ಸಾಹಿತ್ಯಾನುಸಂಧಾನ

ಕೃಷ್ಣ ಸಂಧಾನ – ಕುಮಾರವ್ಯಾಸ – (ಭಾಗ -೩)

(ಮಂಗಳೂರು ವಿಶ್ವವಿದ್ಯಾನಿಲಯದ ಬಿಬಿಎ ನಾಲ್ಕನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ (ಭಾಗ -೩)

ಮರುಳು ಮಗನೇ ಕೃಷ್ಣರಾಯನ

ಕೆರಳಿಚುವರೇ ಯಾದವರು ನಮ

ಗೆರವಿಗರೆ ವಸುದೇವಗೆಮ್ಮಲಿ ಭೇದವೇ ನಿನಗೆ

ದುರುಳತನವಿದು ಬೇಡ ಖುಲ್ಲರ

ನೆರವಿಯೊಡನಾಡಿದರೆ ತಪ್ಪದು

ನರಕವೆಂದನು ಕುರುಪತಿಗೆ ಧೃತರಾಷ್ಟ್ರ ಭೂಪಾಲ  ೨೧

ಪದ್ಯದ ಅನ್ವಯಕ್ರಮ:

ಧೃತರಾಷ್ಟ್ರ ಭೂಪಾಲ ಕುರುಪತಿಗೆ ’ಮರುಳು ಮಗನೇ, ಕೃಷ್ಣರಾಯರ ಕೆರಳಿಚುವರೇ, ನಮಗೆ ಯಾದವರು ಎರವಿಗರೆ, ಎಮ್ಮಲಿ ವಸುದೇವಗೆ ಭೇದವೇ, ಇದು ದುರುಳತನ ನಿನಗೆ ಬೇಡ, ಖುಲ್ಲರ ನೆರವಿಯೊಡನೆ ಆಡಿದರೆ ನರಕ ತಪ್ಪದು’ ಎಂದನು.

ಪದ-ಅರ್ಥ:

ಮರುಳು –ತಿಳಿಗೇಡಿ;  ಕೆರಳಿಚುವರೇ-ಕೆರಳುವಂತೆ ಮಾಡುವರೇ;  ಯಾದವರು-ಯದು ವಂಶದವರು;  ನಮಗೆರವಿಗರೆ-ನಮಗೆ ಹೊರಗಿನವರೆ;  ವಸುದೇವ-ಕೃಷ್ಣ (ವಾಸುದೇವ); ದುರುಳತನ-ಕೆಟ್ಟಪ್ರವೃತ್ತಿ;  ಖುಲ್ಲರ ನೆರವಿ-ಅಲ್ಪರ ಸಮೂಹ, ನೀಚರ ಸಮೂಹ;  ಕುರುಪತಿ-ದುರ್ಯೋಧನ.

            ಮಗನೇ, ಈ ಸಭೆಯಲ್ಲಿ ನಿನ್ನ ತಿಳಿಗೇಡಿತನವನ್ನು ಪ್ರದರ್ಶಿಸಬೇಡ, ಸಂಧಾನಕ್ಕೆಂದು ಬಂದಿರುವ ಕೃಷ್ಣನನ್ನು ಈ ರೀತಿಯಲ್ಲಿ ಕೆರಳುವಂತೆ ಮಾಡುವರೇ? ಯಾದವರು ನಮಗೆ, ನಮ್ಮ ವಂಶಕ್ಕೆ ಹೊರಗಿನವರೇನೂ ಅಲ್ಲ. ಅವರು ಮೊದಲಿಂದಲೂ ನಮಗೆ ನೆಂಟರು. ಯಾದವಕುಲ ಶ್ರೇಷ್ಠನಾಗಿರುವ ಕೃಷ್ಣ ನಮ್ಮಲ್ಲಿ ಯಾವ ಭೇದಭಾವವನ್ನೂ ಹೊಂದಿಲ್ಲ. ಹೀಗಿರುವಾಗ ನೀನು ರಾಜಸಭೆಯಲ್ಲಿ ಕೆಟ್ಟ ಪ್ರವೃತ್ತಿಯನ್ನು ಪ್ರದರ್ಶಿಸಬೇಡ. ನೀನು ಚಿಕ್ಕಂದಿನಿಂದಲೂ ಅಲ್ಪರ, ನೀಚರ ಸಹವಾಸದಲ್ಲಿಯೇ ಬೆಳೆದವನು. ಅದನ್ನು ಇಲ್ಲಿಯೂ ಮುಂದುವರಿಸಿದೆ ಎಂದಾದರೆ ನಿನಗೆ ನರಕಪ್ರಾಪ್ತಿಯಾದೀತು! ಎಂದು ಧೃತರಾಷ್ಟ್ರನು ಮಗನಾದ ದುರ್ಯೋಧನನಿಗೆ ತಿಳಿಹೇಳಿದನು.

            ಸಂಧಾನಕ್ಕೆಂದು ತನ್ನ ಆಸ್ಥಾನಕ್ಕೆ ಬಂದಿರುವ ಕೃಷ್ಣನ ಮಾತುಗಳನ್ನು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಿದ ಬಗ್ಗೆ ಮತ್ತು ಆತನನ್ನು ಕೆಟ್ಟದಾಗಿ ನಡೆಸಿಕೊಂಡ ಬಗ್ಗೆ ಧೃತರಾಷ್ಟ್ರನಿಗೆ ಬೇಸರವಿದೆ. ಅದರ ಜೊತೆಗೆ ಮಗನಿಂದ ತಮಗೂ ಅಪವಾದ ಬಂದಿರುವುದನ್ನು ಮನಗಂಡ ಧೃತರಾಷ್ಟ್ರ ಮಗನನ್ನು ಉದ್ದೇಶಿಸಿ, ’ದುರ್ಯೋಧನ, ಇದು ರಾಜಸಭೆ, ಇದಕ್ಕೆ ಅದರದ್ದೇ ಆದ ಘನತೆ, ಗೌರವಗಳಿವೆ. ಕೃಷ್ಣ ಸಂಧಾನಕಾರನಾಗಿ ನಮ್ಮಲ್ಲಿಗೆ ಬಂದಿದ್ದಾನೆ. ಆತನನ್ನು ಗೌರವದಿಂದ ನಡೆಸಿಕೊಳ್ಳಬೇಕಲ್ಲದೆ, ಹೀನಾಯವಾಗಿ, ಅವಮಾನಕರವಾಗಿ, ನಿಂದಾತ್ಮಕವಾಗಿ ನಡೆಸಿಕೊಂಡು ಆತನನ್ನು ಕೆರಳಿಸುವುದು ಕ್ಷತ್ರಿಯನಾದ ನಿನಗೆ ಶೋಭೆಯಲ್ಲ. ಯಾದವಕುಲದೊಂದಿಗೆ ನಾವು ಹಿಂದಿನಿಂದಲೂ ಕೊಡುಕೊಳೆ ಸಂಬಂಧವನ್ನು ಹೊಂದಿದವರು. ಅಲ್ಲದೆ, ಯಾದವ ಕುಲಶ್ರೇಷ್ಠನಾದ ಕೃಷ್ಣನು ನಮ್ಮಲ್ಲಿ ಯಾವ ಭೇದಭಾವವನ್ನೂ ಹೊಂದಿಲ್ಲ. ಪಾಂಡವರ ಪರವಾಗಿ ಸಂಧಾನಕ್ಕೆಂದು ಬಂದಿದ್ದಾನೆ ಅಷ್ಟೇ. ಹೀಗಿರುವಾಗ ನೀನು ಕೃಷ್ಣನನ್ನು ಈ ರೀತಿಯಲ್ಲಿ ಕೆಟ್ಟದಾಗಿ ನಡೆಸಿಕೊಳ್ಳುವುದಾದರೆ ಅದು ನಿನ್ನ ಕೆಟ್ಟಪ್ರವೃತ್ತಿಯನ್ನು ತೋರಿಸುತ್ತದೆ. ಸಂಧಾನಸಭೆಯಲ್ಲಿ ಅಂತಹ ಯಾವ ಕೆಡುಕಿಗೂ ಅವಕಾಶ ಮಾಡಿಕೊಡಬೇಡ. ಚಿಕ್ಕಂದಿನಿಂದಲೂ ನೀನು ಅಲ್ಪರ, ನೀಚರ ಸಹವಾಸದಲ್ಲಿಯೇ ಬೆಳೆದವನು. ಅಲ್ಪರ, ನೀಚರ ಸಹವಾಸ ಎಂತಹ ಸಭ್ಯರನ್ನೂ ಹಾಳುಗೆಡವುತ್ತದೆ ಮಾತ್ರವಲ್ಲ, ಅದು ನರಕಕ್ಕೆ ದಾರಿಮಾಡಿಕೊಡುತ್ತದೆ. ನೀನು ಅದೇ ಪ್ರವೃತ್ತಿಯನ್ನು ಈ ಸಂಧಾನದ ಸಭೆಯಲ್ಲಿಯೂ ಮುಂದುವರಿಸಿದೆ ಎಂದಾದರೆ ನಿನಗೆ ನರಕವೇ ಗತಿಯಾದೀತು’ ಎಂದು ದುರ್ಯೋಧನನನ್ನು ಎಚ್ಚರಿಸಿದನು.  

 

ನೊರಜು ಹೊಕ್ಕೊಡೆ ಕದಡುವುದೆ ಸಾ

ಗರದ ಜಲ ನೊಣವೆಱಗಿದೊಡೆ ಕುಲ

ಗಿರಿಗಳಲ್ಲಾಡುವವೆ ಕೇಳ್ ಧೃತರಾಷ್ಟ್ರಭೂಪಾಲ

ತೆರಳಲರಿವನೆ ಕೊಬ್ಬಿದೊಳ್ಳೆಯ

ಮಱಿಗೆ ಗರುಡನು ನಿನ್ನ ಮಕ್ಕಳ

ದುರುಳತನಕಂಜುವನೆ ಮುರರಿಪುಯೆಂದನಾ ವಿದುರ  ೨೨

ಪದ್ಯದ ಅನ್ವಯಕ್ರಮ:

ನೊರಜು ಹೊಕ್ಕೊಡೆ ಸಾಗರದ ಜಲ ಕದಡುವುದೆ, ನೊಣವು ಎಱಗಿದೊಡೆ ಕುಲಗಿರಿಗಳ್ ಅಲ್ಲಾಡುವವೆ, ಧೃತರಾಷ್ಟ್ರ ಭೂಪಾಲ ಕೇಳ್, ಕೊಬ್ಬಿದ ಒಳ್ಳೆಯ ಮಱಿಗೆ ಗರುಡನು ತೆರಳಲ್ ಅರಿವನೆ, ಮುರರಿಪು ನಿನ್ನಯ ಮಕ್ಕಳ ದುರುಳತನಕೆ ಅಂಜುವನೆ ಎಂದನ್ ಆ ವಿದುರ.

ಪದ-ಅರ್ಥ:

ನೊರಜು-ಸಣ್ಣಗಾತ್ರದ ಕಲ್ಲು;  ಹೊಕ್ಕೊಡೆ-ಸೇರಿಕೊಂಡರೆ, ಬಿದ್ದುಬಿಟ್ಟರೆ;  ಕದಡುವುದೆ-ಕ್ಷೋಭೆಗೊಳ್ಳುವುದೆ;  ಸಾಗರದ ಜಲ-ಸಮುದ್ರದ ನೀರು;  ನೊಣವೆಱಗಿದರೆ (ನೊಣ+ಎರಗಿದರೆ)-ನೊಣ ಬಿದ್ದರೆ;  ಕುಲಗಿರಿಗಳಲ್ಲಾಡುವವೆ-ಕುಲಪರ್ವತಗಳು ಅಲ್ಲಾಡಲು ಸಾಧ್ಯವೆ;  ತೆರಳಲರಿವನೆ-ಹೆದರಿಕೊಳ್ಳುವನೆ;  ಕೊಬ್ಬಿದೊಳ್ಳೆಯ ಮಱಿಗೆ-ಕೊಬ್ಬಿರುವ ನಾಗರಹಾವಿನ ಮರಿಗೆ;  ದುರುಳತನಕೆ-ಕೆಟ್ಟಪ್ರವೃತ್ತಿಗೆ;  ಅಂಜುವನೆ-ಹೆದರುವನೆ;  ಮುರರಿಪು-ಮುರಾಸುರನ ವೈರಿ (ಕೃಷ್ಣ).

            ಮಂತ್ರಿಯಾದ ವಿದುರ ಧೃತರಾಷ್ಟ್ರನನ್ನು ಉದ್ದೇಶಿಸಿ, ಸಣ್ಣಗಾತ್ರದ ಕಲ್ಲೊಂದು ಸಮುದ್ರದಲ್ಲಿ ಬಿದ್ದುಬಿಟ್ಟರೆ ಅದರಿಂದ ಸಮುದ್ರದ ನೀರು ಕದಡುವುದಕ್ಕೆ ಸಾಧ್ಯವೆ? ಕುಲಪರ್ವತಗಳ ಮೇಲೆ ನೊಣವೊಂದು ಬಿದ್ದರೆ ಕುಲಪರ್ವತಗಳು ಅಲ್ಲಾಡಲು ಸಾಧ್ಯವೇ? ಕೊಬ್ಬಿದ ನಾಗರ ಹಾವಿನ ಮರಿಯೊಂದನ್ನು ಕಂಡಾಗ ಗರುಡ ಹೆದರಿಕೊಳ್ಳುವನೇ? ಹಾಗೆಯೇ ನಿನ್ನ ಮಕ್ಕಳ ಕೆಟ್ಟಪ್ರವೃತ್ತಿಗೆ ಮುರವೈರಿ ಎನಿಸಿರುವ ಕೃಷ್ಣನು ಅಂಜುವುದಕ್ಕೆ ಸಾಧ್ಯವೇ? ಎಂದನು.

            ಸಂಧಾನಕ್ಕೆಂದು ಕೃಷ್ಣ ಧೃತರಾಷ್ಟ್ರನ ಆಸ್ಥಾನಕ್ಕೆ ಕಾಲಿರಿಸಿದ ಕ್ಷಣದಿಂದ ಅದುವರೆಗೂ ದುರ್ಯೋಧನ ನಡೆದುಕೊಂಡ ರೀತಿ, ಮಾತಾಡಿದ ರೀತಿ, ಆತನ ಮಾತುಗಳಲ್ಲಿರುವ ವ್ಯಂಗ್ಯ, ಸಭೆಯಲ್ಲಿದ್ದ ಹಿರಿಯರ ಬುದ್ಧಿವಾದದ ಮಾತುಗಳನ್ನು ನಿರ್ಲಕ್ಷಿಸಿದ ರೀತಿ ಇವೆಲ್ಲವುಗಳಿಂದ ಮುಂದೆ ಉಂಟಾಗಬಹುದಾದ ಅನರ್ಥಗಳನ್ನು ಮನಗಂಡು ಮಂತ್ರಿಯಾದ ವಿದುರನು, ಧೃತರಾಷ್ಟ್ರನನ್ನು ಉದ್ದೇಶಿಸಿ ಮೂರು ದೃಷ್ಟಾಂತಗಳ ಮೂಲಕ ಕೃಷ್ಣನ ಸಾಮರ್ಥ್ಯವನ್ನು ಸ್ಪಷ್ಟಪಡಿಸುತ್ತಾನೆ. ಸಮುದ್ರದಲ್ಲಿ ಅಗಾಧವಾದ ನೀರು ತುಂಬಿಕೊಂಡಿದೆ. ಅದರೊಳಗೆ ಒಂದು ಸಣ್ಣ ಕಲ್ಲನ್ನು ಎಸೆದರೆ ಸಮುದ್ರದ ನೀರು ಎಳ್ಳಷ್ಟೂ ಕದಡುವುದಕ್ಕೆ ಸಾಧ್ಯವಿಲ್ಲ. ಹಾಗೆಯೇ ಕುಲಪರ್ವತಗಳು ಅತ್ಯಂತ ಶಕ್ತಿಶಾಲಿಯಾದವುಗಳು. ಅವುಗಳು ಯಾವ ಹೊಡೆತಕ್ಕೂ ಜಗ್ಗದೆ, ಬಗ್ಗದೆ ಸ್ಥಿರವಾಗಿ ನಿಂತಿವೆ. ಅಂತಹ ಕುಲಪರ್ವತಗಳ ಮೇಲೆ ನೊಣವೊಂದು ಬಿದ್ದರೆ ಕುಲಪರ್ವತಗಳು ಆಲ್ಲಾಡಲು ಸಾಧ್ಯವೇ? ಹಾಗೆಯೇ ನಾಗರ ಹಾವಿನ ಮರಿಯೊಂದು ಎಷ್ಟೇ ಕೊಬ್ಬಿ ಬುಸುಗುಟ್ಟಿದರೂ ಗರುಡ ಅದಕ್ಕೆ ಹೆದರಿ ಓಡಿಹೋಗಲು ಸಾಧ್ಯವೇ? ಕೃಷ್ಣನ ಶಕ್ತಿ ಸಾಮರ್ಥ್ಯಗಳೆಂದರೆ ಸಾಗರದ ಜಲದಂತೆ, ಕುಲಪರ್ವತಗಳ ಶಕ್ತಿಯಂತೆ, ಗರುಡನ ಹೊಡೆತದಂತೆ. ಕೃಷ್ಣನ ಶಕ್ತಿಯ ಮುಂದೆ ದುರ್ಯೋಧನ ಸಣ್ಣಗಾತ್ರದ ಕಲ್ಲಿನಂತೆ, ಕ್ಷುಲ್ಲಕವಾದ ನೊಣದಂತೆ, ಕೊಬ್ಬಿಬುಸುಗುಟ್ಟುವ ನಾಗರಹಾವಿನ ಮರಿಯಂತೆ. ಎದುರಿಸಿ ಉಳಿಯುವುದಕ್ಕೆ ಸಾಧ್ಯವೇ? ಹೀಗಿರುವಾಗ ನಿನ್ನ ಮಕ್ಕಳ ಕೆಟ್ಟಪ್ರವೃತ್ತಿಗೆ ಮುರವೈರಿ ಎನಿಸಿಕೊಂಡಿರುವ ಕೃಷ್ಣ ಹೆದರಿಕೊಂಡು ಓಡಿಹೋಗಲು ಸಾಧ್ಯವೇ? ಎಂದನು.

 

ವಿದುರನಿಂತೆಂದೆನಲು ಮಿಂಚಿನ

ಹೊದಱು ಹುರಿಗೊಂಡಂತೆ ರವಿಶತ

ಉದುರಿದವು ಮೈಮುರಿದು ನಿಂದಡೆ ದೇವನಂಗದಲಿ

ಸದೆದುದಾಸ್ಥಾನವನು ಘನ ತೇ

ಜದಲಿ ಹರಿ ತಾ ಲೀಲೆ ಮಿಗೆ ತೋ

ಱಿದನು ನಿರುಪಮ ವಿಶ್ವರೂಪನಾ ಮಹಾಸಭೆಗೆ  ೨೩

ಪದ್ಯದ ಅನ್ವಯಕ್ರಮ:

ವಿದುರನ್ ಇಂತೆಂದೆನಲು ಮೈಮುರಿದು ನಿಂದಡೆ ದೇವನ ಅಂಗದಲಿ ಮಿಂಚಿನ ಹೊದಱು ಹುರಿಗೊಂಡಂತೆ ರವಿಶತ ಉದುರಿದವು, ಘನತೇಜದಲಿ ಆಸ್ಥಾನವನು ಸದೆದುದು, ಹರಿ ತಾ ಲೀಲೆ ಮಿಗೆ ಆ ಮಹಾಸಭೆಗೆ ನಿರುಪಮ ವಿಶ್ವರೂಪವನು ತೋಱಿದನು.

ಪದ-ಅರ್ಥ:

ಇಂತೆಂದೆನಲು-ಹೀಗೆಂದು ಹೇಳಿದಾಗ;  ಮಿಂಚಿನ ಹೊದಱು-ಮಿಂಚಿನ ಸಮೂಹ;  ಹುರಿಗೊಂಡಂತೆ-ಅಧಿಕಗೊಂಡಂತೆ;  ರವಿಶತ-ನೂರು ಸೂರ್ಯರು;  ಮೈಮುರಿದು ನಿಂದಡೆ-ಮೈ ಮುರಿದು ನಿಂತಾಗ; ದೇವನಂಗದಲಿ-ಕೃಷ್ಣನ ಅಂಗಾಂಗದಲ್ಲಿ;  ಸದೆದುದಾಸ್ಥಾನವನು-ಆಸ್ಥಾನವನ್ನು ವ್ಯಾಪಿಸಿತು;   ಘನತೇಜದಲಿ-ಪ್ರಕರವಾದ ಹೊಳಪಿನಲ್ಲಿ;  ಹರಿ-ಕೃಷ್ಣ;  ಲೀಲೆ ಮಿಗೆ-ವಿಲಾಸ ಅಧಿಕವಾಗಲು;  ನಿರುಪಮ-ಹೋಲಿಗೆ ನಿಲುಕದ; ಹೋಲಿಕೆಯೇ ಇಲ್ಲದ.

             ಮಂತ್ರಿ ವಿದುರನು ಹೀಗೆ ಹೇಳಿದೊಡನೆ, ಕೃಷ್ಣನು ಕುಳಿತಲ್ಲಿಂದ ಮೈಮುರಿದು ಎದ್ದು ನಿಂತಾಗ ಕೃಷ್ಣನ ಅಂಗಾಂಗದಿಂದ ಮಿಂಚಿನ ಸಮೂಹವೊಂದು ಅಧಿಕಗೊಂಡು ನೂರು ಸೂರ್ಯರ ಪ್ರಕಾಶವನ್ನು ಬೀರುತ್ತ ಆಸ್ಥಾನವೆಲ್ಲವನ್ನೂ ವ್ಯಾಪಿಸಿಕೊಂಡಿತು. ಕೃಷ್ಣನ  ಈ  ವಿಲಾಸವು ಸಭೆಯೆಲ್ಲವನ್ನೂ ಬೆಳಗುತ್ತಿದ್ದಂತೆಯೇ ಕೃಷ್ಣನು ಹೋಲಿಕೆಗೆ ನಿಲುಕದ ತನ್ನ ವಿಶ್ವರೂಪವನ್ನು ಸಮಸ್ತ ಸಭೆಗೆ ತೋರಿಸಿದನು.

            ದುರ್ಯೋಧನನ ದುರಹಂಕಾರದ ವರ್ತನೆಯನ್ನು ಪರೋಕ್ಷವಾಗಿ ಖಂಡಿಸಿದ ವಿದುರ ಕೃಷ್ಣನ ಶಕ್ತಿಸಾಮರ್ಥ್ಯಗಳನ್ನು ದೃಷ್ಟಾಂತರೂಪದಲ್ಲಿ ಹೇಳಿದಾಗಲೂ ಅವುಗಳನ್ನು ಗಣನೆಗೆ ತಂದುಕೊಳ್ಳದ ದುರ್ಯೋಧನನಿಗೆ ಕೊನೆಯದಾಗಿ ಕೃಷ್ಣ ತನ್ನ ಸಾಮರ್ಥ್ಯವನ್ನು ಮನದಟ್ಟುಮಾಡಿಸಬೇಕೆಂದು ತನ್ನ ವಿಶ್ವರೂಪವನ್ನು ತೋರುವುದಕ್ಕೆ ಮುಂದಾಗುತ್ತಾನೆ. ಅದುವರೆಗೂ ಆಸ್ಥಾನದಲ್ಲಿ ಕುಳಿತುಕೊಂಡಿದ್ದ ಕೃಷ್ಣ ಮೆಲ್ಲನೆ ಎದ್ದು ಮೈಮುರಿದು ನಿಂತುಕೊಂಡು, ತನ್ನ ಅಂಗಾಂಗದಿಂದ ನೂರು ಸೂರ್ಯರ ಪ್ರಕಾಶವನ್ನು ಹೊರಸೂಸುತ್ತ, ಅದೆಲ್ಲವೂ ಆಸ್ಥಾನವನ್ನು ವ್ಯಾಪಿಸಿಕೊಳ್ಳುವಂತೆ ಮಾಡುತ್ತ, ತನ್ನ ಬಗೆಬಗೆಯ ಲೀಲೆಗಳನ್ನು ಅತ್ಯಧಿಕವಾಗಿ ಪ್ರದರ್ಶಿಸುತ್ತ, ಯಾವ ರೀತಿಯಿಂದಲೂ ಹೋಲಿಕೆಗೆ ಸಾಧ್ಯವಾಗದಂತಹ ತನ್ನ ವಿಶ್ವರೂಪವನ್ನು ಸಭೆಗೆ ತೋರಿಸಿದನು. ದುರ್ಯೋಧನ ಹಾಗೂ ಆತನ ತಮ್ಮಂದಿರು ಅದನ್ನು ನೋಡಿಯಾದರೂ ಮನಸ್ಸು ಬದಲಾಯಿಸಲಿ, ವಿನಾಕಾರಣ ಅಸಂಖ್ಯ ಸಾವುನೋವುಗಳಿಗೆ ಕಾರಣವಾಗದಿರಲಿ, ದಾಯಾದರೊಳಗೆ ಯುದ್ಧ ನಡೆಯದಿರಲಿ ಎಂಬ ಉದ್ದೇಶದಿಂದ ಹಾಗೂ ದುರ್ಯೋಧನ ಮನಸ್ಸಿನಲ್ಲಿ ತುಂಬಿಕೊಂಡಿರುವ ದುರಹಂಕಾರ, ದರ್ಪ, ಅತಿಯಾದ ಆತ್ಮವಿಶ್ವಾಸ ಅಳಿದುಹೋಗಲಿ ಎಂಬ ಉದ್ದೇಶದಿಂದ ಕೃಷ್ಣ ಹೀಗೊಂದು ಅಸ್ತ್ರವನ್ನು ಪ್ರಯೋಗಿಸುತ್ತಾನೆ.   

 

ಒಳಗೆ ಹೊಳೆದನು ಬಾಹ್ಯದಲಿ ಪ್ರ

ಜ್ವಲಿಸಿದನು ತಾನಲ್ಲದನ್ಯರ

ಬಳಕೆ ಬೇಱೊಂದಿಲ್ಲದಂತಿರೆ ಕೂಡೆ ತೋಱಿದನು

ಒಳಗೆ ಬಿಗಿವೆವೋ ಹೊಱಗೆ ಕೃಷ್ಣನ

ಸಿಲುಕಿಸುವೆವೊ ತಿಳಿಯೆ ಕೃಷ್ಣರು

ಹಲಬರಾಗಿಹರಾರ ಕಟ್ಟುವೆವೆಂದರಾ ಖಳರು  ೨೪

 

ಪದ್ಯದ ಅನ್ವಯಕ್ರಮ:

ಒಳಗೆ ಹೊಳೆದನು, ಬಾಹ್ಯದಲಿ ಪ್ರಜ್ವಲಿಸಿದನು, ತಾನಲ್ಲದೆ ಅನ್ಯರ ಬಳಕೆ ಬೇಱೊಂದಿಲ್ಲದಂತೆ ಇರೆ, ಕೂಡೆ ತೋಱಿದನು, ಒಳಗೆ ಬಿಗಿವೆವೋ ಹೊಱಗೆ ಕೃಷ್ಣನ ಸಿಲುಕಿಸುವೆವೊ ತಿಳಿಯೆ ಕೃಷ್ಣರು ಹಲಬರ್ ಆಗಿಹರ್ ಆರ ಕಟ್ಟುವೆವು ಎಂದರ್ ಆ ಖಳರು.

ಪದ-ಅರ್ಥ:

ಒಳಗೆ ಹೊಳೆದನು-ಆಂತರ್ಯದಲ್ಲಿ ಪ್ರಕಾಶಿಸಿದನು;  ಬಾಹ್ಯದಲಿ ಪ್ರಜ್ವಲಿಸಿದನು-ಹೊರಗೆ ಚೆನ್ನಾಗಿ ಉರಿದನು;  ತಾನಲ್ಲದನ್ಯರ ಬಳಕೆ-ತಾನು ಅಲ್ಲದೆ ಬೇರೆಯವರ ಶಕ್ತಿಗೆ; ಬೇಱೊಂದಿಲ್ಲದಂತಿರೆ-ಬೇರೆ ಯಾರೂ ಸಮಾನರಲ್ಲ ಎಂಬಂತೆ ಇರಲು;  ಕೂಡೆ ತೋಱಿದನು-ಚೆನ್ನಾಗಿ ತೋರಿಸಿದನು; ಒಳಗೆ-ಮನಸ್ಸಿನೊಳಗೆ;  ಬಿಗಿವೆವೊ-ಕಟ್ಟುವೆವೊ;  ಹೊಱಗೆ-ಕಾರ್ಯರೂಪದಲ್ಲಿ;  ಸಿಲುಕಿಸುವೆವೊ-ಕಟ್ಟಿಹಾಕುವೆವೊ;  ತಿಳಿಯೆ-ತಿಳಿಯದಂತೆ, ಅರಿವಾಗದಂತೆ;  ಕೃಷ್ಣರು ಹಲಬರಾಗಿಹರ್ –ಹಲವು ಮಂದಿ ಕೃಷ್ಣರು ಸೃಷ್ಟಿಯಾಗಿದ್ದಾರೆ;  ಆರ ಕಟ್ಟುವೆವು-ಯಾರನ್ನು ಕಟ್ಟಿಹಾಕಲಿ;  ಖಳರು-ದುಷ್ಟರು.

            ಕೃಷ್ಣ ವಿಶ್ವರೂಪವನ್ನು ತೋರಿಸುತ್ತ ತನ್ನ ಆಂತರ್ಯದಲ್ಲಿಯೇ ಪ್ರಕಾಶಿಸುತ್ತ, ಹೊರಗೆ ಎಲ್ಲರಿಗೂ ಕಾಣುವಂತೆ ಚೆನ್ನಾಗಿ ಉರಿದನು. ತನ್ನನ್ನು ಹೊರತುಪಡಿಸಿದರೆ ಉಳಿದವರ ಶಕ್ತಿಗೆ ಯಾರೂ ಸಮಾನರಲ್ಲ ಎಂಬಂತೆ ತನ್ನ ಶಕ್ತಿಸಾಮರ್ಥ್ಯಗಳನ್ನು ಚೆನ್ನಾಗಿ ತೋರಿಸಿದನು. ಕೃಷ್ಣನನ್ನು ಬಂಧಿಸಬೇಕೆಂದು  ಮನಸ್ಸಿನೊಳಗೆ ಅಂದುಕೊಳ್ಳುತ್ತ ಅದನ್ನು ಕಾರ್ಯರೂಪಕ್ಕೆ ತರಬೇಕೆಂದು  ದುರ್ಯೋಧನ ಮೊದಲಾದವರು ಹಂಬಲಿಸಿದರೂ ತಮಗೆ ಅರಿವಾಗದಂತೆ ಕೃಷ್ಣ ತನ್ನೊಂದಿಗೆ ಹಲವು ಕೃಷ್ಣರನ್ನು ಸೃಷ್ಟಿಮಾಡಿದುದನ್ನು ಕಂಡು ಯಾರನ್ನು ಕಟ್ಟಿಹಾಕಲಿ ಎಂದುಕೊಳ್ಳುತ್ತ ದುಷ್ಣರು ಗೊಂದಲಕ್ಕೆ ಒಳಗಾದರು.

            ದುರ್ಯೋಧನ ಸಂಧಾನಕ್ಕೆ ಒಪ್ಪದೆ ದುರಹಂಕಾರಿಯಾಗಿ ವರ್ತಿಸಿ ಅನುಚಿತವಾಗಿ ನಡೆದುಕೊಂಡಾಗ, ಗುರುಹಿರಿಯರ ಮಾತುಗಳನ್ನು ನಿರ್ದಾಕ್ಷಿಣ್ಯವಾಗಿ ತಳ್ಳಿಹಾಕಿದಾಗ ಅಲ್ಲಿಂದ ಹೊರಡಲು ಸಿದ್ಧನಾದ ಕೃಷ್ಣ, ಕುಳಿತಲ್ಲಿಂದ ಮೆಲ್ಲನೆ ಮೈಮುರಿದು ಏಳುತ್ತಾ  ಕೊನೆಯ ಅಸ್ತ್ರವಾಗಿ ತನ್ನ ವಿಶ್ವರೂಪವನ್ನು ತೋರಿಸಿ ದುರ್ಯೋಧನಾದಿಗಳ ಮನಸ್ಸನ್ನು ಪರಿವರ್ತಿಸಲು ಪಯತ್ನಿಸುತ್ತಾನೆ. ಮೊದಲಲ್ಲಿ ತಾನು ಆಂತರ್ಯದಲ್ಲಿಯೇ ಪ್ರಕಾಶಿಸುತ್ತ ಅದರ ಪರಿಣಾಮಗಳನ್ನು ಹೊರಗೆ ಕಾಣಿಸುತ್ತ ಈ ಲೋಕದಲ್ಲಿ ತನ್ನನ್ನು ಹೊರತುಪಡಿಸಿದರೆ ತನ್ನ ಶಕ್ತಿ ಸಾಮರ್ಥ್ಯಗಳಿಗೆ  ಉಳಿದ ಯಾರೊಬ್ಬರ ಶಕ್ತಿಸಾಮರ್ಥ್ಯಗಳು ಸಮಾನವಲ್ಲ. ಯಾರೊಬ್ಬರೂ ತನಗೆ ಸಮಾನರಲ್ಲ ಎನ್ನುವಂತೆ ಕೃಷ್ಣನು ಒಳಗೊಳಗೆ ಪ್ರಕಾಶಿಸುತ್ತ ಹೊರಗೆ ಪ್ರತಿಯೊಬ್ಬರೂ ದಂಗಾಗುವಂತೆ, ಆಶ್ಚರ್ಯಚಕಿತವಾಗುವಂತೆ ತನ್ನ ಶಕ್ತಿಸಾಮರ್ಥ್ಯಗಳನ್ನು ತೋರ್ಪಡಿಸಿದನು. ಇಷ್ಟಾದರೂ ದುಷ್ಟರಾದ ದುರ್ಯೋಧನಾದಿಗಳಿಗೆ ಕೃಷ್ಣನ ಈ ವಿಶ್ವರೂಪ ಹಾಗೂ ಅದರ ಹಿಂದಿನ ಮರ್ಮದ ಅರಿವಾಗಲಿಲ್ಲ. ಅವರು ಕೃಷ್ಣನನ್ನು ಹೇಗಾದರೂ ಬಂಧಿಸಬೇಕೆಂದು ಮನಸ್ಸಿನೊಳಗೆ ಅಂದುಕೊಳ್ಳುತ್ತ, ಅದನ್ನು ಕಾರ್ಯರೂಪಕ್ಕೆ ತರಲು  ಹಂಬಲಿಸುತ್ತ ಇದ್ದಾಗ ಕೃಷ್ಣ ತಾನೊಬ್ಬನಾದರೂ ಉಳಿದವರ ಕಣ್ಣುಗಳಿಗೆ ಅಲ್ಲಿರುವ ಪ್ರತಿಯೊಬ್ಬರೂ ಕೃಷ್ಣನಾಗಿ  ಕಾಣುವಂತೆ ಮಾಡಿ ತನ್ನನ್ನು ಬಂಧಿಸುವುದಕ್ಕೆ ಹೊರಟವರು ಯಾರನ್ನು ಬಂಧಿಸಲಿ ಎಂದುಕೊಳ್ಳುವಂತೆ ಗೊಂದಲಕ್ಕೀಡುಮಾಡಿದನು.    

 

ಅಮಿತಕರಣಾ ಸಿಂಧು ನೀನನು

ಪಮ ಚರಿತ್ರನು ನಿಮ್ಮಡಿಯ ಪದ

ಕಮಲ ದರುಶನದಿಂದ ಹಿಂಗಿದವಘದ ರಾಶಿಗಳು

ಸಮತೆಯಲಿ ನೀ ನೋಡು ಶರಣರ

ಮಮತೆ ಬೇಹುದು ಜೀಯ ಲಕ್ಶ್ಮೀ

ರಮಣ ಕೃಪೆಮಾಡೆಂದು ಮೈಯ್ಯಿಕ್ಕಿದಳು ಗಾಂಧಾರಿ  ೨೫

ಪದ್ಯದ ಅನ್ವಯಕ್ರಮ:

ಅಮಿತ ಕರುಣಾ ಸಿಂಧು ನೀನು ಅನುಪಮ ಚರಿತನು ನಿಮ್ಮಡಿಯ ಪದಕಮಲ ದರುಶನದಿಂದ ಅಘದ ರಾಶಿಗಳು ಹಿಂಗಿದವು.  ನೀ ಸಮತೆಯಲಿ ನೋಡು, ಶರಣರ ಮಮತೆ ಬೇಹುದು. ಜೀಯ ಲಕ್ಷ್ಮೀರಮಣ ಕೃಪೆಮಾಡು ಎಂದು ಗಾಂಧಾರಿ ಮೈಯಿಕ್ಕಿದಳು.

ಪದ-ಅರ್ಥ:

ಅಮಿತ-ಮಿತಿಯಿಲ್ಲದ;  ಕರುಣಾಸಿಂಧು-ಕರುಣೆಯ ಮಹಾಪೂರ;  ಅನುಪಮ ಚರಿತನು– ಹೋಲಿಕೆಗೆ ನಿಲುಕದವನು;  ನಿಮ್ಮಡಿಯ-ನಿಮ್ಮ ಪಾದದ;  ಪದಕಮಲ-ಪಾದವೆಂಬ ಕಮಲ;  ದರುಶನ-ನೋಟ;  ದರ್ಶನ;  ಹಿಂಗಿದವು-ನಾಶವಾದವು;  ಅಘದ ರಾಶಿಗಳು-ಪಾಪಗಳ ರಾಶಿ;  ಸಮತೆಯಲಿ-ಸಮಾನತೆಯ ಭಾವನೆಯಿಂದ;  ನೋಡು-ಪರಿಪಾಲಿಸು;  ಶರಣರ -ಶರಣಾಗತಿಯನ್ನು ಬೇಡುವವರ;  ಬೇಹುದು-ತೋರಬೇಕು;  ಜೀಯ-ದೇವಾ;  ಲಕ್ಷ್ಮೀರಮಣ-ಕೃಷ್ಣ, ವಿಷ್ಣು;  ಕೃಪೆಮಾಡು-ದಯೆತೋರು;  ಮೈಯಿಕ್ಕಿದಳು-ಪಾದಕ್ಕೆರಗಿದಳು, ಪಾದಮುಟ್ಟಿ ನಮಸ್ಕರಿಸಿದಳು.  

            ಕೃಷ್ಣ ನೀನು ಮಿತಿಯೇ ಇಲ್ಲದ ಕರುಣೆಯ ಮಹಾಪೂರ, ನಿನ್ನ ಹೋಲಿಕೆಗೆ ಯಾವುದೂ ಸರಿಸಾಟಿಯಾಗಲಾರದು. ಇಂದು ನಿನ್ನ ಪಾದಕಮಲಗಳ ದರ್ಶನದಿಂದ ನನ್ನ ಪಾಪಗಳ ರಾಶಿಯೇ ನಾಶವಾಯಿತು. ನೀನು ಸಮಾನತೆಯ ಭಾವನೆಯಿಂದ ನಮ್ಮನ್ನು ಪರಿಪಾಲಿಸಬೇಕು. ಶರಣಾಗತಿಯನ್ನು ಬೇಡುವವರಲ್ಲಿ ಮಮತೆಯನ್ನು ತೋರಬೇಕು. ದೇವಾ ಕೃಷ್ಣನೇ  ನಮ್ಮ ಮೇಲೆ ದಯೆತೋರು ಎಂದು ಗಾಂಧಾರಿ ಕೃಷ್ಣನ ಪಾದಗಳಿಗೆ ನಮಸ್ಕರಿಸಿದಳು.

            ಕೃಷ್ಣನ ವಿಶ್ವರೂಪ ಹಾಗೂ ತನ್ನ ಮಕ್ಕಳು ಆತನನ್ನು ಕಟ್ಟಿಹಾಕುವುದಕ್ಕೆ ಮಾಡಿದ ಪ್ರಯತ್ನವನ್ನು ಅರಿತುಕೊಂಡ ಗಾಂಧಾರಿ ತನ್ನ ಮಕ್ಕಳು ಕೃಷ್ಣನನ್ನು ಅನುಚಿತವಾಗಿ ನಡೆಸಿಕೊಂಡರೆ ಅನರ್ಥವಾದೀತು, ತನ್ನ ವಂಶವೇ ಇನ್ನಿಲ್ಲದ ಪಾಡುಪಡಬೇಕಾದೀತು ಎಂದು ಅರಿತು ಭಯಭೀತಳಾಗಿ, ಕೃಷ್ಣನ ಪಾದಗಳಿಗೆ ಎರಗಿ, ಕೃಷ್ಣ, ನೀನು ಆದಿ ಅಂತ್ಯವಿಲ್ಲದ ಕರುಣೆಯ ಮಹಾಪೂರ, ಕರುಣಾಮಯಿ ಎಂದೆಲ್ಲ ಕೊಂಡಾಡಿದಳು. ಮಾತ್ರವಲ್ಲದೆ, ಕೃಷ್ಣನನ್ನು ಉದ್ದೇಶಿಸಿ, ಕೃಷ್ಣ ಈ ಲೋಕದಲ್ಲಿ ನಿನಗೆ ಸಮಾನರಾದವರು ಯಾರಿದ್ದಾರೆ? ನಿನ್ನೊಡನೆ ಹೋಲಿಕೆಗೆ ಯಾರೂ ಸರಿಸಾಟಿಯಾಗಲಾರರು. ನಿನಗೆ ನೀನೇ ಸಾಟಿ. ನೀನು ಅಸಾಧಾರಣ ಪುರುಷನೆಂಬುದನ್ನು ಈಗಾಗಲೇ ಎಲ್ಲರಿಗೂ ಮನದಟ್ಟು ಮಾಡಿರುವೆ. ಅಲ್ಲದೆ ನೀನು ನಮ್ಮ ಆಸ್ಥಾನಕ್ಕೆ ದಯಮಾಡಿಸಿದುದರಿಂದ ಹಾಗೂ ನಿನ್ನ ಪಾದಕಮಲಗಳ ದರ್ಶನದಿಂದ ನಮ್ಮ ಪಾಪಗಳ ರಾಶಿಯೆಲ್ಲವೂ ನಾಶವಾಗಿ ನಾವು ಪಾವನರಾದೆವು. ನನ್ನ ಮಕ್ಕಳು ನಿನ್ನೊಡನೆ ಅನುಚಿತವಾಗಿ ನಡೆದುಕೊಂಡಿರಬಹುದು. ನಿನಗೆ ಶರಣಾಗತರಾದವರನ್ನು ನೀನು ರಕ್ಷಿಸುವಂತೆ  ಅನುಚಿತವಾಗಿ ನಡೆದುಕೊಂಡಿರುವ ನನ್ನ ಮಕ್ಕಳನ್ನೂ ರಕ್ಷಿಸಿ ಮಮತೆಯನ್ನು ತೋರಬೇಕು. ನಮ್ಮ ಮೇಲೆ ದಯೆತೋರಬೇಕು ಎಂದು ಕೃಷ್ಣನ ಪಾದಕಮಲಗಳಿಗೆ ನಮಸ್ಕರಿಸಿದಳು. 

 

ನಾವು ಸಂಧಿಯನೊಲಿವೆವೆಮ್ಮಯ

ಭಾವದಲಿ ಹುಳುಕಿಲ್ಲ ಸಂಪ್ರತಿ

ದೇವನಭಿಮತವಲ್ಲ ಬಲ್ಲೆನು ಮುರಹರನ ಮನವ

ನೀವು ಮೇಗರೆಯಱಿತದವರೀ

ರಾವಣಾರಿಯ ಬಗೆಯನಱಿಯಿರಿ

ಸಾವೆನೀತನ ಕೈಯ ಬಾಯಲಿ ಭೀತಿ ಬೇಡೆಂದ  ೨೬

ಪದ್ಯದ ಅನ್ವಯಕ್ರಮ:

ನಾವು ಸಂಧಿಯನ್ ಒಲಿವೆವು, ಎಮ್ಮಯ ಭಾವದಲಿ ಹುಳುಕಿಲ್ಲ, ಸಂಪ್ರತಿ ದೇವನ ಅಭಿಮತವಲ್ಲ, ಮುರಹರನ ಮನವ ಬಲ್ಲೆನು, ನೀವು ಮೇಗರೆ ಅಱಿತದವರ್ ಈ ರಾವಣಾರಿಯ ಬಗೆಯನ್ ಅಱಿಯಿರಿ. ಈತನ  ಕೈಯ ಬಾಯಲಿ ಸಾವೆನ್ ಭೀತಿ ಬೇಡ ಎಂದ.

ಪದ-ಅರ್ಥ:

ಸಂಧಿಯನೊಲಿವೆವು-ಸಂಧಿಯ ವಿಧಾನವನ್ನು ಮೆಚ್ಚಿಕೊಳ್ಳುತ್ತೇವೆ;  ಎಮ್ಮಯ ಭಾವದಲಿ-ನಮ್ಮ ನಿರ್ಧಾರದಲ್ಲಿ;  ಹುಳುಕಿಲ್ಲ-ದೋಷವಿಲ್ಲ;  ಸಂಪ್ರತಿ-ಸದ್ಯದ ಪರಿಸ್ಥಿತಿ;  ದೇವನಭಿಮತವಲ್ಲ-ಕೃಷ್ಣನ ಇಚ್ಛೆಯಲ್ಲ;  ಬಲ್ಲೆನು-ತಿಳಿದಿರುವೆನು;  ಮುರಹರನ ಬರವ-ಕೃಷ್ಣನ ಆಗಮನವನ್ನು;  ಮೇಗರೆಯ-ವಂಚನೆಯನ್ನು, ಠಕ್ಕನ್ನು;  ಅಱಿತದವರ್-ಅರಿಯದವರು;  ರಾವಣಾರಿಯ-ರಾವಣನ ವೈರಿಯ(ಕೃಷ್ಣನ);  ಬಗೆಯ ಬಲ್ಲೆನು-ಮನಸ್ಸನ್ನು ತಿಳಿದಿದ್ದೇನೆ;  ಸಾವೆನ್-ಸಾಯುತ್ತೇನೆ;  ಕೈಯ ಬಾಯಲಿ– ಕೈಯಲ್ಲಿನ ಆಯುಧದಿಂದ.

            ದುರ್ಯೋಧನ ಸಭೆಯನ್ನು ಉದ್ದೇಶಿಸಿ, ನಾವು ಕೃಷ್ಣನ ಸಂಧಿಯ ವಿಧಾನವನ್ನು ಮೆಚ್ಚಿಕೊಳ್ಳುತ್ತೇವೆ. ಆದರೆ ನಮ್ಮ ನಿರ್ಧಾರದಲ್ಲಿ ಯಾವುದೇ ದೋಷವಿಲ್ಲ. ಸದ್ಯದ ಪರಿಸ್ಥಿತಿಯನ್ನು ಕೃಷ್ಣ ನಿರ್ಧರಿಸುವಂತಿಲ್ಲ. ಈ ಕೃಷ್ಣನ ಮನಸ್ಸನ್ನು ನಾವು ಚೆನ್ನಾಗಿ ಬಲ್ಲೆನು. ನೀವು ಈ ಕೃಷ್ಣನ ವಂಚನೆಯನ್ನು ಅರಿಯದವರು. ರಾವಣವೈರಿ ಎನಿಸಿರುವ ಈ ಕೃಷ್ಣನ ಮನಸ್ಸಿನಲ್ಲಿ ಏನಿದೆ? ಎಂಬುದನ್ನು ನಾನು ಚೆನ್ನಾಗಿ ತಿಳಿದುಕೊಂಡಿದ್ದೇನೆ. ಈತನ ಕೈಯಲ್ಲಿಯೇ ಸಾಯಬೇಕು ಎಂದಿದ್ದರೆ ಅದನ್ನು ತಪ್ಪಿಸಲಾಗದು ಎಂದು ದುರ್ಯೋಧನನು ಸ್ಪಷ್ಟಪಡಿಸಿದನು. 

            ಗಾಂಧಾರಿ ಕೃಷ್ಣನ ಕಾಲಿಗೆರಗಿ ಬೇಡಿಕೊಂಡುದು ದುರ್ಯೋಧನನಿಗೆ ಇಷ್ಟವಾಗಲಿಲ್ಲ. ಅವನು ಸಭೆಯನ್ನು ಉದ್ದೇಶಿಸಿ ತನ್ನ ನಿಲುವನ್ನು ಪ್ರಕಟಿಸಿದನು. ಕೃಷ್ಣ ಸಂಧಾನಕಾರನಾಗಿ ನಮ್ಮ ಸಭೆಗೆ ಬಂದಿರುವುದು ಹಾಗೂ ಸಂಧಾನಕ್ಕೆ ಪ್ರಯತ್ನಿಸಿರುವುದನ್ನು ನಾವು ಮೆಚ್ಚಿಕೊಳ್ಳುತ್ತೇವೆ. ರಾಜನೀತಿಯಲ್ಲಿ ಸಂಧಾನವೂ ಒಂದಾಗಿದೆ. ಆದರೆ ಸಂಧಾನಕಾರನ ಮಾತುಗಳನ್ನು ಒಪ್ಪಲೇಬೇಕೆಂದೇನಿಲ್ಲ. ಕೃಷ್ಣನ ಸಂಧಾನದ ಮಾತುಗಳು ನಮಗೆ ಇಷ್ಟವಾಗಲಿಲ್ಲ. ಹಾಗಾಗಿ ನಾವು ಅದನ್ನು ತಿರಸ್ಕರಿಸಿದ್ದೇವೆ. ನಾವು ಹಾಗೆ ತಿರಸ್ಕರಿಸಿದುದರಲ್ಲಿ ಯಾವುದೇ ದೋಷವಿಲ್ಲ. ಸಂಧಾನ ಬೇಕೋ ಬೇಡವೋ ಎಂಬುದನ್ನು ಕೃಷ್ಣನೊಬ್ಬನೇ ನಿರ್ಧರಿಸುವಂತಿಲ್ಲ. ಅದನ್ನು ನಾವೇ ನಿರ್ಧರಿಸುತ್ತೇವೆ. ಅದಕ್ಕಿಂತಲೂ ಹೆಚ್ಚಾಗಿ ಕೃಷ್ಣನ ಮನಃಸ್ಥಿತಿಯನ್ನು ನಾನು ಚೆನ್ನಾಗಿ ಬಲ್ಲೆನು. ಕೃಷ್ಣ ಸಂಧಾನವನ್ನು ಮುಂದಿಟ್ಟುಕೊಂಡು ನಮ್ಮನ್ನು ವಂಚಿಸಲು ಬಂದವನು. ನಾವು ಅದನ್ನು ಅರಿಯದೇ ಇರುವವರಲ್ಲ. ಆತ ರಾವಣವೈರಿ ಅನ್ನಿಸಿಕೊಂಡಿರಬಹುದು. ಆದರೆ ಆತನ ಮನಸ್ಸಿನಲ್ಲಿ ಏನೆಲ್ಲ ತಂತ್ರಗಳು ರೂಪುಗೊಳ್ಳುತ್ತವೆ ಎಂಬುದನ್ನು ನಾನು ಚೆನ್ನಾಗಿ ತಿಳಿದುಕೊಂಡಿದ್ದೇನೆ. ಹಾಗಾಗಿಯೇ ಸಂಧಾನವನ್ನು ತಿರಸ್ಕರಿಸಿದ್ದೇನೆ. ನಮ್ಮ ಸಾವು ನಮ್ಮ ಕೈಯಲ್ಲಿಲ್ಲ. ನಾವು ಆತನ ಕೈಯಲ್ಲಿನ ಆಯುಧಗಳಿಂದಲೇ ಸಾಯಬೇಕು ಎಂದಿದ್ದರೆ ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ದುರ್ಯೋಧನನು ಸಭೆಗೆ ಸ್ಪಷ್ಟಪಡಿಸಿದನು. 

 

ವಿದುರ ಭಾರದ್ವಾಜ ಗೌತಮ

ನದಿಯ ಮಗ ಧೃತರಾಷ್ಟ್ರನಾತನ

ಸುದತಿ ಕರ್ಣ ವಿಕರ್ಣ ಶಲ್ಯ ಸುಬಾಹು ಗುರುಸುತರು

ವದನದುತ್ಸವವಡಗಿ ಕೃಷ್ಟನ

ಪದವನೋಲಗಿಸುತ್ತ ಬರೆ ಕರು

ಣದಲಿ ಕಮಲಾಕಾಂತನುಚಿತದಲವರ ಬೀಳ್ಕೊಟ್ಟ  ೨೭

ಪದ್ಯದ ಅನ್ವಯಕ್ರಮ:

ವಿದುರ, ಭಾರದ್ವಾಜ, ಗೌತಮ, ನದಿಯ ಮಗ, ಧೃತರಾಷ್ಟ್ರನ್, ಆತನ ಸುದತಿ, ಕರ್ಣ, ವಿಕರ್ಣ, ಶಲ್ಯ, ಸುಬಾಹು, ಗುರುಸುತರು ವದನದ ಉತ್ಸವವು ಅಡಗಿ ಕೃಷ್ಣನ ಪದವನ್ ಓಲಗಿಸುತ್ತ ಬರೆ, ಕಮಲಾಕಾಂತನ್  ಕರುಣದಲಿ, ಉಚಿತದಲಿ ಅವರ ಬೀಳ್ಕೊಟ್ಟ

ಪದ-ಆರ್ಥ:

ವಿದುರ-ಮಂತ್ರಿ;  ಭಾರದ್ವಾಜ-ದ್ರೋಣ;  ಗೌತಮ-ಕೃಪಾಚಾರ್ಯ;  ನದಿಯ ಮಗ-ಭೀಷ್ಮ;  ಧೃತರಾಷ್ಟ್ರನಾತನ ಸುದತಿ-ಧೃತರಾಷ್ಟ್ರ ಹಾಗೂ ಆತನ ಹೆಂಡತಿ ಗಾಂಧಾರಿ;  ಕರ್ಣ-ದುರ್ಯೋಧನನ ಸ್ನೇಹಿತ, ಅಂಗದೇಶದ ರಾಜ;  ವಿಕರ್ಣ-ದುರ್ಯೋಧನನ ತಮ್ಮ; ಶಲ್ಯ-ಮದ್ರ ದೇಶಾಧಿಪತಿ;  ಸುಬಾಹು-ದುರ್ಯೋಧನನ ತಮ್ಮ;  ಗುರುಸುತ-ಅಶ್ವತ್ಥಾಮ;  ವದನ-ಮುಖ;  ಉತ್ಸವವು ಅಡಗಿ-ಸಂತಸವು ಅಳಿದು;  ಕೃಷ್ಣನ ಪದವನ್-ಕೃಷ್ಣನ ಪಾದವನ್ನು;  ಓಲಗಿಸುತ್ತ ಬರೆ-ಬೇಡಿಕೊಳ್ಳುತ್ತಾ ಇರಲು;  ಕರುಣದಲಿ-ಕರುಣೆಯಿಂದ;  ಕಮಲಾಕಾಂತ-ಕೃಷ್ಣ;  ಉಚಿತದಲಿ-ಯೋಗ್ಯರೀತಿಯಿಂದ. 

            ದುರ್ಯೋಧನನು ಪ್ರಕಟಿಸಿದ ನಿರ್ಧಾರವನ್ನು ಕೇಳಿದ ಮೇಲೆ ಸಭೆಯಲ್ಲಿ ಉಪಸ್ಥಿತರಿದ್ದ ವಿದುರ, ದ್ರೋಣ, ಕೃಪಾಚಾರ್ಯ, ಭೀಷ್ಮ, ಧೃತರಾಷ್ಟ್ರ, ಗಾಂಧಾರಿ, ಕರ್ಣ, ವಿಕರ್ಣ, ಶಲ್ಯ, ಸುಬಾಹು, ಅಶ್ವತ್ಥಾಮ ಮೊದಲಾದವರ ಮುಖದಲ್ಲಿನ ಸಂತಸವು ಅಳಿದುಹೋಗಿ ಆವರೆಲ್ಲರೂ ಕೃಷ್ಣನನ್ನು ಬೇಡಿಕೊಳ್ಳುತ್ತಿರಲು ಕೃಷ್ಣನು ಅವರ ಮೇಲೆ ಕರುಣೆಯನ್ನು ತೋರಿ  ಯೋಗ್ಯರೀತಿಯಿಂದ ಅವರನ್ನು ಬೀಳ್ಕೊಟ್ಟನು.

            ದುರ್ಯೋದನ ಕೃಷ್ಣನ ಸಂಧಾನದ ಮಾತುಗಳನ್ನು ನೇರವಾಗಿ ತಿರಸ್ಕರಿಸಿ ಕೃಷ್ಣನನ್ನು ಎದುರಿಸಿ ಯುದ್ಧಮಾಡುವುದಕ್ಕೂ ಸಿದ್ಧನಿದ್ದೇನೆ ಎಂಬ ಮಾತುಗಳನ್ನು ಕೇಳಿದ, ಸಂಧಾನಕಾರನಾಗಿ ಬಂದಿರುವ ಕೃಷ್ಣನನ್ನು ಕಟ್ಟಿಹಾಕಿ ಅವಮಾನಮಾಡುವ ಅಕೃತ್ಯವನ್ನು ಕಣ್ಣಾರೆ ನೋಡಿದ ಸಭೆಯಲ್ಲಿ ಉಪಸ್ಥಿತರಿದ್ದ ಮಂತ್ರಿಯಾಗಿರುವ ವಿದುರ,  ಗುರುಗಳಾದ ದ್ರೋಣಾಚಾರ್ಯ, ಪಿತಾಮಹ ಭೀಷ್ಮ, ರಾಜನಾದ ಧೃತರಾಷ್ಟ್ರ, ಆತನ ಪಟ್ಟದ ರಾಣಿ ಗಾಂಧಾರಿ, ದುರ್ಯೋಧನನ ಆತ್ಮೀಯ ಸ್ನೇಹಿತನಾದ ಅಂಗದೇಶಾಧಿಪತಿ ಕರ್ಣ, ದುರ್ಯೋಧನನ ತಮ್ಮಂದಿರಾದ ವಿಕರ್ಣ ಹಾಗೂ ಸುಬಾಹು, ಮದ್ರದೇಶಾಧಿಪತಿ ಶಲ್ಯ, ಗುರುಪುತ್ರ ಅಶ್ವತ್ಥಾಮ ಮೊದಲಾದವರಿಗೆ ತಮ್ಮ ಮನಸ್ಸಿನಲ್ಲಿದ್ದ ನೆಮ್ಮದಿ, ಸಂತಸಗಳು ಅಳಿದುಹೋದವು. ಕೃಷ್ಣನನ್ನು ಕಟ್ಟಿಹಾಕುವಂತಹ ದುರಹಂಕಾರದ ಹಾಗೂ ಅತಿರೇಕದ ವರ್ತನೆ, ಕೃಷ್ಣನನ್ನು ವೈರಿ ಎಂಬಂತೆ ನಡೆಸಿಕೊಂಡ ರೀತಿ, ಆತನ ಹಿತೋಪದೇಶಗಳೆಲ್ಲವನ್ನೂ ಪಕ್ಷಪಾತಧೋರಣೆ ಎಂದು ತೀರ್ಮಾನಿಸಿದ ಬಗೆ-ಎಲ್ಲವೂ ಸಭಾಸದರನ್ನು, ಅಲ್ಲಿದ್ದ ಹಿರಿಯರನ್ನು ಭಯಭೀತಗೊಳಿಸಿದವು. ಕೃಷ್ಣನನ್ನು ವಿರೋಧಿಸುವುದೆಂದರೆ ವಿನಾಶವನ್ನು ಮೈಮೇಲೆ ಎಳೆದುಕೊಂಡಂತೆ ಎಂಬುದು ಅವರ ನಿಲುವು. ದುರ್ಯೋಧನನ ಈ ರೀತಿಯ ದುರಹಂಕಾರದ ವರ್ತನೆಯಿಂದ ಯಾವ ಅನರ್ಥವೂ ಸಂಭವಿಸದಿರಲಿ ಎಂದುಕೊಂಡು ಎಲ್ಲಾ ಹಿರಿಯರು ಕೃಷ್ಣನನ್ನು ಪರಿಪರಿಯಾಗಿ ಬೇಡಿಕೊಳ್ಳತೊಡಗಿದಾಗ ಕೃಷ್ಣ ಅವರ ಮೇಲೆ ಕರುಣೆಯನ್ನು ತೋರಿಸಿ, ಯಾವ ಕೋಪತಾಪಗಳನ್ನೂ ತೋರಿಸದೆ ಅಲ್ಲಿಂದ ಹೊರಟುಹೋದನು.

 

ನಯನದೊಳೇಕಾಂತದಲಿ ಸಲೆ ಕಾ

ರಿಯವ ನುಡಿದವನಾಸೆ ವಾಸಿಯ

ಬಯಸಲಾಗದು ಹಿತವನೇ ಬಯಸುವುದು ಕುರುಕುಲಕೆ

ನಿಯತವಿದು ಪಾಂಡವರೊಡನೆ ಸಂ

ಧಿಯ ಸರಸ ಸಮರಾಂಗವೀಯ

ನ್ವಯಕೆ ನಿರ್ಣಯವೆಂದು ನೀವಾತಂಗೆ ಸಾಱುವುದು  ೨೮

ಪದ್ಯದ ಅನ್ವಯಕ್ರಮ:

ಏಕಾಂತದಲಿ ಸಲೆ ನಯನದೊಳ್ ಕಾರಿಯವ ನುಡಿದು ಅವನಾಸೆ ವಾಸಿಯ ಬಯಸಲಾಗದು, ಕುರುಕುಲಕೆ  ಹಿತವನೇ ಬಯಸುವುದು ಇದು ನಿಯತ. ನೀವು ಪಾಂಡವರೊಡನೆ ಸಂಧಿಯ ಸರಸ ಸಮರಾಂಗವು ಈ ಅನ್ವಯಕೆ ನಿರ್ಣಯವೆಂದು ಆತಂಗೆ ಸಾಱುವುದು. 

ಪದ-ಅರ್ಥ:

ನಯನದೊಳ್-ಕಣ್ಣುಗಳ ಮೂಲಕ;  ಏಕಾಂತದಲಿ-ರಹಸ್ಯವಾಗಿ;  ಸಲೆ-ಚೆನ್ನಾಗಿ;  ಕಾರಿಯವ ನುಡಿದು-ಉದ್ದೇಶವನ್ನು ತಿಳಿಸಿ;  ಅವನಾಸೆ-ದುರ್ಯೋಧನನ ಆಸೆ;  ವಾಸಿಯ ಬಯಸಲಾಗದು-ಹಿಂಗುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ;  ಕುರುಕುಲ-ಕೌರವ ವಂಶ;  ಹಿತವನೇ ಬಯಸುವುದು-ಒಳಿತನ್ನೇ ಕರುಣಿಸುವುದು;  ನಿಯತವಿದು-ಇದು ಸತ್ಯ;  ಸಂಧಿಯ ಸರಸ-ಸಂಧಾನದ ಮಾತುಕತೆ; ಸಮರಾಂಗ-ಯುದ್ಧ;  ಈ ಅನ್ವಯಕೆ-ಈ ಸಂಬಂಧಕ್ಕೆ;  ನಿರ್ಣಯ-ತೀರ್ಮಾನ;  ಸಾಱುವುದು-ತಿಳಿಸುವುದು.

            ಆಸ್ಥಾನಸಭೆಯಿಂದ ಹೊರಟ ಕೃಷ್ಣನು ತನ್ನ ಕಣ್ಣುಗಳ ಮೂಲಕವೇ ರಹಸ್ಯವಾಗಿ ಮುಂದಿನ ಉದ್ದೇಶವನ್ನು ತಿಳಿಸಿ ದುರ್ಯೋಧನನ ಆಸೆ ಹಿಂಗುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ನಾನು ಕುರುವಂಶಕ್ಕೆ ಹಿತವನ್ನೇ ಬಯಸುತ್ತೇನೆ. ಇದು ಸತ್ಯ. ಸಂಧಾನದ ಮಾತುಕತೆಯು ಪಾಂಡವರೊಂದಿಗಿನ ಯುದ್ಧಕ್ಕೆ ತೀರ್ಮಾನವೆಂದು ನೀವು ದುರ್ಯೋಧನನಿಗೆ ತಿಳಿಸುವುದು ಎಂದು ಸೂಚಿಸಿದನು.  

            ಸಂಧಾನ ಮುರಿದುಬಿದ್ದ ಮೇಲೆ ಕೃಷ್ಣನನ್ನು ಕಟ್ಟಿಹಾಕುವ ದುರ್ಯೋಧನನ ಅತಿರೇಕದ ವರ್ತನೆ, ಸಭಾಸದರ ಶರಣಾಗತಿ ಭಾವ ಹಾಗೂ ಅವರ ಕೋರಿಕೆಗಳನ್ನು ಮನ್ನಿಸಿದ ಕೃಷ್ಣ ತಳಮಳಕ್ಕೆ ಒಳಗಾದ ಸಭಾಸದರನ್ನು ತನ್ನ ಕಣ್ಣುಗಳ ಕರುಣಾಪೂರ್ವಕ ನೋಟದಿಂದಲೇ ಸಮಾಧಾನಿಸಿದನು. ಅಲ್ಲದೆ ತನ್ನ ಕಣ್ಣೋಟದ ಮೂಲಕವೇ ಮುಂದಿನ ಉದ್ದೇಶವನ್ನು ತಿಳಿಸಿ ದುರ್ಯೋಧನನಂತಹ ದುರಹಂಕಾರಿ, ಅವಿವೇಕಿ, ಹಠಮಾರಿಯನ್ನು ದಾರಿಗೆ ತರುವುದು ಸುಲಭದ ಮಾತಲ್ಲ. ಅಲ್ಲದೆ ಯುದ್ಧದ ಬಗೆಗಿನ ಆತನ ಅತ್ಯಾಸೆಯನ್ನು ಹಿಂಗಿಸುವುದೂ ಸುಲಭವಲ್ಲ. ಅದು ಕ್ರಮೇಣ ಹಿಂಗುವುದೆಂದು ನಾವು ನಿರೀಕ್ಷಿಸಲೂ ಸಾಧ್ಯವಿಲ್ಲ. ದುರ್ಯೋಧನನ ಮೇಲಿನ ನನ್ನ ಅಸಮಾಧಾನವನ್ನು, ಸಿಟ್ಟನ್ನು ನಾನು ಕುರುವಂಶದ ಮೇಲೆ ತೀರಿಸಿಕೊಳ್ಳುವುದಕ್ಕೆ ಪ್ರಯತ್ನಿಸುವುದಿಲ್ಲ. ಅದು ಯುಕ್ತವೂ ಅಲ್ಲ, ಸಾಧುವೂ ಅಲ್ಲ. ಇದು ಸತ್ಯ. ಸಂಧಾನವನ್ನೇ ಏರ್ಪಡಿಸಿ ನೀವೂ ಪಾಂಡವರೂ ಕೂಡಿಕೊಂಡು ಬಾಳಬೇಕೆಂಬುದು ನನ್ನ ಆಸೆಯಾಗಿತ್ತು. ಆದರೆ ದುರ್ಯೋಧನ ಅದಕ್ಕೆ ಸಿದ್ಧನಿಲ್ಲ. ಹಾಗಾಗಿ ಇನ್ನು ಯುದ್ಧ ಅನಿವಾರ್ಯ. ಪಾಂಡವರಿಗೂ ನಾನು ಅದನ್ನೇ ತಿಳಿಸುತ್ತೇನೆ. ನೀವೂ ದುರ್ಯೋಧನನಿಗೆ ಇಂದಿನ ಸಂಧಾನವೆಂದರೆ ಅದು ಯುದ್ಧಕ್ಕೆ ಅಹ್ವಾನವೆಂದು ದುರ್ಯೋಧನನಿಗೆ ತಿಳಿಸಿಬಿಡಿ ಎಂದು ಕೃಷ್ಣನು ಸಭಾಸದರಿಗೆ ಕಣ್ಸನ್ನೆಯ ಮೂಲಕವೇ ತಿಳಿಸಿದನು.

 

ಎಂದು ಗಾಂಗೇಯಾದಿಗಳನರ

ವಿಂದನಾಭನು ಬೀಳುಕೊಟ್ಟನು

ನಿಂದು ತಾ ರವಿಸುತನ ಕರೆದನು ರಥದ ಹೊರೆಗಾಗಿ

ಬಂದು ಕಿಱಿದೆಡೆಗಾಗಿ ಕಳುಹುವು

ದೆಂದು ನೇಮಿಸಿ ಬಳಿಕ ತಾಪಸ

ವೃಂದವನು ಕಳುಹಿಸಿದನು ಗದುಗಿನ ವೀರನಾರಾಯಣ  ೨೯

ಪದ್ಯದ ಅನ್ವಯಕ್ರಮ:

ಎಂದು ಅರವಿಂದನಾಭನು ಗಾಂಗೇಯಾದಿಗಳನ್ ಬೀಳುಕೊಟ್ಟನು, ತಾ ನಿಂದು ರವಿಸುತನ ಕರೆದನು, ರಥದ ಹೊರೆಗಾಗಿ ಬಂದು ಕಿಱಿದೆಡೆಗಾಗಿ ಹಳುಹುವೆ ಎಂದು ನೇಮಿಸಿ ಬಳಿಕ ತಾಪಸ ವೃಂದವನು ಕಳುಹಿಸಿದನು ಗದುಗಿನ ವೀರನಾರಾಯಣ.

ಪದ-ಅರ್ಥ:

ಗಾಂಗೇಯಾದಿಗಳನ್-ಭೀಷ್ಮ ಮೊದಲಾದವರನ್ನು;  ಅರವಿಂದನಾಭನು-ಕೃಷ್ಣನು;  ಬೀಳುಕೊಟ್ಟನು-ಬೀಳ್ಕೊಂಡನು;  ನಿಂದು-ನಿಂತು;  ರವಿಸುತನ-ಕರ್ಣನ;  ಹೊರೆಗಾಗಿ-ಸಮೀಪದವರೆಗೂ;  ಕಳುಹುವುದೆಂದು-ಕಳುಹಿಸಿಕೊಡು ಎಂದು;  ನೇಮಿಸಿ-ಒಪ್ಪಿಸಿ;  ತಾಪಸವೃಂದ-ತಪಸ್ವಿಗಳ ಸಮೂಹ;  ಗದುಗಿನ ವೀರನಾರಾಯಣ-ಕೃಷ್ಣ.

            ಇಷ್ಟನ್ನು ಸಭಾಸದರಿಗೆ ತಿಳಿಸಿ ಕೃಷ್ಣನು ಭೀಷ್ಮ ಮೊದಲಾದವರನ್ನು ಬೀಳ್ಕೊಂಡು, ಒಂದು ಕ್ಷಣ ನಿಂತು ಕರ್ಣನನ್ನು ಕರೆದು ನನ್ನನ್ನು ರಥದ ಸಮೀಪದವರೆಗೂ ಬಂದು ಕಳುಹಿಸಿಕೊಡುವೆಯಂತೆ ಬಾ ಎಂದು ಆತನನ್ನು ಒಪ್ಪಿಸಿ ಸಭೆಯಲ್ಲಿ ಉಪಸ್ಥಿತರಿದ್ದ ತಪಸ್ವಿಗಳ ಸಮೂಹವನ್ನು ಕಳುಹಿಸಿಕೊಟ್ಟನು.

            ದುರ್ಯೋಧನನ ದುರಹಂಕಾರದ ವರ್ತನೆಯಿಂದ ಹಾಗೂ ಅದರಿಂದ ಮುಂದೆ ಒದಗಬಹುದಾದ ಘನಘೋರ  ಪರಿಣಾಮಗಳ ಬಗ್ಗೆ  ಬೇಸರದಿಂದ ಕಳವಳಗೊಂಡಿದ್ದ ಸಭಾಸದರನ್ನು ಕೃಷ್ಣನು ತನ್ನ ಕಣ್ಸನ್ನೆಯ ಮೂಲಕವೇ ಸಮಾಧಾನಗೊಳಿಸಿ, ಸಭೆಯಲ್ಲಿ ಆಸೀನರಾಗಿದ್ದ ಭೀಷ್ಮ, ದ್ರೋಣ, ವಿದುರ, ಕೃಪಾಚಾರ್ಯ ಧೃತರಾಷ್ಟ್ರ, ಗಾಂಧಾರಿ ಮೊದಲಾದವರನ್ನು ಬೀಳ್ಕೊಂಡು ಹೊರಡಲು ಸಿದ್ಧನಾದನು. ಮರುಕ್ಷಣದಲ್ಲಿಯೇ ನಿಂತು ಕರ್ಣನೊಂದಿಗೆ ಪ್ರತ್ಯೇಕವಾಗಿ ಗೌಪ್ಯವಾಗಿ ಮಾತುಕತೆಯಾಡಲು ಬಯಸಿ, ಸಭೆಯಲ್ಲಿ ಆಸೀನನಾಗಿದ್ದ ಕರ್ಣನನ್ನು ಬಳಿಗೆ ಕರೆದು, ಕರ್ಣ, ನನ್ನನ್ನು ನನ್ನ ರಥದವರೆಗೆ ಕಳುಹಿಸಿಕೊಟ್ಟು ಆಮೇಲೆ ಹಿಂದಿರುಗುವೆಯಂತೆ  ಬಾ ಹೋಗೋಣ ಎಂದು ಆತನನ್ನು ಒಪ್ಪಿಸಿದನು.  ಅನಂತರ ಅಂದಿನ ಸಂಧಾನಸಭೆಯಲ್ಲಿ ಆಸೀನರಾಗಿದ್ದ ತಪಸ್ವಿಗಳ ಸಮೂಹವನ್ನು ಕಳುಹಿಸಿಕೊಟ್ಟು ಕರ್ಣನೊಂದಿಗೆ ರಾಜಸಭೆಯಿಂದ ಹೊರಟನು.

ಡಾ. ವಸಂತ್ ಕುಮಾರ್, ಉಡುಪಿ.

*****

Leave a Reply

Your email address will not be published. Required fields are marked *