ಸಾಹಿತ್ಯಾನುಸಂಧಾನ

ಗಾಂಗೇಯನ್ ನಡಪಿದ ಕೂಸುಗಳ್-ಪಂಪ – (ಭಾಗ – ೧)

(ಮಂಗಳೂರು ವಿಶ್ವವಿದ್ಯಾನಿಲಯದ ಬಿ. ಎ. ನಾಲ್ಕನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ) (ಭಾಗ-೧)

ಕವಿ-ಕಾವ್ಯ ಪರಿಚಯ:

            ಕನ್ನಡದ ಆದಿಕವಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿರುವ ಪಂಪನ ಕಾಲ ಕ್ರಿ. ಶ. ಸು. ೯೦೩. ಪಂಪನ ಪೂರ್ವಜರು ವೆಂಗಿಮಂಡಲದ ವೆಂಗಿಪಳು ಎಂಬ ಅಗ್ರಹಾದಲ್ಲಿದ್ದವರು. ಇದು ಕೃಷ್ಣಾ ಮತ್ತು ಗೋದಾವರಿ ನದಿಗಳ ನಡುವೆ ಇದ್ದ ಪ್ರದೇಶ. ಪ್ರಸಕ್ತ ಇದು ತೆಲಂಗಾಣದ ಕರೀಂ ನಗರ ಜಿಲ್ಲೆಯಲ್ಲಿದ್ದು ವೇಮುಲವಾಡ ಎಂದು ಪ್ರಸಿದ್ಧವಾಗಿದೆ.  ಪಂಪನ ತಂದೆ ಭೀಮಪ್ಪಯ್ಯ, ತಾಯಿ ಅಬ್ಬಣಬ್ಬೆ. ಪಂಪ ತಾಯಿಯ ತವರೂರಾದ ಇಂದಿನ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಎಂಬಲ್ಲಿ ಜನಿಸಿದವನು. ಜಿನವಲ್ಲಭ ಪಂಪನ ಸಹೋದರ. ಪಂಪನ ಹಿರಿಯರು ಬ್ರಾಹ್ಮಣ ಕುಲದವರು. ಆತನ ತಂದೆ ಭೀಮಪ್ಪಯ್ಯ ಜೈನಧರ್ಮವನ್ನು ಸ್ವೀಕರಿದ್ದರಿಂದ ಪಂಪ ಜೈನನಾದ. ದೇವೇಂದ್ರಮುನಿ ಪಂಪನ ಗುರು. ವೇಮುಲವಾಡ ಚಾಲುಕ್ಯಶಾಖೆಯ ಇಮ್ಮಡಿ ಅರಿಕೇಸರಿಯ ಆಸ್ಥಾನವನ್ನು ಸೇರಿದ ಪಂಪ ಆತನ ಆಸ್ಥಾನದಲ್ಲಿ ಕವಿಯೂ ಆತನ ದಂಡನಾಯಕನೂ ಆಗಿ ಸೇವೆಸಲ್ಲಿಸಿದ್ದಾನೆ.

            ಪಂಪ ಕನ್ನಡ ಹಾಗೂ ಸಂಸ್ಕೃತಗಳೆರಡರಲ್ಲಿಯೂ ಪಾಂಡಿತ್ಯವನ್ನು ಸಂಪಾದಿಸಿದವನು. “ಆದಿಪುರಾಣ” ಪಂಪನ ಮೊದಲ ಕಾವ್ಯ. ಇದು ಜಿನಸೇನಾಚಾರ್ಯರ “ಪೂರ್ವಪುರಾಣ”ವನ್ನು ಆಧಾರವಾಗಿಟ್ಟುಕೊಂಡು ರಚಿಸಿದ ಧಾರ್ಮಿಕ ಕಾವ್ಯ. ಜೈನಧರ್ಮದ ಆದಿತೀರ್ಥಂಕರನಾದ ವೃಷಭದೇವ ಹಾಗೂ ಆತನ ಮಕ್ಕಳಾದ ಭರತ ಹಾಗೂ ಬಾಹುಬಲಿಯರ ಕಥೆಯನ್ನು ಈ ಕಾವ್ಯದಲ್ಲಿ ಪಂಪ ನಿರೂಪಿಸಿದ್ದಾನೆ. “ವಿಕ್ರಮಾರ್ಜುನ ವಿಜಯಂ” ಎಂಬುದು ಪಂಪನ ಎರಡನೆಯ ಕಾವ್ಯ. ಇದು ಮಹಾಭಾರತದ ಕಥೆಯನ್ನು ಒಳಗೊಂಡಿದ್ದು, ಮುಖ್ಯವಾಗಿ ವ್ಯಾಸಭಾರತವನ್ನು ಆಧರಿಸಿದೆ. ಪಂಪ ಲೌಕಿಕ ಹಾಗೂ ಆಗಮಿಕಗಳೆಂಬ ಎರಡು ಕಾವ್ಯಮಾರ್ಗಗಳನ್ನು ಅನುಸರಿಸಿರುವಂತೆ ಹೇಳಿಕೊಂಡಿದ್ದಾನೆ. ಲೌಕಿಕಕಾವ್ಯವಾಗಿ “ವಿಕ್ರಮಾರ್ಜುನ ವಿಜಯಂ” ಎಂಬ ಕಾವ್ಯವನ್ನೂ ಹಾಗೂ ಆಗಮಿಕಕಾವ್ಯವಾಗಿ “ಆದಿಪುರಾಣ” ಎಂಬ ಕಾವವನ್ನೂ ರಚಿಸಿದ್ದಾನೆ. ವಿಕ್ರಮಾರ್ಜುನ ವಿಜಯಂ ಎಂಬುದು ಕನ್ನಡದಲ್ಲಿ ಉಪಲಬ್ಧವಾದ ಮೊದಲ ಕಾವ್ಯವಾದುದರಿಂದ ಇದು ಕನ್ನಡದ ಆದಿಕಾವ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಾಗಿಯೇ ಪಂಪ ಕನ್ನಡದ ಆದಿಕವಿ ಎಂದು ಕರೆಸಿಕೊಂಡಿದ್ದಾನೆ.

ಕಾವ್ಯಭಾಗದ ಹಿನ್ನೆಲೆ:

            ಪ್ರಸಕ್ತ ಕಾವ್ಯಭಾಗವನ್ನು ಪಂಪನ ವಿಕ್ರಮಾರ್ಜುನವಿಜಯಂ ಕಾವ್ಯದ ಎರಡನೆಯ ಆಶ್ವಾಸದಿಂದ ಆಯ್ದುಕೊಳ್ಳಲಾಗಿದೆ. ಪಾಂಡುರಾಜನ ಅವಸಾನಾನಂತರ ಆತನ ಎರಡನೆಯ ಹೆಂಡತಿ ಮಾದ್ರಿ ಸಹಗಮನ ಮಾಡಿಕೊಳ್ಳುತ್ತಾಳೆ. ಕುಂತಿ ತನ್ನ ಐವರು ಮಕ್ಕಳೊಂದಿಗೆ ಕಾಡಿನಲ್ಲಿ ಬದುಕುವುದಕ್ಕೆ ಪಾಡುಪಡುತ್ತಿದ್ದ ಸಮಯದಲ್ಲಿ ಅಲ್ಲಿನ ಋಷಿಮುನಿಗಳು ಅವರಿಗೆ ಸಹಾಯಮಾಡಿ ಹಸ್ತಿನಾವತಿಯಲ್ಲಿರುವ  ಭೀಷ್ಮನಿಗೆ ಸುದ್ಧಿಮುಟ್ಟಿಸುತ್ತಾರೆ. ವಿಷಯ ತಿಳಿದು ಭೀಷ್ಮ  ಕುಂತಿ ಹಾಗೂ ಆಕೆಯ ಐವರು ಮಕ್ಕಳನ್ನು ಅರಮನೆಗೆ ಕರೆದುಕೊಂಡು ಬಂದು ಅವರ ಬದುಕಿಗೆ ಸಕಲ ವ್ಯವಸ್ಥೆಗಳನ್ನು ಮಾಡಿಕೊಡುತ್ತಾನೆ. ಮುಂದಿನ ಭಾಗ ಈ ಪದ್ಯಭಾಗದಲ್ಲಿ ವರ್ಣಿತವಾಗಿದೆ.

 

ಗದ್ಯ: ಗಾಂಗೇಯನಯ್ವರ್ ಕೂಸುಗಳುಮಂ ತನ್ನ ತೊಡೆಯೆ ತೊಟ್ಟಿಲಾಗಿ ನಡಪುತ್ತುಮಿರೆ ದುರ್ಯೋಧನ ಪ್ರಭೃತಿಗಳ್ ನೂರ್ವರುಂ ಧರ್ಮಪುತ್ರಾದಿಗಳಯ್ವರುಂ ಸಹಪಾಂಸುಕ್ರೀಡಿತರಾಗಿ-

ಗದ್ಯದ ಅನ್ವಯಕ್ರಮ:

ಗಾಂಗೇಯನ್ ಐವರ್ ಕೂಸುಗಳುಮಂ ತನ್ನ ತೊಡೆಯೆ ತೊಟ್ಟಿಲ್ ಆಗಿ ನಡಪುತ್ತುಂ ಇರೆ ದುರ್ಯೋಧನ ಪ್ರಭೃತಿಗಳ್ ನೂರ್ವರುಂ ಧರ್ಮಪುತ್ರ ಆದಿಗಳ್ ಐವರುಂ ಸಹಪಾಂಸು ಕ್ರೀಡಿತರ್ ಆಗಿ-

ಪದ-ಅರ್ಥ:

ಗಾಂಗೇಯನ್-ಭೀಷ್ಮನು(ಗಂಗೆಯ ಮಗ ಗಾಂಗೇಯ);  ಐವರ್ ಕೂಸುಗಳುಮಂ-ಐದು ಮಂದಿ ಮಕ್ಕಳನ್ನು;  ತನ್ನ ತೊಡೆಯೆ-ತನ್ನ ಮಡಿಲೇ; ತೂಟ್ಟಿಲಾಗೆ-ತೊಟ್ಟಿಲು ಎಂಬಂತೆ;  ನಡಪುತ್ತುಮಿರೆ-ಸಾಕುತ್ತಿರಲು, ಸಲಹುತ್ತಿರಲು;  ದುರ್ಯೋಧನ ಪ್ರಭೃತಿಗಳ್-ದುರ್ಯೋಧನ ಮೊದಲಾದ ರಾಜಕುಮಾರರು;  ನೂರ್ವರುಂ-ನೂರುಮಂದಿ;  ಧರ್ಮಪುತ್ರಾದಿಗಳ್-ಧರ್ಮರಾಯ ಮೊದಲಾದವರು;  ಐವರುಂ-ಐದು ಮಂದಿ;  ಸಹಪಾಂಸುಕ್ರೀಡಿತರಾಗಿ-ಒಟ್ಟಿಗೆ ಮಣ್ಣಿನಲ್ಲಿ ಆಟವಾಡಿಕೊಂಡು.

            ಭೀಷ್ಮಾಚಾರ್ಯನು ತಂದೆಯ ಪ್ರೀತಿಯಿಂದ ವಂಚಿತರಾದ ಐದುಮಂದಿ ಪಾಂಡವರನ್ನು ತನ್ನ ತೊಡೆಯನ್ನೇ ತೊಟ್ಟಿಲಾಗಿ ಪರಿಭಾವಿಸಿಕೊಂಡು ತನ್ನ ಮಡಿಲಲ್ಲಿರಿಸಿ ಸಾಕುತ್ತಿರಲು ದುರ್ಯೋಧನ ಮೊದಲಾದ ನೂರುಮಂದಿ ರಾಜಪುತ್ರರೂ ಧರ್ಮರಾಯ ಮೊದಲಾದ ಐದು ಮಂದಿ ಪಾಂಡವರೂ ಸೇರಿಕೊಂಡು ಮಣ್ಣಿನಲ್ಲಿ ಧೂಳೇಳುವಂತೆ ಆಟವಾಡಿಕೊಂಡಿದ್ದಾಗ –

 

 ಒಡನಾಡಿಯುಮೊಡನೋದಿಯು

ಮೊಡವಳೆದುಂ ಗುಳ್ಳೆಗೊಟ್ಟಿ ಬಟ್ಟುಳಿಸೆಂಡುಂ

ಪೊಡೆಸೆಂಡೆಂಬಿವನಾಡು

ತ್ತೊಡವಳೆದರ್ ತಮ್ಮೊಳೆಳಸೆ ತಂತಂಗೆಡೆಗಳ್  ೧

 

ಪದ್ಯದ ಅನ್ವಯಕ್ರಮ:

ಒಡನೆ ಆಡಿಯುಂ, ಒಡನೆ ಓದಿಯುಂ, ಒಡನೆ ಬಳೆದುಂ, ಗುಳ್ಳೆಗೊಟ್ಟಿ, ಬಟ್ಟುಳಿಸೆಂಡುಂ, ಪೊಡೆಸೆಂಡುಂ ಎಂಬ ಇವನ್ ಆಡುತ್ತ ತಮ್ಮೊಳ್ ತಂತಂಗೆ ಎಡೆಗಳ್ ಎಳಸೆ ಒಡ ಬಳೆದರ್.

ಪದ-ಅರ್ಥ:

ಒಡನಾಡಿಯುಂ-ಒಟ್ಟಿಗೆ ಆಟವಾಡಿಕೊಂಡು;  ಒಡನೋದಿಯುಂ-ಒಟ್ಟಿಗೆ ಓದಿಕೊಂಡು;  ಒಡವಳೆದುಂ-ಒಟ್ಟಿಗೆ ಬೆಳೆದು;  ಗುಳ್ಳೆಗೊಟ್ಟಿ, ಬಟ್ಟುಳಿಸೆಂಡು, ಪೊಡೆಸೆಂಡು –ಪಂಪನ ಕಾಲದಲ್ಲಿ  ಮಕ್ಕಳಾಡುತ್ತಿದ್ದ ವಿವಿಧ ಬಗೆಯ ಆಟಗಳು; ಒಡವಳೆದರ್-ಒಟ್ಟಿಗೆ ಬೆಳೆದರು; ತಮ್ಮೊಳೆಳಸೆ-ತಮ್ಮೊಳಗೆ ಇಷ್ಟವಾದಂತೆ;  ತಂತಂಗೆಡೆಗಳ್-ತಮ್ಮತಮ್ಮೊಳಗೆ ಅವಕಾಶವಾಡಿಕೊಂಡು.

            ನೂರು ಮಂದಿ ಕೌರವರೂ ಐದು ಮಂದಿ ಪಾಂಡವರೂ ಒಟ್ಟಿಗೆ ಕೂಡಿಕೊಂಡು, ಒಟ್ಟಿಗೆ ಓದಿಕೊಂಡು, ಒಟ್ಟಿಗೆ ಬೆಳೆದು ಗುಳ್ಳೆಗೊಟ್ಟಿ, ಬಟ್ಟುಳಿಸೆಂಡು, ಪೊಡೆಸೆಂಡು ಮೊದಲಾದ ವಿವಿಧ ಬಗೆಯ ಮಕ್ಕಳ ಆಟಗಳನ್ನು ಆಡಿಕೊಂಡು ತಮತಮಗೆ ಇಷ್ಟವಾದಂತೆ ಅವಕಾಶಮಾಡಿಕೊಂಡು ಒಟ್ಟಿಗೆ ಬೆಳೆದರು.

            ಆರಂಭಕಾಲದಲ್ಲಿ ದುರ್ಯೋಧನಾದಿ ನೂರು ಮಂದಿ ಕೌರವರೂ ಧರ್ಮರಾಯಾದಿ ಐದು ಮಂದಿ ಪಾಂಡವರೂ ಯಾವ ಭೇದಭಾವವೂ ಇಲ್ಲದೆ, ಮೇಲು-ಕೀಳೂ ಇಲ್ಲದೆ ಬೆಳೆಯತೊಡಗಿದರು. ಅವರೆಲ್ಲರೂ ದ್ರೋಣಾಚಾರ್ಯರಲ್ಲಿ ಶಿಷ್ಯರಾಗಿ ಒಟ್ಟಿಗೆ ಓದಿದರು, ಒಟ್ಟಿಗೆ ಕೂಡಿಕೊಂಡು ಬೆಳೆದರು. ತಮ್ಮ ಕಾಲದಲ್ಲಿ ಪ್ರಚಲಿತವಾಗಿದ್ದ ಮಕ್ಕಳಾಡುತ್ತಿದ್ದ ಗುಳ್ಳೆಗೊಟ್ಟಿ, ಬಟ್ಟುಳಿಸೆಂಡು, ಪೊಡೆಸೆಂಡು ಮೊದಲಾದ ಆಟಗಳನ್ನು ಆಡುತ್ತ ಸಂತಸಪಟ್ಟರು. ತಮತಮಗೆ ಇಷ್ಟವಾದಂತೆ, ತಮತಮಗೆ ಮೆಚ್ಚುಗೆಯಾದಂತೆ, ತಮತಮಗೆ ಅಭಿರುಚಿಯುಳ್ಳ ಆಟಗಳನ್ನು ಆಡುತ್ತ, ಯಾವ ಕಾಪಟ್ಯಕ್ಕೂ ಮತ್ಸರಕ್ಕೂ ದ್ವೇಷಕ್ಕೂ ಅವಕಾಶವಿಲ್ಲದಂತೆ ಒಟ್ಟಿಗೆ ಬೆಳೆದರು. ಪಾಂಡವರು ಹಾಗೂ ಕೌರವರು ಇನ್ನೂ ಬುದ್ಧಿಬೆಳೆಯದ ಬಾಲಕರಾಗಿದ್ದುದರಿಂದ ಅವರೊಳಗೆ ಅಂತಹ ಯಾವುದೇ ವೈಮಸ್ಸು ಕಾಣಿಸಿಕೊಳ್ಳಲಿಲ್ಲ.

ಗದ್ಯ: ಅಂತಾ ಕೂಸುಗಳ್ ಕೂಸಾಟವಾಡುತ್ತಿರ್ದೊಂದು ದಿವಸಂ ಮರಗೆರಸಿಯಾಡಲೆಂದು ಮುಂದೆ ತಮ್ಮ ಪಗೆ ಪರ್ವುವಂತೆ ಪನ್ನಿರ್ಮತ್ತರ್ ಪರ್ವಿದಾಲದ ಮರದ ಮೊದಲ್ಗೆ ವಂದು ಭೀಮನಂ ಮಱೆಮಾಡಿ ಕೋಲನೀಡಾಡಿ ಪಲವು ಸೂೞ್ ಕಾಡಿ-

ಗದ್ಯದ ಅನ್ವಯಕ್ರಮ:

ಅಂತು ಆ ಕೂಸುಗಳ್ ಕೂಸಾಟ ಆಡುತ್ತಿರ್ದ ಒಂದು ದಿವಸಂ ಮರಗೆರಸಿ ಆಡಲೆಂದು ಮುಂದೆ ತಮ್ಮ ಪಗೆ ಪರ್ವುವಂತೆ ಪನ್ನಿರ್ಮತ್ತರ್ ಪರ್ವಿದ ಆಲದ ಮರದ ಮೊದಲ್ಗೆ ವಂದು ಭೀಮನಂ ಮಱೆಮಾಡಿ ಕೋಲನ್ ಈಡಾಡಿ ಪಲವು ಸೂೞ್ ಕಾಡಿ-

ಪದ-ಅರ್ಥ:

ಅಂತು-ಹಾಗೆ;  ಕೂಸುಗಳ್-ಮಕ್ಕಳು, ಬಾಲಕರು;  ಕೂಸಾಟವಾಡುತ್ತಿರ್ದ-ಮಕ್ಕಳಾಟ ಆಡುತ್ತಿದ್ದ;  ಮರಗೆರಸಿಯಾಡಲ್-ಪಂಪನ ಕಾಲದಲ್ಲಿ ಆಡುತ್ತಿದ್ದ ಒಂದು ಬಗೆಯ ಆಟ(ಇಂದಿನ ಮರಕೋತಿಯಾಟಕ್ಕೆ ಸಮಾನವಾದ ಆಟ);  ಪಗೆ-ವೈರ; ಪರ್ವುವಂತೆ-ಹಬ್ಬುವಂತೆ, ಹೆಚ್ಚಾಗುವಂತೆ, ಪನ್ನಿರ್ಮತ್ತರ್(ಪತ್ತು+ಇರ್ಮತ್ತರ್)-ಇಪ್ಪತ್ತು ಮತ್ತುರುಗಳಷ್ಟು(ಮತ್ತರು ಎಂಬುದು ಪಂಪನ ಕಾಲದಲ್ಲಿದ್ದ ಒಂದು ಮಾಪನ/ಅಳತೆ);  ಪರ್ವಿದ-ಹಬ್ಬಿದ, ಬೆಳೆದ;  ಮೊದಲ್ಗೆ-ಬುಡಕ್ಕೆ;  ವಂದು-ಬಂದು;  ಮಱೆಮಾಡಿ-ಕಾಣದಂತಿರಿಸಿ;  ಕೋಲನೀಡಾಡಿ-ಕೋಲನ್ನು ಚಾಚಿಕೊಂಡು;  ಪಲವು ಸೂೞ್-ಹಲವು ಬಾರಿ; ಕಾಡಿ-ಪೀಡಿಸಿ.

            ಹಾಗೆ ಬೆಳೆಯುತ್ತ ಮಕ್ಕಳಾಟವನ್ನು ಆಡುತ್ತಿದ್ದ ಆ ರಾಜಕುಮಾರರು ಒಂದು ದಿನ ಮರಗೆರಸಿ ಆಟವನ್ನು ಆಡಬೇಕೆಂಬ ಹಂಬಲದಿಂದ ಇಪ್ಪತ್ತು ಮತ್ತರುಗಳಷ್ಟು ಎತ್ತರಕ್ಕೆ ಬೆಳೆದು ಭವಿಷ್ಯದಲ್ಲಿ ಪಾಂಡವರು  ಹಾಗೂ ಕೌರವರೊಳಗೆ ವೈರತ್ವವು ವ್ಯಾಪಿಸಿಕೊಳ್ಳುವ ರೀತಿಯಲ್ಲಿ ಹಬ್ಬಿಕೊಂಡು ನಿಂತ ಆಲದ ಮರದ ಬುಡಕ್ಕೆ ಬಂದು ಭೀಮನನ್ನು ಮರೆಮಾಡಿ ಉಳಿದ ಕೌರವರೆಲ್ಲರೂ ಮರವನ್ನೇರಿ ಕೋಲೊಂದನ್ನು ಚಾಚಿಕೊಂಡು ಭೀಮನನ್ನು ಹಲವು ಬಾರಿ ಪೀಡಿಸಿ-

 

ಪರಿದನಿಬರುಮೊಡನಡರ್ದಿರೆ

ಮರನಂ ಮುಟ್ಟಲ್ಕೆ ಪಡೆಯದನಿಬರ್ಗಂ ಕಿಂ

ಕಿರಿವೋಗಿ ಭೀಮಸೇನಂ

ಮರನಂ ಪಿಡಿದಲ್ಗೆ ಪಣ್ವೊಲನಿಬರುಮುದಿರ್ದರ್   ೨

 

ಪದ್ಯದ ಅನ್ವಯಕ್ರಮ:

ಪರಿದು ಅನಿಬರುಂ ಒಡನೆ ಮರನಂ ಅಡರ್ದು ಇರೆ, ಭೀಮಸೇನಂ ಅನಿಬರ್ಗಂ ಕಿಂಕಿಱಿವೋಗಿ  ಮರನಂ ಪಿಡಿದು ಅಲ್ಗೆ ಅನಿಬರುಂ ಪಣ್ವೊಲ್ ಉದಿರ್ದರ್

ಪದ-ಅರ್ಥ:

ಪರಿದು– ಓಡಾಡಿ;  ಅನಿಬರುಂ-ಅಷ್ಟೂ ಮಂದಿ;  ಒಡನಡರ್ದಿರೆ-ಕೂಡಲೇ ಏರಿಕೊಂಡಿರಲು;   ಮರನಂ-ಮರವನ್ನು;  ಮುಟ್ಟಲ್ಕೆ-ಮುಟ್ಟುವುದಕ್ಕೆ;  ಪಡೆಯದೆ-ಅವಕಾಶಕೊಡದೆ;  ಅನಿಬರ್ಗಂ-ಅಷ್ಟೂ ಮಂದಿಗೆ; ಕಿಂಕಿಱಿವೋಗಿ-ಕಿರಿಕಿರಿಯಾಗಿ, ಹಿಂಸೆಯಾಗಿ ಭೀಮಸೇನಂ-ಭೀಮಸೇನನು;  ಮರನಂ-ಮರವನ್ನು;  ಪಿಡಿದಲ್ಗೆ-ಹಿಡಿದು ಅಲುಗಾಡಿಸಲು;  ಪಣ್ವೊಲ್-ಹಣ್ಣುಗಳ ಹಾಗೆ;  ಉದಿರ್ದರ್-ಉದುರಿ ಬಿದ್ದರು.

            ಅಷ್ಟೂ ಮಂದಿ ರಾಜಕುಮಾರರು ಅತ್ತಿತ್ತ ಓಡಾಡಿಕೊಂಡು ಕೂಡಲೇ ಆ ಮರವನ್ನು ಏರಿಕೊಂಡಿದ್ದು, ಭೀಮಸೇನನು ಅವರಾರನ್ನೂ ಕಾಣದೆ ಒಬ್ಬರನ್ನೂ ಮುಟ್ಟಿಸೋಲಿಸುವುದಕ್ಕೆ ಸಾಧ್ಯವಾಗದೆ ಮನಸ್ಸಿನಲ್ಲಿಯೇ ಕಿರಿಕಿರಿಯಾಗಿ ಭೀಮಸೇನನು ಅವರು ಏರಿದ್ದ ಮರವನ್ನು ಹಿಡಿದು ಅಲುಗಾಡಿಸಿದಾಗ ಮರವನ್ನೇರಿದ್ದ ದುರ್ಯೋಧನಾದಿ ಕೌರವರೆಲ್ಲರೂ ಹಣ್ಣುಗಳಂತೆ ಕೆಳಗೆ ಉದುರಿಬಿದ್ದರು.

            ಮರಗೆರಸಿ ಆಟವನ್ನಾಡಲು ಹಂಬಲಿಸಿದ ರಾಜಕುಮಾರರು ಭೀಮನನ್ನು ಮುಟ್ಟುವುದಕ್ಕೆಂದು ನಿಲ್ಲಿಸಿ ಉಳಿದವರು ಆತನ ದೃಷ್ಟಿಯನ್ನು ತಪ್ಪಿಸಿಕೊಂಡು ಮರವನ್ನೇರಿಕೊಂಡು ಭೀಮನ ದೃಷ್ಟಿಯನ್ನು ತಪ್ಪಿಸಿ ತಮ್ಮನ್ನು ಮರೆಮಾಡಿಕೊಂಡರು. ಭೀಮನಿಗೆ ಮತ್ತೆಮತ್ತೆ ಕೋಲನ್ನು ಚಾಚಿಕೊಂಡು ಪೀಡಿಸಿದರು. ಭೀಮನಿಗೆ ಮರಹತ್ತಲೂ ಸಾಧ್ಯವಾಗಲಿಲ್ಲ ಮಾತ್ರವಲ್ಲ ಯಾರನ್ನು ಮುಟ್ಟುವುದಕ್ಕೂ ಸಾಧ್ಯವಾಗಲಿಲ್ಲ. ಆಟದಲ್ಲಿನ ಕೌರವರ ಈ ಕುಹಕವರ್ತನೆ ಕಿರಿಕಿರಿಯಾಗಿಸಿ ಭೀಮನನ್ನು ಕೆರಳಿಸಿತು. ಆತ ಒಂದು ಉಪಾಯಮಾಡಿ ಅವರು ಏರಿಕೊಂಡಿದ್ದ ಮರವನ್ನೇ ಹಿಡಿದು ಆಲುಗಾಡಿಸಿದನು. ಆತನ ಅಲುಗಾಟದ ತೀವ್ರತೆಗೆ ರಾಜಕುಮಾರರು ಮರದ ಮೇಲೆ ತಮ್ಮನ್ನು ತಾವು ಹಿಡಿದಿಟ್ಟುಕೊಳ್ಳಲಾರದೆ ಹಣ್ಣುಗಳು ಕೆಳಗೆ ಉದುರಿಬೀಳುವಂತೆ ಕೆಳಗೆ ಬಿದ್ದರು. ಭೀಮನ ಶಕ್ತಿ, ಸಾಮರ್ಥಗಳು ಎಷ್ಟೆಂಬುದು ಇತರ ರಾಜಕುಮಾರರಿಗೆ ತಿಳಿಯುವಂತಾಯಿತು.

ಗದ್ಯ: ಅಂತು ಬಿೞ್ದು ಸುಲಿದ ಮೊೞಕಾಲ್ಗಳುಂ ಕೞಲ್ದ  ಪಲ್ಗಳುಮೆಲ್ವಡಗಾದ ಮೈಯ್ಗಳುಮುಡಿದ ಕೆಯ್ಗಳುಮಾಗಿ ಬೆರಸೞುತ್ತುಂ ಬಂದು ಗಾಂಗೇಯ ಧೃತರಾಷ್ಟ್ರರ್ಗೆ ಕಾರಣಂಬೇೞ್ದೊಡವರಿಂದತ್ತ ಭೀಮನೊಡನಾಡದಿರಿಮೆಂದು ಮುದುಗಣ್ಗಳ್ ಬಾರಿಸೆ ತಮ್ಮ ನೊಂದ ಸಿಗ್ಗಿಂಗನಿಬರುಮೊಂದಾಗಿ ಪೋಗಿ ಪೊಱವೊಳಲ ಮರದ ಕೆಳಗೆ ಮಱಸೊಂದಿದ ಭೀಮನನಡಸಿ ಪಿಡಿದು ನೂರ್ವರುಂ ಗಂಟಲಂ ಮೆಟ್ಟಿ-

ಗದ್ಯದ ಅನ್ವಯಕ್ರಮ:

ಅಂತು ಬಿೞ್ದು ಸುಲಿದ ಮೊೞಕಾಲ್ಗಳಂ ಕೞಲ್ದ ಪಲ್ಗಳಂ ಎಲ್ವಡಗಾದ ಮೆಯ್ಗಳುಂ ಉಡಿದ ಕೆಯ್ಗಳುಂ ಆಗಿ ಅೞುತ್ತುಂ ಬೆರಸಿ ಬಂದು ಗಾಂಗೇಯ ಧೃತರಾಷ್ಟ್ರರ್ಗೆ ಕಾರಣಂ ಪೇೞ್ದೊಡೆ ಅವರ್ ಇಂದತ್ತ ಭೀಮನೊಡನೆ ಆಡದಿರಿಂ ಎಂದು ಮುದುಗಣ್ಗಳ್ ಬಾರಿಸೆ ನೊಂದ ತಮ್ಮ ಸಿಗ್ಗಿಂಗೆ ಅನಿಬರುಂ ಒಂದಾಗಿ ಪೋಗಿ ಪೊರ ಪೊೞಲ ಮರದ ಕೆಳಗೆ ಮಱಸಿ ಒಂದಿದ ಭೀಮ ಅರಸಿ ಪಿಡಿದು ನೂರ್ವರು ಗಂಟಲಂ ಮೆಟ್ಟಿ-

ಪದ-ಅರ್ಥ:

ಅಂತು-ಹಾಗೆ;  ಬಿೞ್ದು-ಬಿದ್ದು;  ಸುಲಿದ-ಚರ್ಮ ಕಿತ್ತುಹೋದ;  ಮೊೞಕಾಲ್ಗಳುಂ-ಮೊಣಕಾಲುಗಳಿಂದ; ಕೞಲ್ದ-ಉದುರಿದ;  ಪಲ್ಗಳಂ-ಹಲ್ಲುಗಳನ್ನು;  ಎಲ್ವಡಗಾದ (ಎಲ್ವು+ಅಡಗು+ಆದ)-ಮೂಳೆ ಮಾಂಸ ಕಾಣಿಸಿಕೊಂಡ;  ಮೆಯ್ಗಳುಂ-ದೇಹಗಳನ್ನು;  ಉಡಿದ ಕಯ್ಗಳುಮಾಗಿ– ಮುರಿದ;  ಕೈಗಳನ್ನು ಹೊಂದಿ; ಬೆಱಸಿ ಅಳುತ್ತುಂ– ಅಳುವಿನಿಂದ ಕೂಡಿಕೊಂಡು;   ಗಾಂಗೇಯ-ಭೀಷ್ಮ;  ಕಾರಣಂಬೇೞ್ದೊಡೆ(ಕಾರಣಂ+ಪೇೞ್ದೊಡೆ)-ಕಾರಣವನ್ನು ತಿಳಿಸಿದಾಗ;  ಇಂದತ್ತ ಭೀಮನೊಡನಾಡದಿರಿ-ಇಂದಿನಿಂದ ಭೀಮನೊಡನೆ ಆಡವಾಡಬೇಡಿ;  ಮುದುಗಣ್ಗಳ್– ವೃದ್ಧರು, ಹಿರಿಯರು (ಭೀಷ್ಮ, ಧೃತರಾಷ್ಟ್ರರು);  ಬಾರಿಸೆ-ಸಮಾಧಾನಿಸಿದಾಗ; ತಮ್ಮ-ತಮಗಾದ; ನೊಂದ ಸಿಗ್ಗಿಂಗೆ-ನೋವಿನಿಂದಾದ ಅವಮಾನಕ್ಕೆ;  ಅನಿಬರುಮೊಂದಾಗಿ-ಅಷ್ಟೂ ಮಂದಿ ಒಂದಾಗಿ; ಪೊಱವೊಳಲ(ಪೊಱ+ ಪೊಳಲ)  -ಪಟ್ಟಣದ ಹೊರಗಿರುವ;  ಮಱಸೊಂದಿದ-ಮೈಮರೆತು ನಿದ್ದೆಯಲ್ಲಿರುವ;  ಭೀಮನನಡಸಿ-ಭೀಮನನ್ನು ಸುತ್ತುವರಿದು;  ಪಿಡಿದು-ಹಿಡಿದುಕೊಂಡು;  ನೂರ್ವರುಂ-ನೂರು ಮಂದಿಯೂ;  ಗಂಟಲಂ ಮೆಟ್ಟಿ-ಕುತ್ತಿಗೆಯನ್ನು ತುಳಿದು. 

            ಹಾಗೆ ಮರದಿಂದ ಕೆಳಗೆ ಉದುರಿದ ರಾಜಕುಮಾರರು ತಮ್ಮ ಚರ್ಮ ಕಿತ್ತುಹೋದ ಮೊಣಕಾಲುಗಳನ್ನು, ಉದುರಿದ ಹಲ್ಲುಗಳನ್ನು, ಮೂಳೆ ಮಾಂಸ ಕಾಣಿಸಿಕೊಂಡ ದೇಹಗಳನ್ನು, ಮುರಿದ ಕೈಗಳನ್ನು ಹೊಂದಿ ಅಳುತ್ತ ಬಂದು ಭೀಷ್ಮ, ಧೃತರಾಷ್ಟ್ರರಿಗೆ ತಮಗಾದ ಹೀನಸ್ಥಿತಿಗೆ ಕಾರಣಗಳನ್ನು ಹೇಳಿಕೊಂಡರು. ಆಗ ಅವರು  ಇಂದಿನಿಂದ ಭೀಮನೊಡನೆ ಆಟವಾಡಬೇಡಿ ಎಂದು ಆ ಹಿರಿಯರು ಸಮಾಧಾನಿಸಿದರು. ಆದರೆ ರಾಜಕುಮಾರರು ತಮಗಾದ ನೋವಿನಿಂದ ಅವಮಾನಕ್ಕೆ ತುತ್ತಾಗಿ ಅಷ್ಟೂ ಮಂದಿ ಒಟ್ಟುಸೇರಿಕೊಂಡು ಪಟ್ಟಣದ ಹೊರಗಿರುವ ಮರದ ಅಡಿಯಲ್ಲಿ ಮೈಮರೆತು ಮಲಗಿದ ಭೀಮನನ್ನು ಸುತ್ತುವರಿದು ಆತನನ್ನು ಹಿಡಿದು ಗಂಟಲನ್ನು ಮೆಟ್ಟಿದರು.

            ಮರಗೆರಸಿ ಆಟದಲ್ಲಿ ಭೀಮನಿಗೆ ತಾವೆಲ್ಲರೂ ಸೇರಿಕೊಂಡು ಮೋಸಮಾಡಿರುವುದನ್ನು ಮರೆತುಬಿಟ್ಟ ದುರ್ಯೋಧನಾದಿ ರಾಜಕುಮಾರರು ಭೀಮನ ಕೋಪಕ್ಕೆ ಗುರಿಯಾಗಿ ಮರದಿಂದ ಬಿದ್ದಾಗ ಕೆಲವರಿಗೆ ಮೊಣಕಾಲಿನ ಚರ್ಮ ಕಿತ್ತುಹೋಯಿತು. ಇನ್ನು ಕೆಲವರಿಗೆ ಹಲ್ಲು ಉದುರಿಹೋಯಿತು. ಮತ್ತೆ ಕೆಲವರ ದೇಹದಲ್ಲಿ ಗಾಯವಾಗಿ ಮೂಳೆ ಮಾಂಸ ಕಾಣಿಸಿಕೊಂಡಿತು. ತಮಗೆ ಈ ಹೀನಸ್ಥಿತಿಯನ್ನು ತಂದೊಡ್ದಿದ ಭೀಮನನ್ನು ಸುಮ್ಮನೆ ಬಿಡಬಾರದು, ಹಿರಿಯರಿಗೆ ಹೇಳಿ ತಕ್ಕ ಶಿಕ್ಷೆ ಕೊಡಿಸಬೇಕೆಂದು ಭಾವಿಸಿಕೊಂಡು ಭೀಷ್ಮ, ಧೃತರಾಷ್ಟ್ರರಿದ್ದಲ್ಲಿಗೆ ಬಂದು ತಮಗೆ ಭೀಮನಿಂದಾದ ದುರವಸ್ಥೆಯನ್ನು ಅಳುತ್ತ ನಿವೇದಿಸಿಕೊಂಡರು. ಆದರೆ ಮಕ್ಕಳ ಮಧ್ಯೆ ದ್ವೇಷಹುಟ್ಟಿಕೊಳ್ಳಬಹುದೆಂಬ ಕಾರಣದಿಂದ ಅವರು ಇನ್ನು ಮುಂದೆ ನೀವು ಯಾರೂ ಕೂಡಾ ಭೀಮನೊಂದಿಗೆ ಆಟವಾಡಬೇಡಿ ಎಂದು ಸಮಾಧಾನಿಸಿದರು. ಆದರೆ ಹಿರಿಯರ ಈ ಮಾತುಗಳಿಂದ ದುರ್ಯೋಧನಾದಿ ರಾಜಕುಮಾರರಿಗೆ ಸಮಾಧಾನವಾಗಲಿಲ್ಲ. ಅವರೆಲ್ಲರೂ ಮತ್ತೆ ತಾವು ಆಟವಾಡಿಕೊಂಡಿದ್ದ ಪಟ್ಟಣದ ಹೊರಗಿರುವ ಮರದ ಸಮೀಪಕ್ಕೆ ಬಂದಾಗ ಭೀಮ ಮರದ ಕೆಳಗೆ ಗಾಢನಿದ್ದೆಯಲ್ಲಿದ್ದುದನ್ನು ಕಂಡು ಸೇಡುತೀರಿಸಿಕೊಳ್ಳುವುದಕ್ಕೆ ಇದೇ ಸರಿಯಾದ ಸಮಯವೆಂದು ಬಾವಿಸಿಕೊಂಡು ಅವರೆಲ್ಲರೂ ಆತನನ್ನು ಸುತ್ತುವರಿದು ಆತನ ಗಂಟಲನ್ನು ಮೆಟ್ಟಿದರು.

 

ಪಾವುಗಳಂ ಕೊಳಿಸಿ ಮಹಾ

ಗ್ರಾವಮನುಱದಡಸಿ ಕಟ್ಟಿ ಕೊರಲೊಳ್ ಗಂಗಾ

ದೇವಿಯ ಮಡುವಿನೊಳೞ್ದಿದ

ರಾವರಿಸದೆ ತಮ್ಮ ಕುಲಮನಡಿಗೞ್ದುವವೋಲ್   ೩

 

ಪದ್ಯದ ಅನ್ವಯಕ್ರಮ:

ಪಾವುಗಳಂ ಕೊಳಿಸಿ, ಉಱದೆ ಮಹಾ ಗ್ರಾವಮನ್ ಕೊರಲೊಳ್ ಅಡಸಿ ಕಟ್ಟಿ, ಅರಿಸದೆ ತಮ್ಮ ಕುಲಮನ್ ಅಡಿಗೆ ಅೞ್ದುವವೋಲ್ ಅವರ್ ಗಂಗಾದೇವಿಯ ಮಡುವಿನೊಳ್  ಅೞ್ದಿದರ್

ಪದ-ಅರ್ಥ:

ಪಾವುಗಳಂ-ಹಾವುಗಳನ್ನು;  ಕೊಳಿಸಿ-ಸುತ್ತಿಸಿ;  ಮಹಾಗ್ರಾವಮನ್-ದೊಡ್ಡ ಕಲ್ಲನ್ನು;  ಉಱದಡಸಿ(ಉಱದೆ+ಅಡಸಿ)-ಎದೆಯಲ್ಲಿ ಬಿಗಿದು;  ಕೊರಲೊಳ್-ಕುತ್ತಿಗೆಯಲ್ಲಿ;  ಗಂಗಾದೇವಿ-ಗಂಗಾನದಿ;  ಮಡುವಿನೊಳ್-ಯಥೇಷ್ಟ ನೀರಿರುವ ಜಾಗ;  ಅೞ್ದಿದರ್-ಮುಳುಗಿಸಿದರು;  ಅವರ್-ಕೌರವರು;  ಅರಿಸದೆ-ತಿಳಿಯದೆ, ವಿವೇಚಿಸದೆ;  ತಮ್ಮ ಕುಲಮನ್-ತಮ್ಮ ವಂಶವನ್ನು;  ಅಡಿಗೆ-ಕೆಳಕ್ಕೆ, ನಾಶದ ಕಡೆಗೆ;  ಅೞ್ದುವವೋಲ್-ಮುಳುಗಿಸುವಂತೆ.

            ಕೌರವರೆಲ್ಲರೂ ಸೇರಿಕೊಂಡು ಇನ್ನೂ ಅರೆಬರೆ ನಿದ್ದೆಯ ಮಂಪರಿನಲ್ಲಿರುವ ಭೀಮನ ಕೊರಳಿಗೆ ಹಾವುಗಳನ್ನು ಸುತ್ತಿ, ಆತನ ಎದೆಗೆ ಒಂದು ದೊಡ್ಡ ಕಲ್ಲನ್ನು  ಬಿಗಿದು ಕೊರಳಿಗೆ ಕಟ್ಟಿ, ತಮ್ಮ ಕುಲವನ್ನೇ ತಾವೆಲ್ಲರೂ ಸೇರಿ ಮುಳುಗಿಸುವುದಕ್ಕೆ ಹೊರಟಿದ್ದೇವೆ ಎಂಬುದನ್ನು ಪರಿಭಾವಿಸದೆ ಭೀಮನನ್ನು ಗಂಗಾನದಿಯ ನೀರ ಮಡುವಿನಲ್ಲಿ ಮುಳುಗಿಸಿದರು.

            ಭೀಷ್ಮ ಹಾಗೂ ಧೃತರಾಷ್ಟ್ರರು ನೀಡಿದ ಸಲಹೆ ಸೂಚನೆಗಳು ಕೌರವರನ್ನು  ಸಮಾಧಾನಪಡಿಸಲಿಲ್ಲ. ಅವರಿಗೆ ಭೀಮನ ಮೇಲೆ ಸೇಡುತೀರಿಸಿಕೊಳ್ಳಲೇಬೇಕೆನಿಸಿತು. ಅವರೆಲ್ಲರೂ ಸೇರಿಕೊಂಡು ಭೀಮನ ಗಂಟಲನ್ನು ಮೆಟ್ಟಿದರೂ ಸಮಾಧಾನವಾಗದೇ ಇದ್ದಾಗ ಎಲ್ಲರೂ ಒಟ್ಟುಸೇರಿ ಒಂದು ಉಪಾಯವನ್ನು ಮಾಡಿದರು. ಅಲ್ಲೆಲ್ಲೋ ಹರಿದುಹೋಗುತ್ತಿದ್ದ ವಿಷಭರಿತ ಹಾವುಗಳನ್ನು ತಂದು ಭೀಮನ ಕೊರಳಿಗೆ ಸುತ್ತಿದರು. ಅದೂ ಸಾಲದೆಂಬಂತೆ ದೊಡ್ಡ ಬಂಡೆಕಲ್ಲೊಂದನ್ನು ತಂದು ಆತನ ಎದೆಯ ಮೇಲಿರಿಸಿ ಅದನ್ನು ಕೊರಳಿಗೆ ಬಿಗಿದು ಕಟ್ಟಿದರು. ಅನಂತರ ಆತನನ್ನು ಎಲ್ಲರೂ ಸೇರಿಕೊಂಡು ಎತ್ತಿ ಗಂಗಾನದಿಯ ಮಡುವಿನಲ್ಲಿ ಮುಳುಗಿಸಿದರು. ಆದರೆ ತಾವು ಭೀಮನನ್ನು ಹಾಗೆ ಮುಳುಗಿಸುವುದರಿಂದ ತಾವು ವಿವೇಚನೆ ಇಲ್ಲದೆ ತಮ್ಮ ಕುಲವನ್ನೇ ಮುಳುಗಿಸುತ್ತಿದ್ದೇವೆ (ನಾಶಮಾಡುತ್ತಿದ್ದೇವೆ) ಎಂಬುದು ಅವರಾರಿಗೂ ತಿಳಿಯಲಿಲ್ಲ. ಭೀಮನನ್ನು ಕೊಲ್ಲುವುದಕ್ಕೆ ಮಾಡುವ ತಮ್ಮ ಪ್ರಯತ್ನ ಮುಂದೆ ತಮ್ಮ ವಂಶದ ನಾಶಕ್ಕೆ ಕಾರಣವಾಗಬಹುದೆಂಬ ಕನಿಷ್ಠ ತಿಳಿವಳಿಕೆಯೂ ಅವರಲ್ಲಿ ಮೂಡಲಿಲ್ಲ.

 

ಗದ್ಯ: ಅಂತೞ್ದುವುದುಂ ಗಂಗಾದೇವಿಯ ವರಪ್ರಸಾದದೊಳ್ ವಿಷಮ ವಿಷಧರಂಗಳ್ ಪರಿಯೆ ಕೊರಲೊಳ್ ತೊಡರ್ದ ಶಿಲೆಯಂ ಪಱಿದೀಡಾಡಿ ಗಂಗೆಯ ನೀರಂ ತೋಳೊಳ್ ತುಳುಂಕಿ ಮಗುೞ್ದು ಬಂದಂಗೆ ವಿಷದ ಲಡ್ಡುಗೆಯನಿಕ್ಕಿಯುಮೆನಿತಾನುಮುಪದ್ರವಂಗಳೊಳ್ ತೊಡರಿಕ್ಕಿಯುಂ ಗೆಲಲಾಱದೆ ಮನಮಿಕ್ಕಿಯುಮೆರ್ದೆಯಿಕ್ಕಿಯುಮಿರ್ದರಂತಯ್ವರ್ ಕೂಸುಗಳ್ಗಂ ಗಾಂಗೇಯಂ ಚೌಲೋಪನಯನಾದಿ ಕ್ರಿಯೆಗಳಂ ಮಾಡಿ ಸುಖಮಿರ್ಪನ್ನೆಗಮಿತ್ತ

ಗದ್ಯದ ಅನ್ವಯಕ್ರಮ:

ಅಂತು ಅೞ್ದುವುದಂ ಗಂಗಾದೇವಿಯ ವರಪ್ರಸಾದದೊಳ್ ಕೊರಲೊಳ್ ತೊಡರ್ದ ವಿಷಮ ವಿಷಧರಂಗಳ್ ಪರಿಯೆ, ಶಿಲೆಯಂ  ಪಱಿದು ಈಡಾಡಿ ಗಂಗೆಯ ನೀರಂ ತೋಳೊಳ್ ತುಳುಂಕಿ ಮಗುೞ್ದು ಬಂದಂಗೆ ವಿಷದ ಲಡ್ಡುಗೆಯನ್ ಇಕ್ಕಿಯುಂ ಎನಿತಾನುಂ ಉಪದ್ರವಂಗಳೊಳ್ ತೊಡರಿಕ್ಕಿಯುಂ ಗೆಲಲಾಱದೆ ಮನಂ ಇಕ್ಕಿಯುಂ ಎರ್ದೆ ಇಕ್ಕಿಯುಂ ಇರ್ದರ್ ಅಂತು ಅಯ್ವರ್ ಕೂಸುಗಳ್ಗಂ ಗಾಂಗೇಯಂ ಚೌಲೋಪನಯನ ಆದಿ ಕ್ರಿಯೆಗಳಂ ಮಾಡಿ ಸುಖಂ ಇರ್ಪ ಅನ್ನೆಗಂ ಇತ್ತ-

ಪದ-ಅರ್ಥ:

ಅಂತೞ್ದುವುದುಂ-ಹಾಗೆ ಮುಳುಗಿಸಿದಾಗ;  ಗಂಗಾದೇವಿಯ ವರಪ್ರಸಾದದೊಳ್-ಗಂಗಾದೇವಿಯ ಕರುಣೆಯಿಂದ;  ವಿಷಮ ವಿಷಧರಂಗಳ್-ಅತ್ಯಂತ ವಿಷಕಾರಿಯಾದ ಹಾವುಗಳು;  ಪರಿಯೆ-ಹರಿದುಹೋಗಲು;  ತೊಡರ್ದ-ಸುತ್ತಿಕೊಂಡಿದ್ದ;  ಶಿಲೆಯಂ-ಕಲ್ಲನ್ನು;  ಪಱಿದೀಡಾಡಿ-ಕಳಚಿಕೊಂಡು;  ಗಂಗೆಯ ನೀರಂ-ಗಂಗಾನದಿಯ ನೀರು;  ತೋಳೊಳ್ ತುಳುಂಕಿ-ತೋಳುಗಳಿಂದ ತಳ್ಳುವಂತಾಗಿ;  ಮಗುೞ್ದು ಬಂದಂಗೆ-ಮರಳಿ ಬಂದವನಿಗೆ;  ವಿಷದಲಡ್ಡುಗೆಯನಿಕ್ಕಿಯುಂ-ವಿಷವನ್ನು ಬೆರೆಸಿ ತಯಾರಿಸಿದ ಲಡ್ಡುಗಳನ್ನು ತಿನ್ನಿಸಿದರೂ; ಎನಿತಾನುಂ-ಇನ್ನೆಷ್ಟೋ;  ಉಪದ್ರವಂಗಳೊಳ್-ಕಾಟಗಳಲ್ಲಿ ;  ತೊಡರಿಕ್ಕಿಯುಂ-ಸಿಕ್ಕಿಸಿಹಾಕಿದರೂ;  ಗೆಲಲಾಱದೆ-ಗೆಲ್ಲುವುದಕ್ಕೆ ಸಾಧ್ಯವಾಗದೆ; ಮನಮಿಕ್ಕಿಯುಂ ಎರ್ದೆಯಿಕ್ಕಿಯುಮಿರ್ದರ್-ಮನಸ್ಸು ಕೆಟ್ಟು, ಧೈರ್ಯಗುಂದಿ ಸುಮ್ಮನಾದರು; ಅಂತಯ್ವರ್ ಕೂಸುಗಳ್ಗಂ-ಹಾಗೆ ಐದು ಮಂದಿ ಮಕ್ಕಳಿಗೆ; ಗಾಂಗೇಯಂ-ಭೀಷ್ಮನು;  ಚೌಲೋಪನಯನಾದಿ-ಚೌಲಕರ್ಮ ಮೊದಲಾದ; ಕ್ರಿಯೆಗಳಂ-ಕರ್ಮನುಷ್ಠಾನಗಳನ್ನು;  ಸುಖಮಿರ್ಪನ್ನೆಗಂ-ಸುಖವಾಗಿರುವಸಮಯದಲ್ಲಿ.

            ದುರ್ಯೋಧನ ಹಾಗೂ ಆತನ ತಮ್ಮಂದಿರು ಭೀಮನನ್ನು ಗಂಗಾನದಿಗೆ ತಳ್ಳಿ ಮುಳುಗಿಸಿದೊಡನೆಯೇ ಗಂಗೆಯ ಕರುಣೆಯಿಂದ ಭೀಮನ ಕೊರಳಲ್ಲಿ ಕಟ್ಟಿದ್ದ  ಅತ್ಯಂತ ವಿಷಕಾರಿಯಾದ ಹಾವುಗಳು ತಮ್ಮಷ್ಟಕ್ಕೆ ಹರಿದುಹೋದವು.  ಎದೆಯ ಮೇಲೆ ಕಟ್ಟಿದ್ದ ದೊಡ್ಡದಾದ ಕಲ್ಲು ಕಳಚಿಕೊಂಡಿತು. ಗಂಗೆಯು ತನ್ನಲ್ಲಿದ್ದ ನೀರನ್ನು ತನ್ನ ತೋಳುಗಳಿಂದ ತಳ್ಳಿದಂತಾಗಿ ಭೀಮ ನೀರಿನ ಮಡುವಿನಿಂದ ಮರಳಿ ದಡಕ್ಕೆ ಬಂದನು.  ತಾವು ಮಾಡಿದ ಪ್ರಯತ್ನದಿಂದ ಭೀಮ ಸಾಯದಿದ್ದಾಗ ಆತನಿಗೆ ಲಡ್ದುಗಳಲ್ಲಿ ವಿಷವನ್ನು ಬೆರೆಸಿ ತಿನ್ನಿಸಿದರು. ಹೀಗೆ ಇನ್ನೆಷ್ಟೋ ಕಾಟಗಳನ್ನು ಹೂಡಿ ಅವುಗಳಲ್ಲಿ ಸಿಕ್ಕಿಸಿಹಾಕಿದರೂ ಭೀಮನನ್ನು ಕೊಲ್ಲುವುದಕ್ಕೂ ಸಾಧ್ಯವಾಗದೆ, ತಾವು ಗೆಲ್ಲುವುದಕ್ಕೂ ಸಾಧ್ಯವಾಗದೆ ಮನಸ್ಸು ಕೆಟ್ಟು, ಧೈರ್ಯಗುಂದಿ ಸುಮ್ಮನಾದರು. ಹಾಗೆ ದುರ್ಯೋಧನ ಮೊದಲಾದವರ ಪೀಡೆಗಳಿಗೆ ತುತ್ತಾದರೂ ತೊಂದರೆಗೀಡಾಗದ ಐದು ಮಂದಿ ಮಕ್ಕಳಿಗೆ ಭೀಷ್ಮನು ಚೌಲಕರ್ಮ ಮೊದಲಾದ ಕರ್ಮಾನುಷ್ಠಾನಗಳನ್ನು ನೆರವೇರಿಸಿಕೊಂಡು ಸುಖದಿಂದಿರುವ ಸಮಯದಲ್ಲಿ ಈ ಕಡೆ- 
 

ಬರೆಯದೆ ಬಂದ ಸುದ್ದಗೆಯೆ ಸೂತ್ರಮನೊಂದೆ ಮುಹೂರ್ತಮಾತ್ರದಿಂ

ಬರಿಸಿದುದಂತು ಸೂತ್ರಿಸಿದ ಸೂತ್ರದ ವೃತ್ತಿ ನಿಜಾತ್ಮವೃತ್ತಿವೋಲ್

ಪರಿಣಮಿಸಿತ್ತು ಮತ್ತುೞಿದ ವಿದ್ಯೆಗಳೋಜರೆ ಚಟ್ಟರೆಂಬಿನಂ

ನೆರೆದುವು ತನ್ನೊಳಾರ್ ಗಳ ಗುಣಾರ್ಣವನಂತು ಕುಶಾಗ್ರಬುದ್ಧಿಗಳ್  ೪

ಪದ್ಯದ ಅನ್ವಯಕ್ರಮ:

ಬರೆಯದೆ ಬಂದ ಸುದ್ದಗೆಯೆ ಸೂತ್ರಮನ್ ಒಂದೇ ಮುಹೂರ್ತ ಮಾತ್ರದಿಂ ಬರಿಸಿದುದು ಅಂತು ಸೂತ್ರಿಸಿದ ಸೂತ್ರದ ವೃತ್ತಿ ನಿಜಾತ್ಮವೃತ್ತಿವೋಲ್ ಪರಿಣಮಿಸಿತ್ತು, ಮತ್ತೆ ಉೞಿದ ವಿದ್ಯೆಗಳ್ ಓಜರೆ ಚಟ್ಟರ್ ಎಂಬಿನಂ ನೆರೆದುವು ತನ್ನೊಳಾರ್ ಗಳ ಗುಣಾರ್ಣವನ್ ಅಂತು ಕುಶಾಗ್ರ ಬುದ್ಧಿಗಳ್.   

ಪದ-ಅರ್ಥ:

ಬರೆಯದೆ ಬಂದ-ಅಭ್ಯಾಸ ಮಾಡದೆ ಒದಗಿದ;  ಸುದ್ದಗೆಯೆ-ಅಕ್ಷರಗಳು;  ಸೂತ್ರಮನ್-ನಿಯಮವನ್ನು;  ಒಂದೇ ಮುಹೂರ್ತಮಾತ್ರದಿಂ-ಒಂದು ಕ್ಷಣದಲ್ಲಿಯೇ; ಬರಿಸಿದುದು-ಬರುವಂತಾಯಿತು, ತಿಳಿಯುವಂತಾಯಿತು;  ಅಂತು-ಹಾಗೆ;  ಸೂತ್ರಿಸಿದ-ವ್ಯವಸ್ಥೆಗೊಳಿಸಿದ;  ಸೂತ್ರದ ವೃತ್ತಿ –ನಿಯಮ ಹಾಗೂ ಅದರ ವಿವರಣೆ; ನಿಜಾತ್ಮವೃತ್ತಿವೋಲ್-ತನ್ನ ಮನಸ್ಸಿನ ಬಳಕೆಯಂತೆ; ಪರಿಣಮಿಸಿತ್ತು-ಫಲನೀಡಿತ್ತು;  ಮತ್ತುೞಿದ-ಮಿಕ್ಕ ಉಳಿದ;  ವಿದ್ಯೆಗಳ್-ಶಾಸ್ತ್ರಗಳು;  ಓಜರೆ-ಗುರುಗಳೇ;  ಚಟ್ಟರೆಂಬಿನಂ-ಹೇಳಿಕೊಡುವಷ್ಟರಲ್ಲಿಯೇ;  ನೆರೆದುವು-ಕರಗತವಾದವು, ಸೇರಿದವು, ಒದಗಿದವು;  ತನ್ನೊಳಾರ್ ಗಳ-ತನಗೆ ಯಾರು ಸಮಾನರು?;  ಗುಣಾರ್ಣವನಂತು-ಗುಣಾರ್ಣವನ ಹಾಗೆ, ಅರ್ಜುನನ ಹಾಗೆ;  ಕುಶಾಗ್ರಬುದ್ಧಿ-ಅತ್ಯಂತ ಚುರುಕಾದ ಬುದ್ದಿ; ಅಸಾಧಾರಣ ಚತುರತೆ.

            ಅಭ್ಯಾಸಮಾಡದೆ ಒದಗಿದ ಅಕ್ಷರಜ್ಞಾನವು ಶಾಸ್ತ್ರನಿಯಮಗಳನ್ನು ಕ್ಷಣಮಾತ್ರದಲ್ಲಿಯೇ ಅರಿತುಕೊಳ್ಳುವುದಕ್ಕೆ ಸಹಾಯಮಾಡಿತು. ಹಾಗೆಯೇ ವ್ಯವಸ್ಥೆಗೊಳಿಸಿದ ನಿಯಮಗಳು ಹಾಗೂ ಅವುಗಳ ವಿವರಣೆಗಳು ತನ್ನ ಮನಸ್ಸಿನ ಗ್ರಹಿಕೆ ಹಾಗೂ ಅದರ ಬಳಕೆಗೆ ಅನುಗುಣವಾಗಿ ಫಲನೀಡಿತ್ತು. ತನಗೆ ಯಾರು ಸಮಾನರು! ಎಂದುಕೊಳ್ಳುವಂತೆ ಮಿಕ್ಕ ಉಳಿದ ವಿದ್ಯೆ(ಶಾಸ್ತ್ರ)ಗಳು ಗುರುಗಳು ಹೇಳಿಕೊಡುವಷ್ಟರಲ್ಲಿಯೇ ಕರಗತವಾದವು. ಗುಣಾರ್ಣವ(ಅರ್ಜುನ)ನಂತೆ ಅತ್ಯಂತ ಚುರುಕಾದ ಬುದ್ಧಿಯುಳ್ಳವರು ರಾಜಕುಮಾರರೊಳಗೆ ಯಾರೂ ಇಲ್ಲವೆನ್ನುವಂತಾಯಿತು.

            ಅರ್ಜುನ ಅತ್ಯಂತ ಬುದ್ಧಿವಂತನೂ, ಮೇಧಾವಿಯೂ ಆದವನು. ಜನ್ಮದತ್ತವಾಗಿ ಅವನಿಗೆ ವಿಶೇಷವಾದ ಜ್ಞಾನಪ್ರಾಪ್ತವಾಗಿದೆ. ಅವನು ಅಕ್ಷರಾಭ್ಯಾಸಕ್ಕೆ ತೊಡಗುವ ಮೊದಲೇ ಆತನಿಗೆ ಅಕ್ಷರಗಳು ಒಲಿದವು. ಯಾವ ಪೂರ್ವತಯಾರಿಯೂ ಇಲ್ಲದೆ ಅಕ್ಷರಗಳನ್ನು ಪರಿಚಯಿಸಿಕೊಂಡನು. ಇದರಿಂದಾಗಿ ಸಕಲ ಶಾಸ್ತ್ರಗಳನ್ನು, ಅವುಗಳ ನಿಯಮಗಳನ್ನು ಅರಿತುಕೊಳ್ಳುವುದಕ್ಕೆ ಸಾಧ್ಯವಾಯಿತು. ಸಕಲ ಶಾಸ್ತ್ರಗಳಾಗಲೀ ಅವುಗಳ ನಿಯಮಗಳಾಗಲೀ ಹಾಗೂ ವಿವರಣೆಗಳಾಗಲೀ ಎಲ್ಲವೂ ಅರ್ಜುನನ ಮನಸ್ಸಿನ ಅಭಿಲಾಷೆಯಂತೆ ಫಲನೀಡಿದವು. ಇವೆಲ್ಲವುಗಳಿಂದಾಗಿ ಶಾಸ್ತ್ರಪರಿಣತಿಯಲ್ಲಿ ಅರ್ಜುನನಿಗೆ ಸಮಾನರು ಯಾರಿದ್ದಾರೆ? ಎಂದು ಕೇಳುವಂತಾಯಿತು. ಮಾತ್ರವಲ್ಲ, ಗುರುಮುಖೇನ ಒಲಿಯಬೇಕಾದ ಇತರ ಶಾಸ್ತ್ರಗಳನ್ನು ಗುರುಗಳು ಸ್ವತಃ ಹೇಳಿಕೊಡುವಷ್ಟರಲ್ಲಿಯೇ ಅರ್ಜುನನಿಗೆ ಕರಗತವಾದವು. ಅವುಗಳನ್ನು ಕಲಿತುಕೊಳ್ಳುವುದಕ್ಕಾಗಲೀ ಅವುಗಳ ಮೇಲೆ ಹಿಡಿತವನ್ನು ಸಾಧಿಸಿಕೊಳ್ಳುವುದಕ್ಕಾಗಲೀ ಅರ್ಜುನನಿಗೆ ಕಷ್ಟವೆನಿಸಲಿಲ್ಲ. ಮಾನಸಿಕವಾಗಿ, ಬೌದ್ಧಿಕವಾಗಿ ಒದಗುವ ಆತನ ಚತುರತೆ ಹಾಗೂ ಪ್ರಾವೀಣ್ಯಗಳಿಗೆ ರಾಜಕುಮಾರರಲ್ಲಿಯೇ ಯಾರೂ ಸರಿಸಾಟಿ ಇಲ್ಲವೆನ್ನುವಂತಾಯಿತು.

 

ಗದ್ಯ: ಅಂತು ಪಂಚಾಂಗ ವ್ಯಾಕರಣದ ವೃತ್ತಿಭೇದಮಪ್ಪ ಛಂದೋವೃತ್ತಿಯೊಳಂ ಶಬ್ದಾಲಂಕಾರ ನಿಷ್ಠಿತಮಪ್ಪಲಂಕಾರದೊಳಂ ವ್ಯಾಸ ವಾಲ್ಮೀಕಿ ಕಶ್ಯಪ ಪ್ರಭೃತಿ ವಿರಚಿತಂಗಳಪ್ಪ ಮಹಾಕಾವ್ಯಂಗಳೊಳಂ ನಾಂದೀ ಪ್ರರೋಚನಾ ಪ್ರಸ್ತಾವನೇತಿವೃತ್ತ ಸಂಧಿ ಪ್ರವೇಶ ವಿಷ್ಕಂಭ ಕಪೋತಿಕಾ ವ್ಯಾಳಿಕಾದಿ ಲಕ್ಷಣೋಪೇತಂಗಳಪ್ಪ ನಾಟಕಂಗೊಳಳಂ ಪದಿನೆಂಟು ಧರ್ಮಶಾಸ್ತ್ರಂಗಳೊಳಂ ನಾಲ್ಕು ವೇದದೊಳಮಾಱಂಗದೊಳಮಯ್ದು ತೆಱದ ಮಂತ್ರಂಗಳೊಳಮಾಱುಂ ದರ್ಶನದೊಳಂ ಪ್ರತ್ಯಕ್ಷಾನುಮಾನ ಪ್ರಮಾಣಂಗಳೊಳಂ ಭರತ ಪ್ರಣೀತ ನೃತ್ಯಶಾಸ್ತ್ರದೊಳಂ ನಾರದಾದಿ ಪ್ರಣೀತ ಗಾಂಧರ್ವವಿದ್ಯಾವಿಶೇಷಂಗಳೊಳಂ ಗಜಾಗಮಜ್ಞ ರಾಜಪುತ್ರ ಗೌತಮ ವಾದ್ವಾಕಿ ಪಾಳ ಕಶ್ಯಪ ಸುಪತಿ ಶ್ರೀಹರ್ಷಾದಿ ಪುರಾಣಪುರುಷವಿರಚಿತಂಗಳಪ್ಪ ಹಸ್ತಿಶಾಸ್ತ್ರಂಗಳೊಳಂ ಚಿತ್ರಕರ್ಮ ಪತ್ರಚ್ಛೇದ ಗ್ರಹ ಗಣಿತ ರತ್ನಪರೀಕ್ಷೆಗಳೊಳಂ ದಾರುಕರ್ಮ ವಾಸ್ತುವಿದ್ಯಾಪೂರ್ವ ಯಂತ್ರಪ್ರಯೋಗ ವಿಷಾಪಹರಣ ಸರಭೇದ ರತಿತಂತ್ರೇಂದ್ರಜಾಲ ವಿವಿಧ ವಿದ್ಯೆಗಳೊಳಮನೇಕಾಕ್ಷರ ಸ್ವರೂಪಂಗಳೊಳಂ ಚಾಪ ಚಕ್ರ ಪರಶು ಕೃಪಾಣ ಶಕ್ತಿ ತೋಮರ ಮುಸಲ ಮುಸುಂಡಿ ಭಿಂಡಿವಾಳ ಮುದ್ಗರ ಗದಾದಿ ವಿವಿಧಾಯುಧಂಗಳೊಳಮತಿ ಪ್ರವೀಣನುಮಾರೂಢ ಸರ್ವಜ್ಞ ಮಹೇಂದ್ರ ಜಾಣನುಮಾಗಿ-

ಗದ್ಯದ ಅನ್ವಯಕ್ರಮ:

            ಅಂತು ಪಂಚಾಂಗ ವ್ಯಾಕರಣದ ವೃತ್ತಿಭೇದಮಪ್ಪ ಛಂದೋವೃತ್ತಿಯೊಳಂ ಶಬ್ದಾಲಂಕಾರ ನಿಷ್ಠಿತಮಪ್ಪ ಅಲಂಕಾರದೊಳಂ ವ್ಯಾಸ ವಾಲ್ಮೀಕಿ ಕಶ್ಶಪ ಪ್ರಭೃತಿ ವಿರಚಿತಂಗಳಪ್ಪ ಮಹಾಕಾವ್ಯಂಗಳೊಳಂ ನಾಂದೀ ಪ್ರರೋಚನ ಆ ಪ್ರಸ್ತಾವವನ್ ಇತಿವೃತ್ತ ಸಂಧಿ ಪ್ರವೇಶ ವಿಷ್ಕಂಭ ಕಪೋತಿಕಾ ವ್ಯಾಳಿಕ ಆದಿ ಲಕ್ಷಣ ಉಪೇತಂಗಳಪ್ಪ ನಾಟಕಂಗಳೊಳಂ ಪದಿನೆಂಟು ಧರ್ಮಶಾಸ್ತ್ರಂಗಳೊಳಂ ನಾಲ್ಕು ವೇದದೊಳಂ ಆರು ಅಂಗದೊಳಂ ಐದು ತೆಱದ ಮಂತ್ರಂಗಳೊಳಂ ಆಱು ದರ್ಶನದೊಳಂ ನಾರದ ಆದಿ ಪ್ರಣೀತ ಗಾಂಧರ್ವ ವಿದ್ಯಾ ವಿಶೇಷಂಗಳೊಳಂ ಗಜ ಆಗಮಜ್ಞ ರಾಜಪುತ್ರ ಗೌತಮ ವಾದ್ವಾಕಿ ಪಾಳ ಕಶ್ಶಪ  ಸುಪತಿ ಶ್ರೀಹರ್ಷಾದಿ ಪುರಾಣಪುರುಷ ವಿರಚಿಂತಂಗಳಪ್ಪ ಹಸ್ತಿಶಾಸ್ತ್ರಂಗಳೊಳಂ ಚಿತ್ರಕರ್ಮ ಪತ್ರಚ್ಛೇದ ಗ್ರಹಗಣಿತ ರತ್ನಪರೀಕ್ಷೆಗಳೊಳಂ ದಾರುಕರ್ಮ ವಾಸ್ತುವಿದ್ಯಾ ಅಪೂರ್ವ ಯಂತ್ರಪ್ರಯೋಗ ವಿಷ ಅಪಹರಣ ಸರಭೇದ ರತಿತಂತ್ರ ಇಂದ್ರಜಾಲ ವಿವಿಧ ವಿದ್ಯೆಗಳೊಳಂ ಅನೇಕ ಅಕ್ಷರ ಸ್ವರೂಪಂಗಳೊಳಂ ಚಾಪ ಚಕ್ರ ಪರಶು ಕೃಪಾಣ ಶಕ್ತಿ ತೋಮರ ಮುಸಲ ಮುಸುಂಡಿ ಭಿಂಡಿವಾಳ ಮುದ್ಗರ ಗದಾ ಆದಿ ವಿವಿಧ ಆಯುಧಂಗಳೊಳಂ ಅತಿ ಪ್ರವೀಣನುಂ ಆರೂಢ ಸರ್ವಜ್ಞ ಮಹೇಂದ್ರ ಜಾಣನುಂ ಆಗಿ –

ಪದ-ಅರ್ಥ:

ಅಂತು-ಹಾಗೆ;  ಪಂಚಾಂಗ-ಐದು ಅಂಗಗಳು(ತಿಥಿ, ವಾರ, ನಕ್ಷತ್ರ, ಕರಣ, ಯೋಗ – ಈ ಐದನ್ನು ಒಳಗೊಂಡಿರುವಂತಹುದು);  ವ್ಯಾಕರಣ-ಭಾಷೆಯ ನಿಯಮಗಳನ್ನು ತಿಳಿಸುವ ಶಾಸ್ತ್ರ, ಐದು ವೇದಾಂಗಗಳಲ್ಲಿ ಒಂದು;  ವೃತ್ತಿಭೇದಮಪ್ಪ-ವ್ಯಾಖ್ಯಾನ ವಿಧಗಳಾಗಿರುವ;  ಛಂದೋವೃತ್ತಿಯೊಳಂ-ಛಂದಸ್ಸಿನ ವ್ಯಾಖ್ಯಾನದ ವಿಚಾರದಲ್ಲಿ;  ಶಬ್ದಾಲಂಕಾರ-ಶಬ್ದಪ್ರಧಾನ ಅಲಂಕಾರ;  ನಿಷ್ಠಿತಮಪ್ಪ-ವ್ಯವಸ್ಥಿತವಾಗಿರುವ;  ಅಲಂಕಾರದೊಳ್-ಅಲಂಕಾರಶಾಸ್ತ್ರದಲ್ಲಿ;  ವ್ಯಾಸ-ಮಹಾಭಾರತದ ಕರ್ತೃ;  ವಾಲ್ಮೀಕಿ-ರಾಮಾಯಣದ ಕರ್ತೃ;  ಕಶ್ಶಪ– ಮರೀಚಿಯ ಮಗ;  ಪ್ರಭೃತಿ-ಶ್ರೇಷ್ಠವ್ಯಕ್ತಿ, ಮೇಧಾವಿ;  ವಿರಚಿತಂಗಳಪ್ಪ-ರಚಿತವಾಗಿರುವ;  ಮಹಾಕಾವ್ಯಂಗಳೊಳಂ-ದೊಡ್ಡ ಕಾವ್ಯಗಳಲ್ಲಿನ;  ನಾಂದೀ –ಪೀಠಿಕೆ; ಪ್ರರೋಚನ-ಅಭಿರುಚಿ ಹುಟ್ಟಿಸುವುದು;  ಪ್ರಸ್ತಾವ-ಪೂರ್ವಪೀಠಿಕೆ;  ಇತಿವೃತ್ತ-ಕಥೆ;  ಸಂಧಿ-ಅಧ್ಯಾಯ;  ಪ್ರವೇಶ-ಪ್ರಾರಂಭ;  ವಿಷ್ಕಂಭ-ನಾಟಕದಲ್ಲಿ ಹಿಂದೆ ನಡೆದುಹೋದ ಮತ್ತು ಮುಂದೆ ನಡೆಯುವ ಕಥಾಂಶವನ್ನು ತಿಳಿಸುವ ದೃಶ್ಯ;  ಕಪೋತಿಕಾ-ನಾಟಕದಲ್ಲಿನ ಒಂದು ರೀತಿಯ ಹಸ್ತಯುಗ್ಮ ವಿನ್ಯಾಸ; ಲಕ್ಷಣೋಪೇತ-ಲಕ್ಷಣಗಳಿಂದ ಕೂಡಿದ;  ನಾಟಕಂಗಳೊಳಂ-ನಾಟಕಗಳಲ್ಲಿ;  ಪದಿನೆಂಟು ಧರ್ಮಶಾಸ್ತ್ರಂಗಳೊಳಂ-ಹದಿನೆಂಟು ಧರ್ಮಶಾಸ್ತ್ರಗಳಲ್ಲಿ;  ನಾಲ್ಕು ವೇದಂಗಳೊಳಂ-ನಾಲ್ಕು ವೇದ(ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ)ಗಳಲ್ಲಿ;  ಆಱಂಗದೊಳಂ-ಆರು ವೇದಾಂಗ ಗಳಲ್ಲಿ  (ವೇದದ ಆರು ಭಾಗಗಳಾದ ಶಿಕ್ಷಾ, ಛಂದಸ್ಸು, ವ್ಯಾಕರಣ, ನಿರುಕ್ತ, ಜ್ಯೋತಿಷ ಹಾಗೂ ಕಲ್ಪ); ಅಯ್ದು ತೆಱದ ಮಂತ್ರಂಗಳೊಳಂ-ಐದು ರೀತಿಯ ಮಂತ್ರಗಳಲ್ಲಿ;  ಆಱು ದರ್ಶನದೊಳಂ-ಅರು ದರ್ಶನಶಾಸ್ತ್ರ(ವೈಶೇಷಿಕ, ನ್ಯಾಯ, ಯೋಗ, ಸಾಂಖ್ಯ, ವೇದಾಂತ ಹಾಗೂ ಮೀಮಾಂಸಾ) –ಆರು ಬಗೆಯ ತತ್ತ್ವಶಾಸ್ತ್ರಗಳಲ್ಲಿ;  ಪ್ರತ್ಯಕ್ಷ-ನಿದರ್ಶನ; ಅನುಮಾನ-ಊಹೆ;  ಪ್ರಮಾಣಂಗಳೊಳಂ-ನಿದರ್ಶನಗಳಲ್ಲಿ;  ಭರತ-ಭರತಮುನಿ (ನಾಟ್ಯಶಾಸ್ತ್ರದ ಕರ್ತೃ);   ನೃತ್ಯಶಾಸ್ತ್ರದೊಳಂ-ನಾಟ್ಯಶಾಸ್ತ್ರದಲ್ಲಿ;  ನಾರದಾದಿ ಪ್ರಣೀತ-ನಾರದ ಮೊದಲಾದವರು ರಚಿಸಿದ;  ಗಾಂಧರ್ವವಿದ್ಯಾವಿಶೇಷಂಗಳೊಳಂ– ವಿವಿಧ ಗಂಧರ್ವ ವಿದ್ಯೆ ವಿವಿಧ್ಯಗಳಲ್ಲಿ;  ಗಜಾಗಮಜ್ಞ-ಗಜಶಾಸ್ತ್ರದಲ್ಲಿ ನಿಪುಣ;  ರಾಜಪುತ್ರ, ಗೌತಮ, ವಾದ್ವಾಕಿ, ಪಾಳ, ಕಶ್ಯಪ, ಸುಪತಿ, ಶ್ರೀಹರ್ಷ-ಗಜಶಾಸ್ತ್ರದಲ್ಲಿ ನೈಪುಣ್ಯವನ್ನು ಸಾಧಿಸಿದವರು;  ಹಸ್ತಿಶಾಸ್ತ್ರಂಗಳೊಳಂ-ಗಜಶಾಸ್ತ್ರಗಳಲ್ಲಿ;  ಚಿತ್ರಕರ್ಮ, ಪತ್ರಚ್ಛೇದ, ಗ್ರಹಗಣಿತ –ರತ್ನಪರೀಕ್ಷಾಶಾಸ್ತ್ರದ ವಿಧಗಳು;  ದಾರುಕರ್ಮ-ಮರದ ಕೆತ್ತನೆ;  ವಾಸ್ತುವಿದ್ಯೆ-ಅರಮನೆ, ಮಂದಿರಗಳನ್ನು ಕಟ್ಟುವ ವಿದ್ಯೆ;  ಯಂತ್ರಪ್ರಯೋಗ ವಿಷಾಪಹರಣ-ಯಂತ್ರಪ್ರಯೋಗದಿಂದ ವಿಷವನ್ನು ತೆಗೆಯುವ ವಿದ್ಯೆ;  ಅನೇಕಾಕ್ಷರಸ್ವರೂಪಂಗಳೊಳಂ-ವಿವಿಧ ಅಕ್ಷರಸ್ವರೂಪಗಳಲ್ಲಿ;  ಚಾಪ, ಚಕ್ರ, ಪರಶು, ಕೃಪಾಣ, ಶಕ್ತಿ, ತೋಮರ, ಮುಸಲ, ಮುಸುಂಡಿ ಭಿಂಡಿವಾಳ, ಮುದ್ಗರ, ಗದೆ-ವಿವಿಧ ಬಗೆಯ ಆಯುಧಗಳು;  ಆರೂಢಸರ್ವಜ್ಞ-ಸಮಸ್ತವನ್ನು ಸಾಧಿಸಿದವನು, ಎಲ್ಲವನ್ನೂ ಬಲ್ಲವನು;  ಮಹೇಂದ್ರಜಾಣನುಮಾಗಿ-ಸರ್ವಶಕ್ತ ಬುದ್ಧಿವಂತನಾಗಿ.

            ಹಾಗೆ ಅರ್ಜುನನು ಪಂಚಾಂಗ, ವ್ಯಾಕರಣ, ವೃತ್ತಿಭೇದಗಳನ್ನು ಒಳಗೊಂಡಿರುವ ಛಂದೋವೃತ್ತಿಯಲ್ಲಿ; ಶಬ್ದಾಲಂಕಾರಗಳಿಂದ ವ್ಯವಸ್ಥಿತವಾಗಿರುವ ಅಲಂಕಾರಶಾಸ್ತ್ರದಲ್ಲಿ; ವ್ಯಾಸ, ವಾಲ್ಮೀಕಿ, ಕಶ್ಯಪ ಮೊದಲಾದ ಮೇಧಾವಿಗಳು ರಚಿಸಿರುವ ಮಾಹಾಕಾವ್ಯಗಳಲ್ಲಿ; ನಾಂದಿ, ಪ್ರರೋಚನ, ಪ್ರಸ್ತಾವ, ಇತಿವೃತ್ತ, ಸಂಧಿ, ಪ್ರವೇಶ, ವಿಷ್ಕಂಭ, ಕಪೋತಿಕಾ, ವ್ಯಾಳಿಕ ಮೊದಲಾದ ಲಕ್ಷಣಗಳಿಂದ ಕೂಡಿದ ನಾಟಕಶಾಸ್ತ್ರದಲ್ಲಿ; ಹದಿನೆಂಟು ಧರ್ಮಶಾಸ್ತ್ರಗಳಲ್ಲಿ; ನಾಲ್ಕು ವೇದಗಳಲ್ಲಿ; ಆರು ವೇದಾಂಗಗಳಲ್ಲಿ; ಐದು ರೀತಿಯ ಮಂತ್ರಗಳಲ್ಲಿ; ಆರು ದರ್ಶನಶಾಸ್ತ್ರಗಳಲ್ಲಿ; ಪ್ರತ್ಯಕ್ಷ, ಅನುಮಾನ, ಪ್ರಮಾಣಗಳಲ್ಲಿ; ಭರತನಿಂದ ರಚಿತವಾದ ನಾಟ್ಯಶಾಸ್ತ್ರದಲ್ಲಿ; ನಾರದ ಮೊದಲಾದವರು ರಚಿಸಿದ ಗಾಂಧರ್ವ ವಿದ್ಯಾ ವಿಶೇಷಗಳಲ್ಲಿ; ಗಜಶಾಸ್ತ್ರನಿಪುಣರಾದ ರಾಜಪುತ್ರ, ಗೌತಮ, ವಾದ್ವಾಕಿ, ಪಾಳ, ಕಶ್ಯಪ, ಸುಪತಿ, ಶ್ರೀಹರ್ಷ ಮೊದಲಾದ ಪುರಾಣಪುರುಷರು ರಚಿಸಿದ ಹಸ್ತಿಶಾಸ್ತ್ರಗಳಲ್ಲಿ; ಚಿತ್ರಕರ್ಮ, ಪತ್ರಚ್ಛೇದ, ಗ್ರಹ ಗಣಿತ, ರತ್ನಪರೀಕ್ಷೆಗಳಲ್ಲಿ;  ದಾರುಕರ್ಮ, ವಾಸ್ತುವಿದ್ಯಾ, ಯಂತ್ರಪ್ರಯೋಗ, ವಿಷಾಪಹರಣ, ಸರಭೇದ, ರತಿತಂತ್ರ, ಇಂದ್ರಜಾಲ ಮೊದಲಾದ ವಿವಿಧ ವಿದ್ಯೆಗಳಲ್ಲಿ;  ಅನೇಕ ಅಕ್ಷರಸ್ವರೂಪಗಳಲ್ಲಿ; ಚಾಪ, ಚಕ್ರ, ಪರಶು, ಕೃಪಾಣ, ಶಕ್ತಿ, ತೋಮರ, ಮುಸಲ, ಮುಸುಂಡಿ, ಭಿಂಡಿವಾಳ, ಮುದ್ಗರ, ಗದೆ ಮೊದಲಾದ ಆಯುಧಗಳಲ್ಲಿ ಅತ್ಯಂತ ಪ್ರವೀಣನೂ ಸಮಸ್ತವನ್ನೂ ಸಾಧಿಸಿಕೊಂಡು ಸರ್ವಶಕ್ತ ಬುದ್ಧಿವಂತನಾಗಿ ಮೆರೆದನು.

(೨ನೇ ಭಾಗದಲ್ಲಿ ಮುಂದುವರಿದಿದೆ)

*ಡಾ. ವಸಂತ್ ಕುಮಾರ್ ಉಡುಪಿ

 

Leave a Reply

Your email address will not be published. Required fields are marked *