮರೈಕಮೇರುವಿನ ಭುಜಶಿಖರಂಗಳ್  ಕುಲಶಿಖರಿ ಶಿಖರಂಗಳಂತಾದುವು ವ್ಯಾಳ ಗಜಂಗಳುಮನಂಕದ ಬರ್ದೆಯರುಮನುಗಿಬಗಿಮಾಡಿದ  ಸಂತೋಷದೊಳ್ ಬಳ್ವಳ ಬಳೆದ ವಿಕ್ರಾಂತತುಂಗನ  ನಿಡುದೋಳ್ಗಳ್ ಗಣಿಕಾಜನಕ್ಕೆ ಕಾಮಪಾಶಂಗಳುಮರಾತಿಜನಕ್ಕೆ ಯಮಪಾಶಂಗಳುಮಾದುವು

ಗದ್ಯದ ಅನ್ವಯಕ್ರಮ:

            ಅಂತು ನವಯೌವನಂ ನೆಱೆಯೆ ನೆಱೆಯೆ  ನಿಱಿ ನಿಱಿಗೊಂಡ ಗುಣಾರ್ಣವನ ತಲೆನವಿರ್ಗಳ್ ಲವಣ್ಯರಸಮನ್ ಹಿಡಿದು ಹಿಡಿದು ತೀವಿದ ಕಮಲಾಸನನ ಬೆರಲಚ್ಚುಗಳನ್ನ ಆದವು. ಮೂಱುಂ ಲೋಕದ ಮೂಱು ಪಟ್ಟಮನ್ ಆಳಲ್ಕೆ ತಕ್ಕ ಲಕ್ಷಣಸಂಪೂರ್ಣಂ ಅಪ್ಪ ಸಹಜ ಮನೋಜನ ಲಲಾಟಂ ಪಟ್ಟಂ ಕಟ್ಟಿದ ನೊಸಲ್ಗೆ ಲಕ್ಷಣಮನ್ ಅಱಸಲ್ ಬೇಡ ಎಂಬಂತೆ ಆದುದು. ಕರ್ಬಿನ ಬಿಲ್ಲ ಕೊಂಕಿನಂತೆ ಕೊಂಕಿಯುಂ ಪರವನಿತೆಯರ ಎರ್ದೆಗೆ ಕೊಂಕಿಲ್ಲದೆಯುಂ ಸೊಗಯಿಸುವ ಸುರತ ಮಕರಧ್ವಜನ ಪುರ್ವುಗಳ್, ಕಾಮದೇವನ ವಿಜಯ ವೈಜಯಂತಿಗಳ್ ಆದುವು. ನೀಳ್ಪಂ  ಬೆಳ್ಪುಮಂ ತಾಳ್ದಿ ಪರವನಿತೆಯರ ದೆಸೆಗೆ ಕಿಸುಗಣ್ಚಿದಂತೆ ಕಿಸು ಸೆರೆ ಪರಿದು ಸೊಗಯಿಸುವ  ಶೌಚಾಂಜನೇಯನ ಕಣ್ಗಳೆಂಬ ಅಲರಂಬುಗಳ್ ಗಣಿಕಾಜನಂಗಳ ಎರ್ದೆಯಂ ನಟ್ಟು ಕೆಂಕಂ ಆದಂತೆ ಆದುವು. ರಿಪುಜನದ ಪೆರ್ಚಿಂಗಂ ಪರಾಂಗನಾ ಜನದ ಮೆಚ್ಚಿಂಗಂ ಮೂಗು ಇಱಿವಂತೆ ಸೊಗಯಿಸುವ ಗಂಧೇಭ ವಿದ್ಯಾಧರನ ಮೂಗು ತನ್ನ ಸುಯ್ಯ ಕಂಪನ್ ಅಲ್ಲದೆ ಪೆಱರ ಕಂಪನ್ ಆಸೆಪಡದಂತೆ ಆದುದು. ಪೊಸ ಜವ್ವನದ ಮುಂಬಣ್ಣದಂತೆ ಕರ್ಪಂ ಕೈಕೊಂಡು ಕತ್ತುರಿಯಲ್ ಬರೆದಂತಪ್ಪ ವಿಕ್ರಾಂತ ತುಂಗನ ಮೀಸೆಗಳ್ ಆತನ ತೀವ್ರ ಪ್ರತಾಪ ಅನಳ ಧೂಮಲೇಖೆಯಂತೆ ಆದುವು. ಪುಳಿಯೊಳ್ ಅಲೆದ ಪವಳದ ಬಟ್ಟಿನಂತೆ ಸೊಗಯಿಸುವ ಸಂಸಾರ ಸಾರೋದಯನ ಬಿಂಬ ಅಧರಮಂ ಅನಂಗ ರಾಗರಸದ ಉರುಳಿಯಂತೆ ಆದುದು. ರಸದಾಡಿಮದ ಬಿತ್ತುಮಂ ಪೊಸ ಮುತ್ತುಮಂ ಮುಕ್ಕುಳಿಸಿದಂತಪ್ಪ ವಿಬುಧ ವನಜವನ ಕಳಹಂಸನ ದಂತಪಂಕ್ತಿಗಳ್ ಅಮೃತಕಿರಣನ ಕಾಂತಿಗಳನ್ ಇಳಿಸುವಂತೆ ಆದುವು. ಮಡಿದು ತಂದಿಟ್ಟ ಪೊಸ ನೆಯ್ದಿಲ ಕಾವನ್ ಆವಗಂ ಗೆಲ್ದ ರತ್ನಕುಂಡಲಂಗಳ ಪೊಳಪನ್ ಒಳಕೊಂಡಂತೆ ನಸುನೇಲ್ವ ಕರ್ಣಾಟೀ ಕರ್ಣಪೂರನ  ಪಾಲೆಗಳಂ ಸರಸ್ವತಿ ಆಡುವ ಲೀಲ ಆಂದೋಳದಂತೆ ಆದುವು. ಬಳ್ವಳ  ಬೆಳೆದ ಎಳ ಕೌಂಗಿನಂತೆ ಲೋಕದ ಚೆಲ್ವು ಎಲ್ಲಮನ್ ಒಳಕೊಂಡು  ರೇಖೆಗೊಂಡ  ಲಾಟ ಈ ಲಲಾಮನ  ಪರಿಣದ್ಧ ಕಂಧರಂ ಯುವರಾಜ ಕಂಠಿಕ ಆಭರಣಂ ಕಟ್ಟುವುದರ್ಕೆ  ನೋಂತು ತನ್ನ ಚೆಲ್ವನ್ ಅಲ್ಲದೆ ಪೆಱರ ಚೆಲ್ವನ್ ಆಸೆಪಡದಂತೆ ಆದುದು. ಕುಲದ ಚಲದ  ಮೈಮೆಯೊಳ್ ತನ್ನನೆ ನೋಡಿದ ಸಂತೋಷದೊಳ್ ಉತ್ಸಾಹಂ ಆದಂತೆ ಸೊಗಯಿಸುವ ಸಮರ ಏಕಮೇರುವಿನ ಭುಜಶಿಖರಂಗಳ್ ಕುಲಶಿಖರಿ  ಶಿಖರಂಗಳಂತೆ ಆದುವು. ವ್ಯಾಳ ಗಜಂಗಳುಮನ್ ಅಂಕದ ಬರ್ದೆಯರುಮನ್ ಉಗಿಬಗಿ ಮಾಡಿದ ಸಂತೋಷದೊಳ್ ಬಳ್ವಳ ಬಳೆದ ವಿಕ್ರಾಂತ ತುಂಗನ ನಿಡು ತೋಳ್ಗಳ್  ಗಣಿಕಾಜನಕ್ಕೆ ಕಾಮಪಾಶಂಗಳುಂ ಅರಾತಿಜನಕ್ಕೆ ಯಮಪಾಶಂಗಳುಂ ಆದುವು.

ಪದ-ಅರ್ಥ:

ಅಂತು-ಹಾಗೆ;  ನವಯೌವನಂ-ಹೊಸ ತಾರುಣ್ಯವು;  ನೆಱೆಯೆ ನೆಱೆಯೆ-ಮೆಲ್ಲಮೆಲ್ಲನೆ ಸೇರಿಕೊಂಡಾಗ;  ನಿಱಿನಿಱಿಗೊಂಡ-ಮಡಿಕೆಮಡಿಕೆಗೊಂಡ;  ಗುಣಾರ್ಣವನ-ಅರ್ಜುನನ; ತಲೆನವಿರ್ಗಳ್-ತಲೆಗೂದಲುಗಳು;  ಲಾವಣ್ಯರಸಮನ್-ಚೆಲುವಿಕೆಯ ಸತ್ವವನ್ನು; ಇಡಿದಿಡಿದು(ಇಡಿದು+ಇಡಿದು) – ಒತ್ತೊತ್ತಾಗಿ ;  ತೀವಿದ-ತುಂಬಿದ;  ಕಮಲಾಸನನ-ಬ್ರಹ್ಮನ; ಬೆರಲಚ್ಚುಗಳನ್ನವಾದುವು-ಬೆರಳಿನ ಆಕಾರದಂತಾದವು;  ಮೂಱುಂ ಲೋಕದ-ಮೂರು ಲೋಕ(ಸ್ವರ್ಗ, ಮರ್ತ್ಯ, ಪಾತಾಳ)ಗಳ;  ಮೂಱು ಪಟ್ಟಮನಾಳಲ್ಕೆ-ಮೂರು ಲೋಕಗಳನ್ನು ಆಳುವುದಕ್ಕೆ(ಸ್ವರ್ಗ, ಮರ್ತ್ಯ ಹಾಗೂ ಪಾತಾಳಗಳಲ್ಲಿ ಅಧಿಪತ್ಯವನ್ನು ನಡೆಸುವುದಕ್ಕೆ);  ತಕ್ಕ ಲಕ್ಷಣಸಂಪೂರ್ಣಮಪ್ಪ-ಯೋಗ್ಯವಾದ ಚಿಹ್ನೆಗಳಿಂದ ಪರಿಪೂರ್ಣವಾಗಿರುವ;  ಸಹಜಮನೋಜನ-ನಿಜವಾದ ಮನ್ಮಥನ;  ಲಲಾಟಂ-ನೊಸಲು, ಹಣೆಯು;  ಪಟ್ಟಂಗಟ್ಟಿದ(ಪಟ್ಟಂ ಕಟ್ಟಿದ)-ಪಟ್ಟವನ್ನು ಕಟ್ಟಿದ, ಅಧಿಕಾರವನ್ನು ನೀಡಿದ;  ನೊಸಲ್ಗೆ-ಹಣೆಗೆ;  ಲಕ್ಷಣಮನಱಸಲ್ವೇಡ-ಲಕ್ಷಣಗಳನ್ನು ಹುಡುಕಬಾರದು;  ಎಂಬಂತಾದುದು-ಎಂಬಂತಾಯಿತು;  ಕರ್ಬಿನ ಬಿಲ್ಲ-ಕಬ್ಬಿನ ಬಿಲ್ಲಿನ;  ಕೊಂಕಿನಂತೆ– ಡೊಂಕಿನಂತೆ;  ಕೊಂಕಿಯುಂ-ಡೊಂಕಾದರೂ;  ಪರವನಿತೆಯರ –ಅನ್ಯ ಸ್ತ್ರೀಯರ;  ಎರ್ದೆಗೆ-ಹೃದಯಕ್ಕೆ, ಮನಸ್ಸಿಗೆ;  ಕೊಂಕಿಲ್ಲದೆಯುಂ-ಡೊಂಕು ಇಲ್ಲದಿದ್ದರೂ;  ಸೊಗಯಿಸುವ-ಸೊಗಸಾಗಿ ಕಾಣುವ; ಸುರತ-ಕಾಮಚೇಷ್ಟೆ;  ಮಕರಧ್ವಜನ-ಮನ್ಮಥನ; ಪುರ್ವುಗಳ್-ಹುಬ್ಬುಗಳು;  ಕಾಮದೇವನ-ಮನ್ಮಥನ;  ವಿಜಯ ವೈಜಯಂತಿಗಳಾದುವು-ವಿಜಯಪತಾಕೆಗಳಾದುವು; ನೀಳ್ಪಂ-ವಿಸ್ತಾರವಾಗಿ;  ಬೆಳ್ಪುಮಂ-ಬಿಳುಪನ್ನು;  ತಾಳ್ದಿ-ಹೊಂದಿಕೊಂಡು, ತಾಳಿಕೊಂಡು;  ಪರವನಿತೆಯರ ದೆಸೆಗೆ-ಬೇರೆ ಸ್ತ್ರೀಯರ ಕಡೆಗೆ;  ಕಿಸುಗಣ್ಚಿದಂತೆ-ಕಣ್ಣು ಕೆಂಪಗೆ ಮಾಡಿದಂತೆ;  ಕಿಸು ಸೆರೆವರಿದು-ಕೆಂಬಣ್ಣದಿಂದ ಆವೃತ್ತವಾಗಿ;  ಸೊಗಯಿಸುವ-ಶೋಭಿಸುವ;  ಶೌಚಾಂಜನೇಯನ-ಅರ್ಜುನನ;  ಕಣ್ಗಳೆಂಬಲರಂಬುಗಳ್-ಕಣ್ಣುಗಳೆಂಬ ಹೂವಿನ ಬಾಣಗಳು; ಗಣಿಕಾಜನಂಗಳ-ವೇಶ್ಯಾಸ್ತ್ರೀಯರ;  ಎರ್ದೆಯಂ-ಎದೆಯನ್ನು, ಮನಸ್ಸನ್ನು;  ನಟ್ಟು-ಘಾತಿಸಿ, ಚುಚ್ಚಿ;  ಕೆಂಕಮಾದಂತೆ-ಕೆಂಬಣ್ಣವನ್ನು ಪಡೆದಂತೆ;  ರಿಪುಜನದ-ವೈರಿಗಳ;  ಪೆರ್ಚಿಂಗಂ-ಗರ್ವಕ್ಕೆ;  ಪರಾಂಗನಾಜನದ-ಅನ್ಯಸ್ತ್ರೀಯರ; ಮೆಚ್ಚಿಂಗಂ-ಮೆಚ್ಚುಗೆಗೆ;  ಮೂಗಿಱಿವಂತೆ-ಮೂಗುಮುರಿಯುವಂತೆ;  ಗಂಧೇಭ ವಿದ್ಯಾಧರನ –ಅರ್ಜುನನ;  ತನ್ನ ಸುಯ್ಯ -ತನ್ನ ಉಸಿರಾಟದ; ಕಂಪನಲ್ಲದೆ– ಸುವಾಸನೆಯನ್ನು ಹೊರತುಪಡಿಸಿ;  ಪೆಱರ-ಬೇರೆಯವರ;  ಕಂಪನಾಸೆವಡದಂತಾದುದು-ಸುವಾಸನೆಯನ್ನು ಆಸೆಪಡದಂತೆ ಆದುದು;  ಪೊಸ ಜವ್ವನದ-ಹೊಸ ಯೌವನದ;  ಮುಂಬಣ್ಣ-ಆರಂಭಿಕ ಬಣ್ಣ;  ಕರ್ಪಂ ಕೈಕೊಂಡು-ಕಪ್ಪುಬಣ್ಣವನ್ನು ಹೊಂದಿ;  ಕತ್ತುರಿಯಲ್-ಕಸ್ತೂರಿಯ ಹಾಗೆ;  ಬರೆದಂತಪ್ಪ-ಬರೆದಂತಿರುವ, ರೇಖಿಸಿದಂತಿರುವ;  ವಿಕ್ರಾಂತ ತುಂಗನ-ಉನ್ನತ ಪರಾಕ್ರಮಿಯ(ಅರ್ಜುನನ);   ಪ್ರತಾಪಾನಳಧೂಮಲೇಖೆ-ಪರಾಕ್ರಮವೆಂಬ ಬೆಂಕಿಯ ಹೊಗೆಯ ರೇಖೆ;  ಪುಳಿಯೊಳಲೆದ-ಹುಳಿಯಲ್ಲಿ ಅದ್ದಿದ;  ಪವಳದ ಬಟ್ಟಿನಂತೆ-ಹವಳದ ಮಣಿಯಂತೆ;  ಸಂಸಾರಸಾರೋದಯನ-ಅರ್ಜುನನ;  ಬಿಂಬಾಧರಮನಂಗರಸದುರುಳಿಯಂತಾದುದು  (ಬಿಂಬ+ಅಧರಂ+ಅನಂಗ+ ರಸದ+ ಉರುಳಿಯಂತೆ+ಆದುದು)-ತುಟಿಗಳು ಕಾಮರಸದ ಪಾತ್ರೆಯಂತೆ ಆಯಿತು;  ರಸದಾಡಿಮದ ಬಿತ್ತುಮಂ-ರಸಭರಿತ ದಾಳಿಂಬೆಯ ಬೀಜವನ್ನು;  ಮುಕ್ಕುಳಿಸಿದಂತಪ್ಪ-ಮಸುಳಿಸಿದಂತಿರುವ; ವಿಬುಧವನಜವನಕಳಹಂಸನ (ವಿಬುಧ+ವನಜವನ+ಕಳಹಂಸನ) – ಪಾಂಡಿತ್ಯವೆಂಬ ತಾವರೆಯ ಸರೋವರದಲ್ಲಿ ವಿಹರಿಸುವ ಹಂಸಪಕ್ಷಿಯ;  ದಂತಪಂಕ್ತಿಗಳ್-ಹಲ್ಲುಗಳ ಸಾಲುಗಳು;  ಅಮೃತಕಿರಣನ-ಚಂದ್ರನ;  ಕಾಂತಿಗಳನಿಳಿಸುವಂತಾದುವು (ಕಾಂತಿಗಳನ್+ಇಳಿಸುವಂತೆ+ ಆದುವು) – ಹೊಳಪನ್ನು ಮಸುಳಿಸುವಂತೆ ಆದುವು;  ಮಡಿದು-ಕಿತ್ತು;  ಪೊಸನೆಯ್ದಿಲ-ಹೊಸ ನೈದಿಲೆ;  ಕಾವನ್ –ಚೆಲುವನ್ನು;  ಆವಗಂ-ಯಾವಾಗಲೂ;  ಗೆಲ್ದ-ಜಯಿಸಿದ; ಪೊಳಪನೊಳಕೊಂಡಂತೆ(ಪೊಳಪನ್ನು+ ಒಳಕೊಂಡಂತೆ) –ಹೊಳಪನ್ನು ಒಳಗೊಂಡಿರುವಂತೆ;  ನಸುನೇಲ್ವ-ತುಸುವೇ ನೇತಾಡುವ; ಕರ್ಣಪೂರನ– ಕಿವಿಯ ಆಭರಣಗಳನ್ನು ಧರಿಸಿದವನ;  ಪಾಲೆಗಳುಂ-ಕಿವಿಗಳ ಮೃದುವಾದ ಕೆಳಗಿನ ಭಾಗಗಳು;  ಲೀಲಾಂದೋಳದಂತಾದುವು (ಲೀಲ_ಆಂದೋಳದಂತೆ+ಆದುವು)- ವಿಲಾಸದ ಉಯ್ಯಾಲೆಯಂತ ಆದುವು;  ಬಳ್ವಳ ಬೆಳೆದೆಳಕೌಂಗಿನಂತೆ-ಹಿರಿದಾಗಿ ಬೆಳೆದ ಎಳೆಯ ಅಡಿಕೆಮರದಂತೆ;   ಚೆಲ್ವೆಲ್ಲಮನೊಳಕೊಂಡು (ಚೆಲ್ವು+ಎಲ್ಲಮನ್+ಒಳಕೊಂಡು)- ಎಲ್ಲಾ ಚೆಲುವನ್ನು ಸೇರಿಸಿಕೊಂಡು;  ರೇಖೆಗೊಂಡ-ಸೌಂದರ್ಯವನ್ನು ಒಳಗೊಂಡ;  ಲಾಟೀ ಲಲಾಮನ-ಹಣೆಯಲ್ಲಿ ಸುಂದರವಾದ ತಿಲಕವನ್ನು ಹೊಂದಿದವನ;  ಪರಿಣದ್ಧ ಕಂಧರಂ-ಸುಂದರವಾದ ಕೊರಳನ್ನು;  ಕಂಠಿಕಾಭರಣಮಂ-ಕೊರಳಿನ ಆಭರಣವನ್ನು;  ನೋಂತು-ಆಸೆಪಟ್ಟು;  ಮೈಮೆಯೊಳ್-ಪ್ರಭಾವದಲ್ಲಿ;  ಸಮರೈಕಮೇರು-ಯುದ್ಧದಲ್ಲಿ ಅತ್ಯಂತ ಶ್ರೇಷ್ಠವಾದವನು;  ಭುಜಶಿಖರಂಗಳ್-ಭುಜಗಳೆಂಬ ಶಿಖರಗಳು;  ಕುಲಶಿಖರಿ ಶಿಖರಗಳಂತಾದುವು-ಕುಲಪರ್ವತಗಳ ಶಿಖರಗಳಂತೆ ಆದುವು;   ವ್ಯಾಳ ಗಂಜಂಗಳುಮನ್-ಸೊಕ್ಕಿದ ಆನೆಗಳನ್ನು;  ಅಂಕದ ಬರ್ದೆಯರುಮನ್-ಹೆಸರುವಾಸಿಯಾದ ವೇಶ್ಯಾಸ್ತ್ರೀಯರನ್ನು;  ಉಗಿಬಗಿಮಾಡಿದ-ಹರಿದುಚೂರುಮಾಡಿದ;  ಬಳ್ವಳ ಬಳೆದ-ಅತಿಶಯವಾಗಿ ಬೆಳೆದ;  ವಿಕ್ರಾಂತತುಂಗನ-ಅರ್ಜುನನ; ನಿಡುದೋಳ್ಗಳ್-ನೀಳವಾದ ತೋಳುಗಳು;  ಗಣಿಕಾಜನಕ್ಕೆ-ವೇಶ್ಯಾಸ್ತ್ರೀಯರಿಗೆ;  ಕಾಮಪಾಶಂಗಳುಂ-ಕಾಮದ ಹಗ್ಗಗಳು; ಅರಾತಿ ಜನಕ್ಕೆ –ವೈರಿಗಳಿಗೆ;  ಯಮಪಾಶಗಳುಮಾದುವು-ಸಾವಿಗೆ ನೇಣುಗಳಾದವು.

            ಹಾಗೆ ಹೊಸಯೌವನವು ಮೆಲ್ಲಮೆಲ್ಲನೆ  ಮೈಯಲ್ಲಿ ತುಂಬಿಕೊಂಡಾಗ  ಮಡಿಕೆಮಡಿಕೆಗೊಂಡ ಅರ್ಜುನನ ತಲೆಗೂದಲು ಚೆಲುವಿಕೆಯ ಸತ್ವವನ್ನು ಒತ್ತೊತ್ತಾಗಿ ತುಂಬಿ ಬ್ರಹ್ಮನ ಬೆರಳಿನ ಅಚ್ಚುಗಳಂತಾದುವು. ಮೂರು ಲೋಕಗಳ ಅಧಿಪತ್ಯವನ್ನು ವಹಿಸಿಕೊಂಡು ಆಳುವುದಕ್ಕೆ ತಕ್ಕುದಾದ ಲಕ್ಷಣಗಳನ್ನು ಹೊಂದಿ ಪರಿಪೂರ್ಣವಾಗಿರುವ ನಿಜವಾದ ಮನ್ಮಥನಂತಿರುವ ಅರ್ಜುನನ ಹಣೆಯಲ್ಲಿ ಅನ್ಯಥಾ ಲಕ್ಷಣಗಳನ್ನು ಹುಡುಕಬಾರದು ಎನ್ನುವಂತಾಯಿತು. ಕಬ್ಬಿನ ಬಿಲ್ಲ ಡೊಂಕಿನಂತೆ ಡೊಂಕಾಗಿದ್ದರೂ ಅನ್ಯಸ್ತ್ರೀಯರಿಗೆ ಕೊಂಕಿಲ್ಲದೆ ಸೊಗಸಾಗಿ ಕಾಣುವ ಕಾಮಚೇಷ್ಟೆಯನ್ನು ಉಂಟುಮಾಡುವ ಅರ್ಜುನನ ಹುಬ್ಬುಗಳು ಮನ್ಮಥನ ವಿಜಯಪತಾಕೆಗಳಾದುವು. ವಿಸ್ತಾರವಾಗಿದ್ದು ಬಿಳುಪನ್ನು ತಾಳಿಕೊಂಡು ಪರವನಿತೆಯರ ಕಡೆಗೆ ಕಣ್ಣುಕೆಂಪಗೆ ಮಾಡಿದಂತೆ ಕೆಂಬಣ್ಣದಿಂದ ಕೂಡಿ ಶೋಭಿಸುವ ಅರ್ಜುನನ ಕಣ್ಣುಗಳೆಂಬ ಹೂವಿನ ಬಾಣಗಳು ವೇಶ್ಯಾಸ್ತ್ರೀಯರ ಎದೆಯನ್ನು ಚುಚ್ಚಿ ಕೆಂಬಣ್ಣವನ್ನು ಪಡೆದಂತಾದುವು. ವೈರಿಗಳ ಗರ್ವಕ್ಕೂ ಅನ್ಯಸ್ತ್ರೀಯರ ಮೆಚ್ಚುಗೆಗೂ ಮೂಗುಮುರಿಯುವಂತೆ ಶೋಭಿಸುವ ಗಂಧೇಭ ವಿದ್ಯಾಧರನೆನಿಸಿರುವ ಅರ್ಜುನನ ಮೂಗು ತನ್ನ ಉಸಿರಾಟದ ಕಂಪನ್ನಲ್ಲದೆ ಅನ್ಯರ ಕಂಪನ್ನು ಆಸೆಪಡದಂತಾದುದು. ಹೊಸತಾರುಣ್ಯದ ಮೊದಲಬಣ್ಣದಂತೆ ಕಪ್ಪುವರ್ಣವನ್ನು ಪಡೆದು ಕಸ್ತೂರಿಯಂತೆ ರೇಖಿಸಿರುವ ವಿಕ್ರಾಂತತುಂಗನೆನಿಸಿರುವ ಅರ್ಜುನನ ಮೀಸೆಗಳು ಆತನ ಉನ್ನತವಾದ ಪರಾಕ್ರಮವೆಂಬ ಬೆಂಕಿಹೊಗೆಯ ರೇಖೆಯಂತಾದುವು. ಹುಳಿಯಲ್ಲಿ ಅದ್ದಿದ ಹವಳದ ಮಣಿಯಂತೆ ಸಂಸಾರಸಾರೋದಯನೆನಿಸಿರುವ ಅರ್ಜುನನ ತುಟಿಗಳು ಕಾಮರಸದ ಪಾತ್ರೆಯಂತೆ ಶೋಭಿಸಿದವು. ರಸಭರಿತ ದಾಳಿಂಬೆಯ ಬೀಜಗಳನ್ನು ಹೊಸಮುತ್ತುಗಳನ್ನು ಮಸುಳಿಸಿದಂತಿರುವ, ಪಾಂಡಿತ್ಯವೆಂಬ ತಾವರೆಯ  ಸರೋವರದಲ್ಲಿ ವಿಹರಿಸುವ ಹಂಸಪಕ್ಷಿಯಂತಿರುವ ಅರ್ಜುನನ ದಂತಪಂಕ್ತಿಗಳು ಚಂದ್ರನ ಕಿರಣದ ಕಾಂತಿಯನ್ನು ಮಸುಳಿಸುವಂತಾದುವು.  ಕಿತ್ತು ತಂದಿಟ್ಟ ಹೊಸ ನೈದಿಲೆಯ  ಚೆಲುವನ್ನು ಯಾವತ್ತೂ ಗೆದ್ದ ರತ್ನಕುಂಡಲಗಳ ಹೊಳಪನ್ನು ಒಳಗೊಂಡಿರುವಂತೆ ತುಸುವೇ ನೇತಾಡುತ್ತಿರುವ ಅರ್ಜುನನ ಕಿವಿಯ ಮೃದುವಾದ ಕೆಳಗಿನ ಭಾಗಗಳು ಸರಸ್ವತಿಯು ಆಡುವ ವಿಲಾಸದ ಉಯ್ಯಾಲೆಯಂತೆ ಕಾಣಿಸಿದುವು. ಹಿರಿದಾಗಿ ಬೆಳೆದ ಎಳೆಯ ಅಡಿಕೆಮರದಂತೆ ಎಲ್ಲಾ ಚೆಲುವನ್ನು ತನ್ನೊಳಗೆ ಸೇರಿಸಿಕೊಂಡು ಸೌಂದರ್ಯವನ್ನು ಪಡೆದುಕೊಂಡ, ಹಣೆಯಲ್ಲಿ ಸುಂದರವಾದ ತಿಲಕವನ್ನು ಹೊಂದಿದ ಅರ್ಜುನನ ಸುಂದರವಾದ ಕೊರಲನ್ನು ಯುವರಾಜನ ಪದವಿಸೂಚಕವಾದ ಕೊರಳಿಗೆ ಆಭರಣವನ್ನು ಕಟ್ಟುವುದಕ್ಕೆ ಆಸೆಪಟ್ಟು ತನ್ನ ಚೆಲುವಿಗಲ್ಲದೆ ಬೇರೆಯವರ ಚೆಲುವಿಗೆ ಆಸೆಪಡದಂತಾದುದು. ಕುಲದ, ಛಲದ ಪ್ರಭಾವದಲ್ಲಿ ಯುದ್ಧವೀರನೆನಿಸಿರುವ ಅರ್ಜುನನ ಭುಜಶಿಖರಗಳು ಕುಲಪರ್ವತಗಳ ಶಿಖರಗಳಂತೆ ಆದುವು.  ಸೊಕ್ಕಿದ ಆನೆಗಳನ್ನು, ಹೆಸರುವಾಸಿಯಾದ ವೇಶ್ಯಾಸ್ತ್ರೀಯರನ್ನು ಪುಡಿಗಟ್ಟುವಂತೆ ಅತಿಶಯವಾಗಿ ಬೆಳೆದ ಅರ್ಜುನನ ನೀಳವಾದ ತೋಳುಗಳು ವೇಶ್ಯಾಸ್ತ್ರೀಯರಿಗೆ ಕಾಮಪಾಶಗಳಂತೆಯೂ ವೈರಿಜನರಿಗೆ ಯಮಪಾಶಗಳಂತೆಯೂ ಆದುವು.

******

*ಡಾ. ವಸಂತ್ ಕುಮಾರ್ ಉಡುಪಿ.

Leave a Reply

Your email address will not be published. Required fields are marked *