(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಬಿ.ಎ. ಎರಡನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ- ಭಾಗ- ೨)
ಏಪೊಗೞ್ವೆನತನುವಿದ್ಯಾ
ದೇವತೆ ನಿರತಿಶಯಮೆನಿಪ ರೂಪಿಂ ವಿದ್ಯಾ
ದೇವತೆ ಸಾಮರ್ಥ್ಯದಿನೆನಿ
ಪಾ ವಧು ಬರೆ ದೇವ ನಿನಗೆ ತೀರದುದುಂಟೇ ೭
ಪದ್ಯದ ಅನ್ವಯಕ್ರಮ:
ಏ ಪೊಗಳ್ವೆನ್ ನಿರತಿಶಯಂ ಎನಿಪ ರೂಪಿಂ ಅತನು ವಿದ್ಯಾ ದೇವತೆ, ಸಾಮರ್ಥ್ಯದಿನ್ ವಿದ್ಯಾದೇವತೆ, ಎನಿಪ ಆ ವಧು ಬರೆ ದೇವ ನಿನಗೆ ತೀರದುದು ಉಂಟೇ?
ಪದ-ಅರ್ಥ:
ಏಪೊಗಳ್ವೆನ್-ಎನೆಂದು ಹೊಗಳಲಿ, ಹೇಗೆಂದು ಹೊಗಳಲಿ; ಅತನುವಿದ್ಯಾದೇವತೆ-ಕಾಮವಿದ್ಯೆಗೆ ಅಧಿದೇವತೆ; ನಿರತಿಶಯ ರೂಪಿಂ-ಅಸಾಧಾರಣವಾದ ರೂಪದಿಂದ; ವಿದ್ಯಾದೇವತೆ-ಸಕಲ ವಿದ್ಯೆಗಳಿಗೆ ದೇವತೆ; ಸಾಮರ್ಥ್ಯದಿನ್-ಸಾಮರ್ಥ್ಯದಲ್ಲಿ; ಎನಿಪಾ-ಎನ್ನುವಂತಿರುವ; ಆ ವಧು ಬರೆ– ಆ ಚೆಲುವೆ ಒಲಿದು ಬರಲು; ತೀರದುದುಂಟೇ-ಅಸಾಧ್ಯವಾದುದು ಇದೆಯೇ.
ನಮ್ಮ ಒಡತಿಯಾದ ಉಪರಂಭೆಯನ್ನು ಹೇಗೆಂದು ಹೊಗಳಲಿ? ಆಕೆ ಅಸಾಧಾರಣವಾದ ರೂಪದಿಂದಾಗಿ ಕಾಮವಿದ್ಯೆಗೆ ಅಧಿದೇವತೆ ಎನಿಸಿಕೊಂಡಿದ್ದಾಳೆ, ತನ್ನ ಅಸಾಧಾರಣ ಸಾಮರ್ಥ್ಯದಿಂದಾಗಿ ವಿದ್ಯೆಗೆ ಅಧಿದೇವತೆ ಎನಿಸಿಕೊಂಡಿದ್ದಾಳೆ. ಅಂತಹ ವಿಶೇಷ ಸಾಮರ್ಥ್ಯವುಳ್ಳ ಚೆಲುವೆಯೊಬ್ಬಳು ನಿನಗೆ ಒಲಿದು ಬರುತ್ತಾಳೆ ಎಂದಾದರೆ ನಿನಗೆ ಈ ಬದುಕಿನಲ್ಲಿ ಅಸಾಧ್ಯವಾದುದು ಏನಾದರೂ ಇದೆಯೇ? ಎಂದು ಚಿತ್ರಮಾಲೆ ರಾವಣನಲ್ಲಿ ಆಸೆಯನ್ನು ಕೆರಳಿಸುವುದಕ್ಕೆ ಪ್ರಯತ್ನಿಸುತ್ತಾಳೆ.
ಒಂದು ಕಡೆ ಚಿತ್ರಮಾಲೆಗೆ ತನ್ನ ಒಡತಿಯ ಆಸೆ ಆಕಾಂಕ್ಷೆಗಳನ್ನು ಪೂರೈಸುವಂತೆ ಮಾಡಿ ಆಕೆಯನ್ನು ತೃಪ್ತಿಪಡಿಸಬೇಕಾಗಿದೆ. ಇನ್ನೊಂದು ಕಡೆ, ತನ್ನ ಒಡತಿಯು ತನಗೆ ವಹಿಸಿದ ಕೆಲಸವನ್ನು ಫಲಪ್ರದವಾಗುವಂತೆ ನಿರ್ವಹಿಸಿ ಆಕೆಯಿಂದ ಮೆಚ್ಚುಗೆಯನ್ನು ಪಡೆಯಬೇಕಾಗಿದೆ. ಅದಕ್ಕಾಗಿ ಆಕೆ ರಾವಣನಲ್ಲಿ ಉಪರಂಭೆಯ ಮೋಹಕವಾದ ಸೌಂದರ್ಯವನ್ನು, ಆಕೆಯ ಮನಸ್ಸಿನ ಕಾಮನೆಗಳನ್ನು, ಆಕೆಯ ಅಸಾಧಾರಣ ಸಾಮರ್ಥ್ಯವನ್ನು ರಾವಣನ ಮುಂದೆ ಕೊಂಡಾಡುತ್ತಾಳೆ. ರಾವಣನಲ್ಲಿ ಉಪರಂಭೆಯ ಬಗ್ಗೆ ಆಸೆಯನ್ನು, ಪ್ರೀತಿಯನ್ನು, ಆಸಕ್ತಿಯನ್ನು, ಅದಕ್ಕಿಂತಲೂ ಹೆಚ್ಚಾಗಿ ಆತನಲ್ಲಿ ಕಾಮವನ್ನು ಕೆರಳಿಸುವುದಕ್ಕೆ ಪ್ರಯತ್ನಿಸುತ್ತಾಳೆ. ತನ್ನ ಒಡತಿ ತನ್ನ ಅಸಾಧಾರಣವಾದ ರೂಪ ಹಾಗೂ ಸೌಂದರ್ಯದಿಂದಾಗಿ ಆಕೆ ಕಾಮವಿದ್ಯೆಗೆ ಅಧಿದೇವತೆ ಎನಿಸಿಕೊಂಡಿದ್ದಾಳೆ ಎಂದೂ, ಅಸಾಧಾರಣವಾದ ಸಾಮರ್ಥ್ಯದಿಂದಾಗಿ ವಿದ್ಯೆಗೂ ಅಧಿದೇವತೆ ಎನಿಸಿಕೊಂಡಿದ್ದಾಳೆ ಎಂದೂ ಅಂತಹವಳನ್ನು ನೀನು ಮನಸಾ ಸ್ವೀಕರಿಸಿಕೊಂಡು ಆಕೆಯ ಆಸೆಯನ್ನು ಈಡೇರಿಸಿದೆ ಎಂದಾದರೆ ಈ ಜನ್ಮದಲ್ಲಿ ನಿನಗೆ ಅಸಾಧ್ಯವೆಂಬುದು ಏನಾದರೂ ಇರಲು ಸಾಧ್ಯವೇ ಎಂದು ಬಗೆಬಗೆಯಿಂದ ರಾವಣನನ್ನು ಉಪರಂಭೆಯ ಕಡೆಗೆ ಮೋಹಿತನಾಗುವಂತೆ ಪ್ರಯತ್ನಿಸುತ್ತಾಳೆ.
ಗದ್ಯ: ಎನೆ ದಶಾನನಂ ಪೞಿಯುಂ ಪಾಪಮುಮಪ್ಪ ದುಶ್ಚರಿತ್ರಮನೇವೆನೆಂದು ಮನದೊಳೆ ನಿಶ್ಚಯಿಸಿ ವಿಭೀಷಣನಂ ಬರಿಸಿ ರಹಸ್ಯದೊಳದನರಿಪುವುದುಮಾತಂ ವಿದ್ಯಾ ಪ್ರಾಕಾರಮಂ ಕಿಡಿಸುವಂತುಟಂ ಪ್ರತಿ ವಿದ್ಯೆಯನಾಕೆಯಂ ಬರಿಸಿ ಪುಸಿದು ನಂಬಿಸಿ ಕಲ್ತುಕೊಳ್ವುದೆನೆ ರಾವಣನಾ ದೂದವಿಗೆ ನಿನ್ನ ನುಡಿಗೊಡಂಬಟ್ಟೆನಾಕೆಯಂ ತಾಯೆಂದು ವಕ್ರೋಕ್ತಿಯಿಂ ನುಡಿವುದುಮಾಕ್ಷಣದೊಳೆ ಪೋಗಿ ಬೇಗಂ ತರ್ಪುದುಮುಪರಂಭೆಗೆ ಪುಸಿನಣ್ಪುದೋಱಿ ನಿನಗಮೆನಗಂ ದುರ್ಲಂಘ್ಯಪುರದೊಳ್ ಕೂಟಮಪ್ಪಂತು ಮಾಡೆನೆ ಮನದೆ ಕೊಂಡಂತೆಗೆಯ್ವೆನೆಂದು ಸಾಲವಿದ್ಯಾಭೇದಿನಿಯಂ –
ಗದ್ಯದ ಅನ್ವಯಕ್ರಮ:
ಎನೆ ದಶಾನನಂ ಪೞಿಯುಂ ಪಾಪಮುಂ ಅಪ್ಪ ದುಶ್ಚರಿತ್ರಮನ್ ಏವೆನ್ ಎಂದು ಮನದೊಳೆ ನಿಶ್ಚಯಿಸಿ, ವಿಭೀಷಣನಂ ಬರಿಸಿ, ರಹಸ್ಯದೊಳ್ ಅದನ್ ಅರಿಪುವುದುಂ ಆತಂ ವಿದ್ಯಾಪ್ರಾಕಾರಮಂ ಕಿಡಿಸುವ ಅಂತುಂಟಂ ಪ್ರತಿವಿದ್ಯೆಯನ್ ಆಕೆಯಂ ಬರಿಸಿ ಪುಸಿದು ನಂಬಿಸಿ ಕಲ್ತುಕೊಳ್ವುದು ಎನೆ, ರಾವಣನ್ ಆ ದೂದವಿಗೆ ನಿನ್ನ ನುಡಿಗೆ ಒಡಂಬಟ್ಟೆನ್ ಆಕೆಯಂ ತಾ ಎಂದು (ತಾಯ್ ಎಂದು) ವಕ್ರೋಕ್ತಿಯಿಂ ನುಡಿವುದುಂ, ಆ ಕ್ಷಣದೊಳೆ ಪೋಗಿ ಬೇಗಂ ತರ್ಪುದುಂ ಉಪರಂಭೆಗೆ ಪುಸಿನಣ್ಪು ತೋಱಿ ನಿನಗಂ ಎನಗಂ ದುರ್ಲಂಘ್ಯಪುರದೊಳ್ ಕೂಟಂ ಅಪ್ಪಂತೆ ಮಾಡು ಎನೆ, ಮನದೆ ಕೊಂಡು ಅಂತೆ ಗೆಯ್ವೆನ್ ಎಂದು ಸಾಲವಿದ್ಯಾ ಭೇದಿನಿಯಂ –
ಪದ-ಅರ್ಥ:
ಎನೆ –ಎಂದು ಹೇಳಿದಾಗ; ಪೞಿಯುಂ –ನಿಂದಾತ್ಮಕವೂ; ಪಾಪಮುಮಪ್ಪ-ಪಾಪಾತ್ಮಕವೂ ಆಗಿರುವ; ದುಶ್ಚರಿತ್ರಮನೇವೆನೆಂದು-ಕೆಟ್ಟ ಚಾರಿತ್ರ್ಯವನ್ನು ಹೇಗೆ ನಿಭಾಯಿಸಲಿ; ಮನದೊಳೆ ನಿಶ್ಚಯಿಸಿ-ಮನಸ್ಸಿನಲ್ಲಿಯೇ ತರ್ಕಿಸಿ; ವಿಭೀಷಣನಂ ಬರಿಸಿ-ವಿಭೀಷಣನನ್ನು ಕರೆಸಿಕೊಂಡು; ರಹಸ್ಯದೊಳ್-ಗುಟ್ಟಾಗಿ; ಅದನ್-ಉಪರಂಭೆಯ ವಿಚಾರವನ್ನು; ಅಱಿಪುವುದುಂ-ತಿಳಿಸಿದಾಗ; ವಿದ್ಯಾಪ್ರಾಕಾರಮಂ-ಸಾಲವಿದ್ಯೆಯಿಂದ ರಚಿಸಿದ ಕೋಟೆಯನ್ನು; ಕಿಡಿಸಿವಂತುಟು-ಭೇದಿಸುವುದಕ್ಕಾಗಿ; ಪ್ರತಿವಿದ್ಯೆಯನ್-ಪರ್ಯಾಯ ವಿದ್ಯೆಯನ್ನು; ಆಕೆಯಂ ಬರಿಸಿ-ಉಪರಂಭೆಯನ್ನುಕರೆಸಿಕೊಂಡು; ಪುಸಿದು ನಂಬಿಸಿ-ಸುಳ್ಳನ್ನು ಆಡಿ ವಿಶ್ವಾಸಗಳಿಸಿ; ಕಲ್ತುಕೊಳ್ವುದು-ಕಲಿತುಕೊಳ್ಳಬೇಕು; ಎನೆ-ಎಂದು ಹೇಳಿದಾಗ; ದೂದವಿಗೆ-ದೂತಿಗೆ, ಚಿತ್ರಮಾಲೆಗೆ; ನಿನ್ನನುಡಿಗೊಡಂಬಟ್ಟೆನ್-ನಿನ್ನ ಮಾತುಗಳಿಗೆ ಒಪ್ಪಿಕೊಂಡಿದ್ದೇನೆ; ಆಕೆಯಂ ತಾಯೆಂದು-ಆಕೆಯನ್ನು ಕರೆದುಕೊಂಡು ಬಾ ಎಂದು; ಆಕೆ ತಾಯ್ ಎಂದು; ವಕ್ರೋಕ್ತಿಯಿಂ-ಎರಡರ್ಥ ಬರುವಂತಹ ಮಾತಿನಿಂದ; ನುಡಿವುದುಂ-ಹೇಳಿದಾಗ; ಆ ಕ್ಷಣದೊಳೆ ಪೋಗಿ – ಕೂಡಲೇ ಹೊರಟುಹೋಗಿ; ತರ್ಪುದುಂ-ಕರೆದುಕೊಂಡು ಬಂದಾಗ; ಪುಸಿನಣ್ಪುದೋಱಿ-ಸುಳ್ಳು ಸ್ನೇಹವನ್ನು ತೋರಿಸಿ; ನಿನಗಮೆನಗಂ-ನಿನಗೂ ನನಗೂ; ದುರ್ಲಂಘ್ಯಪುರದೊಳ್-ದುರ್ಲಂಘ್ಯಪುರದೊಳಗೆ; ಕೂಟಮಪ್ಪಂತು ಮಾಡೆನೆ-ಸಮಾಗಮವಾಗುವಂತೆ ವ್ಯವಸ್ಥೆಗೊಳಿಸು ಎಂದಾಗ; ಸಮಾಗಮ ನಡೆಯುವಂತೆ ವ್ಯವಸ್ಥೆಯನ್ನು ಏರ್ಪಡಿಸು ಎಂದಾಗ; ಮನದೆ ಕೊಂಡು-ಮನಃಪೂರ್ವಕ ಒಪ್ಪಿಕೊಂಡು; ಅಂತೆಗೆಯ್ವೆನೆಂದು-ಹಾಗೆಯೇ ಮಾಡುತ್ತೇನೆ ಎಂದು ಹೇಳಿ; ಸಾಲವಿದ್ಯಾಭೇದಿನಿಯಂ-ಕೋಟೆಯನ್ನು ಭೇದಿಸುವ ವಿದ್ಯೆಯನ್ನು.
ಎಂದು ಚಿತ್ರಮಾಲೆ ಹೇಳಿದಾಗ ರಾವಣನು ನಿಂದಾತ್ಮಕವೂ ಪಾಪಾತ್ಮಕವೂ ಆಗಿರುವ ಕೆಟ್ಟ ಚಾರಿತ್ರ್ಯವನ್ನು ಹೇಗೆ ನಿಭಾಯಿಸಲಿ? ಎಂದುಕೊಂಡು ಕೂಡಲೇ ವಿಭೀಷಣನನ್ನು ಕರೆಸಿಕೊಂಡು ಗುಟ್ಟಾಗಿ ಆತನಲ್ಲಿ ಉಪರಂಭೆಯ ವಿಷಯವನ್ನು ತಿಳಿಸಿದಾಗ, ವಿಭೀಷಣನು ಆಕೆಯನ್ನು ಇಲ್ಲಿಗೆ ಬರುವಂತೆ ಮಾಡಿ ಆಕೆಯನ್ನು ನಂಬಿಸಿ ಸುಳ್ಳು ಸ್ನೇಹವನ್ನು ತೋರಿಸಿ ಆಕೆಯಿಂದ ನಳಕೂಬರನು ಸಾಲವಿದ್ಯೆಯಿಂದ ರಚಿಸಿರುವ ಕೋಟೆಯನ್ನು ಭೇದಿಸುವುದಕ್ಕಾಗಿ ಪರ್ಯಾಯ ವಿದ್ಯೆಯನ್ನು ಕಲಿತುಕೊಳ್ಳಬೇಕು ಎಂದಾಗ, ರಾವಣನು ಚಿತ್ರಮಾಲೆಗೆ ನಿನ್ನ ಮಾತುಗಳಿಗೆ ಒಪ್ಪಿಕೊಂಡಿದ್ದೇನೆ. ಆಕೆಯನ್ನು ತಾ ಎಂದು (ಕರೆದುಕೊಂಡು ಬಾ ಎಂದು) (ತಾಯ್ ಎಂದು) (ಆಕೆ ತಾಯ್ ಎಂದು) ಹೇಳಿದಾಗ ಚಿತ್ರಮಾಲೆ ಕೂಡಲೇ ಹೋಗಿ ಕ್ಷಣಮಾತ್ರದಲ್ಲಿಯೇ ಉಪರಂಭೆಯನ್ನು ಕರೆದುಕೊಂಡು ಬಂದಳು. ರಾವಣನು ಆಕೆಯಲ್ಲಿ ಸುಳ್ಳು ಸ್ನೇಹವನ್ನು ತೋರಿಸಿ ನಿನಗೂ ನನಗೂ ದುರ್ಲಂಘ್ಯಪುರದೊಳಗೆ ಸಮಾಗಮವಾಗುವಂತೆ ವ್ಯವಸ್ಥೆಮಾಡು ಎಂದು ಹೇಳಿದಾಗ ಉಪರಂಭೆಯು ಮನಃಪೂರ್ವಕವಾಗಿ ಒಪ್ಪಿಕೊಂಡು ಹಾಗೆಯೇ ಮಾಡುತ್ತೇನೆ ಎಂದು ಹೇಳಿ ಕೋಟೆಯನ್ನು ಭೇದಿಸುವ ವಿದ್ಯೆಯನ್ನು–
ಚಿತ್ರಮಾಲೆಯ ಮಾತುಗಳನ್ನು ಕೇಳಿದಾಗ ರಾವಣ ಒಂದು ಕ್ಷಣ ಯೋಚಿಸುತ್ತಾನೆ. ಪರಸ್ತ್ರೀಸಂಗ ಎಂಬುದು ನಿಂದಾತ್ಮಕವೂ ಪಾಪಾತ್ಮಕವೂ ಆಗಿದ್ದು, ತನ್ನ ಪಾಲಿಗೆ ನಿಷಿದ್ಧವಾದುದು. ಹೀಗಿರುವಾಗ ಅದನ್ನು ಹೇಗೆ ಒಪ್ಪಿಕೊಳ್ಳಲಿ? ಹೇಗೆ ನಿಭಾಯಿಸಲಿ? ಎಂದು ಮನ್ಮಸ್ಸಿನಲ್ಲಿಯೇ ತರ್ಕಿಸಿಕೊಂಡು ತಮ್ಮನಾದ ವಿಭೀಷಣನನ್ನು ಕರೆಸಿಕೊಂಡು ಆತನಲ್ಲಿ ಗುಟ್ಟಾಗಿ ಉಪರಂಭೆಯ ವಿಚಾಯವನ್ನು ಪ್ರಸ್ತಾಪಿಸಿದನು. ಆತ ಕೂಡಲೇ ಆಕೆಯನ್ನು ಇಲ್ಲಿಗೆ ಬರುವಂತೆ ಮಾಡಿ ಆಕೆಯನ್ನು ನಂಬಿಸಿ ಆಕೆಯಲ್ಲಿ ಸುಳ್ಳುಸ್ನೇಹವನ್ನು ತೋರಿಸಿಕೊಂಡು ನಂಬಿಸಿ ಆಕೆಯಿಂದ ಕೋಟೆಯನ್ನು ಭೇದಿಸುವ ಪ್ರತಿವಿದ್ಯೆಯನ್ನು ಕಲಿತುಕೊಳ್ಳಬೇಕು ಎಂದು ಸಲಹೆನೀಡಿದನು. ಆಕೆಯನ್ನು ನಂಬಿಸದಿದ್ದಲ್ಲಿ, ಸ್ನೇಹವನ್ನು ತೋರಿಸದಿದ್ದಲ್ಲಿ ಪ್ರತಿವಿದ್ಯೆಯನ್ನು ತಿಳಿದುಕೊಳ್ಳಲಾಗುವುದಿಲ್ಲ. ಕೋಟೆಯನ್ನು ಭೇದಿಸುವುದಕ್ಕಾಗುವುದಿಲ್ಲ. ರಾವಣನ ದಿಗ್ವಿಜಯ ಪೂರ್ಣಗೊಳ್ಳಲಾರದು. ಹೀಗಿರುವಾಗ ಆಕೆಯನ್ನು ಪ್ರೀತಿಸುವ ನಾಟಕವಾಡಿ ನಂಬಿಸಿ, ತೋರಿಕೆಯ ಪ್ರೇಮವನ್ನು ಪ್ರದರ್ಸಿಸಿ ಪ್ರತಿವಿದ್ಯೆಯನ್ನು ಕಲಿತುಕೊಳ್ಳದೆ ಬೇರೆ ದಾರಿಯಿಲ್ಲ ಎಂಬುದನ್ನು ವಿಭೀಷಣ ರಾವಣನಿಗೆ ಮನದಟ್ಟು ಮಾಡಿಸುತ್ತಾನೆ. ರಾವಣ ಅದನ್ನು ಅರ್ಥಮಾಡಿಕೊಂಡು ಚಿತ್ರಮಾಲೆಗೆ ಆಕಯಂ ತಾಯೆಂದು ಹೇಳಿದನು. ರಾವಣನ ಮಾತಿನ ಒಳ ಅರ್ಥ ’ಆಕೆ ತಾಯ’ ಎಂಬುದು. ಆದರೆ ಉಪರಂಭೆಯ ಆಸೆಯನ್ನು ಈಡೇರಿಸುವ ತರಾತುರಿಯಲ್ಲಿರುವ ಚಿತ್ರಮಾಲೆಗೆ ’ಆಕೆಯಂ ತಾ’ ಎಂದು ಕೇಳಿಸಿತು. ಕೂಡಲೇ ಅದಕ್ಕೆ ಒಪ್ಪಿಕೊಂಡ ಚಿತ್ರಮಾಲೆ ಕೆಲವೇ ಕ್ಷಣಗಳೊಳಗೆ ಉಪರಂಭೆಯನ್ನು ಕರೆದುತಂದು ರಾವಣನ ಮುಂದೆ ನಿಲ್ಲಿಸಿದಳು. ರಾವಣ ಆಕೆಯಲ್ಲಿ ಸುಳ್ಳುಸ್ನೇಹವನ್ನು ತೋರಿಸಿ ಆಕೆಗೆ ತನ್ನಲ್ಲಿ ನಂಬಿಕೆ ಬರುವಂತೆ ಮಾಡಿ ಉಪಾಯದಿಂದ “ನೀನು ನನಗೆ ಒಲಿದು ಬಂದಿರುವುದು ನಿಜವಾದರೂ ನನ್ನ ಹಾಗೂ ನಿನ್ನ ಸಮಾಗಮಕ್ಕೆ ಇದು ಸೂಕ್ತವಾದ ಸ್ಥಳವಲ್ಲ. ಅದೇನಿದ್ದರೂ ದುರ್ಲಂಘ್ಯಪುರದ ಅರಮನೆಯೊಳಗೆ ಮಾತ್ರ ಸಾಧ್ಯ. ಹಾಗಾಗಿ ಅದಕ್ಕೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸುವ ವ್ಯವಸ್ಥೆ ಮಾಡು ಎಂದಾಗ ಉಪರಂಭೆ ಬಹುದಿನಗಳ ತನ್ನ ಆಸೆ ಈಡೇರುವ ಸಮಯ ಒದಗಿತಲ್ಲ ಎಂದುಕೊಂಡು ವಜ್ರಸಾಲ ಕೋಟೆಯನ್ನು ಭೇದಿಸುವ ವಿದ್ಯೆಯನ್ನು ಹೇಳಿಕೊಡಲು ಮುಂದಾಗುತ್ತಾಳೆ.
ಪ್ರತಿವಿದ್ಯೆಯನಾಕೆ ಕುಲ
ಕ್ಷತಿಯಂ ಪತಿಗಪ್ಪ ಹಾನಿಯಂ ಬಗೆಯದೆ ದು
ರ್ಮತಿ ಕೊಟ್ಟಳದೆನ್ನರುಮಂ
ಮತಿಗಿಡಿಪುದು ಚೋದ್ಯಮಲ್ತು ಮದನೋನ್ಮಾದಂ ೮
ಪದ್ಯದ ಅನ್ವಯಕ್ರಮ:
ಆಕೆ ದುರ್ಮತಿ, ಕುಲಕ್ಷತಿಯಂ ಪತಿಗಪ್ಪ ಹಾನಿಯಂ ಬಗೆಯದೆ ಪ್ರತಿವಿದ್ಯೆಯನ್ ಕೊಟ್ಟಳ್ ಅದು ಎನ್ನರುಮಂ ಮತಿ ಕಿಡಿಪುದು ಮದನ ಉನ್ಮಾದಂ ಚೋದ್ಯಂ ಅಲ್ತು.
ಪದ-ಅರ್ಥ:
ಪ್ರತಿವಿದ್ಯೆಯನ್-ಪರ್ಯಾಯ ವಿದ್ಯೆಯನ್ನು, ಕೋಟೆಯನ್ನು ಭೇದಿಸುವ ವಿದ್ಯೆಯನ್ನು; ಆಕೆ-ಉಪರಂಭೆ; ಕುಲಕ್ಷತಿಯಂ-ವಂಶದ ನಾಶವನ್ನು; ಪತಿಗಪ್ಪ ಹಾನಿಯಂ-ಗಂಡನಿಗೆ ಒದಗಬಹುದಾದ ಹಾನಿಯನ್ನು; ಬಗೆಯದೆ-ಅರಿತುಕೊಳ್ಳದೆ; ದುರ್ಮತಿ-ಕೆಟ್ಟ ಬುದ್ಧಿಯವಳು; ಕೊಟ್ಟಳ್-ಹೇಳಿಕೊಟ್ಟಳು; ಅದೆನ್ನರುಮಂ– ಅದು ಎಂತಹವರನ್ನೂ; ಮತಿಗಿಡಿಪುದು-ಬುದ್ಧಿಗೆಡಿಸುತ್ತದೆ; ಚೋದ್ಯಮಲ್ತು-ಸೋಜಿಗವಲ್ಲ; ಆಶ್ಚರ್ಯವಲ್ಲ; ಮದನೋನ್ಮಾದಂ-ಕಾಮದ ಹುಚ್ಚು.
ರಾವಣನ ಮಾತುಗಳ ಒಳ ಅರ್ಥವನ್ನು ಗ್ರಹಿಸದ ಉಪರಂಭೆ ಹಿಂದುಮುಂದಾಲೋಚಿಸದೆ ತನ್ನ ವಂಶದ ನಾಶವನ್ನೂ, ತನ್ನ ಗಂಡನಿಗೆ ಒದಗಬಹುದಾದ ಹಾನಿಯನ್ನೂ ಪರಿಶೀಲಿಸದೆ ಕಾಮದಿಂದ ಮನಸ್ಸು ಕೆಟ್ಟು ಕೋಟೆಯನ್ನು ಭೇದಿಸುವ ಪ್ರತಿವಿದ್ಯೆಯನ್ನು ರಾವಣನಿಗೆ ಹೇಳಿಕೊಟ್ಟಳು. ಅತಿಯಾದ ಕಾಮದ ಹುಚ್ಚು ಎಂತಹವರನ್ನೂ ಬುದ್ಧಿಗೆಡಿಸುತ್ತದೆ ಎನ್ನುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ಉಪರಂಭೆ ತನ್ನ ವಿವಾಹಪೂರ್ವದಿಂದಲೂ ರಾವಣನನ್ನು ಬಯಸಿ, ಆತನನ್ನೇ ಮದುವೆಯಾಗಬೇಕೆಂದು ಹಂಬಲಿಸಿದವಳು. ಆದರೆ ಅದು ಸಾಧ್ಯವಾಗದೆ ನಳಕೂಬರನನ್ನು ಮದುವೆಯಾಗಬೇಕಾಯಿತು. ಶಕ್ತಿ ಸಾಮರ್ಥ್ಯಗಳಲ್ಲಿ, ರೂಪದಲ್ಲಿ, ದೇಹದಾರ್ಢ್ಯತೆಯಲ್ಲಿ, ಯೌವನದಲ್ಲಿ ನಳಕೂಬರನು ರಾವಣನಿಗಿಂತಲೂ ಮಿಗಿಲಾಗಿದ್ದರೂ ಉಪರಂಭೆ ರಾವಣನನ್ನೇ ಮನಸ್ಸಿನಲ್ಲಿ ಇರಿಸಿಕೊಂಡಿದ್ದರಿಂದ ಆತನನ್ನು ಕೂಡಿ ಸುಖಿಸುವ ಬಯಕೆ ಇಂಗಿಹೋಗಿರಲಿಲ್ಲ. ಈಗ ಒಂದು ಅವಕಾಶ ದೊರೆತೊಡನೆಯೇ ಅದನ್ನು ಈಡೇರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದಳು. ರಾವಣ ಆಡಿದ ಯಾವ ಮಾತನ್ನೂ, ಅವುಗಳ ಅಂತರಾರ್ಥವನ್ನೂ ಒಂದಿಷ್ಟೂ ಪರಿಶೀಲಿಸದೆ ಆತನ ಮಾತುಗಳನ್ನು ನಂಬಿ ನಿಜ ಎಂದೇ ಸ್ಪಂದಿಸಿದಳು. ತನ್ನ ಗಂಡ ನಳಕೂಬರನು ತನ್ನ ಕೋಟೆಯ, ದುರ್ಲಂಘ್ಯಪುರದ ಹಾಗೂ ಅದರೊಳಗಿನ ಜನರ ರಕ್ಷಣೆಗೆ ಶ್ರಮಿಸಿದ ಬಗೆಯನ್ನಾಗಲೀ ತನ್ನ ಗಂಡನ ಹಿತರಕ್ಷಣೆಯನ್ನಾಗಲೀ ತನ್ನ ವಂಶದ ಘನತೆಯನ್ನಾಗಲೀ ವಿವೇಚಿಸಲೇ ಇಲ್ಲ. ಯಾವುದನ್ನೂ ಪರಿಭಾವಿಸದೆ ಕಾಮದಿಂದ ಮತಿಭ್ರಮಣೆಗೊಂಡು ಕೋಟೆಯನ್ನು ಭೇದಿಸುವ ಪ್ರತಿವಿದ್ಯೆಯನ್ನು ರಾವಣನಿಗೆ ಹೇಳಿಕೊಟ್ಟಳು. ಅತಿಯಾದ ಕಾಮುಕತೆಯ ಹುಚ್ಚು ಎಂತಹ ದೃಢಮನಸ್ಸಿನವರನ್ನೂ ನಿಷ್ಠರನ್ನೂ ಬುದ್ಧಿಗೆಡಿಸುತ್ತದೆ ಎಂಬುದಕ್ಕೆ ಉಪರಂಭೆ ಉದಾಹರಣೆಯಾದಳು.
ಗದ್ಯ: ಅಂತಾಕೆಯ ಕಯ್ಯೊಳಾ ವಿದ್ಯೆಯಂ ಕೊಂಡು ಕೞಿಪಿ ಮಱುದೆವಸಂ ಸಾಲವಿದ್ಯೆಯಂ ಪ್ರತಿವಿದ್ಯೆಯಿಂ ಕಿಡಿಸಿ ದುರ್ಲಂಘ್ಯಪುರಮಂ ರಾವಣಂ ಮುತ್ತುವುದುಂ
ಗದ್ಯದ ಅನ್ವಯಕ್ರಮ:
ಅಂತು ರಾವಣನ್ ಆಕೆಯ ಕಯ್ಯೊಳ್ ಆ ವಿದ್ಯೆಯಂ ಕೊಂಡು ಕೞಿಪಿ ಮಱುದೆವಸಂ ಸಾಲವಿದ್ಯೆಯಂ ಪ್ರತಿವಿದ್ಯೆಯಿಂ ಕಿಡಿಸಿ ದುರ್ಲಂಘ್ಯಪುರಮಂ ಮುತ್ತುವುದುಂ –
ಪದ-ಅರ್ಥ:
ಅಂತು –ಆ ರೀತಿಯಲ್ಲಿ; ಆಕೆಯ ಕಯ್ಯೊಳ್-ಉಪರಂಭೆಯಿಂದ; ಆ ವಿದ್ಯೆಯಂ ಕೊಂಡು– ಕೋಟೆಯನ್ನು ಭೇದಿಸುವ ಪ್ರತಿವಿದ್ಯೆಯನ್ನು ಪಡೆದು; ಕೞಿಪಿ-ಕಳುಹಿಸಿಕೊಟ್ಟು; ಮಱುದೆವಸಂ-ಮರುದಿನ; ಸಾಲವಿದ್ಯೆಯಂ-ಕೋಟೆಯನ್ನು ರಚಿಸಿದ ವಿದ್ಯೆಯನ್ನು; ಪ್ರತಿವಿದ್ಯೆಯಿಂ-ಕೋಟೆಯನ್ನು ಭೇದಿಸುವ ವಿದ್ಯೆಯಿಂದ; ಕಿಡಿಸಿ– ಕೆಡಿಸಿ, ಭೇದಿಸಿ; ಮುತ್ತುವುದುಂ-ಮುತ್ತಿಗೆ ಹಾಕಿದನು.
ಆ ರೀತಿಯಲ್ಲಿ ರಾವಣನು ಉಪರಂಭೆಯಿಂದ ಕೋಟೆಯನ್ನು ಭೇದಿಸುವ ವಿದ್ಯೆಯನ್ನು ಪಡೆದುಕೊಂಡು ಆಕೆಯನ್ನು ಮರಳಿ ಅರಮನೆಗೆ ಕಳುಹಿಸಿ, ಮರುದಿನ ಕೋಟೆಯನ್ನು ಭೇದಿಸುವ ವಿದ್ಯೆಯಿಂದ ಸಾಲವಿದ್ಯೆಯನ್ನು ಕೆಡಿಸಿ ದುರ್ಲಂಘ್ಯಪುರಕ್ಕೆ ಮುತ್ತಿಗೆ ಹಾಕಿದನು.
ರಾವಣ ಮೊದಲೇ ಉಪರಂಭೆಗೆ ತನ್ನ ಹಾಗೂ ಆಕೆಯ ಸಮಾಗಮ ಏನಿದ್ದರೂ ಅದು ದುರ್ಲಂಘ್ಯಪುರದ ಅರಮನೆಯೊಳಗೆ ನಡೆಯಬೇಕು ಎಂದು ಷರತ್ತನ್ನು ವಿಧಿಸಿದ್ದನು. ತಮ್ಮಿಬ್ಬರ ಸಮಾಗಮ ದುಲಂಘ್ಯಪುರದೊಳಗೆ ನಡೆಯಬೇಕು ಎಂದಾದರೆ ಕೋಟೆಯನ್ನು ಭೇದಿಸಬೇಕು, ಕೋಟೆಯನ್ನು ಭೇದಿಸಬೇಕಾದರೆ ತಾನು ಪ್ರತಿವಿದ್ಯೆಯನ್ನು ರಾವಣನಿಗೆ ಹೇಳಿಕೊಡಬೇಕು. ಅದರಿಂದ ತನ್ನ ಗಂಡನ ಹಾಗೂ ವಂಶದ ಘನತೆ ಗೌರವಗಳಿಗೆ ಧಕ್ಕೆಯುಂಟಾಗುತ್ತದೆ ಎಂಬುದನ್ನು ಆಕೆ ಪರಿಭಾವಿಸಲಿಲ್ಲ. ಹಿಂದು ಮುಂದಾಲೋಚಿಸದೆ ತನ್ನ ಗಂಡ ಪರಿಶ್ರಮದಿಂದ ಸಾಲವಿದ್ಯೆಯಿಂದ ರಚಿಸಿದ ವಜ್ರಸಾಲ ಕೋಟೆಯನ್ನು ಭೇದಿಸುವ ಪ್ರತಿವಿದ್ಯೆ ಹಾಗೂ ಅದರ ರಹಸ್ಯವನ್ನು ರಾವಣನಿಗೆ ಹೇಳಿಕೊಟ್ಟಳು. ಇದರಿಂದ ರಾವಣನ ಅರ್ಧ ಕೆಲಸ ಮುಗಿದಂತಾಯಿತು. ರಾವಣನಿಗೆ ಕೋಟೆಯನ್ನು ಭೇದಿಸಿ ನಳಕೂಬರನನ್ನು ಗೆಲ್ಲುವುದು ಮಾತ್ರ ಮುಖ್ಯವಾಗಿತ್ತೇ ವಿನಾ ಉಪರಂಭೆಯ ಆಸೆಯನ್ನು ಈಡೇರಿಸುವುದು ಮುಖ್ಯವಾಗಿರಲಿಲ್ಲ. ಪ್ರತಿವಿದ್ಯೆ ತನಗೆ ದೊರಕಿದ ತಕ್ಷಣ ರಾವಣ ಉಪರಂಭೆಯನ್ನು ಹಿಂದಕ್ಕೆ ಕಳುಹಿಸಿಕೊಟ್ಟು ಮರುದಿನ ಪ್ರತಿವಿದ್ಯೆಯಿಂದ ಕೋಟೆಯನ್ನು ಭೇದಿಸಿ ಕೋಟೆಗೆ ಮುತ್ತಿಗೆ ಹಾಕಿದನು.
ಸೆರಗಂ ಬೆರಗಂ ಬಗೆಯದೆ
ಪುರಮಂ ಪೊಱಮಟ್ಟು ಕಾದುವಾಗಳ್ ನಳಕೂ
ಬರನಂ ವಿಭೀಷಣಂ ಮದ
ಕರಿಯಂ ಮೃಗವೈರಿ ಪಿಡಿವ ತೆಱದಿಂ ಪಿಡಿದಂ ೯
ಪದ್ಯದ ಅನ್ವಯಕ್ರಮ:
ಸೆರಗಂ ಬೆರಗಂ ಬಗೆಯದೆ ಪುರಮಂ ಪೊಱಮಟ್ಟು ಕಾದುವಾಗಳ್ ವಿಭೀಷಣಂ ಮೃಗವೈರಿ ಮದಕರಿಯಂ ಪಿಡಿವ ತೆಱದಿಂ ನಳಕೂಬರನಂ ಪಿಡಿದಂ.
ಪದ-ಅರ್ಥ:
ಸೆರಗಂ ಬೆರಗಂ ಬಗೆಯದೆ-ಭಯಭೀತಿಗಳನ್ನು ಮನಸ್ಸಿಗೆ ತಂದುಕೊಳ್ಳದೆ; ಹಿಂದುಮುಂದಾಲೋಚಿಸದೆ; ಪುರಮಂ ಪೊಱಮಟ್ಟು-ಪಟ್ಟಣದಿಂದ ಹೊರಬಂದು; ಕಾದುವಾಗಳ್-ಹೋರಾಡುತ್ತಿರುವಾಗ, ಯುದ್ಧಮಾಡುತ್ತಿರುವಾಗ; ನಳಕೂಬರನಂ-ನಳಕೂಬರನನ್ನು; ವಿಭೀಷಣಂ-ವಿಭೀಷಣನು; ಮದಕರಿಯಂ-ಮದದಾನೆಯನ್ನು; ಮೃಗವೈರಿ-ಸಿಂಹ; ಪಿಡಿವ ತೆಱದಿಂ-ಕಬಳಿಸುವ ರೀತಿಯಲ್ಲಿ; ಪಿಡಿದಂ-ಸೆರೆಹಿಡಿದನು.
ರಾವಣ ನಳಕೂಬರನ ಸಾಲವಿದ್ಯೆಯನ್ನು ಪ್ರತಿವಿದ್ಯೆಯಿಂದ ಭೇದಿಸಿದ ವಿಚಾರ ನಳಕೂಬರನಿಗೆ ತಿಳಿದು ಅವನು ಸೇನಾಸಮೇತನಾಗಿ ದುರ್ಲಂಘ್ಯಪುರದಿಂದ ಹೊರಬಂದು ರಾವಣನೊಂದಿಗೆ ಹೋರಾಡುತ್ತಿರುವಾಗಲೇ ಸಿಂಹವು ಮದದಾನೆಯನ್ನು ಕಬಳಿಸುವ ರೀತಿಯಲ್ಲಿಯೇ ವಿಭೀಷಣನು ಹಿಂದಿನಿಂದ ಹೋಗಿ ನಳಕೂಬರನನ್ನು ಸೆರೆಹಿಡಿದನು.
ತಾನು ಸಾಲವಿದ್ಯೆಯನ್ನು ಬಳಸಿಕೊಂಡು ರಚಿಸಿದ ವಜ್ರಸಾಲ ಕೋಟೆಯನ್ನು ಪ್ರತಿವಿದ್ಯೆಯಿಂದ ರಾವಣ ಕೆಡಿಸಿ ಕುರ್ಲಂಘ್ಯಪುರಕ್ಕೆ ಮುತ್ತಿಗೆ ಹಾಕಿದ್ದಾನೆ ಎಂಬ ವಿಚಾರ ನಳಕೂಬರನಿಗೆ ತಿಳಿಯಿತು. ಆತ ಅಪಾಯವನ್ನರಿತುಕೊಂಡು ಸೈನ್ಯ ಸಮೇತನಾಗಿ ದುರ್ಲಂಘ್ಯಪುರದ ಕೋಟೆಯಿಂದ ಹೊರಬಂದು ರಾವಣನೊಂದಿಗೆ ಹೋರಾಡಬೇಕಾಯಿತು. ತಾನು ಸಾಲವಿದ್ಯೆಯನ್ನು ಬಳಸಿ ರಚಿಸಿದ ಕೋಟೆ ತನಗೆ ಮಾತ್ರವಲ್ಲ, ತನ್ನವರಿಗೂ ಅತ್ಯಂತ ಅಪಾಯಕಾರಿ ಎಂಬುದನ್ನು ನಳಕೂಬರ ಅರಿತುಕೊಂಡು ಭಯಭೀತಿಗಳನ್ನು ಮನಸ್ಸಿಗೆ ತಂದುಕೊಳ್ಳದೆ ರಾವಣನೊಂದಿಗೆ ಹೋರಾಡತೊಡಗಿದನು. ನಳಕೂಬರನನ್ನು ಎದುರಿಸಿ ಗೆಲ್ಲುವುದು ಸುಲಭವಲ್ಲ ಎಂಬುದು ರಾವಣನಿಗೂ ವಿಭೀಷಣನಿಗೂ ತಿಳಿದಿದೆ. ಹಾಗಾಗಿ ವಿಭೀಷಣ ಉಪಾಯದಿಂದ ಸಿಂಹವೊಂದು ಮದದಾನೆಯನ್ನು ಹಿಂದಿನಿಂದ ಹಾರಿ ಕಬಳಿಸುವಂತೆ ನಳಕೂಬರನನ್ನು ಸೆರೆಹಿಡಿದನು.
ಗದ್ಯ: ಆ ಸಮಯದೊಳ್
ಆ ಹೊತ್ತಿನಲ್ಲಿ
ದನುಜಾಧೀಶ್ವರನ ಪುರಾ
ತನ ಪುಣ್ಯದ ಫಲದಿನಾಯುಧಾಗಾರದೊಳೇಂ
ಜನಿಯಿಸಿದುದೊ ವಿದ್ವಿಷ್ಟಾ
ವನಿಪಾಲ ಪ್ರಳಯಕಾಲ ಚಕ್ರಂ ಚಕಂ ೧೦
ಪದ್ಯದ ಅನ್ವಯಕ್ರಮ:
ಪುರಾತನ ಪುಣ್ಯದ ಫಲದಿನ್ ದನುಜ ಅಧೀಶ್ವರನ ಆಯುಧಾಗಾರದೊಳ್ ಏಂ ಚಕ್ರಂ ಜನಿಯಿಸಿದುದೊ ವಿದ್ವಿಷ್ಟ ಅವನಿಪಾಲ ಪ್ರಳಯಕಾಲ ಚಕ್ರಂ.
ಪದ-ಅರ್ಥ:
ದನುಜಾಧೀಶ್ವರನ-ರಾವಣನ; ಪುರಾತನ-ಹಿಂದಿನ ಜನ್ಮದ; ಆಯುಧಾಗಾರದೊಳ್-ಶಸ್ತ್ರಾಗಾರದಲ್ಲಿ; ಏಂ-ಎಂತಹ; ಜನಿಯಿಸಿದುದೊ-ಹುಟ್ಟಿಕೊಂಡಿತೊ; ವಿದ್ವಿಷ್ಟ-ವಿಶೇಷವಾದ; ಅವನಿಪಾಲ-ರಾಜ; ಪ್ರಳಯಕಾಲ ಚಕ್ರಂ-ಕಾರ್ಯಕ್ಷಯವನ್ನುಂಟುಮಾಡುವ ಚಕ್ರ; ಚಕ್ರಂ-ಸುದರ್ಶನ ಚಕ್ರ.
ನಳಕೂಬರನನ್ನು ಸೆರೆಹಿಡಿದ ಸಂದರ್ಭದಲ್ಲಿಯೇ ರಾವಣ ಪೂರ್ವಜನ್ಮದ ಪುಣ್ಯದ ಫಲವೋ ಎಂಬಂತೆ ಆತನ ಆಯುಧಾಗಾರದಲ್ಲಿ ಸಕಲ ರಾಜರ ಕಾರ್ಯಕ್ಷಯವನ್ನುಂಟುಮಾಡುವ ಚಕ್ರದಂತೆ ಸುದರ್ಶನ ಚಕ್ರವೊಂದು ಹುಟ್ಟಿಕೊಂಡಿತು.
ಅಲ್ಪಕಾಲದ ಯುದ್ಧದಲ್ಲಿಯೇ ವಿಭೀಷಣ ನಳಕೂಬರನನ್ನು ಸೆರೆಹಿಡಿದನು. ಅದೇ ಹೊತ್ತಿನಲ್ಲಿ ರಾವಣನ ಆಯುಧಾಗಾರದಲ್ಲಿ ವಿಶೇಷ ಶಕ್ತಿ ಸಾಮರ್ಥ್ಯವುಳ್ಳ, ವೈರಿರಾಜರ ಕಾರ್ಯಕ್ಷಯವನ್ನು ಉಂಟುಮಾಡುವ ಶಕ್ತಿ ಸಾಮರ್ಥ್ಯಗಳುಳ್ಳ ಚಕ್ರವೊಂದು ಹುಟ್ಟಿಕೊಂಡಿತು. ಇದು ಅಸಾಮಾನ್ಯವಾದ ಚಕ್ರರತ್ನ. ಅದು ಎಲ್ಲ ರಾಜರ ಆಯುಧಾಗಾರದಲ್ಲಿ ಹುಟ್ಟಿಕೊಳ್ಳಲಾರದು. ಅದಕ್ಕೆ ಪೂರ್ವಜನ್ಮದ ಪುಣ್ಯದ ಫಲವೂ ಬೇಕು. ರಾವಣ ಪೂರ್ವಜನ್ಮದಲ್ಲಿ ಸಾಕಷ್ಟು ಪುಣ್ಯಮಾಡಿದವನು. ಹಾಗಾಗಿ ಸುದರ್ಶನ ಚಕ್ರವು ಆತನ ಪ್ರತಿಷ್ಠೆಯೋ ಎಂಬಂತೆ ಹುಟ್ಟಿಕೊಂಡಿತು. ಇದರಿಂದಾಗಿ ರಾವಣನ ಶಕ್ತಿ ಸಾಮರ್ಥ್ಯಗಳು ಇನ್ನಷ್ಟು ಪ್ರಖರಗೊಂಡವು.
ಗದ್ಯ: ಅಂತು ಸುದರ್ಶನಚಕ್ರಂ ಪುಟ್ಟುವುದುಂ ರಾವಣಂ ಮಹೋತ್ಸವದಿಂ ಚಕ್ರಪೂಜೆಯಂ ಮಾಡಿ ರಹಸ್ಯದಿಂದಾಕೆಯಂ ಕರೆದು ನೀನ್ ವಿಶುದ್ಧ ಕುಲದ ಕುಶಧ್ವಜಂಗಂ ಮಧುಕಾಂತೆಗಂ ಪುಟ್ಟಿದುದಱಿಂ ನಿಜ ಕುಲಾಚಾರಮಂ ಬಗೆದು ಶೀಲ ಪರಿಪಾಲನಂ ಮಾೞ್ಪುದಂತಲ್ಲದೆಯುಂ ನೀನೆನಗೆ ವಿದ್ಯೋಪದೇಶಂಗೆಯ್ದುದಱಿಂ ಗುರುವಾದೆ ಪೆಱತೇನುಮಂ ಬಗೆಯದೆ ನಳಕೂಬರನೊಳ್ ಕೂಡಿ ಸುಖಮಿರೆಂದಾಕೆಯ ದುಷ್ಪರಿಣಾಮವಂ ಪತ್ತುವಿಡಿಸಿ –
ಗದ್ಯದ ಅನ್ವಯಕ್ರಮ:
ಅಂತು ಸುದರ್ಶನಚಕ್ರಂ ಪುಟ್ಟುವುದುಂ ರಾವಣಂ ಮಹಾ ಉತ್ಸವದಿಂದ ಚಕ್ರಪೂಜೆಯಂ ಮಾಡಿ ರಹಸ್ಯದಿಂದ ಆಕೆಯಂ ಕರೆದು, ನೀನ್ ವಿಶುದ್ಧ ಕುಲದ ಕುಶಧ್ವಜಂಗಂ ಮಧುಕಾಂತೆಗಂ ಪುಟ್ಟಿದುದಱಿಂ ನಿಜ ಕುಲ ಆಚಾರಮಂ ಬಗೆದು ಶೀಲ ಪರಿಪಾಲನಂ ಮಾೞ್ಪುದು. ಅಂತು ಅಲ್ಲದೆಯುಂ ನೀನ್ ವಿದ್ಯಾ ಉಪದೇಶಂ ಗೆಯ್ದುದಱಿಂ ಎನಗೆ ಗುರುವಾದೆ ಪೆಱತು ಏನುಮಂ ಬಗೆಯದೆ ನಳಕೂಬರನೊಳ್ ಕೂಡಿ ಸುಖಂ ಇರು ಎಂದು ಆಕೆಯ ದುಷ್ಪರಿಣಾಮವಂ ಪತ್ತುವಿಡಿಸಿ –
ಪದ-ಅರ್ಥ:
ಅಂತು-ಹಾಗೆ; ಸುದರ್ಶನಚಕ್ರಂ ಪುಟ್ಟುವುದುಂ -ಸುದರ್ಶನಚಕ್ರವು ಹುಟ್ಟಿಕೊಂಡಾಗ; ಮಹೋತ್ಸವದಿಂ– ಅತ್ಯಂತ ವಿಶೇಷವಾಗಿ; ಚಕ್ರಪೂಜೆಯಂ ಮಾಡಿ-ಸುದರ್ಶನ ಚಕ್ರಕ್ಕೆ ಪೂಜೆಯನ್ನು ಸಲ್ಲಿಸಿ; ರಹಸ್ಯದಿಂದ-ಗುಟ್ಟಾಗಿ; ಆಕೆಯಂ ಕರೆದು-ಉಪರಂಭೆಯನ್ನು ಕರೆಸಿಕೊಂಡು; ವಿಶುದ್ಧಕುಲದ-ಪವಿತ್ರವಾದ ವಂಶದ; ಕುಶಧ್ವಜಂಗಂ ಮಧುಕಾಂತೆಗಂ-ಕುಶಧ್ವಜನಿಗೂ ಮಧುಕಾಂತೆಗೂ; ಪುಟ್ಟಿದುದಱಿಂ-ಹುಟ್ಟಿರುವುದರಿಂದ; ನಿಜಕುಲಾಚಾರಮಂ ಬಗೆದು-ನಿನ್ನ ಕುಲದ ಆಚಾರವನ್ನು ಅರಿತುಕೊಂಡು; ಶೀಲಪರಿಪಾಲನಂ ಮಾೞ್ಪುದು-ಚಾರಿತ್ರ್ಯವನ್ನು ಪರಿಪಾಲಿಸಿಕೊಳ್ಳಬೇಕು; ಅಂತಲ್ಲದೆಯುಂ-ಅದು ಮಾತ್ರವಲ್ಲದೆ, ವಿದ್ಯೋಪದೇಶಂ-ವಿದ್ಯೆಯ ಬೋಧನೆಯನ್ನು; ಗೆಯ್ದುದಱಿಂ-ಮಾಡಿರುವುದರಿಂದ; ಗುರುವಾದೆ-ಗುರು ಎಂದೆನಿಸಿರುವೆ; ಪೆಱತೇನುಮಂ-ಬೇರೇನನ್ನೂ; ಬಗೆಯದೆ-ಪರಿಭಾವಿಸದೆ; ನಳಕೂಬರನೊಳ್ ಕೂಡಿ-ನಳಕೂಬರನೊಂದಿಗೆ ಸಂಸಾರನಡೆಸಿ; ಸುಖಮಿರು-ಸುಖವಾಗಿರು; ದುಷ್ಪರಿಣಾಮವಂ-ಕೆಟ್ಟ ಪರಿಣಾಮವನ್ನು; ಪತ್ತುವಿಡಿಸಿ-ನಿವಾರಿಸಿ.
ರಾವಣನ ಆಯುಧಾಗಾರದಲ್ಲಿ ಸುದರ್ಶನಚಕ್ರವು ಹುಟ್ಟಿಕೊಂಡಾಗ ರಾವಣನು ಅತ್ಯಂತ ವಿಶೇಷವಾಗಿ ಸುದರ್ಶನಚಕ್ರಕ್ಕೆ ಪೂಜೆಯನ್ನು ಸಲ್ಲಿಸಿದನು. ಅನಂತರ ಅತ್ಯಂತ ರಹಸ್ಯವಾಗಿ ಉಪರಂಭೆಯನ್ನು ಕರೆಸಿಕೊಂಡು ನೀನು ಪರಿತ್ರವಾದ ಕುಲವನ್ನು ಹೊಂದಿರುವ ಕುಶಧ್ವಜನಿಗೂ ಮಧುಕಾಂತೆಯು ಮಗಳಾಗಿ ಹುಟ್ಟಿರುವುದರಿಂದ ನಿನ್ನ ಕುಲದ ಘನತೆ, ಗೌರವಗಳನ್ನು ಅರಿತುಕೊಂಡು ನಿನ್ನ ಚಾರಿತ್ರ್ಯವನ್ನು ಪರಿಪಾಲಿಸುತ್ತ ಅವುಗಳನ್ನು ನೀನು ಕಾಪಾಡಿಕೊಂಡು ಬರಬೇಕು. ಮಾತ್ರವಲ್ಲ, ನೀನು ನನಗೆ ವಜ್ರಸಾಲ ಕೋಟೆಯನ್ನು ಭೇದಿಸುವ ವಿದ್ಯೆಯನ್ನು ಹೇಳಿಕೊಟ್ಟುದರಿಂದ ನನಗೆ ಗುರುವಾದೆ. ಗುರುವನ್ನು ಶಿಷ್ಯ ಬಯಸುವುದು ಧರ್ಮವಲ್ಲ. ಆದುದರಿಂದ ಬೇರೇನನ್ನೂ ಪರಿಭಾವಿಸದೆ ನಿನ್ನ ಗಂಡನಾಗಿರುವ ನಳಕೂಬರನೊಂದಿಗೆ ಸಂಸಾರನಡೆಸಿಕೊಂಡು ಸುಖವಾಗಿರು ಎಂದು ಆಕೆಯ ಎಲ್ಲಾ ದುಷ್ಪರಿಣಾಮಗಳನ್ನು ನಿವಾರಿಸಿದನು.
ರಾವಣ ತನ್ನ ಆಯುಧಾಗಾರದಲ್ಲಿ ಚಕ್ರರತ್ನ ಹುಟ್ಟಿಕೊಂಡಾಗ ಮೊದಲಿಗೆ ಅದನ್ನು ಯುಕ್ತವಾದ ರೀತಿಯಿಂದ ಪೂಜಿಸಿ, ಅನಂತರ ಉಪರಂಭೆಯನ್ನು ಕರೆಸಿಕೊಂಡನು. ತಾನು ಉಪರಂಭೆಗೆ ಕೊಟ್ಟ ಮಾತಿನ ಪ್ರಕಾರ ದುರ್ಲಂಘ್ಯಪುರದೊಳಗೆ ತಮ್ಮ ಸಮಾಗಮವಾಗಬೇಕು. ಆದರೆ ರಾವಣ ಎಂದೂ ಉಪರಂಭೆಯನ್ನು ಬಯಸಿರಲಿಲ್ಲ, ಕಾಮಿಸಲೂ ಇಲ್ಲ. ಅಲ್ಲದೆ ಆತ ಪರಾಂಗನಾವಿರತಿ ವ್ರತವನ್ನು ಕೈಗೊಂಡಿರುವುದರಿಂದ ಆತನಿಗೆ ಪರಸ್ತ್ರೀಯರ ಮೇಲೆ ಯಾವ ಮೋಹವೂ ಇಲ್ಲ. ಈಗ ತಾನು ಉಪರಂಭೆಗೆ ಕೊಟ್ಟ ಮಾತನ್ನು ನಡೆಸಿಕೊಡುವಂತಿಲ್ಲ. ಹಾಗಾಗಿ ಆಕೆಯ ಮನಸ್ಸನ್ನು ಪರಿವರ್ತಿಸುವುದಕ್ಕೆ ಪ್ರಯತ್ನಿಸುತ್ತಾನೆ. ಉಪರಂಭೆ ಅಸಾಮಾನ್ಯಕುಲದಲ್ಲಿ ಹುಟ್ಟಿದವಳು. ಅದರಲ್ಲೂ ಕುಶಧ್ವಜ ಹಾಗೂ ಮಧುಕಾಂತೆ ಎಂಬ ದಂಪತಿಗಳಿಗೆ ಮಗಳಾಗಿ ಹುಟ್ಟಿದವಳು. ಹೀಗಿರುವಾಗ ಅವಳು ತನ್ನ ವಂಶದ ಹಾಗೂ ಹೆತ್ತವರ ಘನತೆ, ತನ್ನ ಹಾಗೂ ತನ್ನ ಗಂಡನ ಘನತೆ ಗೌರವಗಳನ್ನು ಕಾಪಾಡುವುದರ ಜೊತೆಗೆ ತನ್ನ ಚಾರಿತ್ರ್ಯವನ್ನು ಕಾಪಾಡಿಕೊಂಡು ಬರಬೇಕಾದುದು ಆಕೆಯ ಆದ್ಯಕರ್ತವ್ಯ. ರಾವಣ ಅದನ್ನೇ ತಿಳಿಸಿಹೇಳಿದನು. ಅಲ್ಲದೆ ಅತ್ಯಂತ ಪರಾಕ್ರಮಶಾಲಿಯಾದ ನಳಕೂಬರನೊಂದಿಗೆ ಸಂಸಾರನಡೆಸುತ್ತ ಸುಖವಾಗಿರು ಎಂದು ಬುದ್ಧಿಹೇಳಿ ಆಕೆ ತನಗೆ ಒಲಿದು ಬಂದುದರಿಂದ ಹಾಗೂ ಗಂಡನ ಯೋಗಕ್ಷೇಮವನ್ನು ಅರಿತುಕೊಳ್ಳದೆ ಒಂದು ಮಟ್ಟದ ಅನೈತಿಕತೆಯಿಂದ ನಡೆದುಕೊಂಡುದರಿಂದ ಉಂಟಾದ ಅಪವಾದಗಳನ್ನು, ಅವುಗಳ ದುಷ್ಪರಿಣಾಮಗಳನ್ನು ನಿವಾರಿಸಿದನು.
ನಳಕೂಬರನಮಾಕ್ಷಣ
ದೊಳೆ ಬರಿಸಿ ನಿಜಾಗ್ರತನಯನಿಂದಗಿಯಿಂದ
ಗ್ಗಳಮೆನೆ ಮನ್ನಿಸಿ ಭಯಮಂ
ಕಳೆದಿತ್ತಂ ಭೃತ್ಯಪದವಿಯಂ ದಶವದನಂ ೧೧
ಪದ್ಯದ ಅನ್ವಯಕ್ರಮ:
ದಶವದನಂ, ನಳಕೂಬರನಂ ಆ ಕ್ಷಣದೊಳೆ ಬರಿಸಿ ನಿಜ ಅಗ್ರತನಯನ್ ಇಂದಗಿಯಿಂದ ಅಗ್ಗಳಂ ಎನೆ ಮನ್ನಿಸಿ ಭಯಮಂ ಕಳೆದು ಭೃತ್ಯ ಪದವಿಯಂ ಇತ್ತಂ.
ಪದ-ಅರ್ಥ:
ಆಕ್ಷಣದೊಳೆ– ಆ ಹೊತ್ತಿನಲ್ಲಿ; ಬರಿಸಿ-ಕರೆಸಿಕೊಂಡು; ನಿಜಾಗ್ರತನಯನ್-ತನ್ನ ಹಿರಿಯ ಮಗನಾದ; ಇಂದಿಗಿಯಿಂದ-ಇಂದ್ರಜಿತುವಿನ ಮೂಲಕ; ಅಗ್ಗಳಮೆನೆ-ವಿಶೇಷವೆನ್ನುವಂತೆ; ಮನ್ನಿಸಿ – ಗೌರವಿಸಿ; ಭಯಮಂ ಕಳೆದು –ಭಯವನ್ನು ಹೋಗಲಾಡಿಸಿ; ಇತ್ತಂ-ನೀಡಿದನು; ಭೃತ್ಯಪದವಿಯಂ-ಸಾಮಂತ ಪಟ್ಟವನ್ನು; ದಶವದನಂ-ರಾವಣನು.
ಆ ಹೊತ್ತಿನಲ್ಲಿ ರಾವಣನು ನಳಕೂಬರನನ್ನು ಅಲ್ಲಿಗೆ ಕರೆಸಿಕೊಂಡು ತನ್ನ ಹಿರಿಯ ಮಗನಾದ ಇಂದ್ರಜಿತುವಿನ ಮೂಲಕ ಆತನಿಗೆ ಸಾಮಂತ ಪಟ್ಟವನ್ನು ನೀಡಿ ಆತನನ್ನು ವಿಶೇಷವಾಗಿ ಗೌರವಿಸಿದನು.
ರಾವಣ ಚಕ್ರರತ್ನಕ್ಕೆ ವಿಶೇಷವಾಗಿ ಪೂಜೆಯನ್ನು ಸಲ್ಲಿಸಿ, ಉಪರಂಭೆ ಬುದ್ಧಿವಾದವನ್ನು, ಹಿತೋಪದೇಶವನ್ನು ಹೇಳಿದ ಮೇಲೆ ತನ್ನ ಸೆರೆಯಲ್ಲಿದ್ದ ನಳಕೂಬರನನ್ನು ಗೌರವದಿಂದ ಅಲ್ಲಿಗೆ ಕರೆಸಿಕೊಂಡು ಉಪರಂಭೆಯನ್ನು ಆತನಿಗೆ ಇಪ್ಪಿಸಿದನು. ವಾಸ್ತವವಾಗಿ ಸೆರೆಹಿಡಿದ ನಳಕೂಬರನನ್ನು ಸೆರೆಮನೆಗೆ ತಳ್ಳುವ ಆಕಾಂಕ್ಷೆ ರಾವಣನಿಗಿಲ್ಲ. ನಳಕೂಬರನ ರಾಜ್ಯವನ್ನು ಗೆದ್ದುಕೊಳ್ಳಬೇಕೆಂಬುದಷ್ಟೆ ರಾವಣನ ಇಚ್ಛೆಯಾಗಿತ್ತು. ಈಗ ಅದು ಕೈಗೂಡಿತು. ಹಾಗಾಗಿ ನಳಕೂಬರನನ್ನು ಬಿಡುಗಡೆಗೊಳಿಸಿ ತನ್ನ ಹಿರಿಯ ಮಗನಾದ ಇಂದ್ರಜಿತುವಿನ ಮೂಲಕ ಗೌರವಿಸಿದನು. ಮಾತ್ರವಲ್ಲ, ತಾನು ಗೆದ್ದ ರಾಜ್ಯವನ್ನು ಮರಳಿ ಆತನಿಗೆ ಒಪ್ಪಿಸಿ ಸಾಮಂತ ಪದವಿಯನ್ನು ನೀಡಿ ತನ್ನ ವಿಶಾಲ ಹಾಗೂ ಸಚ್ಚಾರಿತ್ರ್ಯದ ಮೇಲ್ಮೆಯನ್ನು ತೋರಿಸಿದನು.
ಡಾ. ವಸಂತ್ ಕುಮಾರ್, ಉಡುಪಿ.
*****