ಸಾಹಿತ್ಯಾನುಸಂಧಾನ

heading1

ಪ್ರಾರ್ಥನೆ- ಬಿ.ಎಂ.ಶ್ರೀ

(ಮಂಗಳೂರು ವಿಶ್ವವಿದ್ಯಾನಿಲಯದ ಬಿ.ಬಿ.ಎ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ)

           ಆಂಗ್ಲಕವಿ ಜಾನ್ ಹೆನ್ರಿ ನ್ಯೂಮನ್ (೧೮೦೧-೧೮೯೦)ನ “ಲೀಡ್ ಕೈಂಡ್ಲಿ ಲೈಟ್” ಎಂಬ ಇಂಗ್ಲಿಷ್ ಕವಿತೆಯನ್ನು ’ಕನ್ನಡದ ಕಣ್ವ” ಎಂದು ಪ್ರಸಿದ್ಧರಾಗಿರುವ ಬಿ.ಎಂ.ಶ್ರೀ (ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ)ಯವರು “ಪ್ರಾರ್ಥನೆ” ಎಂಬ ಹೆಸರಿನಲ್ಲಿ  ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಇದು ೧೯೧೮ರಲ್ಲಿ ಪ್ರಕಟವಾದ ಅವರ ’ಇಂಗ್ಲಿಷ್ ಗೀತೆಗಳು’ ಎಂಬ ಅನುವಾದಿತ ಸಂಕಲನದಲ್ಲಿ ಮೊದಲ ಬಾರಿಗೆ ಪ್ರಕಟವಾಯಿತು. ನೂರು ವರ್ಷಗಳ ಅನಂತರ ಅದು ತನ್ನ ಭಾಷೆ, ಲಯ, ವಸ್ತುಗಳಿಂದಾಗಿ  ಇಂದಿಗೂ ನಿತ್ಯನೂತನವಾಗಿಯೇ ಮನಸೆಳೆಯುತ್ತಿದೆ. ಮಾತ್ರವಲ್ಲದೆ, ಹೊಸತಲೆಮಾರಿನ ಕವಿಗಳಿಗೆ ನಿರಂತರ ಸ್ಫೂರ್ತಿಯನ್ನು ನೀಡುತ್ತಲೇ ಇದೆ.

            ಮನುಷ್ಯ ತನ್ನ ಯೌವನದಲ್ಲಿ ಪ್ರಾಯಸಹಜವಾದ ದುರಹಂಕಾರದಿಂದ ಮೇಲಿಂದ ಮೇಲೆ ಅಪರಾಧಗಳನ್ನು ಮಾಡುತ್ತ, ಕೊನೆಗೆ ಎಲ್ಲವನ್ನೂ ಕಳೆದುಕೊಂಡು ಅಸಹಾಯನಾಗಿ, ತನ್ನ ಕಷ್ಟಕಾಲದಲ್ಲಿ ತನ್ನ ಸ್ವಯಂಕೃತಾಪರಾಧಗಳನ್ನು ಹೇಳಿಕೊಳ್ಳುತ್ತ, ತನ್ನ ವರ್ತನೆಗಳಿಗೆ ಪಶ್ಚಾತ್ತಾಪ ಪಡುತ್ತ, ಭಗವಂತನಲ್ಲಿ ದಾರಿನಡೆಸೆಂದು ಬೇಡಿಕೊಳ್ಳುವ ಶರಣಾಗತಿ ಭಾವವನ್ನು ಈ ಕವಿತೆಯಲ್ಲಿ ಕಾಣಬಹುದು. ಕವಿ ಇಲ್ಲಿ ಭಗವಂತನ ಹೆಸರನ್ನು ಉಲ್ಲೇಖಿಸದೆ, ಬೆಳಕನ್ನು ಆತನ ಪ್ರತೀಕವೆಂದು ಪರಿಭಾವಿಸಿರುವುದು ಕಂಡುಬರುತ್ತದೆ. ಈ ಕವಿತೆಯಲ್ಲಿ ಉಲ್ಲೇಖಗೊಂಡಿರುವ ’ಕರುಣಾಳು ಬೆಳಕು’ ಎಂಬುದು ಒಂದೆಡೆ ಹೆತ್ತವರಿಗೆ, ಇನ್ನೊಂದೆಡೆ  ಗುರುಗಳಿಗೆ, ಮತ್ತೊಂದೆಡೆ ಭಗವಂತನಿಗೆ ಅನ್ವಯಿಸಿ ಅರ್ಥೈಸುವುದಕ್ಕೂ ಅವಕಾಶಗಳನ್ನು ಕಲ್ಪಿಸುತ್ತದೆ.

            ಇಲ್ಲಿ ಕರುಣಾಳು ಬೆಳಕನ್ನು ಭಗವಂತನಿಗೆ ಅನ್ವಯಿಸಿ ಈ ಭಾವಗೀತೆಯನ್ನು ವ್ಯಾಖ್ಯಾನಿಸಲಾಗಿದೆ.

 

ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ

ಕೈಹಿಡಿದು ನಡೆಸೆನ್ನನು

ಇರುಳು ಕತ್ತಲೆಯ ಗವಿ; ಮನೆ ದೂರ; ಕನಿಕರಿಸಿ,

ಕೈಹಿಡಿದು ನಡೆಸೆನ್ನನು

ಹೇಳಿ ನನ್ನಡಿಯಿಡಿಸು; ಬಲುದೂರ ನೋಟವನು

ಕೇಳೆನೊಡನೆಯೆ ಸಾಕು ನನಗೊಂದು ಹೆಜ್ಜೆ.

(ಮುಸುಕಿದ-ಆವರಿಸಿದ;  ಮಬ್ಬು-ನಸುಗತ್ತಲೆ,;  ನಡೆಸು-ಸಲಹು, ಕಾಪಾಡು;  ಇರುಳು-ರಾತ್ರಿ, ಕಷ್ಟಕಾರ್ಪಣ್ಯಗಳು;  ಕನಿಕರಿಸಿ-ಕನಿಕರವನ್ನು ತೋರಿ, ದಯೆ ತೋರಿ; ನನ್ನಡಿಯಿಡಿಸು-ಪಾದಗಳ ಮೇಲೆ ನಡೆಯುವಂತೆ ಮಾಡು, ಶಕ್ತಿಶಾಲಿಯನ್ನಾಗಿ ಮಾಡು; ಬಲುದೂರ ನೋಟ-ದೂರದೃಷ್ಟಿ, ಭವಿಷ್ಯದ ದರ್ಶನ)

            ನನ್ನ ತಿಳಿಗೇಡಿತನದಿಂದಾಗಿ  ಬದುಕಿನಲ್ಲಿ ಅಂಧಕಾರ ಆವರಿಸಿಕೊಂಡಿದೆ. ಹೆಜ್ಜೆ ಇಡುವುದಕ್ಕೆ ದಾರಿ ಕಾಣುತ್ತಿಲ್ಲ. ಕೈಕಾಲುಗಳು ನಡುಗುತ್ತಿವೆ, ಮೈಯೆಲ್ಲ ಬೆವರುತ್ತಿದೆ. ಮನಸ್ಸು ಗಲಿಬಿಲಿಗೊಂಡು ಮುಂದೇನು ಎಂಬುದೇ ತೋಚದಾಗಿದೆ. ಬದುಕಿನಲ್ಲಿ ಎಲ್ಲ ಭರವಸೆಗಳನ್ನು ಕಳೆದುಕೊಂಡಿದ್ದೇನೆ.  ಭಗವಂತ, ನೀನು ಕರುಣಾಳು. ಪತಿತೋದ್ಧಾರಕ. ನನ್ನ ಬದುಕಿಗೆ ಆವರಿಸಿಕೊಂಡಿರುವ  ಈ ಮಬ್ಬುಗತ್ತಲೆಯಲ್ಲಿ ನನ್ನ ಕೈಹಿಡಿದು ನೀನೇ ದಾರಿನಡೆಸಬೇಕಾಗಿದೆ. ಭಯಹುಟ್ಟಿಸುವಂತಿರುವ ಈ ಇರುಳೆಲ್ಲ ಕತ್ತಲೆಯ ಗವಿಯಾಗಿ ಮಾರ್ಪಟ್ಟಿದೆ. ದೈಹಿಕ ಅಶಕ್ತತೆಯ ಜೊತೆಗೆ ಕತ್ತಲೆಯ ಭೀಕರತೆ ಮೈನಡುಗಿಸುತ್ತಿದೆ. ನಾನೀಗ ಅಸಹಾಯಕನಾಗಿರುವುದರಿಂದ ನೀನು ಈಗ ನನ್ನ ಕೈಹಿಡಿದು ನನ್ನನ್ನು ದಾರಿನಡೆಸಬೇಕು. ಕತ್ತಲೆಯಲ್ಲಿ ದಾರಿಕಾಣದಾಗಿರುವುದರಿಂದ ಹೆಜ್ಜೆಹೆಜ್ಜೆಗೂ ವಾಸ್ತವವನ್ನು ತಿಳಿಸುತ್ತ ಹೆಜ್ಜೆ ಇಡುವುದಕ್ಕೆ ಸಹಕರಿಸಬೇಕು.

            ನನ್ನ ಕಾಲುಗಳು ಹೆಜ್ಜೆಯಿಡಲಾರದ, ಕಣ್ಣುಗಳು ಏನನ್ನೂ ನೋಡಲಾರದ, ಮನಸ್ಸು ಏನನ್ನೂ ಅರಿಯಲಾರದ ಸ್ಥಿತಿಯಲ್ಲಿದ್ದೇನೆ. ಕಾಲಿಗೆ ಹೆಜ್ಜೆಯಿಡುವ  ಶಕ್ತಿಯನ್ನು ಕರುಣಿಸು, ಕಣ್ಣುಗಳಿಗೆ ಗ್ರಹಿಕೆಯ ಶಕ್ತಿಯನ್ನು ಕರುಣಿಸು, ಮನಸ್ಸಿಗೆ ಅರಿವಿನ ಶಕ್ತಿಯನ್ನು ಕರುಣಿಸು. ಇವೆಲ್ಲವುಗಳ ಮೂಲಕ ಬದುಕಿಗೊಂದು  ದೂರದೃಷ್ಟಿಯ ಶಕ್ತಿಯನ್ನು ಕರುಣಿಸು. ಶರಣಾದವರಿಗೆ ನೀನು ಕರುಣಾಳು ಬೆಳಕು. ಬೆಳಕು ಕತ್ತಲೆಯನ್ನು ಹೊಡೆದೋಡಿಸುವಂತೆ, ನೀನಿರಿಸುವ ಒಂದು ಹೆಜ್ಜೆ ಬಾಳಿನ ಅಂಧಕಾರವನ್ನು ಕರಗಿಸಬಲ್ಲುದು. ನೀನಿರುಸುವ ಒಂದು ಹೆಜ್ಜೆಯ ಪ್ರೇರಣೆಯಿಂದ ನಾನು ಹತ್ತು ಹೆಜ್ಜೆಗಳನ್ನು ಇಡಬಲ್ಲೆ. ಅದರಿಂದ ನನ್ನ ಬದುಕಿನಲ್ಲಿ ಆವರಿಸಿಕೊಂಡು ಭಯಹುಟ್ಟಿಸುವ ಕತ್ತಲೆಯು ಮಾಯವಾಗಿ, ನಾನು ಕಳಕೊಂಡಿರುವುದೆಲ್ಲವನ್ನು ಮರಳಿ ಪಡೆಯಬಲ್ಲೆ. ನೀನು ಕರುಣೆಯಿಂದ ಇರಿಸುವ ಒಂದೊಂದು ಹೆಜ್ಜೆಯನ್ನು ಹೊರತುಪಡಿಸಿ ನಿನ್ನಲ್ಲಿ ನಾನು ಹೆಚ್ಚಿನದೇನನ್ನೂ ನಾನು ಬೇಡುವುದಿಲ್ಲ.

 

ಮುನ್ನೆ ಇಂತಿರದಾದೆ; ನಿನ್ನ ಬೇಡದೆ ಹೋದೆ

ಕೈಹಿಡಿದು ನಡೆಸು ಎನುತ

ನನ್ನ ದಾರಿಯ ನಾನೆ ನೋಡಿ ಹಿಡಿದೆನು;- ಇನ್ನು

ಕೈಹಿಡಿದು ನಡೆಸು ನೀನು.

ಮಿರುಗುಬಣ್ಣಕೆ ಬೆರೆತು, ಭಯ ಮರೆತು, ಕೊಬ್ಬಿದೆನು;

ಮರೆದಾಯ್ತು; ನೆನೆಯದಿರು ಹಿಂದಿನದೆನೆಲ್ಲ

(ಮುನ್ನೆ-ಈ ಹಿಂದೆ, ಮೊದಲು;  ಇಂತಿರದಾದೆ-ಹೀಗಿರಲಾಗಲಿಲ್ಲ;  ಮಿರುಗುಬಣ್ಣ-ಮನಸ್ಸನ್ನು ಮರುಳುಮಾಡುವ ಆಕರ್ಷಣೆಗಳು, ಮನಸ್ಸನ್ನು ಸೆರೆಹಿಡಿಯುವ ವಿಷಯಗಳು;  ಬೆರೆತು-ಸೇರಿಕೊಂಡು, ಮರುಳಾಗಿ; ಭಯ ಮರೆತು-ಬದುಕಿನ ಇತಿಮಿತಿಗಳನ್ನು ಮರೆಯುವುದು; ಕೊಬ್ಬಿದೆನು-ದುರಹಂಕಾರ ಪಟ್ಟೆನು; ಮರೆದಾಯ್ತು-ಮರೆತುಬಿಟ್ಟೆ.)

            ’ಕೆಟ್ಟ ಮೇಲೆ ಬುದ್ಧಿ’ ಎಂಬಂತೆ ಈಗ ಎಲ್ಲವೂ ಅರ್ಥವಾಗುತ್ತಿದೆ. ಎಲ್ಲವನ್ನು ಕಳೆದುಕೊಂಡ ಮೇಲೆ ಸ್ವಲ್ಪ ವಿವೇಕ ಮೂಡಿದೆ.  ಈ ಹಿಂದಿನ ಬದುಕಿನಲ್ಲಿ ನಾನು ಹೀಗಿರಲು (ವಿವೇಕಿಯಂತೆ ಬದುಕಲು) ಸಾಧ್ಯವಾಗಲಿಲ್ಲ. ಹಾಗಾಗಿ ಭಗವಂತನೇ, ನನ್ನ ಬದುಕಿನಲ್ಲಿ  ನೀನೇ ಕೈಹಿಡಿದು ನಡೆಸೆಂದೂ ನನ್ನನ್ನು ರಕ್ಷಿಸೆಂದೂ ನನ್ನ ಬದುಕನ್ನು ಸಾರ್ಥಕಗೊಳಿಸೆಂದೂ  ನಿನ್ನಲ್ಲಿ ಯಾವತ್ತೂ ಬೇಡಲಿಲ್ಲ. ಏನನ್ನೂ ಬೇಡದೆ ನನ್ನ ಬದುಕಿನ ದಾರಿಯನ್ನು ನಾನೇ ಕಂಡುಕೊಂಡೆ. ನನ್ನಿಚ್ಛೆಯಂತೆ ದುಡಿದೆ, ಸಂಪಾದಿಸಿದೆ, ಬದುಕಿದೆ, ನಿನ್ನನ್ನು ಮರೆತು ನಾನು ನಾನೇ ಎಂದು ಮೆರೆದೆ. ಮನುಷ್ಯನನ್ನು ಮೀರಿದ ಶಕ್ತಿಯೊಂದಿದೆ ಎಂಬುದನ್ನೂ ಅದಕ್ಕೆ ಯಾವತ್ತೂ ಶರಣಾಗಿಯೇ ಬದುಕಬೇಕೆಂಬುದನ್ನೂ ಬದುಕಿಗೆ ಭಗವಂತನ ಅನುಗ್ರಹ ಬೇಕೆಂಬುದನ್ನೂ  ಮರೆತುಬಿಟ್ಟೆ. ಆದರೆ ಈಗ ನೀನು ನನ್ನ ಕೈಹಿಡಿದು ದಾರಿನಡೆಸಲೇ ಬೇಕಾಗಿದೆ.

             ನಿನ್ನ ಸಹಾಯವಿಲ್ಲದೆ ನಾನಿಂದು ಏನನ್ನೂ ಮಾಡುವ ಸ್ಥಿತಿಯಲ್ಲಿಲ್ಲ. ಬದುಕಿನಲ್ಲಿನ ನೂರಾರು ಆಸೆ, ಆಕಾಂಕ್ಷೆಗಳಿಗೆ, ಸೆಳೆತಗಳಿಗೆ, ಆಮಿಷಗಳಿಗೆ ಮನಸ್ಸು ಬಲಿಯಾಯಿತು. ಅದೇ ಸರಿಯೆಂದೂ ಅದೇ ನಿಜವೆಂದೂ ನಂಬಿದೆ. ಎಲ್ಲರನ್ನೂ ಎಲ್ಲವನ್ನೂ ಮರೆತು ಎಲ್ಲವೂ ನಾನು, ಎಲ್ಲವೂ ನನ್ನಿಂದ ಸಾಧ್ಯವೆಂದು ನಂಬಿದೆ. ದುರಹಂಕಾರದಿಂದ ಬದುಕಿದೆ. ಅದರ ಫಲವಾಗಿ ಇಂದು ಎಲ್ಲವನ್ನೂ ಕಳೆದುಕೊಂಡು ಅಸಹಾಯಕನಾಗಿದ್ದೇನೆ, ಒಬ್ಬಂಟಿಯಾಗಿದ್ದೇನೆ, ಅಶಕ್ತನಾಗಿದ್ದೇನೆ. ಈ ಸ್ಥಿತಿಯಲ್ಲಿ ನನ್ನ ಹಿಂದಿನ ಪ್ರಾರಬ್ಧಕರ್ಮಗಳನ್ನೆಲ್ಲ ಮರೆಯಲು ಪ್ರಯತ್ನಿಸುತ್ತಿದ್ದೇನೆ. ನೀನೂ ಹಿಂದಿನ ನನ್ನೆಲ್ಲ ಹೀನಬುದ್ಧಿಯನ್ನು, ದುರಹಂಕಾರವನ್ನು, ದುರ್ವರ್ತನೆಯನ್ನು ಮತ್ತೆ ಮತ್ತೆ ನೆನೆಯದೆ, ನನಗೆ ನೆನಪಿಸದೆ ನನ್ನನ್ನು ಕಾಪಾಡು. ನೀನೇ ಕರುಣಾಳು ಎಂದು ನಿನಗೆ ಶರಣಾಗಿದ್ದೇನೆ. ಇನ್ನು ಮುಂದಿನ ಬದುಕಿನಲ್ಲಾದರೂ ನೀನೇ ನನ್ನ ಕೈಹಿಡಿದು ನಡೆಸಬೇಕೆಂದು ಪ್ರಾರ್ಥಿಸುತ್ತೇನೆ.

 

ಇಷ್ಟು ದಿನ ಸಲಹಿರುವೆ  ಮೂರ್ಖನನು; ಮುಂದೆಯೂ

ಕೈಹಿಡಿದು ನಡೆಸದಿಹೆಯಾ?

ಕಷ್ಟದಡವಿಯ ಕಳೆದು, ಬೆಟ್ಟ ಹೊಳೆಗಳ ಹಾದು

ಇರುಳನ್ನು ನೂಕದಿಹೆಯಾ?

ಬೆಳಗಾಗ ಹೊಳೆಯದೇ ಹಿಂದೊಮ್ಮೆ ನಾನೊಲಿದು

ಈ ನಡುವೆ ಕಳಕೊಂಡ ದಿವ್ಯಮುಖ ನಗುತ?

 (ಇಷ್ಟು ದಿನ ಸಲಹಿರುವೆ-ಇದುವರೆಗೆ ಕಾಪಾಡಿರುವೆ(ನನ್ನಿಂದ ತಪ್ಪಾಗಿದ್ದರೂ ಕೂಡಾ);  ಮೂರ್ಖ-ವಾಸ್ತವವನ್ನು ಅರಿಯದ ಮೂಢ;  ಕಷ್ಟದಡವಿ-ಕಷ್ಟಕಾರ್ಪಣ್ಯಗಳ ಬದುಕು;  ಬೆಟ್ಟ ಹೊಳೆಗಳ ಹಾದು-ಬದುಕಿನಲ್ಲಿನ ಸಮಸ್ಯೆ, ಅಪಾಯಗಳನ್ನು ನಿವಾರಿಸಿ; ಇರುಳು-ಸಂಕಷ್ಟಗಳು;  ನೂಕು-ನಿವಾರಿಸು;  ಬೆಳಗಾಗ ಹೊಳೆಯದೇ-ಬೆಳಗಾಗಲು ಹೊಳೆಯಲಾರದೇ?;  ಹಿಂದೊಮ್ಮೆ-ಹಿಂದಿನ ಬದುಕಿನಲ್ಲೊಮ್ಮೆ;  ದಿವ್ಯಮುಖ-ಸಂತಸದ ಕ್ಷಣಗಳು.)

            ಭಗವಂತನೇ, ನೀನು  ಯಾರನ್ನೂ ದಂಡಿಸುವುದಿಲ್ಲ. ಒಳ್ಳೆಯವನಿರಲಿ, ಕೆಟ್ಟವನಿರಲಿ; ಯೋಗ್ಯನಿರಲಿ, ಅಯೋಗ್ಯನಿರಲಿ ಎಲ್ಲರನ್ನೂ ತನ್ನ ಕೃಪೆಯ ಪರಿಧಿಯೊಳಗೆ ರಕ್ಷಿಸುವೆ. ಯಾವ ಒಳಿತನ್ನೂ ಮಾಡದ, ಯಾವತ್ತೂ ಭಗವಂತನನ್ನು ಸ್ಮರಿಸದ, ಯಾರಿಗೂ ಹಿತಚಿಂತಕನೆನಿಸದ, ವಾಸ್ತವವನ್ನು ಅರಿಯದೆ ಮೂಢನಾಗಿರುವ ತನ್ನನ್ನು ಇದುವರೆಗೆ ಕಾಪಾಡಿಕೊಂಡು ಬಂದಿರುವೆ. ಹಾಗಿರುವಾಗ ಮುಂದೆಯೂ ಕಾಪಾಡುತ್ತ ಕೈಹಿಡಿದು ನಡೆಸಲಾರೆಯಾ?  ಅಡವಿ ಹಾಗೂ ಅದರ ವಾತಾವರಣ ಮನುಷ್ಯನನ್ನು ಭಯಭೀತಗೊಳಿಸುವಂತೆ ನನ್ನ ಬದುಕು ಕಷ್ಟದಡವಿಯಾಗಿ ನನ್ನನ್ನೇ ಭಯಭೀತಗೊಳಿಸುತ್ತಿದೆ. ನನ್ನನ್ನು ಕಂಗಾಲಾಗಿಸುವ ಈ ಬದುಕೆಂಬ ಅಡವಿಯಿಂದ ಪಾರುಮಾಡು.  ನನ್ನ ಬದುಕಿಗೆ ಆವರಿಸಿಕೊಂಡಿರುವ ಕಷ್ಟಕಾರ್ಪಣ್ಯಗಳನ್ನು, ಸಮಸ್ಯೆಗಳನ್ನು ತಡೆದು, ಅವುಗಳನ್ನು ಬಗೆಹರಿಸಿ, ಬದುಕಿನಲ್ಲಿನ ಕತ್ತಲೆಯನ್ನು ನಿವಾರಿಸಿಕೊಂಡು ಬೆಳಕನ್ನು ನೀಡಲಾರೆಯಾ?

            ಭಗವಂತನೇ, ನಿನ್ನ ಕೃಪಾಕಟಾಕ್ಷವಿದ್ದರೆ, ಕರುಣೆಯಿದ್ದರೆ ಕತ್ತಲೆಯೆಲ್ಲವೂ ಮಾಯವಾಗಿ ಜಗತ್ತೆಲ್ಲ ಸುಂದರವಾಗಿ, ಮೋಹಕವಾಗಿ, ಆಕರ್ಷಕವಾಗಿ ಕಾಣುವಂತೆ ತನ್ನ ಬದುಕೂ ನಿನ್ನ ದಯೆಯಿಂದ ಬದುಕಿನಲ್ಲಿ ನಾನು ಕಳೆದುಕೊಂಡ, ಹಿಂದೆ ಒಂದೊಮ್ಮೆ ನಾನು ಕಂಡುಕೊಂಡ ಸುಖ, ಸಂತೋಷಗಳನ್ನು, ನಗುಮುಖವನ್ನು ಮತ್ತೆ ಮರಳಿ ಪಡೆಯಲಾರೆನೇ?  ಬದುಕಿನ ಕೊನೆಗಾಲದಲ್ಲಿ ನನಗೆ ಜ್ಞಾನೋದಯವಾಗುವಂತೆ ಕರುಣಿಸಿರುವೆ, ನನ್ನನ್ನು ತಿರಸ್ಕರಿಸದೆ ತಪ್ಪುಗಳನ್ನೆಲ್ಲ ಮನ್ನಿಸಿರುವೆ. ಈಗ ಅಸಹಾಯಕನಾಗಿರುವುದರಿಂದ ನೀನೇ ಕೈಹಿಡಿದು ನಡೆಸಬೇಕು. ನಿನ್ನ ಔನ್ನತ್ಯವನ್ನು ಒಪ್ಪಿಕೊಂಡು, ನಿನಗೆ ಸದಾ ಶರಣಾಗುತ್ತಾ ಒಂದಷ್ಟು ಕಾಲ ಒಳ್ಳೆಯ ಬಾಳನ್ನು ಬಾಳುವಂತಾಗಬೇಕು. ಹಾಗಾಗಿ ಬದುಕಿನ ಕತ್ತಲೆಯಿಂದ ತನ್ನನ್ನು ಪಾರುಮಾಡಿ ಕೈಹಿಡಿದು ನಡೆಸುತ್ತ ಮುಂದಿನ ಬದುಕನ್ನಾದರೂ ಸಂತೋಷದಲ್ಲಿ, ಪರಿಪೂರ್ಣತೆಯಲ್ಲಿ ಕಳೆಯುವಂತೆ ಕರುಣಿಸು.

            ಮನುಷ್ಯ ಹತ್ತು ಹಲವು ಕಾರಣಗಳಿಂದ ದಾರಿತಪ್ಪಿ ನಡೆಯುತ್ತಾನೆ. ಹಣದ ಮದ, ರೂಪದ ಮದ, ಪ್ರಾಯದ ಮದ, ಕುಲದ ಮದ, ವಿದ್ಯೆಯ ಮದ, ಅಧಿಕಾರದ ಮದ –ಹೀಗೆ ಹಲವಾರು ರೀತಿಯ ಮದಗಳಿಗೆ ಮರುಳಾಗಿ ಮೆರೆಯುತ್ತಾನೆ. ಆದರೆ ಜೀವಿತದ ಕೊನೆಯ ಅವಧಿಯಲ್ಲಿ ಕೆಲವರಿಗಾದರೂ ತಾವು ಸಾಧಿಸಿದ್ದು ಏನೂ ಇಲ್ಲವೆಂದೂ ಸಾಧಿಸಬೇಕಾದುದನ್ನು ಸಾಧಿಸಿಲ್ಲವೆಂದೂ ಗಳಿಸಬೇಕಾದುದನ್ನು ಗಳಿಸಿಲ್ಲವೆಂದೂ ಅನ್ನಿಸುತ್ತದೆ.  ಎಲ್ಲಾ ಬಗೆಯ ಸಂಬಂಧಗಳು ಸಡಿಲಗೊಂಡು, ಎಲ್ಲರಿಂದಲೂ ತಿರಸ್ಕೃತನಾಗತೊಡಗಿ ತನಗೆ ಇನ್ನು ಯಾರೂ ಇಲ್ಲ ಅನ್ನಿಸತೊಡಗಿದಾಗ ಭಗವಂತನ ನೆನಪು ಸದಾ ಕಾಡುತ್ತದೆ, ’ಸಂಕಟ ಬಂದಾಗ ವೆಂಕಟರಮಣ’ ಎನ್ನುವ ಹಾಗೆ. ಆದರೆ ಬಹುತೇಕ ಮಂದಿಯಲ್ಲಿ ಶರಣಾಗತಿಭಾವವಾಗಲೀ ತನ್ನ ಪ್ರಾರಬ್ಧಕರ್ಮಗಳನ್ನು ಮನಸೋ ಇಚ್ಛೆ ಭಗವಂತನಲ್ಲಿ ನಿವೇದಿಸಿಕೊಳ್ಳುವ ದೀನಮನಃಸ್ಥಿತಿಯಾಗಲೀ ಇರುವುದಿಲ್ಲ. ಆದರೆ ಮೇಲಿನ ಭಾವಗೀತೆಯಲ್ಲಿ ಕಾವ್ಯದ ನಾಯಕ ತನ್ನೆಲ್ಲ ಪ್ರಾರಬ್ಧಕರ್ಮಗಳನ್ನು ಹೇಳಿಕೊಂಡು ಭಗವಂತನಿಗೆ ಶರಣಾಗಿ ಆತನಲ್ಲಿ ನಿವೇದಿಸಿಕೊಳ್ಳುವ ಸ್ಥಿತಿಯನ್ನು ಕಂಡುಕೊಳ್ಳಬಹುದು. ಇದು ಮನುಷ್ಯನ ಮನಸ್ಸು ಮಾಗಿದ ಸ್ಥಿತಿ. ಕೆಡುಕೆಲ್ಲವನ್ನೂ ಕಳೆದುಕೊಂಡು ಪರಿಪೂರ್ಣತೆಯತ್ತ ಸಾಗಲು ಹಾತೊರೆಯುವ ಸ್ಥಿತಿ. ಬದುಕು ಮೌಲ್ಯವನ್ನು ಪಡೆದುಕೊಳ್ಳುವ ಸ್ಥಿತಿ. ಈ ಭಾವಗೀತೆಯೇ ಒಂದು ಜೀವನವಿಮರ್ಶೆ.

ಕೆಳಗಿನ ಲಿಂಕನ್ನು ಬಳಸಿ ಈ ಭಾವಗೀತೆಯನ್ನು ಸಂಗೀತದ ಹಿನ್ನೆಲೆಯಲ್ಲಿ ಆಲಿಸಿ.

 

***

Leave a Reply

Your email address will not be published. Required fields are marked *