(ಮಂಗಳೂರು ವಿಶ್ವವಿದ್ಯಾನಿಲಯದ ಬಿಬಿಎ ನಾಲ್ಕನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ-ಭಾಗ-೨)
ಧರ್ಮಜನ ಕಡುಮೋಹವೆಂಬುದು
ನಿಮ್ಮ ಚಿತ್ತದೊಳಿರಲಿ ಭೀಮನ
ಹಮ್ಮು ತಮ್ಮೊಳಗಿರಲಿ ಫಲುಗುಣನೊಲವದಂತಿರಲಿ
ನಮ್ಮ ಭೂಮಿಯೊಳರೆಯ ಬೇಡುವ
ರೆಮ್ಮ ಬಂಧುಗಳಲ್ಲ ಸಂಧಿಗೆ
ತಮ್ಮನೊಡಬಡನೆಂದು ದುಶ್ಶಾಸನನ ನೋಡಿದನು ೧೧
ಪದ್ಯದ ಅನ್ವಯಕ್ರಮ:
ಧರ್ಮಜನ ಕಡುಮೋಹ ಎಂಬುದು ನಿಮ್ಮ ಚಿತ್ತದೊಳ್ ಇರಲಿ, ಭೀಮನ ಹಮ್ಮು ತಮ್ಮ ಒಳಗಿರಲಿ, ಫಲುಗುಣನ ಒಲವು ಅದು ಅಂತಿರಲಿ, ನಮ್ಮ ಭೂಮಿಯೊಳ್ ಅರೆಯ ಬೇಡುವರ್ ಎಮ್ಮ ಬಂಧುಗಳಲ್ಲ, ತಮ್ಮನ್ ಸಂಧಿಗೆ ಒಡಂಬಡನ್ ಎಂದು ದುಶ್ಶಾಸನನ ನೋಡಿದನು.
ಪದ-ಅರ್ಥ:
ಧರ್ಮಜ-ಧರ್ಮರಾಯ; ಕಡುಮೋಹ-ಅತಿಯಾದ ಪ್ರೀತಿ, ದಟ್ಟವಾದ ಪ್ರೀತಿ; ಚಿತ್ತದೊಳಿರಲಿ-ಮನಸ್ಸಿನಲ್ಲಿರಲಿ; ಹಮ್ಮು-ಹೆಮ್ಮೆ; ತಮ್ಮೊಳಗಿರಲಿ-ತಮ್ಮಲ್ಲಿಯೇ ಇರಲಿ; ಫಲುಗುಣ-ಅರ್ಜುನ; ಒಲವದಂತಿರಲಿ-ಪ್ರೀತಿ ಹಾಗೆಯೇ ಇರಲಿ; ಭೂಮಿಯೊಳರೆಯ-ಭೂಮಿಯಲ್ಲಿ ಅರ್ಧಭಾಗವನ್ನು; ಬೇಡುವರ್-ಬೇಡುವವರು; ಎಮ್ಮ ಬಂಧುಗಳಲ್ಲ-ನಮಗೆ ಬಂಧುಗಳಲ್ಲ; ತಮ್ಮನ್ –ದುಶ್ಶಾನನನು; ಒಡಂಬಡನ್-ಒಪ್ಪಿಕೊಳ್ಳಲಾರ.
ನಮ್ಮ ಮೇಲೆ ಧರ್ಮರಾಯನಿಗೆ ಮೋಹವಿದೆ ಎನ್ನುವ ನಿಮ್ಮ ಮಾತುಗಳು ನಿಮ್ಮ ಮನಸ್ಸಿನಲ್ಲಿಯೇ ಇರಲಿ. ಭೀಮನ ಹೆಮ್ಮೆಯೂ ನಿಮ್ಮಲ್ಲಿಯೇ ಇರಲಿ. ನಮ್ಮ ಬಗ್ಗೆ ಅರ್ಜುನನಿಗೆ ಇರಬಹುದಾದ ಪ್ರೀತಿಯೂ ಅವನಲ್ಲಿಯೇ ಇರಲಿ. ಆದರೆ ನಮ್ಮಲ್ಲಿ ಭಿಕ್ಷೆಯ ರೂಪದಲ್ಲಿ ಭೂಮಿಯನ್ನು ಬೇಡುವವರನ್ನು ನಮ್ಮ ಬಂಧುಗಳು ಎಂದು ನಾವು ಪರಿಗಣಿಸುವುದಿಲ್ಲ. ನನ್ನ ತಮ್ಮನಾದ ದುಶ್ಶಾಸನ ಯಾವುದೇ ಕಾರಣಕ್ಕೂ ಈ ಸಂಧಿಗೆ ಒಪ್ಪಿಕೊಳ್ಳಲಾರ ಎಂದು ದುರ್ಯೋಧನನು ತಮ್ಮನಾದ ದುಶ್ಶಾಸನನ ಮುಖವನ್ನು ನೋಡಿದನು.
ಕೃಷ್ಣ ಯಾವತ್ತೂ ಪಾಂಡವರ ಪಕ್ಷಪಾತಿ ಎಂಬುದು ದುರ್ಯೋಧನಿಗೆ ಗೊತ್ತು. ಈಗ ಸಂಧಿಗೆ ಬಂದವನೂ ಪಾಂಡವರನ್ನು ಹಾಗೂ ಅವರ ಪರಾಕ್ರಮವನ್ನೇ ಎತ್ತಿ ಆಡಿದ್ದಾನೆ, ಮಾತ್ರವಲ್ಲ, ಪಾಂಡವರನ್ನು ಒಳಗೊಳಿಸಿಕೊಂಡರೆ ದುರ್ಯೋಧನನಿಗೆ ಏನೆಲ್ಲ ಒಳಿತಿದೆ ಎಂಬುದನ್ನು ಹೇಳಿದ್ದಾನೆ. ಹಾಗೆ ಹೇಳುವ ಸಂದರ್ಭದಲ್ಲಿ ಕೃಷ್ಣ ಪಾಂಡವರನ್ನೇ, ಅವರ ಪರಾಕ್ರಮಗಳನ್ನೇ ಕೊಂಡಾಡಿದ್ದಾನೆ. ಕೃಷ್ಣನ ಈ ಮಾತುಗಳು ದುರ್ಯೋಧನನನ್ನು ಕೆರಳಿಸಿವೆ. ಹಾಗಾಗಿ ಆತ ಕೃಷ್ಣನಲ್ಲಿ ನಿಮ್ಮ ಧರ್ಮರಾಯನ ಮೋಹ, ಭೀಮನ ಹೆಮ್ಮೆ, ಅರ್ಜುನನ ಪ್ರೀತಿಗಳೆಲ್ಲ ನಿಮ್ಮಲ್ಲಿ, ನಿಮ್ಮ ಮನಸ್ಸಿನೊಳಗೇ ಇರಲಿ. ಅವುಗಳಿಂದ ನಮಗೆ ಆಗಬೇಕಾದುದು ಏನೂ ಇಲ್ಲ. ಪಾಂಡವರು ಕಳೆದುಕೊಂಡ ಭೂಮಿಯನ್ನು ಮರಳಿ ಬೇಡಿ ಪಡೆದುಕೊಳ್ಳುವುದಾದರೆ ಅಂತಹ ಅಸಮರ್ಥರನ್ನು, ಹೇಡಿಗಳನ್ನು ನಾವು ನಮ್ಮ ಬಂಧುಗಳೆಂದು ಹೇಗೆ ಒಪ್ಪಿಕೊಳ್ಳುವುದಕ್ಕೆ ಸಾಧ್ಯ? ಕ್ಷತ್ರಿಯರಾದವರು ಭೂಮಿಯನ್ನು ಹೋರಾಡಿ ಪಡೆದುಕೊಳ್ಳುವರೇ ವಿನಾ ಬೇಡಿಪಡೆದುಕೊಳ್ಳಲಾರರು. ಪಾಂಡವರು ನಮ್ಮಲ್ಲಿ ಭೂಮಿಯನ್ನು ಬೇಡುತ್ತಿದ್ದಾರೆ ಎಂದಾದರೆ ಅವರನ್ನು ನಾನು ನಮ್ಮ ಬಂಧುಗಳು ಎಂದು ಹೇಗೆ ಒಪ್ಪಿಕೊಳ್ಳಲಿ? ಹಾಗೆ ಅವರು ಬೇಡುವುದಾದರೆ, ಅವರ ಅಪೇಕ್ಷೆಯಂತೆ ನಾವು ಭೂಮಿಯನ್ನು ನೀಡಿದರೆ ಲೋಕದ ಮುಂದೆ ನಾವು ಹೇಡಿಗಳೆನಿಸಿಕೊಳ್ಳಲಾರೆವೇ? ಅಲ್ಲದೆ, ಈ ರೀತಿಯ ವ್ಯವಹಾರಕ್ಕೆ ನನ್ನ ತಮ್ಮನಾದ ದುಶ್ಶಾಸನನು ಎಂದಿಗೂ ಒಪ್ಪಿಕೊಳ್ಳಲಾರ ಎಂದು ದುರ್ಯೋಧನ ಕೃಷ್ಣನಿಗೆ ಸ್ಪಷ್ಟಪಡಿಸಿದನು.
ಈ ಹರಿಯ ನುಡಿಗೇಳು ದೈವದ
ಮೋಹ ತಪ್ಪಿದ ಬಳಿಕ ಸುಭಟರ
ಸಾಹಸಿಕೆ ಹುರುಳಿಲ್ಲ ನಂಬದಿರೆಮ್ಮ ಬಲುಹುಗಳ
ಬಾಹಿರವ ನೀಡಾಡದಿರು ವೈ
ದೇಹಿಯನು ಸೆಱೆವೊಯ್ದ ಸ್ವಾಮಿ
ದ್ರೋಹಿಯನು ಹೋಲದಿರು ಕೌರವಯೆಂದನಾ ಭೀಷ್ಮ ೧೨
ಪದ್ಯದ ಅನ್ವಯಕ್ರಮ:
ಕೌರವ, ಈ ಹರಿಯ ನುಡಿಗೇಳು, ದೈವದ ಮೋಹ ತಪ್ಪಿದ ಬಳಿಕ ಸುಭಟರ ಸಾಹಸಿಕೆ ಹುರುಳಿಲ್ಲ, ಎಮ್ಮ ಬಲುಹುಗಳ ನಂಬದಿರ್, ನೀನ್ ಬಾಹಿರವ ಆಡದಿರು, ವೈದೇಹಿಯನು ಸೆಱೆ ಒಯ್ದ ಸ್ವಾಮಿ ದ್ರೋಹಿಯನು ಹೋಲದಿರು ಎಂದನ್ ಆ ಭೀಷ್ಮ.
ಪದ-ಅರ್ಥ:
ಹರಿಯ-ಕೃಷ್ಣನ; ನುಡಿಗೇಳು-ಮಾತುಗಳನ್ನು ಒಪ್ಪಿಕೊಳ್ಳು; ದೈವದ ಮೋಹ-ದೈವಾನುಗ್ರಹ, ದೇವರ ಒಲವು; ತಪ್ಪಿದ ಬಳಿಕ-ತಪ್ಪಿಹೋದ ಮೇಲೆ; ಸುಭಟರ-ಪರಾಕ್ರಮಿಗಳ; ಸಾಹಿಸಿಕೆ-ಪರಾಕ್ರಮಕ್ಕೆ, ಶೌರ್ಯಕ್ಕೆ; ಹುರುಳಿಲ್ಲ-ಸತ್ವವಿಲ್ಲ, ಶಕ್ತಿಯಿಲ್ಲ; ಎಮ್ಮ ಬಲುಹುಗಳ– ನಮ್ಮ ಸಾಮರ್ಥ್ಯವನ್ನು, ನಮ್ಮ ಸಮರ್ಥರನ್ನು; ನಂಬದಿರ್-ನೆಚ್ಚಿಕೊಳ್ಳಬೇಡ; ಬಾಹಿರವ-ಹೊರತಾದುದನ್ನು, ಸಮಂಜಸವಲ್ಲದುದನ್ನು; ಆಡದಿರು-ಮಾತಾಡಬೇಡ; ವೈದೇಹಿ-ಸೀತೆ; ಸೆರೆವೊಯ್ದ– ಸೆರೆಹಿಡಿದು ಕದ್ದೊಯ್ದ; ಸ್ವಾಮಿದ್ರೋಹಿ-ಒಡೆಯನಿಗೆ ದ್ರೋಹ ಬಗೆದವನು, ದೇವರಿಗೆ ದ್ರೋಹ ಬಗೆದವನು(ರಾವಣ); ಹೋಲದಿರು-ಸಾಟಿಯಾಗಬೇಡ, ಸಮನಾಗಬೇಡ.
ದುರ್ಯೋಧನ, ಕೃಷ್ಣನ ಮಾತುಗಳನ್ನು ಕೇಳು, ದೇವರ ಅನುಗ್ರಹ ತಪ್ಪಿದ ಬಳಿಕ ಎಂತಹ ಪರಾಕ್ರಮಶಾಲಿಗಳ, ಸಾಹಸಿಗಳ ಪರಾಕ್ರಮ ಅಥವಾ ಶೌರ್ಯಕ್ಕೆ ಯಾವ ಬೆಲೆಯೂ ಉಳಿಯಲಾರದು. ನಿನ್ನ ಜೊತೆಯಲ್ಲಿರುವ ಪರಾಕ್ರಮಿಗಳನ್ನು, ಅವರ ಸಾಹಸಗಳನ್ನು ನೀನು ನಂಬಿಕೊಂಡಿರಬೇಡ. ರಾಜನೀತಿಗೆ ವಿರುದ್ಧವಾಗುದನ್ನು, ಹೊರತಾದುದನ್ನು ನೀನು ಆಡಿಕೊಂಡು ಕಾಲಕಳೆಯಬೇಡ. ನೀನು ಹಿಂದೆ ರಾಮಾಯಣ ಕಾಲದಲ್ಲಿ ರಾಮನ ಹೆಂಡತಿಯಾದ ಸೀತೆಯನ್ನು ಕದ್ದು ಸೆರೆಹಿಡಿದು ಒಯ್ದು ರಾವಣನಿಗೆ ಸಮಾನ ಎನಿಸಿಕೊಳ್ಳಬೇಡ ಎಂದು ಭೀಷ್ಮ ದುರ್ಯೋಧನನಿಗೆ ಬುದ್ಧಿಹೇಳಿದನು.
ಕೃಷ್ಣನ ಅನುಗ್ರಹವನ್ನು ಪಡೆದ ಪಾಂಡವರಿಗೆ ಯಾವತ್ತೂ ಸೋಲಿಲ್ಲ ಎಂಬುದನ್ನು ಭೀಷ್ಮಈಗಾಗಲೇ ಕಂಡುಕೊಂಡಿದ್ದಾನೆ. ಈ ಹಿಂದಿನ ಘಟನೆಗಳೇ ಅದಕ್ಕೆ ಸಾಕ್ಷಿಯಾಗಿವೆ. ಈಗ ದುರ್ಯೋಧನ ಪಾಂಡವರಿಗೆ ಅವರ ಪಾಲಿನ ರಾಜ್ಯವನ್ನು ಕೊಡಲಾರೆ ಎಂದು ಹಠಮಾಡುತ್ತಿರುವುದರಿಂದ ಮುಂದೆ ಅನರ್ಥ ಸಂಭವಿಸಬಹುದು ಎಂಬ ಕಳವಳ ಭೀಷ್ಮನಲ್ಲಿದೆ. ಹಾಗಾಗಿ ಆತ ದುರ್ಯೋಧನನನ್ನು ಉದ್ದೇಶಿಸಿ “ದುರ್ಯೋಧನ, ಕೃಷ್ಣ ಇದುವರೆಗೆ ಏನೆಲ್ಲವನ್ನು ಹೇಳಿದ್ದಾನೋ ಅವೆಲ್ಲವೂ ನಿನ್ನ ಒಳಿತಿಗೆ ಎಂಬುದನ್ನು ತಿಳಿದುಕೊಳ್ಳು. ನಮ್ಮಲ್ಲಿ ಎಷ್ಟೇ ಪರಾಕ್ರಮ, ಶೌರ್ಯ ಪ್ರತಾಪಗಳು ಇದ್ದರೂ ನಮ್ಮ ಕಡೆಯಲ್ಲಿ ಎಂತೆಂತಹ ಶೂರಾದಿ ಶೂರರು ಇದ್ದರೂ ದೇವರ ಅನುಗ್ರಹ ನಮಗೆ ದೊರಕದೇ ಇದ್ದರೆ ನಮ್ಮ ಶೌರ್ಯ, ಪರಾಕ್ರಮಗಳಿಗೆ, ನಮ್ಮ ಕಡೆಯ ಶೂರಾದಿ ಶೂರರಿಗೆ ಯಾವ ಬೆಲೆಯೂ ಇರಲಾರದು. ಅವರ ಯಾವ ಸಾಹಸವೂ ನಡೆಯಲಾರದು. ನೀನೀಗ ನಿನ್ನ ಜೊತೆಗಾರರ ಶೌರ್ಯ, ಪರಾಕ್ರಮಗಳನ್ನು ನೆಚ್ಚಿಕೊಂಡು ರಾಜನೀತಿಗೆ ವಿರುದ್ಧವಾದ ಮಾತುಗಳನ್ನು ಆಡುತ್ತಿರುವೆ. ಕೃಷ್ಣನ ಮಾತುಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವೆ. ಈ ರೀತಿಯಲ್ಲಿ ಯುಕ್ತಾಯುಕ್ತ ವಿವೇಚನೆಯಿಲ್ಲದೆ ಕಾಲಕಳೆಯುತ್ತ ಕೃಷ್ಣನ ಮಾತುಗಳನ್ನು ಉಪೇಕ್ಷಿಸಿದರೆ ಮುಂದೆ ಎಲ್ಲವೂ ನಿನಗೆ ವಿರುದ್ಧವಾಗಿ ಪರಿಣಮಿಸಿ ನಾಶಕ್ಕೆ ಕಾರಣವಾಗಬಹುದು. ಈ ಹಿಂದೆ ತ್ರೇತಾಯುಗದಲ್ಲಿ ರಾಮನ ಹೆಂಡತಿಯಾದ ಸೀತೆಯನ್ನು ರಾವಣನು ಕದ್ದೊಯ್ದು ಸ್ವಾಮಿದ್ರೋಹಿಯಾಗಿ ಅಪರಾಧವನ್ನು ಎಸಗಿ ತನ್ನ ನಾಶವನ್ನು ತಾನೇ ತಂದುಕೊಂಡನು. ನೀನೂ ಈಗ ಅದೇ ರೀತಿಯಲ್ಲಿ ಸ್ವಾಮಿದ್ರೋಹವನ್ನು ಎಸಗಲು ಹೊರಟಿರುವೆ. ನೀನೂ ರಾವಣನಂತಾಗಿ ಸ್ವಾಮಿದ್ರೋಹಿ ಎನಿಸಿಕೊಂಡು ಎಲ್ಲವನ್ನೂ ಕಳೆದುಕೊಳ್ಳಬೇಡ” ಎಂದು ಭೀಷ್ಮನು ದುರ್ಯೋಧನನಿಗೆ ಬುದ್ಧಿಹೇಳಿದನು.
ನೆಲನ ಬೇಡುವ ಪಾಂಡವರ ಭುಜ
ಬಲದೊಳಗೆ ಕುಂದಿಲ್ಲ ನೀತಿಯ
ತಿಳಿಹಲೈತಂದಸುರರಿಪು ಸಾಮಾನ್ಯ ಬಳನಲ್ಲ
ಇಳೆಯೊಳರ್ಧವನೊಪ್ಪುಗೊಡು ಯದು
ಕುಲಲಲಾಮನ ನೇಮವನು ನೀ
ಸಲಿಸು ಕೆಡಿಸದಿರೀ ವಿಳಾಸವನೆಂದನಾ ದ್ರೋಣ ೧೩
ಪದ್ಯದ ಅನ್ವಯಕ್ರಮ:
ನೆಲನ ಬೇಡುವ ಪಾಂಡವರ ಭುಜಬಲದೊಳಗೆ ಕುಂದಿಲ್ಲ ನೀತಿಯ ತಿಳುಹಲ್ ಐತಂದ ಸುರರಿಪು ಸಾಮಾನ್ಯ ಬಳನಲ್ಲ. ನೀ ಇಳೆಯೊಳ್ ಅರ್ಧವನು ಒಪ್ಪುಗೊಂಡು ಯದುಕುಲ ಲಲಾಮನ ನೇಮವನು ಸಲಿಸು. ಈ ವಿಳಾಸವನ್ ಕೆಡಿಸದಿರ್ ಎಂದನಾ ದ್ರೋಣ.
ಪದ-ಅರ್ಥ:
ನೆಲನ ಬೇಡುವ-ಭೂಮಿಯನ್ನು ಅಪೇಕ್ಷಿಸುವ; ಭುಜಬಲದೊಳಗೆ-ಬಾಹುಬಲದಲ್ಲಿ; ಕುಂದಿಲ್ಲ-ತಪ್ಪಿಲ್ಲ; ನೀತಿಯ ಹಿಳುಹಲ್-ರಾಜನೀತಿಯನ್ನು ತಿಳಿಸಲು; ಐತಂದ-ಆಗಮಿಸಿದ; ಸುರರಿಪು-ರಾಕ್ಷಸವೈರಿ(ಕೃಷ್ಣ); ಸಾಮಾನ್ಯಬಳನಲ್ಲ-ಸಾಮಾನ್ಯವಾದ ಬಲಶಾಲಿಯಲ್ಲ, ಅಸಾಮಾನ್ಯ ಪರಾಕ್ರಮಿ; ಇಳೆಯೊಳರ್ಧವನು-ಭೂಮಿಯಲ್ಲಿ ಅರ್ಧಭಾಗವನ್ನು; ಅರ್ಧ ರಾಜ್ಯವನ್ನು; ಒಪ್ಪುಗೊಂಡು-ಒಪ್ಪಿಸಿಕೊಟ್ಟು; ಯದುಕುಲಲಲಾಮ-ಕೃಷ್ಣ; ನೇಮ-ಅಪ್ಪಣೆ; ಸಲಿಸು-ನೆರವೇರಿಸು; ವಿಳಾಸವನ್-ವ್ಯವಸ್ಥೆಯನ್ನು; ಕೆಡಿಸದಿರ್-ಹಾಳುಗೆಡವಬೇಡ;
ಹಿಂದೆ ತಾವು ಆಳಿಕೊಂಡಿದ್ದ ರಾಜ್ಯವನ್ನು ಮತ್ತೆ ಬೇಡುತ್ತಿರುವ ಪಾಂಡವರ ಶಕ್ತಿ ಸಾಮರ್ಥ್ಯಗಳಲ್ಲಿ ಯಾವುದೇ ಕುಂದಿಲ್ಲ. ಅದು ಅವರ ಹಕ್ಕಿನ ರಾಜ್ಯ. ಈಗ ನಿನಗೆ ರಾಜನೀತಿಯನ್ನು ತಿಳಿಸಲು ನಿನ್ನಲ್ಲಿಗೆ ಆಗಮಿಸಿರುವ ಕೃಷ್ಣ ಸಾಮಾನ್ಯನೆಂದು ತಿಳಿದುಕೊಳ್ಳಬೇಡ. ಅವನು ಅಸಾಮಾನ್ಯನಾದ ವ್ಯಕ್ತಿ. ಈಗ ನಿನ್ನ ವಶದಲ್ಲಿರುವ ಭೂಮಿಯಲ್ಲಿ ಅರ್ಧಭಾಗವನ್ನು ನೀನು ಪಾಂಡವರಿಗೆ ಒಪ್ಪಿಸಿಕೊಟ್ಟು ಯದುಕುಲ ಲಲಾಮನೆಂದು ಕರೆಸಿಕೊಂಡಿರುವ ಕೃಷ್ಣನ ಅಪ್ಪಣೆಯನ್ನು ನೆರವೇರಿಸು. ಆತನ ಕೋರಿಕೆಯನ್ನು ತಿರಸ್ಕರಿಸಿ ವ್ಯವಸ್ಥೆಯನ್ನೇ ಕೆಡಿಸಬೇಡ ಎಂದು ದ್ರೋಣ ದುರ್ಯೋಧನನಿಗೆ ಬುದ್ಧಿಹೇಳಿದನು.
ಪಗಡೆಯಾಟದಲ್ಲಿ ಪಾಂಡವರು ತಮ್ಮ ರಾಜ್ಯವನ್ನು ಕಳೆದುಕೊಂಡಿರಬಹುದು. ನೀನು ಅದನ್ನು ಪಡೆದುಕೊಂಡಿರಬಹುದು. ಅವರು ಷರತ್ತಿನ ಪ್ರಕಾರ ವನವಾಸ, ಅಜ್ಞಾತವಾಸಗಳನ್ನು ಯಶಸ್ವಿಯಾಗಿ ಮುಗಿಸಿರುವುದರಿಂದ ಅವರು ಈಗ ಕೃಷ್ಣನ ಮೂಲಕ ತಮ್ಮ ಹಕ್ಕಿನ ಅರ್ಧರಾಜ್ಯವನ್ನು ಕೇಳುತ್ತಿರುವುದು ರಾಜನೀತಿಯ ಪ್ರಕಾರ ಸಮಂಜಸವಾಗಿದೆ. ಅಲ್ಲದೆ, ಪಾಂಡವರ ಶಕ್ತಿ ಸಾಮರ್ಥ್ಯಗಳಲ್ಲಿ ಯಾವುದೇ ಕುಂದಿಲ್ಲ. ಅವರು ಬೇಕಿದ್ದರೆ ಯುದ್ಧಮಾಡಿ ಪಡೆದುಕೊಳ್ಳುವಷ್ಟು ಸಮರ್ಥರಾಗಿದ್ದಾರೆ. ಜೊತೆಗೆ ಪಾಂಡವರಿಗೆ ಕೃಷ್ಣನ ಅನುಗ್ರಹವೂ ಇದೆ ಎಂಬುದನು ನೀನು ಬಲ್ಲೆ. ಆದರೆ, ಯುದ್ಧವೇ ಅಂತಿಮವಲ್ಲ. ಇನ್ನೊಂದೆಡೆ ಕೃಷ್ಣ ಸಂಧಾನಕಾರನಾಗಿ ಬಂದಿದ್ದಾನೆ. ಆತ ನಿನಗೆ ರಾಜನೀತಿಯನ್ನೂ ತಿಳಿಸಿದ್ದಾನೆ. ಆತ ಸಾಮಾನ್ಯವ್ಯಕ್ತಿ ಎಂದು ತಿಳಿದುಕೊಳ್ಳಬೇಡ. ಅವನು ಶಕ್ತಿ ಸಾಮರ್ಥ್ಯಗಳಲ್ಲಿ, ಯುದ್ಧತಂತ್ರಗಳಲ್ಲಿ ಅಸಾಮಾನ್ಯವ್ಯಕ್ತಿ. ಈಗಾಗಲೇ ಲೋಕಕಂಟಕರಾಗಿದ್ದ ಹಲವು ರಾಕ್ಷಸರನ್ನು ಕೊಂದು ಅಸುರರಿಪು ಎನಿಸಿಕೊಂಡವನು. ವಿವೇಚನೆಯಿಲ್ಲದ ಆತನನ್ನು ವಿರೋಧಿಸಿ, ಆತನ ನೀತಿಯನ್ನು ತಿರಸ್ಕರಿಸಿ ವೃಥಾ ನಾಶವನ್ನು ತಂದುಕೊಳ್ಳಬೇಡ. ಕೃಷ್ಣ ಹೇಳುವಂತೆ ಪಾಂಡವರಿಗೆ ಅರ್ಧರಾಜ್ಯವನ್ನು ಒಪ್ಪಿಸಿಕೊಡದೆ ಯದುಕುಲಲಲಾಮನೆಂದು ಪ್ರಸಿದ್ಧನಾಗಿರುವ ಕೃಷ್ಣನ ಅಪ್ಪಣೆಯನ್ನು ತಿರಸ್ಕರಿಸಿ ರಾಜನೀತಿ ವ್ಯವಸ್ಥೆಯನ್ನು ಕೆಡಿಸಬೇಡ. ಇದರಿಂದ ನಾಶವೇ ವಿನಾ ಯಾರಿಗೂ ಒಳಿತಾಗಲಾರದು. ಹಾಗಾಗಿ ಯೋಚಿಸಿ ಕಾರ್ಯವನ್ನು ಕೈಗೊಳ್ಳು ಎಂದು ದ್ರೋಣ ದುರ್ಯೋಧನನಿಗೆ ಬುದ್ಧಿಹೇಳಿದನು.
ಕರೆದು ಮೂಱಡಿ ನೆಲನ ಧಾರೆಯ
ನೆಱೆದ ಬಲಿ ತಳಕಿಳಿದನೆನ್ನೀ
ಧರೆಯೊಳೈದೂರುಗಳನಿತ್ತೆನಗಾವ ಪದವಹುದು
ಪರಮಪುರುಷನು ನೀನು ನಿನಗಾಂ
ಶರಣುವೊಕ್ಕೆನು ಬಂದ ಪಥದಲಿ
ಮರಳಿ ಬಿಜಯಂಗೈವುದೆಂದನು ನಗುತ ಕುರುರಾಯ ೧೪
ಪದ್ಯದ ಅನ್ವಯಕ್ರಮ:
ಕರೆದು ಮೂರಡಿ ನೆಲನ ಧಾರೆಯನ್ ಎಱೆದ ಬಲಿ ತಳಕೆ ಇಳಿದನ್ ಈ ಧರೆಯೊಳ್ ಐದು ಊರುಗಳನ್ ಇತ್ತ ಎನಗೆ ಆವ ಪದವಹುದು. ನೀನು ಪರಮಪುರುಷನು ನಿನಗ ಆಂ ಶರಣು ಹೊಕ್ಕೆನು. ಕುರುರಾಯ ನಗುತ ಬಂದ ಪಥದಲಿ ಮರಳಿ ಬಿಜಯಂ ಗೈವುದು ಎಂದನು
ಪದ-ಅರ್ಥ:
ಕರೆದು-ಆಮಂತ್ರಿಸಿ; ಮೂಱಡಿ-ಮೂರು ಪಾದಗಳ ಅಳತೆಯಷ್ಟು; ಧಾರೆಯನೆಱೆದ-ಧಾರಾಪೂರ್ವಕ ನೀಡಿದ; ಬಲಿ-ಬಲಿಚಕ್ರವರ್ತಿ (ಪ್ರಹ್ಲಾದನ ಮೊಮ್ಮಗ); ತಳಕಿಳಿದನ್-ರಸಾತಳಕ್ಕೆ ಹೋಗಬೇಕಾಯಿತು; ಎನ್ನೀಧರೆಯೊಳ್-ನನ್ನ ಈ ಭೂಮಿಯಲ್ಲಿ; ಐದೂರುಗಳನಿತ್ತ-ಐದು ಊರುಗಳನ್ನು ನೀಡಿದರೆ; ಎನಗಾವ ಪದವಹುದು-ನನಗೆ ಯಾವ ಸ್ಥಾನ ದೊರಕಬಹುದು; ಪರಮಪುರುಷನು-ಪರಮಾತ್ಮನು; ನಿನಗಾಂ– ನಿನಗೆ ನಾನು; ಶರಣುವೊಕ್ಕೆನು-ಶರಣಾಗಿದ್ದೇನೆ; ಬಂದ ಪಥದಲಿ-ಬಂದಿರುವ ದಾರಿಯಲ್ಲಿ; ಮರಳಿ ಬಿಜಯಂಗೈವುದು-ಹಿಂದಿರುಗಿ ಹೋಗಬೇಕು.
ಈ ಹಿಂದೆ ಬಲಿಚಕ್ರವರ್ತಿಯು ವಾಮನನನ್ನು ಕರೆದು ಮೂರು ಅಡಿಗಳಷ್ಟು ಭೂಮಿಯನ್ನು ಧಾರಾಪೂರ್ವಕ ನೀಡಿದಾಗ ವಾಮನ ದಾನನೀಡಿದ ಬಲಿಯನ್ನೇ ಕೆಳಗೆ ತಳ್ಳಿದಾಗ ಬಲಿಚಕ್ರವರ್ತಿಯು ರಸಾತಳಕ್ಕೆ ಇಳಿಯಬೇಕಾಯಿತು. ಈಗ ನಾನು ಪಾಂಡವರಿಗೆ ಐದು ಊರುಗಳನ್ನು ನೀಡಿದರೆ ನನಗೆ ಯಾವ ಸ್ಥಾನ ಪ್ರಾಪ್ತವಾಗಬಹುದು? ನೀನು ಭಗವಂತ, ಹಾಗಾಗಿ ನಿನಗೆ ನಾನುಶರಣಾಗಿದ್ದೇನೆ. ಬಂದದಾರಿಗೆ ಸುಂಕವಿಲ್ಲ ಎಂದುಕೊಂಡು ಹಿಂದಿರುಗಿ ಹೊರಟುಹೋಗು ಎಂದು ದುರ್ಯೋಧನ ನಗುತ್ತ ಹೇಳಿದನು.
ಪಾಂಡವರಿಗೆ ಅರ್ಧರಾಜ್ಯವನ್ನೋ ಅಥವಾ ಐದು ಊರುಗಳನ್ನೋ ನೀಡು ಎಂದು ಹೇಳಿದ ಕೃಷ್ಣನ ಮಾತುಗಳು ದುರ್ಯೋಧನನಿಗೆ ಸರಿಕಾಣಲಿಲ್ಲ. ಅವನು ಬಲಿಚಕ್ರವರ್ತಿಗಾದ ಸ್ಥಿತಿಯನ್ನು ಕೃಷ್ಣನಿಗೆ ವಿವರಿಸುತ್ತಾನೆ. ವಿಷ್ಣುಭಕ್ತನಾದ ಬಲಿಚಕ್ರವರ್ತಿಯು ವಟುವಿನ ರೂಪದಲ್ಲಿದ್ದ ವಾಮನನನ್ನು ಕರೆದು ಆತನ ಬೇಡಿಕೆಯಂತೆ ಮೂರಡಿ ಭೂಮಿಯನ್ನು ಧಾರಾಪೂರ್ವಕವಾಗಿಯೇ ದಾನಮಾಡುತ್ತಾನೆ. ಹಾಗೆ ದಾನಮಾಡಿದ ಬಲಿಚಕ್ರವರ್ತಿಯನ್ನೇ ವಾಮನ ತನ್ನ ಪಾದದಿಂದ ಕೆಳಕ್ಕೆ ತಳ್ಳಿ ರಸಾತಳಕ್ಕೆ ಇಳಿಯುವಂತೆ ಮಾಡುತ್ತಾನೆ. ದಾನನೀಡಿದ ಬಲಿಗೆ ಈ ಸ್ಥಿತಿ ಬಂದಿರುವಾಗ, ಜೊತೆಗೆ ದಾನ ಪಡೆದ ವಾಮನನೇ ಬಲಿಯನ್ನು ಈ ರೀತಿಯಲ್ಲಿ ನಡೆಸಿಕೊಳ್ಳುವುದಾದರೆ ನಾನೀಗ ಪಾಂಡವರಿಗೆ ಐದು ಊರುಗಳನ್ನು ದಾನಮಾಡಿದರೆ ನನಗೆ ಇನ್ಯಾವ ಸ್ಥಾನ ಪ್ರಾಪ್ತವಾಗಬಹುದು? ಅಥವಾ ಊರುಗಳನ್ನು ಬಿಟ್ಟುಕೊಟ್ಟ ತನ್ನನ್ನು ಪಾಂಡವರು ಎಲ್ಲಿಗೆ ತಳ್ಳಬಹುದು? ಬಲಿಗೆ ಅಂತಹ ಸ್ಥಿತಿ ಪ್ರಾಪ್ತವಾಗಿರುವಾಗ ನನಗೆ ಇನ್ನೆಂತಹ ಸ್ಥಿತಿ ಪ್ರಾಪ್ತವಾಗಬಹುದು ಎಂಬ ಕಲ್ಪನೆ ತನಗಿದೆ. ನೀನು ಸರ್ವಶಕ್ತನಾದ ಭಗವಂತ. ನೀನು ಮನಸ್ಸು ಮಾಡಿದರೆ ಏನೂ ಮಾಡಬಲ್ಲೆ. ಬಲಿಗಾದ ಸ್ಥಿತಿ ನನಗ ಬರುವುದು ಬೇಡ. ನಿನಗೆ ನಾನು ಶರಣಾಗಿದ್ದೇನೆ. ಪಾಂಡವರಿಗೆ ನಾನು ಏನನ್ನೂ ಕೊಡಲಾರೆ. ನೀನು ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ಹಿಂದಿರುಗಿ ಹೊರಟುಹೋಗು ಎಂದು ದುರ್ಯೋಧನ ನಗುತ್ತ ಕೃಷ್ಣನಿಗೆ ಹೇಳಿದನು.
ನೆಲದೊಳರ್ಧವನೀವುದಿಲ್ಲಾ
ಸ್ಥಳವನೈದನು ಮುನ್ನ ಕೊಡೆನೆ
ನ್ನಿಳೆಯ ಭಾಗವನೀಸ ಕೊಟ್ಟಡೆ ನಿನ್ನ ಮೇಲಾಣೆ
ನೆಲನ ಕಡೆಯಲಿ ಮುಳ್ಳು ಮೊನೆಯು
ಚ್ಚಳಿಪ ಧರಣಿಯನಿತ್ತೆನಾದೊಡೆ
ಬಳಿಕ ನೀ ನಗು ಹೋಗು ಕದನವ ಕೊಂಡು ಬಾಯೆಂದ ೧೫
ಪದ್ಯದ ಅನ್ವಯಕ್ರಮ:
ನೆಲದೊಳ್ ಅರ್ಧವನ್ ಈವುದಿಲ್ಲಾ, ಸ್ಥಳವನ್ ಐದನು ಮುನ್ನ ಕೊಡೆನ್, ಎನ್ನ ಇಳೆಯ ಅರ್ಧಭಾಗವನ್ ಈಸ ಕೊಟ್ಟಡೆ ನಿನ್ನ ಮೇಲಾಣೆ, ನೆಲನ ಕಡೆಯಲಿ ಮುಳ್ಳು ಮೊನೆ ಉಚ್ಚಳಿಪ ಧರಣಿಯನ್ ಇತ್ತೆನ್ ಆದೊಡೆ ಬಳಿಕ ನೀ ನಗು, ಹೋಗು ಕದನವ ಕೊಂಡು ಬಾ ಎಂದ.
ಪದ-ಅರ್ಥ:
ನೆಲದೊಳ್-ಭೂಮಿಯಲ್ಲಿ; ಅರ್ಧಮನೀವುದಿಲ್ಲಾ-ಅರ್ಧಭಾಗವನ್ನೂ ಕೊಡಲಾರೆ; ಸ್ಥಳವನೈದನು-ಐದು ಊರುಗಳನ್ನು; ಮುನ್ನ ಕೊಡೆನ್-ಮೊದಲೇ ಕೊಡಲಾರೆ; ಇನ್ನಿಳೆಯ-ನನ್ನ ಭೂಮಿಯ; ಭಾಗವನೀಸ ಕೊಟ್ಟಡೆ-ಭಾಗವನ್ನು ಕೊಡುವಂತೆ ಮಾಡಿದರೆ; ಕಡೆಯಲಿ-ಕೊನೆಯಲ್ಲಿ; ಮುಳ್ಳು ನೊನೆ-ಮುಳ್ಳಿನ ತುದಿ; ಉಚ್ಚಳಿಪ-ಊರುವಷ್ಟು; ಧರಣಿಯನ್-ಭೂಮಿಯನ್ನು; ಆನಿತ್ತೆನಾದೊಡೆ-ನಾನು ಕೊಟ್ಟೆ ಎಂದಾದರೆ; ಕದನವ ಕೊಂಡು ಬಾ-ಯುದ್ಧಕ್ಕೆ ಸಿದ್ಧನಾಗಿ ಬಾ.
ನನ್ನ ಭೂಮಿಯ ಅರ್ಧಭಾಗವನ್ನೂ ನಾನು ಪಾಂಡವರಿಗೆ ಬಿಟ್ಟುಕೊಡಲಾರೆ. ಹೋಗಲಿ, ಅದಕ್ಕಿಂತಲೂ ಹೆಚ್ಚಾಗಿ ಅವರು ಅಪೇಕ್ಷಿಸಿರುವಂತೆ ಐದು ಊರುಗಳನ್ನೂ ಕೊಡಲಾರೆ. ನನ್ನ ಭೂಮಿಯ ಅರ್ಧಭಾಗವನ್ನು ಪಾಂಡವರಿಗೆ ಕೊಡುವಂತೆ ಮಾಡಿದರೆ ನಿನ್ನ ಮೇಲಾಣೆ. ಭೂಮಿಯ ವಿಚಾರದಲ್ಲಿ ಒಂದು ಮುಳ್ಳಿನ ಮೊನೆ ಊರುವಷ್ಟೂ ನೆಲವನ್ನು ನಾನು ಬಿಟ್ಟುಕೊಟ್ಟೆ ಎಂದಾದರೆ ಅನಂತರ ನೀನು ನನ್ನನ್ನು ನೋಡಿ ನಗಬಹುದು. ಈಗ ಇಲ್ಲಿಂದ ಹೊರಡು. ಸೈನ್ಯವನ್ನು ಸಿದ್ಧಪಡಿಸಿ ಯುದ್ಧಕ್ಕೆ ಬಂದುಬಿಡು ಎಂದು ದುರ್ಯೋಧನನು ಕೃಷ್ಣನಿಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದನು.
ಪಾಂಡವರು ಈಗಾಗಲೇ ತಮ್ಮ ಪಾಲಿನ ಭೂಮಿಯನ್ನು ಕಳೆದುಕೊಂಡಿದ್ದಾರೆ. ಕಳೆದುಕೊಂಡ ಮೇಲೆ ಅದನ್ನು ಮರಳಿ ಕೇಳುವ ಹಕ್ಕು ಅವರಿಗಿಲ್ಲ. ಪಾಂಡವರು ಅಪೇಕ್ಷಿಸಿದಂತೆ ನಾನು ನನ್ನ ಭೂಮಿಯಲ್ಲಿ ಅರ್ಧಭಾಗವನ್ನು ಪಾಂಡವರಿಗೆ ಬಿಟ್ಟುಕೊಡುವುದಕ್ಕೆ ಅವಕಾಶವೇ ಇಲ್ಲ. ನಾನು ಅದನ್ನು ಗೆದ್ದ ಮೇಲೆ ಅದು ನನಗೇ ಸೇರಿದ್ದು. ಹೋಗಲಿ ಅದಕ್ಕಿಂತಲೂ ಹೆಚ್ಚಾಗಿ ಪಾಂಡವರು ಅಪೇಕ್ಷಿಸಿರುವಂತೆ ಐದು ಊರುಗಳನ್ನೂ ನಾನು ಯಾವತ್ತೂ ಬಿಟ್ಟುಕೊಡಲಾರೆ. ನೀನೇನಾದರೂ ಪಿತೂರಿಮಾಡಿ ನನ್ನ ಅರ್ಧರಾಜ್ಯವನ್ನು ಅವರಿಗೆ ಕೊಡಿಸುವುದಕ್ಕೆ ಪ್ರಯತ್ನಿಸಿದೆ ಎಂದಾದರೆ ನಿನ್ನ ಮೇಲಾಣೆಯಿದೆ. ಸುಮ್ಮನೆ ನಮ್ಮೊಳಗೆ ಚರ್ಚೆಯ ಅಗತ್ಯವಿಲ್ಲ. ಭೂಮಿಯ ವಿಚಾರದಲ್ಲಿ ಒಂದು ಮುಳ್ಳಿನ ಮೊನೆ ಊರುವಷ್ಟೂ ನೆಲವನ್ನು ನಾನು ಪಾಂಡವರಿಗೆ ಬಿಟ್ಟುಕೊಡುವವನಲ್ಲ. ಹಾಗೇನಾದರೂ ನಿನ್ನ ಪಿತೂರಿಗೆ ಒಳಗಾಗಿ ನಾನು ಬಿಟ್ಟುಕೊಟ್ಟೆ ಎಂದಾದರೆ ಆಗ ನೀನು ನನ್ನನ್ನು ನೋಡಿ ನಗುತ್ತ ಅಣಕಿಸಬಹುದು. ಈಗ ಸುಮ್ಮನೆ ಕಾಲಹರಣ ಮಾಡುವ ಅಗತ್ಯವಿಲ್ಲ. ಯಾವುದೇ ಪರಿಸ್ಥಿತಿಯಲ್ಲಿಯೂ ನನ್ನ ನಿರ್ಧಾರವನ್ನು ನಾನು ಬದಲಿಸಲಾರೆ. ನಿನಗೆ ಸಾಧ್ಯವಾದರೆ ಪಾಂಡವರಿಗೆ ಬೆಂಗಾವಲಾಗಿ ನಿಂತು ಸೈನ್ಯವನ್ನು ಕಟ್ಟಿ ಯುದ್ಧಕ್ಕೆ ಬಂದುಬಿಡು. ಈಗ ಬಂದ ದಾರಿಗೆ ಸುಂಕವಿಲ್ಲ ಎಂದುಕೊಂಡು ಹೊರಟುಹೋಗು ಎಂದು ದುರ್ಯೋಧನ ಸಂಧಾನಕಾರನಾದ ಕೃಷ್ಣನಿಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದನು.
ಹಗೆಯ ಸಂಧಿಯ ನೆವದೊಳೆಮ್ಮಯ
ಬಗೆಯನಱಿಯಲು ಬಂದೆ ಯಾದವ
ರಗಡುತನ ನಮ್ಮಲ್ಲಿ ಸಲ್ಲದು ಸಾಕು ನುಡಿಯದಿರು
ಹಗೆಯನಾದಡೆ ಕೊಂಡು ಬಾ ನಡೆ
ಮಗುಳ್ದೊಡಱಿಯಲುಬಹುದು ನೀ ಹಱಿ
ಹುಗಿಲು ಮಾಡುವ ಮಂತ್ರ ಸಾಕಿನ್ನೆಂದನವನೀಶ ೧೬
ಪದ್ಯದ ಅನ್ವಯಕ್ರಮ:
ಹಗೆಯ ಸಂಧಿಯ ನೆವದೊಳ್ ಎಮ್ಮಯ ಬಗೆಯನ್ ಅಱಿಯಲು ಬಂದೆ, ಯಾದವ ರಗಡುತನ ನಮ್ಮಲ್ಲಿ ಸಲ್ಲದು, ಸಾಕು ನುಡಿಯದಿರು, ಹಗೆಯನ್ ಆದೊಡೆ ಕೊಂಡು ಬಾ ನಡೆ ಮಗುಳ್ದೊಡೆ ಅಱಿಯಲು ಬಹುದು, ನೀ ಹಱಿಹುಗಿಲು ಮಾಡುವ ಮಂತ್ರ ಸಾಕಿನ್ನು ಎಂದನ್ ಅವನೀಶ.
ಪದ-ಅರ್ಥ:
ಹಗೆಯ-ವೈರಿಯ; ಸಂಧಿಯ ನೆವದೊಳ್-ಸಂಧಾನದ ನೆಪದಲ್ಲಿ; ಬಗೆಯನಱಿಯಲು-ಮನಸ್ಸನ್ನು ತಿಳಿದುಕೊಳ್ಳಲು; ಯಾದವರಗಡುತನ-ಯಾದವರ ಧಾರಾಳತನ; ನಮ್ಮಲ್ಲಿ ಸಲ್ಲದು-ನಮ್ಮ ನಡೆಯದು; ಹಗೆಯನಾದಡೆ ಕೊಂಡು ಬಾ-ವೈರಿಯನ್ನು ಸೈನ್ಯಸಮೇತ ಕರೆದುಕೊಂಡು ಬಾ; ಮಗುಳ್ದೊಡಱಿಯಲುಬಹುದು-(ಸೈನ್ಯಸಮೇತನಾಗಿ) ಹಿಂದಿರುಗಿ ಬಂದರೆ ತಿಳಿಯಬಹುದು; ಹಱಿಹುಗಿಲು-ಕತ್ತರಿಸಿ ಸೀಳು; ಮಂತ್ರ-ಕುತಂತ್ರ; ಅವನೀಶ-ರಾಜ(ದುರ್ಯೋಧನ).
ವೈರಿಗಳಾದ ಪಾಂಡವರ ಜೊತೆಗಿನ ಸಂಧಾನದ ನೆಪದಲ್ಲಿ ನೀನು ನಮ್ಮ ಮನಸ್ಸನ್ನು ತಿಳಿದುಕೊಳ್ಳಲು ಬಂದಿರುವೆ. ಯಾದವರ ಧಾರಾಳತನ ನಮ್ಮಲ್ಲಿ ನಡೆಯದು. ನಿನ್ನ ಸಂಧಾನದ ಮಾತುಗಳನ್ನು ನಮ್ಮಲ್ಲಿ ಆಡಬೇಡ. ಸಾಧ್ಯವಾದರೆ ಸೈನ್ಯಸಮೇತನಾಗಿ ವೈರಿಯನ್ನು ಕರೆದುಕೊಂಡು ಯುದ್ಧಕ್ಕೆ ಬಂದುಬಿಡು. ಹಾಗೆ ಪಾಂಡವರೊಂದಿಗೆ ಸೈನ್ಯಸಮೇತನಾಗಿ ನೀನು ಮರಳಿ ಹಸ್ತಿನಾವತಿಗೆ ಮರಳಿದರೆ ನೀನು ನಮ್ಮ ಸಾಮರ್ಥ್ಯವನ್ನು ಅರಿಯಬಹುದು. ನಮ್ಮನ್ನು ಮಾತುಗಳ ಮೂಲಕ ಕತ್ತರಿಸಿ ಸೀಳುವ ಕುತಂತ್ರವನ್ನು ನಿಲ್ಲಿಸು ಎಂದು ದುರ್ಯೋಧನನು ಕೃಷ್ಣನಿಗೆ ಹೇಳಿದನು.
ಕೃಷ್ಣ ವಾಸ್ತವವಾಗಿ ಸಂಧಾನಕ್ಕೆಂದು ಬಂದವನಲ್ಲ ಎಂಬುದು ದುರ್ಯೋಧನನ ಅಭಿಪ್ರಾಯ. ಆತ ಸಂಧಾನದ ನೆಪದಲ್ಲಿ ನಮ್ಮ ಮನಸ್ಸನ್ನು ಅರಿತುಕೊಳ್ಳಲು ಹಾಗೂ ಆ ಮೂಲಕ ನಮ್ಮ ಧೈರ್ಯ, ಸ್ಥೈರ್ಯಗಳನ್ನು ಕುಗ್ಗಿಸಲು, ತಮ್ಮ ಮನಸ್ಸನ್ನು ಬೇಧಿಸಲು ಬಂದಿದ್ದಾನೆ ಎಂಬುದು ದುರ್ಯೋಧನನ ನಿಲುವು. ಅದನ್ನೇ ದುರ್ಯೋಧನ ಕೃಷ್ಣನ ಮುಂದೆ ಆಡುತ್ತಾನೆ. ಕೃಷ್ಣನ ಧಾರಾಳತನ ಪಾಂಡವರಲ್ಲಿ ನಡೆಯಬಹುದೇ ವಿನಾ ನಮ್ಮಲ್ಲಿ ನಡೆಯದು. ನಾವು ನಿನ್ನ ಬಗೆಬಗೆಯ ಸಂಧಾನದ ಮಾತುಗಳಿಗೆ ಮರುಳಾಗುವವರಲ್ಲ. ನೀನು ಪಾಂಡವರ ಪಕ್ಷಪಾತಿ ಎಂಬುದೂ ನಮಗೆ ತಿಳಿದಿದೆ. ಸುಮ್ಮನೆ ಸಂಧಾನದ ನೆಪದಲ್ಲಿ ಏಕೆ ಕಾಲಹರಣ ಮಾಡುತ್ತಿರುವೆ? ಪಾಂಡವರು ತಮ್ಮ ಸೈನ್ಯವನ್ನು ಈ ಹಿಂದೆಯೇ ಕಳೆದುಕೊಂಡಿದ್ದಾರೆ ಈಗ ಯುದ್ಧಕ್ಕೆ ಅವರಲ್ಲಿ ಸೈನ್ಯವೇ ಇಲ್ಲ. ಸಾಧ್ಯವಾದರೆ ಮುಂದೆ ನಡೆಯಲಿರುವ ಯುದ್ಧಕ್ಕೆ ನೀನು ಅವರಿಗಾಗಿ ಸೈನ್ಯವನ್ನು ಸಿದ್ಧಪಡಿಸು. ಅವರೆಲ್ಲರನ್ನೂ ಸೇರಿಸಿಕೊಂಡು ಸೈನ್ಯಸಮೇತನಾಗಿ ಯುದ್ಧಕ್ಕೆ ಬಂದುಬಿಡು. ಯುದ್ಧದಲ್ಲಿ ನಮ್ಮ ನಿಲುವನ್ನು ಪ್ರಕಟಿಸುತ್ತೇವೆ. ನೀನು ನಮ್ಮನ್ನು ಹಗುರವಾಗಿ ಭಾವಿಸಬೇಡ. ಸೈನ್ಯವನ್ನು ಸೇರಿಸಿಕೊಂಡು ಮರಳಿ ಯುದ್ದಕ್ಕೆ ಬಂದಾಗಲೇ ನಿನಗೆ ನಮ್ಮ ಶಕ್ತಿ ಸಾಮರ್ಥ್ಯಗಳ ಅರಿವಾಗುತ್ತದೆ. ನಮ್ಮನ್ನು ಮಾತುಗಳ ಮೂಲಕ ಕತ್ತರಿಸಿ ಸೀಳುವ ಕುತಂತ್ರಕ್ಕೆ ಮನಸ್ಸುಮಾಡಬೇಡ ಎಂದು ದುರ್ಯೋಧನ ಕೃಷ್ಣನಿಗೆ ಸ್ಪಷ್ಟಪಡಿಸಿದನು.
ಖತಿಯ ಹಿಡಿದನು ಶೌರಿ ಮಣಿಯದ
ಮತಗುಡದ ಫಣಿಕೇತನನ ಕಂ
ಡತುಳಬಲ ಗುರು ಸಿಂಧುತನಯಾದಿಗಳ ಮೊಗ ನೋಡಿ
ವ್ಯತಿಕರವನಿವ ಬಯಸಿ ಮಿಗೆ ಬೇ
ಡುತಿರೆ ಕದನ ನೆನೆಯೆ ಭೂಪನ
ಸತಿಯ ಕಿವಿಯೊಳಗೋಲೆಯ ಸ್ಥಿರವರಿವೆ ತಾನೆಂದ ೧೭
ಪದ್ಯದ ಅನ್ವಯಕ್ರಮ:
ಶೌರಿ ಖತಿಯ ಹಿಡಿದನು, ಮಣಿಯದ ಮತಗುಡದ ಫಣಿಕೇತನನ ಕಂಡು ಅತುಳಬಲ ಗುರು ಸಿಂಧು ತನಯಾದಿಗಳ ಮೊಗ ನೋಡಿ ವ್ಯತಿಕರವನ್ ಇವ ಬಯಸಿ ಮಿಗೆ ಬೇಡುತಿರೆ ಕದನವ ನೆನೆಯೆ ಭೂಪನ ಸತಿಯ ಕಿವಿಯೊಳಗೆ ಓಲೆಯ ಸ್ಥಿರವ ಅರಿವೆ ತಾನೆಂದ.
ಪದ-ಅರ್ಥ:
ಖತಿ ಹಿಡಿದನು-ಕೋಪಗೊಂಡನು; ಶೌರಿ-ಕೃಷ್ಣ; ಮಣಿಯದ-ಬಾಗದ; ಮತಗುಡದ-ವಿಚಾರಕ್ಕೆ ಒಪ್ಪದ; ಫಣಿಕೇತನನ-ದುರ್ಯೋಧನನ; ಅತುಳಬಲ-ಪರಾಕ್ರಮಶಾಲಿ; ಗುರು-ದ್ರೋಣ; ಸಿಂಧುತನಯಾದಿ-ಭೀಷ್ಮ ಮೊದಲಾದ; ಮೊಗ-ಮುಖ; ವ್ಯತಿಕರವ-ಸಂದರ್ಭವನ್ನು; ಇವ-ಇವನು (ದುರ್ಯೋಧನ); ಬಯಸಿ-ಅಪೇಕ್ಷಿಸಿ; ಮಿಗೆ-ಅಧಿಕವಾಗಿ; ಬೇಡುತಿರೆ-ಬಯಸುತ್ತಿರಲು; ಕದನವ ನೆನೆಯೆ-ಯುದ್ಧವನ್ನು ಅಪೇಕ್ಷಿಸುತ್ತಿರಲು; ಭೂಪನ ಸತಿಯ-ದುರ್ಯೋಧನನ ರಾಣಿಯ; ಕಿವಿಯೊಳಗೆ-ಕಿವಿಗಳಲ್ಲಿ; ಓಲೆಯ ಸ್ಥಿರವರಿವೆ-ಮುತ್ತೈದೆತನದ ಸ್ಥಿರತೆಯನ್ನು ಅರಿತುಕೊಳ್ಳುವೆಯಂತೆ.
ದುರ್ಯೋಧನನ ಮಾತುಗಳನ್ನು ಕೇಳಿ ಕೃಷ್ಣ ಕೋಪಗೊಂಡನು. ದುರ್ಯೋಧನ ಯಾರ ಮಾತುಗಳಿಗೂ ಬಾಗದ, ಅನ್ಯರ ವಿಚಾರಗಳನ್ನು ಒಪ್ಪದ ಹಠಮಾರಿ ವ್ಯಕ್ತಿ ಎಂಬುದು ಕೃಷ್ಣನಿಗೆ ಮನವರಿಕೆಯಾಯಿತು. ಅವನು ದ್ರೋಣ, ಭೀಷ್ಮರ ಮುಖವನ್ನು ನೋಡಿ ಯುದ್ಧದಂತಹ ಭೀಕರ ಸಂದರ್ಭವನ್ನೇ ದುರ್ಯೋಧನ ಮತ್ತೆಮತ್ತೆ ಬಯಸಿ ಬೇಡುವುದಾದರೆ, ಯುದ್ಧವನ್ನೇ ನೆಚ್ಚಿಕೊಳ್ಳುವುದಾದರೆ ಆತ ತನ್ನ ರಾಣಿಯ ಕಿವಿಯೋಲೆಗಳ ಭಾಗ್ಯ(ಮುತ್ತೈದೆಭಾಗ್ಯ)ದ ಸ್ಥಿರತೆಯನ್ನು ಅರಿಯುವ ಸಮಯ ದೂರವಿಲ್ಲ ಎಂದನು.
ಸಂಧಾನ ಸಾಧ್ಯವೇ ಇಲ್ಲ ಮಾತ್ರವಲ್ಲ, ಪಾಂಡವರಿಗೆ ಅರ್ಧರಾಜ್ಯ ಹೋಗಲಿ, ಐದು ಗ್ರಾಮಗಳನ್ನೂ ಕೊಡುವುದಿಲ್ಲ. ಬೇಕಿದ್ದರೆ ಯುದ್ಧಮುಖೇನ ಪಡೆದುಕೊಳ್ಳಲಿ ಎಂದು ನಿರ್ದಾಕ್ಷಿಣ್ಯವಾಗಿ ಹೇಳುವ ದುರ್ಯೋಧನನ ಮಾತುಗಳನ್ನು, ಜೊತೆಗೆ ಸಂಧನಕಾರನಾಗಿ ಬಂದ ತನ್ನನ್ನೂ ಹಗುರವಾಗಿ ಪರಿಭಾವಿಸಿಕೊಂಡು ಆಡಿದ ಮಾತುಗಳನ್ನು ಕೇಳಿದಾಗ, ಗುರುಹಿರಿಯರ ಮಾತುಗಳನ್ನೂ ದುರ್ಯೋಧನ ಪರಿಶೀಲಿಸದಿದ್ದಾಗ ಕೃಷ್ಣನ ತಾಳ್ಮೆಯೂ ವಿಚಲಿತಗೊಳ್ಳುತ್ತದೆ. ಕೃಷ್ಣ ಕೋಪಗೊಂಡು ದುರ್ಯೋಧನನ ಆಸ್ಥಾನದಲ್ಲಿ ಕುಳಿತಿರುವ ಗುರು ದ್ರೋಣಾಚಾರ್ಯ, ಪಿತಾಮಹ ಭೀಷ್ಮಾಚಾರ್ಯರ ಮುಖವನ್ನು ನೋಡಿ ಬಹುಶಃ ದುರ್ಯೋಧನ ಯುದ್ಧದಂತಹ ಭೀಕರವಾದ ಸಂದರ್ಭವನ್ನೇ ಅಪೇಕ್ಷಿಸುತ್ತಿದ್ದಾನೆ. ಆತನಿಗೆ ಸಾವುನೋವುಗಳು ಬಹಳ ಇಷ್ಟವೆಂದು ತೋರುತ್ತದೆ. ಅವನು ಮತ್ತಮತ್ತೆ ಅದನ್ನೇ ಬಯಸುತ್ತಿದ್ದಾನೆ. ಆದರೆ ಬಯಸಿ ಬಯಸಿ ಯುದ್ಧಮಾಡುವುದರಿಂದ ಆಗಬಹುದಾದ ಅನರ್ಥಗಳನ್ನು, ನಷ್ಟಗಳನ್ನು, ನಾಶವನ್ನು ಆತ ಇನ್ನೂ ಪರಿಭಾವಿಸಿಲ್ಲ. ಅಲ್ಲದೆ, ಯುದ್ಧದಿಂದಾಗಿ ಆತನ ರಾಣಿಯರ ಕಿವಿಯೋಲೆ ಭಾಗ್ಯ (ಮುತ್ತೈದೆತನದ ಭಾಗ್ಯ) ವನ್ನು ಪರೀಕ್ಷಿಸಲು ಹೊರಟಿದ್ದಾನೆ. ಅದನ್ನು ಅರಿಯಲೇಬೇಕು ಎಂಬ ಆತುರ ಆತನಿಗಿದ್ದರೆ ಅದನ್ನು ಯಾರೂ ತಪ್ಪಿಸುವಂತಿಲ್ಲ ಎಂದು ಕೃಷ್ಣ ಸಭೆಯಲ್ಲಿ ಉಪಸ್ಥಿತರಿರುವ ದ್ರೋಣ, ಭೀಷ್ಮ ಮೊದಲಾದವರನ್ನು ಉದ್ದೇಶಿಸಿ ಸ್ಪಷ್ಟಪಡಿಸುತ್ತಾನೆ.
ಕಡೆಗೆ ಧೃತರಾಷ್ಟ್ರಾವನೀಶನು
ಮಡದಿ ಸಹಿತಲನಾಥನಾಗಿಯೆ
ಕೆಡುವನೆಂಬುದ ಬಲ್ಲೆನಾ ಪಾಂಡವರ ಬಾಗಿಲಲಿ
ಪಡಿಗೆ ಪವಮಾನಜನ ಸಮಯವ
ಹಡೆಯದಿಹ ತಱುವಾಯ ನಮಗದು
ನಡೆಸಿಕೊಡುವುದು ತಪ್ಪದಕಟಕಟೆಂದನಸುರಾರಿ ೧೮
ಪದ್ಯದ ಅನ್ವಯಕ್ರಮ:
ಕಡೆಗೆ ಧೃತರಾಷ್ಟ್ರ ಅವನೀಶನು ಮಡದಿ ಸಹಿತಲಿ ಅನಾಥನಾಗಿಯೆ ಕೆಡುವನ್ ಎಂಬುದ ಬಲ್ಲೆನು. ಆ ಪಾಂಡವರ ಬಾಗಿಲಲಿ ಪಡಿಗೆ ಪವಮಾನಜನ ಸಮಯವ ಹಡೆಯದಿಹ ತಱುವಾಯ ನಮಗೆ ಅದು ನಡೆಸಿಕೊಡುವುದು ತಪ್ಪದು ಅಕಟಕಟ ಎಂದನ್ ಅಸುರಾರಿ.
ಪದ-ಅರ್ಥ:
ಕಡೆಗೆ-ಕೊನೆಗೆ; ಅವನೀಶ-ರಾಜ; ಮಡದಿ ಸಹಿತ-ಹೆಂಡತಿಯನ್ನು ಒಳಗೊಂಡು; ಅನಾಥ-ದಿಕ್ಕಿಲ್ಲದವನು; ಕೆಡುವನು-ನಾಶವಾಗುವನು; ಪಡಿಗೆ-ಭಿಕ್ಷೆಗೆ; ಪವಮಾನಜ-ಭೀಮ; ಸಮಯವ ಹಡೆಯದಿಹ-ಅವಕಾಶವನ್ನು ಪಡೆಯದಿರುವ; ನಡೆಸಿಕೊಡುವುದು-ಈಡೇರಿಸಿಕೊಡುವುದು; ಅಕಟಕಟ-ನೋವಿನ, ಬೇಸರದ ಸಂದರ್ಭಗಳಲ್ಲಿ ಉದ್ಗರಿಸುವ ಒಂದು ಅವ್ಯಯ.
ಪಾಂಡವರೊಂದಿಗೆ ದುರ್ಯೋಧನನು ಸಂಧಾನಕ್ಕೆ ಒಪ್ಪದಿದ್ದರೆ ಕೊನೆಯಲ್ಲಿ ರಾಜನಾಗಿರುವ ಧೃತರಾಷ್ಟ್ರನು ಗಾಂಧಾರಿ ಸಹಿತನಾಗಿ ದಿಕ್ಕಿಲ್ಲದೆ ನಿರ್ಗತಿಕನಾಲಿದ್ದಾನೆ ಎಂಬುದನ್ನು ನಾನು ಬಲ್ಲೆನು. ಹೊಟ್ಟೆಪಾಡಿಗಾಗಿ ಭೀಮನ ಮನೆಯ ಮುಂದೆ ಭಿಕ್ಷೆಬೇಡಿದರೂ ಅದು ಸಿಗುವ ಸಂಭವವಿಲ್ಲ. ಹೀಗಿರುವಾಗ ಅದೇ ಸ್ಥಿತಿಗತಿಗಳನ್ನು ನೆಚ್ಚಿಕೊಳ್ಳುವುದಾದರೆ ಅಂತಹ ಸ್ಥಿತಿಯನ್ನು ನಡೆಸಿಕೊಡುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಕೃಷ್ಣ ದುರ್ಯೋಧನನನ್ನು ಎಚ್ಚರಿಸುತ್ತಾನೆ.
ತಾನು ಕಸಿದುಕೊಂಡ ಪಾಂಡವರ ರಾಜ್ಯವನ್ನು ಮರಳಿ ಬಿಟ್ಟುಕೊಡುವುದಕ್ಕೆ ದುರ್ಯೋಧನ ಸಿದ್ಧನಿಲ್ಲ. ಸಂಧಾನದ ಮಾತುಗಳನ್ನೂ ಕೇಳುವುದಕ್ಕೂ ಸಿದ್ಧನಿಲ್ಲವೆಂಬುದು ಕೃಷ್ಣನಿಗೆ ಖಾತ್ರಿಯಾಯಿತು. ಕೃಷ್ಣ ಸ್ಪಷ್ಟಮಾತುಗಳ ಮೂಲಕ ದುರ್ಯೋಧನನನ್ನು ಎಚ್ಚರಿಸುತ್ತಾನೆ. ಕಾಲ ಇನ್ನೂ ಮೀರಿಲ್ಲ. ಒಂದು ವೇಳೆ ದುರ್ಯೋಧನ ಪಾಂಡವರೊಂದಿಗೆ ಸಂಧಾನಕ್ಕೆ ಒಪ್ಪಿಕೂಳ್ಳದಿದ್ದರೆ ತಾನು ತನ್ನವರೊಂದಿಗೆ ಸರ್ವನಾಶವಾಗುವುದರೊಂದಿಗೆ ಮುಂದೆ ಧೃತರಾಷ್ಟ್ರ ತನ್ನ ಹೆಂಡತಿಯಾದ ಗಾಂಧಾರಿಯ ಸಹಿತನಾಗಿ ದಿಕ್ಕುದೆಸೆಯಿಲ್ಲದೆ ನಿರ್ಗತಿಕನಾಗುವಂತಹ ಪರಿಸ್ಥಿತಿಯನ್ನು ತಂದೊಡ್ಡಲಿದ್ದಾನೆ. ಧೃತರಾಷ್ಟ್ರ ಎಲ್ಲಾ ಮಕ್ಕಳನ್ನೂ ಕಳೆದುಕೊಂಡು ಹೊಟ್ಟೆಪಾಡಿಗೆ ಭೀಮನ ಮನೆಯ ಬಾಗಿಲಲ್ಲಿ ಭಿಕ್ಷೆಗೆ ಪರದಾಡಬೇಕಾದೀತು. ಆದರೂ ಅದು ಭೀಮನಿಂದ ಮಾತ್ರವಲ್ಲ, ಇತರ ಪಾಂಡವರಿಂದಲೂ ಸಿಗುತ್ತದೆ ಎಂಬ ಯಾವ ಭರವಸೆಯೂ ಇರಲಾರದು. ನೀವು ಯಾರೊಬ್ಬರೂ ಪಾಂಡವರನ್ನು ರಕ್ತಸಂಬಂಧಿಗಳು ಎಂದು ಪರಿಭಾವಿಸದಿದ್ದರೆ ಅವರಾದರೂ ನಿಮ್ಮನ್ನು ರಕ್ತಸಂಬಂಧಿಗಳು ಎಂದು ಏಕೆ ಪರಿಭಾವಿಸಿಯಾರು? ಸಂಬಂಧವನ್ನು ತುಂಡರಿಸಿ ಹೀನಾಯವಾದ ನಿರ್ಗತಿಕತನವನ್ನು ಬಯಸಿ ಅದನ್ನೇ ನೆಚ್ಚಿಕೊಳ್ಳುವುದಾದರೆ ಅಂತಹ ಸ್ಥಿತಿಗತಿಗಳನ್ನು ತಪ್ಪಿಸುವುದಕ್ಕೆ ಭಗವಂತನಿಂದಲೂ ಸಾಧ್ಯವಿಲ್ಲ ಎಂದು ಕೃಷ್ಣ ಧೃತರಾಷ್ಟ್ರ ಸಮೇತನಾಗಿ ದುರ್ಯೋಧನನ್ನು ಎಚ್ಚರಿಸುತ್ತಾನೆ.
ಮನದ ಸಂಕೇತದಲಿ ದುರ್ಯೋ
ಧನನ ಕಟ್ಟಲು ವಿದುರ ಗಂಗಾ
ತನಯ ಧೃತರಾಷ್ಟ್ರಾವನಿಪರಾಳೋಚಿಸಿದ ಹದನ
ಮನದೊಳಱಿದನು ಬಳಿಕ ದುಶ್ಶಾ
ಸನನು ದುರ್ಯೋಧನಗೆಯಿನಿಬರ
ನೆನಹ ಬಿನ್ನಹ ಮಾಡಿದನು ಖಾತಿಯಲಿ ಕಳವಳಿಸಿ ೧೯
ಪದ್ಯದ ಅನ್ವಯಕ್ರಮ:
ಮನದ ಸಂಕೇತದಲಿ ದುರ್ಯೋಧನನ ಕಟ್ಟಲು ವಿದುರ ಗಂಗಾತನಯ ಧೃತರಾಷ್ಟ್ರ ಅವನಿಪರ್ ಆಳೊಚಿಸಿದ ಹದನ ಮನದೊಳ್ ಅಱಿದನು, ಬಳಿಕ ಖಾತಿಯಲಿ ಕಳವಳಿಸಿ ದುಶ್ಶಾಸನನು ದುರ್ಯೋಧನಗೆ ಇನಿಬರ ನೆನಹ ಬಿನ್ನಹ ಮಾಡಿದನು.
ಪದ-ಅರ್ಥ:
ಕಟ್ಟಲು-ತಡೆಯಲು; ವಿದುರ-ಧೃತರಾಷ್ಟ್ರನ ಮಂತ್ರಿ; ಗಂಗಾತನಯ-ಭೀಷ್ಮ; ಅವನಿಪ-ರಾಜ; ಆಳೋಚಿಸಿದ-ಯೋಚಿಸಿದ; ಹದನ-ರೀತಿಯನ್ನು; ಮನದೊಳಱಿದನು-ಮನಸ್ಸಿನಲ್ಲಿಯೇ ತಿಳಿದುಕೊಂಡನು; ಇನಿಬರ-ಇವರೆಲ್ಲರ; ನೆನಹ-ಯೋಚನೆಯನ್ನು; ಬಿನ್ನಹ-ಅರಿಕೆ; ಖಾತಿಯಲಿ-ಕೋಪದಲ್ಲಿ; ಕಳವಳಿಸಿ-ತಳಮಳಿಸಿ.
ಕೃಷ್ಣನ ಸಂಧಾನದ ಮಾತುಗಳನ್ನು ದುರ್ಯೋಧನಾದಿಗಳು ಒಪ್ಪದಿದ್ದಾಗ ಆಸ್ಥಾನದಲ್ಲಿ ಆಸೀನರಾಗಿದ್ದ ಮಂತ್ರಿ ವಿದುರ, ಪಿತಾಮಹ ಭೀಷ್ಮ, ರಾಜನಾದ ಧೃತರಾಷ್ಟ್ರ ಮೊದಲಾದವರು ದುರ್ಯೋಧನನನ್ನು ಮನಸ್ಸಿನ ಸಂಕೇತದ ಮೂಲಕ ತಡೆಯಲು ಯೋಚಿಸಿದ ರೀತಿಯನ್ನು ಕೃಷ್ಣ ಮನಸ್ಸಿನಲ್ಲಿಯೇ ಅರಿತುಕೊಂಡನು. ಅದೇ ಹೊತ್ತಿನಲ್ಲಿ ಇದೆಲ್ಲವನ್ನು ಅರಿತುಕೊಂಡ ದುಶ್ಶಾಸನನು ಸಿಟ್ಟಿನಿಂದ ತಳಮಳಗೊಂಡು ವಿದುರ, ಭೀಷ್ಮ ಮೊದಲಾದವರ ಯೋಚನೆಯನ್ನು ದುರ್ಯೋಧನನಲ್ಲಿ ಅರಿಕೆಮಾಡಿಕೊಂಡನು.
ಕೃಷ್ಣನ ಸಂಧಾನದ ಮಾತುಗಳು ವಿದುರ, ಭೀಷ್ಮ, ಧೃತರಾಷ್ಟ್ರ ಮೊದಲಾದ ರಾಜವಂಶದವರಿಗೆ ಒಪ್ಪಿಗೆಯಾದರೂ ದುರ್ಯೋಧನ, ದುಶ್ಶಾಸನಾದಿಗಳು ಅದನ್ನು ವಿರೋಧಿಸುತ್ತಿರುವುದು ಇಷ್ಟವಾಗಲಿಲ್ಲ. ಯುದ್ಧವಾದರೆ ಮುಂದೆ ಒದಗುವ ಅನರ್ಥಗಳನ್ನು, ಸಾವು-ನೋವುಗಳನ್ನು, ಅವರು ಕಲ್ಪಿಸಿಕೊಂಡಿದ್ದಾರೆ. ಇಂತಹ ಅವಘಡಗಳನ್ನು ಹೇಗಾದರೂ ತಪ್ಪಿಸಬೇಕು ಎಂದುಕೊಂಡು ಮಂತ್ರಿಯಾದ ವಿದುರ, ಪಿತಾಮಹನಾದ ಭೀಷ್ಮ, ಹಾಗೂ ರಾಜನಾದ ಧೃತರಾಷ್ಟ್ರ ಮೊದಲಾದವರು ಪರಸ್ಪರ ಮನಸ್ಸಿನ ಸಂಕೇತದ ಮೂಲಕ ದುರ್ಯೋಧನನನ್ನು ಸಂಧಾನವನ್ನು ಒಪ್ಪಿಕೊಳ್ಳುವಂತೆ ಮಾಡಿ ಯುದ್ಧಕ್ಕೆ ಮನಸ್ಸುಮಾಡದಂತೆ ತಡೆಯುವುದಕ್ಕೆ ಯೋಚಿಸುತ್ತಿರುವುದನ್ನು ಕೃಷ್ಣ ಅರಿತುಕೊಂಡನು. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ದುಶ್ಶಾಸನ ಧೃತರಾಷ್ಟ್ರ, ವಿದುರ, ಭೀಷ್ಮಾದಿಗಳ ಆಲೋಚನೆ, ಮನಸ್ಸಿನ ಇಂಗಿತಗಳನ್ನು ಅರ್ಥಮಾಡಿಕೊಂಡು, ಇವರೆಲ್ಲರೂ ತಮ್ಮ ಉದ್ದೇಶವನ್ನು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಭಾವಿಸಿ ಸಿಟ್ಟಿನಿಂದ ತಳಮಳಗೊಂಡು ಅದೆಲ್ಲವನ್ನೂ ದುರ್ಯೋಧನನಲ್ಲಿ ಅರಿಕೆಮಾಡಿಕೊಂಡನು. ಕೃಷ್ಣನ ಮಾತುಗಳಿಗೆ ಮರುಳಾಗಿ ಅವರೆಲ್ಲರೂ ಪಾಂಡವರ ಸ್ಥಿತಿಗತಿಗಳಿಗೆ ಸ್ಪಂದಿಸುತ್ತಿರುವುದು ದುಶ್ಶಾಸನನಿಗೆ ಇಷ್ಟವಾಗಲಿಲ್ಲ.
ದೂತರನು ಕಟ್ಟುವುದು ರಾಯರಿ
ಗೇತಱುಚಿತವು ನಮ್ಮ ಬಿಗಿಯಲು
ಕಾತರಿಸುತಿದೆ ನಿನ್ನ ಮೊಮ್ಮಂದಿರನು ನೀ ಕರೆಸಿ
ಮಾತನಾಡಿಸಿ ನೋಡು ನಮಗಾ
ಭೀತಿ ತಾನಿಲ್ಲೆನಲು ಗಂಗಾ
ಜಾತ ಧೃತರಾಷ್ಟ್ರಂಗೆ ನುಡಿದನು ಕೌರವನ ಹದನ ೨೦
ಪದ್ಯದ ಅನ್ವಯಕ್ರಮ:
ನಮ್ಮ ಬಿಗಿಯಲು ಕಾತರಿಸುತಿದೆ, ದೂತರನು ಕಟ್ಟುವುದು ರಾಯರಿಗೆ ಏತರ ಉಚಿತವು, ನೀ ನಿಮ್ಮ ಮೊಮ್ಮಂದಿರನು ಕರೆಸಿ ಮಾತನಾಡಿಸಿ ನೋಡು, ನಮಗೆ ಆ ಭೀತಿ ತಾನಿಲ್ಲ ಎನಲು, ಗಂಗಾಜಾತ ಧೃತರಾಷ್ಟ್ರಂಗೆ ಕೌರವನ ಹದನ ನುಡಿದನು.
ಪದ-ಅರ್ಥ:
ದೂತರನು ಕಟ್ಟುವುದು-ಸಂಧಾನಕಾರರನ್ನು ಬಂಧಿಸುವುದು; ರಾಯರಿಗೆ –ರಾಜರಾದವರಿಗೆ; ಏತಱುಚಿತವು-ಎಷ್ಟರ ಮಟ್ಟಿಗೆ ಸಮಂಜಸ; ಬಿಗಿಯಲು-ಕಟ್ಟಿಹಾಕಲು; ಕಾತರಿಸುತಿದೆ-ಹಂಬಲಿಸುತ್ತಿದೆ; ಮೊಮ್ಮಂದಿರನು-ಮೊಮ್ಮಕ್ಕಳನ್ನು; ಭೀತಿ-ಹೆದರಿಕೆ; ಗಂಗಾಜಾತ-ಗಂಗೆಯ ಮಗ (ಭೀಷ್ಮ); ಹದನ-ಕ್ರಮವನ್ನು, ರೀತಿಯನ್ನು.
ನಮ್ಮನ್ನು ಕಟ್ಟಿಹಾಕಲು ನಿನ್ನ ಮೊಮ್ಮಕ್ಕಳು ಕಾತರರಾಗಿದ್ದಾರೆ. ಆದರೆ, ದೂತರನ್ನು, ಸಂಧಾನಕಾರರನ್ನು ಕಟ್ಟಿಹಾಕುವುದು(ಬಂಧಿಸುವುದು) ಎಷ್ಟರ ಮಟ್ಟಿಗೆ ಸಮಂಜಸ? ರಾಜನೀತಿಯನ್ನು ಮೀರುವುದು ಸರಿಯೇ? ಭೀಷ್ಮಾಚಾರ್ಯ, ನಿನ್ನ ಮೊಮ್ಮಕ್ಕಳನ್ನು ಒಮ್ಮೆ ಮಾತನಾಡಿಸಿ ಅವರ ಮನಸ್ಸಿನ ಇಂಗಿತವನ್ನು ಪರೀಕ್ಷಿಸಿ ನೋಡಿ. ನಮಗೆ ಬಂಧನದ ಹೆದರಿಕೆ ಇಲ್ಲ ಎಂದು ಕೃಷ್ಣ ಭೀಷ್ಮನಲ್ಲಿ ಹೇಳಿದಾಗ ಆತ ಧೃತರಾಷ್ಟ್ರನಿಗೆ ದುರ್ಯೋಧನನ ವರ್ತನೆಯ ರೀತಿಯನ್ನು ವಿವರಿಸಿದನು.
ಸಂಧಾನದ ಸಂದರ್ಭದಲ್ಲಿ ಕೃಷ್ಣನು ಆಡಿದ ಪ್ರತಿಯೊಂದು ಮಾತಿನಿಂದ ಅಸಹನೆ, ಸಿಟ್ಟು, ಕೋಪತಾಪಗಳಿಗೆ ಗುರಿಯಾದ ದುರ್ಯೋಧನ ಕೃಷ್ಣನನ್ನು ಕಟ್ಟಿಹಾಕಬೇಕೆಂದು ಆಲೋಚಿಸುತ್ತಾನೆ. ಇದನ್ನರಿತ ಕೃಷ್ಣ ಭೀಷ್ಮನನ್ನು ಉದ್ದೇಶಿಸಿ, ನೋಡು ಭೀಷ್ಮಾಚಾರ್ಯ, ಸಂಧಾನಕ್ಕೆಂದು ಇನ್ನೊಬ್ಬರ ಆಸ್ಥಾನಕ್ಕೆ ಬಂದವರನ್ನು, ಅಥವಾ ದೂತನಾಗಿ ಆಸ್ಥಾನಕ್ಕೆ ಬಂದವರನ್ನು ಈ ರೀತಿಯಲ್ಲಿ ಕಟ್ಟಿಹಾಕುವುದು ಸರಿಯೇ? ದೂತನಾಗಿ, ಸಂಧಾನಕಾರನಾಗಿ ಆಸ್ಥಾನಕ್ಕೆ ಬಂದವರನ್ನು ಈ ರೀತಿಯಲ್ಲಿ ಅವಮಾನಿಸುವುದು ರಾಜನೀತಿಗೆ ವಿರುದ್ಧವಲ್ಲವೆ? ನಿಮ್ಮ ಆಸ್ಥಾನದ, ರಾಜಸಭೆಯ ಘನತೆ, ಗಾಂಭೀರ್ಯಗಳಿಗೆ ಈ ರೀತಿಯ ವರ್ತನೆ ಅವಮಾನಕರವಲ್ಲವೇ? ಕ್ಷತ್ರಿಯ ಶಿಷ್ಟಾಚಾರವನ್ನು ಮೀರಿಹೋಗುವುದು ಸರಿಯೇ? ನಿಮ್ಮಂತಹ ಹಿರಿಯರು ಇರುವ ಆಸ್ಥಾನದಲ್ಲಿ ನಿಮ್ಮ ಮೊಮ್ಮಕ್ಕಳ ತೋರುತ್ತಿರುವ ವರ್ತನೆಯನ್ನು ಒಮ್ಮೆ ಗಮನಿಸಿ. ನೀವಾದರೂ ಅವರನ್ನು ಕರೆದು ವಿಚಾರಿಸಿ ಅವರ ಮನಸ್ಸಿನಲ್ಲಿ ಎನಿದೆ ಎಂಬುದನ್ನಾದರೂ ಪರೀಕ್ಷಿಸಿ ನೋಡಿ. ದುರ್ಯೋಧನಾದಿಗಳ ಇಂತಹ ಬುದ್ಧಿಗೇಡಿತನದ ವರ್ತನೆಯಿಂದ ನಿಮಗೂ ನಿಮ್ಮ ರಾಜಸಭೆಯ ಘನತೆಗೂ ಕುಂದಾಗುತ್ತದೆ ಎಂಬುದನ್ನು ತಿಳಿದುಕೊಂಡು ಅವರನ್ನು ಸರಿದಾರಿಗೆ ತರುವುದಕ್ಕೆ ಪ್ರಯತ್ನಿಸಿ. ಇಷ್ಟರ ಮೇಲೂ ದುರ್ಯೋಧನ ನನ್ನನ್ನು ಕಟ್ಟಿಹಾಕಲೇಬೇಕು ಎನ್ನುವುದಾದರೆ ಆ ಬಗ್ಗೆ ನನಗೇನೂ ಭಯವಿಲ್ಲ ಎಂದು ಕೃಷ್ಣ ಭೀಷ್ಮನಲ್ಲಿ ಹೇಳೀದಾಗ ಆತನು ಧೃತರಾಷ್ಟ್ರನಿಗೆ ದುರ್ಯೋಧನಾದಿಗಳ ವರ್ತನೆಯನ್ನು ವಿವರಿಸಿದನು.
(೩ನೇ ಭಾಗದಲ್ಲಿ ಮುಂದುವರಿದಿದೆ)
ಡಾ. ವಸಂತ್ ಕುಮಾರ್, ಉಡುಪಿ