ಸಾಹಿತ್ಯಾನುಸಂಧಾನ

ಕರ್ಣಾವಸಾನಂ – ಪಂಪ -ಭಾಗ – ೨

(ಮಂಗಳೂರು ವಿಶ್ವವಿದ್ಯಾನಿಲಯದ ಬಿ. ಕಾಂ. ನಾಲ್ಕನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾಗಿರುವ ಪದ್ಯಭಾಗ-ಭಾಗ-೨)

ಗದ್ಯ: ಅಂತು ಕರ್ಣ ನಿಶಿತ ವಿಕರ್ಣ ಹತಿಯಿಂದಮಸುರಾಂತಕಂ ಕೞಿಯೆ ನೊಂದು –

ಗದ್ಯದ ಅನ್ವಯಕ್ರಮ:

ಅಂತು ಕರ್ಣ ನಿಶಿತ ವಿಕರ್ಣಹತಿಯಿಂದಂ ಅಸುರಾಂತಕಂ ಕೞಿಯೆ ನೊಂದು-

ಪದ-ಅರ್ಥ:

ಅಂತು-ಹಾಗೆ;  ನಿಶಿತ-ಹರಿತವಾದ;  ವಿಕರ್ಣ-ಒಂದು ವಿಧದ ಬಾಣ;  ಹತಿಯಿಂದ-ಗಾಯದಿಂದ;  ಅಸುರಾಂತಕಂ-ಕೃಷ್ಣನು;  ಕೞಿಯೆ –ಅತಿಯಾಗಿ.

ಹಾಗೆ ಕರ್ಣನ ಹರಿತವಾದ ವಿಕರ್ಣ ಎಂಬ ಬಾಣದ ಗಾಯದಿಂದ ಕೃಷ್ಣನು ಅತಿಯಾಗಿ ನೋವನ್ನನುಭವಿಸಿ-

 

ಕಸೆಯಂ ಬಿಟ್ಟುಱದಭಿಮಂ

ತ್ರಿಸಿ ಚಕ್ರಮನಸುರವೈರಿಯಿಡುವಾಗಳ್ ಬಾ

ರಿಸಿ ಪೆಱತು ಗೊಣೆಯದಿಂದೇ

ಱಿಸಿ ಬಿಲ್ಲಂ ತ್ರಿಭುವನಂಗಳಳ್ಳಾಡುವಿನಂ  ೬

ಪದ್ಯದ ಅನ್ವಯಕ್ರಮ:

ಕಸೆಯಂ ಬಿಟ್ಟ ಅಸುರವೈರಿ ಉಱದೆ ಚಕ್ರಮನ್ ಅಭಿಮಂತ್ರಿಸಿ ಇಡುವಾಗಳ್ ಬಾರಿಸಿ ಪೆಱತು ಗೊಣೆಯದಿಂದ ಬಿಲ್ಲಂ ಏಱಿಸಿ ತ್ರಿಭುವನಂಗಳ್ ಅಳ್ಳಾಡುವಿನಂ.

ಪದ-ಅರ್ಥ:

ಕಸೆಯಂ ಬಿಟ್ಟ-ಚಮ್ಮಟಿಗೆಯನ್ನು ಬಿಟ್ಟುಬಿಟ್ಟ;   ಉಱದೆ-ಎದೆಯಲ್ಲಿ;  ಚಕ್ರಮನ್-ಸುದರ್ಶನ ಚಕ್ರವನ್ನು;  ಅಸುರವೈರಿ-ಕೃಷ್ಣ;  ಇಡುವಾಗಳ್-ಪ್ರಯೋಗಿಸಲು ಮುಂದಾದಾಗ;  ಬಾರಿಸಿ-ತಡೆದು;  ಪೆಱತು-ಬೇರೆ;  ಗೊಣೆಯದಿಂದ-ಬಿಲ್ಲಿನ ಹೆದೆಯಿಂದ;  ಏಱಿಸಿ ಬಿಲ್ಲಂ– ಬಿಲ್ಲನ್ನು ಬಿಗಿದುಕಟ್ಟಿ;  ತ್ರಿಭುವನಂಗಳ್-ಮೂರು ಲೋಕಗಳು(ಸ್ವರ್ಗ, ಮರ್ತ್ಯ, ಪಾತಾಳ);  ಅಳ್ಳಾಡುವಿನಂ-ಅಲುಗಾಡುವಂತೆ, ಕಂಪಿಸುವಂತೆ.

            ತನ್ನ ಕೈಯಲ್ಲಿದ್ದ ಚಮ್ಮಟಿಕೆಯನ್ನು ಬಿಟ್ಟುಬಿಟ್ಟ ಕೃಷ್ಣನು ತನ್ನ ಎದೆಯ ಮೇಲೆ ಕೈಯಿರಿಸಿ ಸುದರ್ಶನ ಚಕ್ರವನ್ನು ಅಭಿಮಂತ್ರಿಸಿ ಇನ್ನೇನು ಕರ್ಣನಿಗೆ ಗುರಿಯಿಡಲು ಮುಂದಾದಾಗ ಅರ್ಜುನ ಕೃಷ್ಣನನ್ನು ತಡೆದು  ಬೇರೊಂದು ಹೆದೆಯನ್ನು ಬಳಸಿ ಕ್ಷಣಮಾತ್ರದಲ್ಲಿ ಬಿಲ್ಲನ್ನು ಬಿಗಿದು ಬಿಲ್ಲನ್ನು ಅಣಿಗೊಳಿಸಿ ಮೂರು ಲೋಕಗಳು ಅಲುಗಾಡುವಂತೆ  ಅರ್ಜುನ ಬಾಣಪ್ರಯೋಗಕ್ಕೆ ಸಿದ್ಧನಾದನು.

            ಒಂದು ಕಡೆ, ಭೂಮಿಯಲ್ಲಿ ಹೂತುಹೋದ ತನ್ನ ತನ್ನ ರಥದ ಚಕ್ರವನ್ನು ಕರ್ಣ ಎತ್ತುವುದಕ್ಕೆ ಪ್ರಯತ್ನಿಸುವಾಗಲೇ ಬಾಣವನ್ನು ಹೂಡಿ ಕರ್ಣನ ರುಂಡವನ್ನು ಹಾರಿಸು, ಬೇರೆ ಸಮಯದಲ್ಲಿ ಅದು ಸುಲಭವಲ್ಲ ಎಂದು ಕೃಷ್ಣ ಅರ್ಜುನನಿಗೆ  ಪರಿಪರಿಯಾಗಿ ಹೇಳಿದರೂ ಅರ್ಜುನ ಕರ್ಣನ ಅಸಹಾಯಕತೆ, ಆಯುಧವಿಲ್ಲದ ಸ್ಥಿತಿ ಹಾಗೂ  ಅವ್ಯಕ್ತವಾದ ಮಮಕಾರಗಳನ್ನು ಮುಂದಿಟ್ಟುಕೊಂಡು ಬಾಣಹೂಡುವುದಕ್ಕೆ ನಿರಾಕರಿಸಿದ್ದನು. ಇನ್ನೊಂದು ಕಡೆ, ರಥದ ಚಕ್ರವನ್ನೆತ್ತಿ ಅದನ್ನು ಸಮಸ್ಥಿತಿಗೆ ತಂದ ಕರ್ಣ ಕೃಷ್ಣನ ಎದೆಯನ್ನೇ ಸೀಳುವಂತೆ ಬಾಣವನ್ನು ಪ್ರಯೋಗಿಸಿ ಘಾತಿಸಿದುದರಿಂದ ಕೃಷ್ಣ ಕರ್ಣನ ಮೇಲೆ ಕೋಪಗೊಂಡು ಅರ್ಜುನನಿಂದ ಸಾಧ್ಯವಿಲ್ಲದಿದ್ದರೆ ತಾನೇ ಕರ್ಣನನ್ನು ಮುಗಿಸುತ್ತೇನೆ ಎಂದುಕೊಂಡು ತನ್ನ ಚಮ್ಮಟಿಗೆಯನ್ನು ಬಿಟ್ಟುಬಿಟ್ಟು ಸುದರ್ಶನಚಕ್ರವನ್ನು ಅಭಿಮಂತ್ರಿಸಿ ಕರ್ಣನಿಗೆ ಗುರಿಯಿಡಲು ಮುಂದಾಗುತ್ತಾನೆ. ಅಷ್ಟರಲ್ಲಿ ಅರ್ಜುನನೂ ಕೃಷ್ಣನ ಮೇಲೆ ಕರ್ಣ ಪ್ರಯೋಗಿಸಿದ ಬಾಣದಿಂದ ಆಕ್ರೋಶಿತನಾಗಿ ಕೃಷ್ಣನನ್ನು ತಡೆದು ಈಗಾಗಲೇ ಕರ್ಣ ತುಂಡರಿಸಿದ ಹೆದೆಗೆ ಬದಲಾಗಿ ಬೇರೊಂದು ಹೆದೆಯನ್ನು ಕ್ಷಣಮಾತ್ರದಲ್ಲಿ ಬಿಗಿದುಕಟ್ಟಿ ಮೂರು ಲೋಕಗಳು ಅಲ್ಲೋಲಕಲ್ಲೋಲವಾಗುವಂತೆ ಕರ್ಣನನ್ನು ಎದುರಿಸುವುದಕ್ಕೆ ಸಿದ್ಧನಾದನು. ಚಕ್ರವನ್ನೆತ್ತುವಾಗ ಕರ್ಣ ನಿರಾಯುಧನಾಗಿದ್ದನೆಂಬ ಕಾರಣಕ್ಕೆ ತಾನು ಬಾಣವನ್ನು ಪ್ರಯೋಗಿಸಿರಲಿಲ್ಲ. ಆದರೆ, ಕರ್ಣ ಅದಾವುದನ್ನೂ ಪರಿಭಾವಿಸದೆ ಸಾರಥಿಯಾಗಿರುವ, ನಿರಾಯುಧನಾದ ಕೃಷ್ಣನ ಮೇಲೆ ಬಾಣವನ್ನು ಪ್ರಯೋಗಿಸಿ ಘಾತಿಸಿದುದು ಅರ್ಜುನನನ್ನು ರೊಚ್ಚಿಗೆಬ್ಬಿಸಿತು.

 

ಗದ್ಯ:  ಮುನ್ನಮಿಂದ್ರಕೀಲ ನಗೇಂದ್ರದೊಳ್ ಪಶುಪತಿಯನಾರಾಧಿಸಿ ಪಾಶುಪತಾಸ್ತ್ರಂಬಡೆದಂದು ತೆಲ್ಲಟಿಯೆಂದು –

ಗದ್ಯದ ಅನ್ವಯಕ್ರಮ:

ಮುನ್ನಂ ಇಂದ್ರಕೀಲ ನಗೇಂದ್ರದೊಳ್ ಪಶುಪತಿಯನ್ ಆರಾಧಿಸಿ ತೆಲ್ಲಟಿ ಎಂದು ಪಾಶುಪತ ಅಸ್ತ್ರಂ ಪಡೆದಂದು –

ಪದ-ಅರ್ಥ:

ಮುನ್ನಂ-ಈ ಹಿಂದೆ;  ಇಂದ್ರಕೀಲ ನಗೇಂದ್ರದೊಳ್-ಇಂದ್ರಕೀಲ ಎಂಬ ಪರ್ವತದಲ್ಲಿ;  ಪಶುಪತಿಯನಾರಾಧಿಸಿ-ತಪಸ್ಸಿನಿಂದ ಶಿವನನ್ನು ಮೆಚ್ಚಿಸಿ;  ಪಾಶುಪತಾಸ್ತ್ರಂಬಡೆದ-ಶಿವನಿಂದ ಪಾಶುಪಾತ ಎಂಬ ಬಾಣವನ್ನು ಪಡೆದ;  ಅಂದು-ಅನಂತರ;   ತೆಲ್ಲಟಿಯೆಂದು-ಉಡುಗೊರೆಯಾಗಿ.

            ಈ ಹಿಂದೆ ವನವಾಸ ಕಾಲದಲ್ಲಿ ವೇದವ್ಯಾಸರ ಸಲಹೆಯಂತೆ ಇಂದ್ರಕೀಲ ಪರ್ವತದಲ್ಲಿದ್ದುಕೊಂಡು ಶಿವನನ್ನು ಕುರಿತು ತಪಸ್ಸನ್ನು ಮಾಡಿ ಶಿವನನ್ನು ಮೆಚ್ಚಿಸಿ ಆತನಿಂದ ಪಾಶುಪತಾಸ್ತ್ರ ಎಂಬ ಅಮೋಘ ಶಕ್ತಿಯುಳ್ಳ ಬಾಣವನ್ನು ಪಡೆದ ಅನಂತರ-

 

ಗಿರಿಜೆಯ ಮೆಚ್ಚಿ ಕೊಟ್ಟ ನಿಶಿತಾಸ್ತ್ರಮನಂಜಲಿಕಾಸ್ತ್ರಮಂ ಭಯಂ

ಕರತರಮಾಗೆ ಕೊಂಡು ವಿಧಿಯಿಂದಭಿಮಂತ್ರಿಸಿ ಪೂಡೆ ಬಿಲ್ಲೊಳು

ರ್ವರೆ ನಡುಗಿತ್ತಜಾಂಡಮೊಡೆದತ್ತು ನೆಲಂ ಪಿಡುಗಿತ್ತು ಸಪ್ತ ಸಾ

ಗರಮುಡುಗಿತ್ತು ಸಾಹಸಮದೇಂ ಪಿರಿದೋ ಕದನ ತ್ರಿಣೇತ್ರನಾ   ೭

ಪದ್ಯದ ಅನ್ವಯಕ್ರಮ:

ಗಿರಿಜೆಯ ಮೆಚ್ಚಿ ಕೊಟ್ಟ ನಿಶಿತ ಅಸ್ತ್ರಮನ್ ಅಂಜಲಿಕಾಸ್ತ್ರಮಮ್ ಭಯಂಕರತರಂ ಆಗೆ ಕೊಂಡು ವಿಧಿಯಿಂದ ಅಭಿಮಂತ್ರಿಸಿ ಬಿಲ್ಲೊಳು ಪೂಡೆ ಉರ್ವರೆ ನಡುಗಿತ್ತು, ಅಜಾಂಡಂ ಒಡೆದತ್ತು, ನೆಲಂ ಪಿಡುಗಿತ್ತು, ಸಪ್ತಸಾಗರಂ ಉಡುಗಿತ್ತು, ಕದನ ತ್ರಿಣೇತ್ರನಾ ಸಾಹಸಮದೇಂ ಪಿರಿದೋ.

ಪದ-ಅರ್ಥ:

ಗಿರಿಜೆಯ(ವಿಭಕ್ತಿ ಪಲ್ಲಟ: ಪ್ರಥಮಾ ವಿಭಕ್ತಿಗೆ ಬದಲಾಗಿ ಷಷ್ಠಿ ವಿಭಕ್ತಿ ಪ್ರಯೋಗ)-ಪಾರ್ವತಿಯು;  ಮೆಚ್ಚಿ ಕೊಟ್ಟ-ಮೆಚ್ಚುಗೆಯಿಂದ ನೀಡಿದ;  ನಿಶಿತಾಸ್ತ್ರಮನ್-ಹರಿತವಾದ ಬಾಣವನ್ನು, ತೀಕ್ಷ್ಣವಾದ ಬಾಣವನ್ನು;  ಅಂಜಲಿಕಾಸ್ತ್ರಮಂ– ಅಂಜನಾಸ್ತ್ರವನ್ನು;  ಭಯಂಕರತರಮಾಗೆ-ಭಯಭೀತವಾಗುವಂತೆ;  ಕೊಂಡು-ಕೈಯಲ್ಲಿ ಹಿಡಿದು;  ವಿಧಿಯಿಂದಭಿಮಂತ್ರಿಸಿ-ಮಂತ್ರಪೂರ್ವಕ ಅಭಿಮಂತ್ರಿಸಿ;  ಪೂಡೆ ಬಿಲ್ಲೊಳು-ಬಿಲ್ಲಿಗೆ ಹೂಡಿದಾಗ;  ಉರ್ವರೆ-ಭೂಮಿ;  ನಡುಗಿತ್ತು-ಕಂಪಿಸಿತು;  ಅಜಂಡಮೊಡೆದತ್ತು-ಬ್ರಹ್ಮಾಂಡವು ಒಡೆಯುವಂತಾಯಿತು;  ನೆಲಂ ಪಿಡುಗಿತ್ತು-ಕಂಪಿಸಿತು;  ಸಪ್ತಸಾಗರಮುಡುಗಿತ್ತು-ಏಳು ಸಮುದ್ರಗಳು ಅಡಗಿಹೋದವು;  ಸಾಹಸಮದೇಂ ಪಿರಿದೋ – ಅದೆಂತಹ ಅತಿಶಯವಾದ ಸಾಹಸ; ಕದನ ತ್ರಿಣೇತ್ರನ್ –ಯುದ್ಧದಲ್ಲಿ ಶಿವನ ಸಾಮರ್ಥ್ಯಕ್ಕೆ ಸಮಾನನಾದವನು (ಅರ್ಜುನ). 

            ಪಾರ್ವತಿಯು ತನ್ನ ತಪಸ್ಸಿಗೆ ಮೆಚ್ಚುಗೆಯಿಂದ ಉಡುಗೊರೆಯಾಗಿ ನೀಡಿದ ಹರಿತವಾದ ಬಾಣವನ್ನು ಕೈಯಲ್ಲಿ ಹಿಡಿದುಕೊಂಡು ಭಯಭೀತವಾಗುವಂತೆ ಮಂತ್ರಪೂರ್ವಕ ಅಭಿಮಂತ್ರಿಸಿ ಬಿಲ್ಲಿಗೆ ಅದನ್ನು ಹೂಡಿದಾಗಲೇ ಭೂಮಿ ಕಂಪಿಸುವಂತಾಯಿತು, ಬ್ರಹ್ಮಾಂಡವೇ ಒಡೆಯುವಂತಾಯಿತು, ನೆಲವೇ ನಡುಗುವಂತಾಯಿತು, ಏಳು ಸಾಗರಗಳು ಅಡಗಿಹೋಗುವಂತಾಯಿತು. ಕದನ ತ್ರಿಣೇತ್ರನಾದ ಅರ್ಜುನನು ಕೇವಲ ಬಾಣವನ್ನು ಬಿಲ್ಲಿಗೆ ಹೂಡುವುದರಲ್ಲಿಯೇ ಅದೆಂತಹ ಸಾಹಸವನ್ನು ಮೆರೆದನು!

            ಅರ್ಜುನ ಈ ಹಿಂದೆ ತನ್ನ ತಪಸ್ಸಿನಿಂದ ಶಿವನನ್ನು ಮೆಚ್ಚಿಸುವುದರೊಂದಿಗೆ ಪಾರ್ವತಿಯನ್ನೂ ಮೆಚ್ಚಿಸಿದವನು. ಶಿವನಿಂದ ಪಾಶುಪತಾಸ್ತ್ರವನ್ನು ಪಡೆದರೆ, ಪಾರ್ವತಿಯಿಂದ ಅಂಜನಾಸ್ತ್ರವನ್ನು ಉಡುಗೊರೆಯಾಗಿ ಪಡೆದವನು. ಎರಡೂ ಅಸ್ತ್ರಗಳು ಅತ್ಯಂತ ಅಮೋಘವಾದ, ಬಲಶಾಲಿಯಾದ, ಕ್ಷಣಮಾತ್ರದಲ್ಲಿ ಶತ್ರುಸಂಹಾರವನ್ನು ಮಾಡಬಲ್ಲ ಅಪೂರ್ವವಾದ ದಿವ್ಯಾಸ್ತ್ರಗಳು. ಅವುಗಳಲ್ಲಿ ಅರ್ಜುನ ಮೊದಲಿಗೆ ಅಂಜನಾಸ್ತ್ರವನ್ನು ಕೈಯಲ್ಲಿ ಹಿಡಿದು ಅದಕ್ಕನುಗುಣವಾದ ಮಂತ್ರವನ್ನು ಅಭಿಮಂತ್ರಿಸಿಕೊಂಡು ಬಿಲ್ಲಿಗೆ ಹೂಡಿ ಹೆದೆಯನ್ನು ಏರಿಸಿದೊಡನೆಯೇ ಭೂಮಿಯಲ್ಲಿ ಅಲ್ಲೋಲಕಲ್ಲೋಲಗಳು ಉಂಟಾದವು. ಒಂದೆಡೆ ಭೂಮಿ ಕಂಪಿಸಿದರೆ, ಇನ್ನೊಂದೆಡೆ ಬ್ರಹ್ಮಾಂಡವೇ ಒಡೆಯುವಂತಾಯಿತು, ಮತ್ತೊಂದೆಡೆ ನೆಲವೇ ನಡುಗುವಂತಾಯಿತು, ಮಗುದೊಂದೆಡೆ ಸಪ್ತಸಾಗರಗಳು ಉಡುಗಿಹೋಗುವಂತಾಯಿತು. ಕೇವಲ ಬಿಲ್ಲಿಗೆ ಬಾಣವನ್ನು ಹೂಡುವುದರಲ್ಲಿಯೇ ಇಂತಹ ಅಸಾಧ್ಯವಾದವುಗಳನ್ನು ಸಾಧ್ಯವಾಗಿಸುವ, ಸ್ಥಿರವಾದವುಗಳನ್ನು ಅಲ್ಲೋಲಕಲ್ಲೋಲಮಾಡುತ್ತಿರುವ  ಅರ್ಜುನನ ಸಾಹಸ ಇನ್ನೆಷ್ಟಿರಬೇಡ? ಅರ್ಜುನ ಯುದ್ಧದಲ್ಲಿ ತ್ರಿಣೇತ್ರನಿಗೆ ಸರಿಸಮಾನನಾಗಿ ಕದನತ್ರಿಣೇತ್ರನೆನಿಸಿಕೊಂಡನು.

 

ಗದ್ಯ: ಆಗಳಖಿಳ ಭುವನ ಭವನ ಸಂಹಾರಕಮಪ್ಪಂಜಲಿಕಾಸ್ತ್ರಮನಮೋಘಾಸ್ತ್ರ ಧನಂಜಯನಾಕರ್ಣಾಂತಂಬರಂ ತೆಗೆದಾ ಕರ್ಣಾಂತಂ ಮಾಡಲ್ ಬಗೆದು ಕಂಧರ ಸಂಧಿಯಂ ನಿಟ್ಟಿಸಿ –

ಗದ್ಯದ ಅನ್ವಯಕ್ರಮ:

ಆಗಳ್ ಅಖಿಳ ಭುವನ ಭವನ ಸಂಹಾರಕಮಪ್ಪ ಅಮೋಘ ಅಸ್ತ್ರ ಅಂಜಲಿಕಾ ಅಸ್ತ್ರಮನ್ ಧನಂಜಯನ್ ಆಕರ್ಣಾಂತಂಬರಂ ತೆಗೆದು ಆ ಕರ್ಣಾಂತಂ ಮಾಡಲ್ ಬಗೆದು ಕಂಧರ ಸಂಧಿಯಂ ನಿಟ್ಟಿಸಿ-

ಪದ-ಅರ್ಥ:

ಆಗಳ್ –ಅಷ್ಟರಲ್ಲಿ;  ಅಖಿಳ-ಸಮಸ್ತ;  ಭುವನ-ಲೋಕ;  ಭವನ-ಸೌಧ;  ಸಂಹಾರಕಮಪ್ಪ-ನಾಶಮಾಡುವಷ್ಟು ಸಮರ್ಥವಾದ;  ಅಂಜಲಿಕಾಸ್ತ್ರಮನ್-ಅಂಜನಾಸ್ತ್ರವನ್ನು;  ಅಮೋಘಾಸ್ತ್ರ-ಅತ್ಯಂತ ಶಕ್ತಿಶಾಲಿಯಾದ ಬಾಣ;  ಧನಂಜಯನ್-ಅರ್ಜುನನು;  ಆಕರ್ಣಾಂತಂಬರಂ ತೆಗೆದು-ಕಿವಿಯವರೆಗೆ ಹೆದೆಯನ್ನು ಎಳೆದು; ಕರ್ಣಾಂತಂ-ಕರ್ಣನನ್ನು ಮುಗಿಸಲು;  ಬಗೆದು-ತೀರ್ಮಾನಿಸಿ;  ಕಂಧರ ಸಂಧಿಯಂ-ಕುತ್ತಿಗೆಯ ಸಂದನ್ನು;  ನಿಟ್ಟಿಸಿ-ಎವೆಯಿಕ್ಕದೆ ನೋಡಿ. 

            ಅಷ್ಟರಲ್ಲಿ ಅರ್ಜುನನು ಸಮಸ್ತ ಲೋಕಗಳನ್ನೂ ಸೌಧಗಳನ್ನೂ ನಾಶಮಾಡುವಷ್ಟು ಸಮರ್ಥವಾದ, ಅತ್ಯಂತ ಶಕ್ತಿಶಾಲಿಯಾದ ಅಂಜನಾಸ್ತ್ರವನ್ನು ಬಿಲ್ಲಿಗೆ ಹೂಡಿ ಹೆದೆಯನ್ನು ತನ್ನ ಬಲಕಿವಿಯವರೆಗೆ ಸೆಳೆದು ಒಂದೇ ಬಾಣಾಘಾತದಿಂದ ಕರ್ಣನನ್ನು  ಸಂಹಾರಮಾಡಲು ತೀರ್ಮಾನಿಸಿಕೊಂಡು ಕರ್ಣನ ಕುತ್ತಿಗೆಯ ಸಂದನ್ನು ಎವೆಯಿಕ್ಕದೆ ನೋಡಿ-

            ಅರ್ಜುನನಿಗೆ ಕೃಷ್ಣ ಕೆಲವೇ ಕ್ಷಣಗಳ ಹಿಂದೆ ಹೇಳಿದ ಮಾತು ಸರಿಯೆನಿಸಿತು. ರಥದ ಚಕ್ರವನ್ನು ಎತ್ತುವಾಗಲೇ ಕರ್ಣನನ್ನು ಕೊಲ್ಲಬೇಕಿತ್ತು. ಆದರೆ ಅವನು ಅಸಹಾಯಕ ಸ್ಥಿತಿಯಲ್ಲಿದ್ದುದರಿಂದ ಕೊಲ್ಲಲು ಮನಸ್ಸಾಗಲಿಲ್ಲ. ಆ ಸಂದರ್ಭದಲ್ಲಿಯೇ ತನ್ನ ಮಗನಾದ ಅಭಿಮನ್ಯುವನ್ನು ಇದೇ ಕರ್ಣ ಕೊಂದ ರೀತಿಯನ್ನು ಕೃಷ್ಣನಿಂದ ತಿಳಿದುಕೊಂಡ ಮೇಲೆ ಕರ್ಣನನ್ನು ಅಲ್ಲಿಯೇ ವಧಿಸಬಹುದಿತ್ತು ಎಂಬ ಅರಿವು ಉಂಟಾದರೂ ಅಷ್ಟು ಹೊತ್ತಿನಲ್ಲಿ ಕರ್ಣ ತನ್ನ ರಥದ ಚಕ್ರವನ್ನು ಎತ್ತಿ ರಥವನ್ನೇರಿ ಆಗಿತ್ತು. ಆದರೆ ರಥಿಕನಾದ ತನಗೆ ಬಾಣಪ್ರಯೋಗಿಸುವುದನ್ನು ಬಿಟ್ಟು ಸಾರಥಿಯಾದ ಕೃಷ್ಣನ ಎದೆಯೇ ಸೀಳುವಂತೆ ಬಾಣವನ್ನು ಪ್ರಯೋಗಿಸಿ ಘಾತಿಗೊಳಿಸಿರುವುದು ಅರ್ಜುನನಿಂದ ಸಹಿಸಿಕೊಳ್ಳಲಾಗಲಿಲ್ಲ. ತಕ್ಷಣ ಹಿಂದೆಮುಂದೆ ನೋಡದೆ ಈ ಹಿಂದೆ ಪಾರ್ವತಿಯು ತನ್ನ ತಪಸ್ಸನ್ನು ಮೆಚ್ಚಿ ಉಡುಗೊರೆಯಾಗಿ ನೀಡಿದ ಸಕಲ ಭುವನ, ಭವನಗಳನ್ನು ಕ್ಷಣಮಾತ್ರದಲ್ಲಿ ನಿರ್ನಾಮ ಮಾಡಬಹುದಾದ ಅಂಜನಾಸ್ತ್ರವೇ ತಕ್ಕುದಾದ ಅಸ್ತ್ರವೆಂದು ಮನಸ್ಸಿನಲ್ಲಿಯೇ ಅರಿತುಕೊಂಡು ಅದನ್ನು ಕೈಯಲ್ಲಿ ಹಿಡಿದುಕೊಂಡು ಮಂತ್ರಮುಖೇನ ಅಭಿಮಂತ್ರಿಸಿ ಬಿಲ್ಲಿಗೆ ಹೂಡಿ ತನ್ನ ಬಲಕಿವಿಯವರೆಗೆ ಹೆದೆಯನ್ನು ಸೆಳೆದು ಕರ್ಣನ ಕುತ್ತಿಗೆಯ ಯಾವ ಭಾಗಕ್ಕೆ ಗುರಿಯಿಟ್ಟರೆ ಒಂದೇ ಪ್ರಯೋಗದಿಂದ ಕರ್ಣನನ್ನು ಪರಲೋಕಕ್ಕೆ ಅಟ್ಟಬಹುದು ಎಂದು ಅರ್ಜುನ ಎವೆಯಿಕ್ಕದೆ ನಿಟ್ಟಿಸಿದನು.

 

ಮುಳಿದೆಚ್ಚಾಗಲ್ ಮಹೋಗ್ರಪ್ರಳಯ ಶಿಖಿ ಶಿಖಾನೀಕಮಂ ವಿಸ್ಫುಲಿಂಗಂ

ಗಳುಮಂ ಬೀಱುತ್ತುಮೌರ್ವಜ್ವಳನರುಚಿಯುಮಂ ತಾನೆ ತೋಱುತ್ತುಮಾಟಂ

ದಳುರುತ್ತುಂ ಬಂದು ಕೊಂಡಾಗಳೆ ಗಗನ ತಳಂ ಪಾಯ್ದ ಕೆನ್ನೆತ್ತರಿಂದು

ಚ್ಚಳಿಸುತ್ತಿರ್ಪನ್ನೆಗಂ ಬಿೞ್ದುದು ಭರದೆ ಸಿಡಿಲ್ದತ್ತ ಕರ್ಣೋತ್ತಮಾಂಗಂ   ೮

ಪದ್ಯದ ಅನ್ವಯಕ್ರಮ:

ಮುಳಿದು ಎಚ್ಚಾಗಳ್ ಮಹಾ ಉಗ್ರ ಪ್ರಳಯಶಿಖಿ ಶಿಖಾನೀಕಮಂ, ವಿಸ್ಫುಲಿಂಗಂಗಳುಮಂ ಬೀಱುತ್ತುಂ, ಔರ್ವಜ್ವಳನ ರುಚಿಯುಮಂ ತಾನೆ ತೋಱುತ್ತುಂ ಆಟಂದಳುರುತ್ತುಂ ಬಂದು ಕೊಂಡಾಗಳೆ ಗಗನ ತಳಂ ಪಾಯ್ದ ಕೆನ್ನೆತ್ತರಿಂದ ಉಚ್ಚಳಿಸುತಿರ್ಪ ಅನ್ನೆಗಂ ಕರ್ಣ ಉತ್ತಮಾಂಗಂ ಭರದೆ  ಅತ್ತ ಸಿಡಿಲ್ದು ಬಿೞ್ದುದು.

ಪದ-ಅರ್ಥ:

ಮುಳಿದು-ಕೋಪಗೊಂಡು;  ಎಚ್ಚಾಗಳ್-ಬಾಣಪ್ರಯೋಗಿಸಿದಾಗ;  ಮಹೋಗ್ರಪ್ರಳಯಶಿಖಿ-ಅತ್ಯಂತ ಭೀಕರವಾದ ಪ್ರಳಯಕಾಲದ ಬೆಂಕಿ;  ಶಿಖಾನೀಕಮಂ-ಬೆಂಕಿಯ ಸಮೂಹವನ್ನು;  ವಿಸ್ಫುಲಿಂಗಂಗಳುಮಂ-ಬೆಂಕಿಯ ಕಿಡಿಗಳನ್ನು;  ಬೀಱುತ್ತುಂ-ಪಸರಿಸುತ್ತ;  ಔರ್ವಜ್ವಳನ ರುಚಿಯುಮಂ– ಬಾಡಬಾಗ್ನಿಯ ಜ್ವಾಲೆಯನ್ನು; ತಾನೆ-ಚೆನ್ನಾಗಿ, ಅತಿಯಾಗಿ; ತೋಱುತ್ತುಂ-ತೋರ್ಪಡಿಸುತ್ತ;  ಆಟಂದಳುರುತ್ತುಂ– ಆಡಂಬರದಿಂದ ವ್ಯಾಪಿಸಿಕೊಳ್ಳುತ್ತ;  ಬಂದು ಕೊಂಡಾಗಳ್-ಆಗಮಿಸಿ ಆಹುತಿ ತೆಗೆದುಕೊಂಡಾಗ; ಗಗನ ತಳಂ ಪಾಯ್ದ-ಆಕಾಶದವರೆಗೆ ಹರಡಿದ;  ಕೆನ್ನೆತ್ತರಿಂದ-ಕೆಂಪಾದ ರಕ್ತದೊಂದಿಗೆ;  ಉಚ್ಚಳಿಸುತ್ತಿರ್ಪನ್ನೆಗಂ-ಚಿಮ್ಮುತ್ತಿರುವಷ್ಟರಲ್ಲಿ;  ಬಿೞ್ದುದು-ಬಿದ್ದುಹೋಯಿತು;  ಭರದೆ-ತ್ವರಿತವಾಗಿ;  ಸಿಡಿಲ್ದು-ಸಿಡಿದು;  ಕರ್ಣೋತ್ತಮಾಂಗಂ– ಕರ್ಣನ ತಲೆ, ಕರ್ಣನ ರುಂಡ.

            ಅರ್ಜುನನು ಕೋಪಗೊಂಡು ತನ್ನ ಬಿಲ್ಲಿಗೆ ಹೂಡಿದ್ದ ಅಂಜನಾಸ್ತ್ರವನ್ನು ಕರ್ಣನ ಕುತ್ತಿಗೆಗೆ ಗುರಿಯಿಟ್ಟು ಪ್ರಯೋಗಿಸಿದಾಗ ಅಂಜನಾಸ್ತ್ರವು ಅತ್ಯಂತ ಭೀಕರವಾದ ಪ್ರಳಯಕಾಲದ ಬೆಂಕಿಯನ್ನೂ ಬೆಂಕಿಯ ಕಿಡಿಗಳನ್ನೂ ಬಾಡಬಾಗ್ನಿಯ ಜ್ವಾಲೆಗಳನ್ನೂ ಲೋಕಕ್ಕೆ ಜಾಹೀರಾಗುವಂತೆ ತೋರ್ಪಡಿಸುತ್ತ, ಅತಿಯಾಗಿ ಪಸರಿಸುತ್ತ, ಆಡಂಬರದಿಂದ ವ್ಯಾಪಿಸಿಕೊಳ್ಳುತ್ತ, ಮಿಂಚಿನಂತೆ ವೇಗವಾಗಿ ಬಂದು ಕರ್ಣನ ಕುತ್ತಿಗೆಯನ್ನು ಆಹುತಿ ತೆಗೆದುಕೊಂಡಾಗ ಚಿಮ್ಮುತ್ತಿರುವ ಕೆಂಪಾದ ರಕ್ತವು ಆಕಾಶದವರೆಗೆ ವ್ಯಾಪಿಸಿಕೊಳ್ಳುತ್ತಿರುವಂತೆಯೇ ಕರ್ಣನ ರುಂಡವು ಆತನ ಮುಂಡದಿಂದ ಬೇರ್ಪಟ್ಟು ಭೂಮಿಗೆ ಉರುಳಿಬಿದ್ದಿತು.  

            ಪಾರ್ವತಿಯು ಅರ್ಜುನನಿಗೆ ಉಡುಗೊರೆಯಾಗಿ ನೀಡಿದ ಅಂಜನಾಸ್ತ್ರ ಅತ್ಯಂತ ಶಕ್ತಿಶಾಲಿಯಾಗಿದ್ದು ಎಂದೂ ತನ್ನ ಗುರಿಯನ್ನು ತಪ್ಪಲಾರದ ಅಸ್ತ್ರ. ಮಾತ್ರವಲ್ಲ, ಅದನ್ನು ವಿರೋಧಿಸುವುದಕ್ಕಾಗಲೀ ನಿಗ್ರಹಿಸುವುದಕ್ಕಾಗಲೀ ಸಾಧ್ಯವೂ ಇಲ್ಲ. ಪ್ರತ್ಯಾಸ್ತ್ರವೇ ಇಲ್ಲದ ಅಂತಹ ಅಮೋಘವಾದ ಅಂಜನಾಸ್ತ್ರವನ್ನು ಅರ್ಜುನನು ಅಭಿಮಂತ್ರಿಸಿ ಬಿಲ್ಲಿಗೆ ಹೂಡಿ ತನ್ನ ಸಾಮರ್ಥ್ಯವೆಲ್ಲವನ್ನೂ ಬಳಸಿ ಹೆದೆಯೇರಿಸಿ ಕರ್ಣನ ಕುತ್ತಿಗೆಗೆ ಗುರಿಯಿಟ್ಟು ಪ್ರಯೋಗಿಸಿದ ತಕ್ಷಣವೇ ಅದು ತನ್ನ ಪ್ರಭಾವವನ್ನು ಬೀರತೊಡಗಿತು. ಪ್ರಳಯಕಾಲದ ಬೆಂಕಿಯನ್ನು ಉಗುಳುತ್ತ, ಕಿಡಿಗಳನ್ನು ಸಿಡಿಸುತ್ತ, ಬಾಡಬಾಗ್ನಿಯ ರೀತಿಯ ಜ್ವಾಲೆಗಳನ್ನು ಪಸರಿಸುತ್ತ, ನೋಡುವವರೆಲ್ಲ ಕಂಗಾಲಾಗುವಂತೆ  ಪ್ರಖರವಾದ ತನ್ನ ಪ್ರಭಾವವನ್ನು ಬೀರುತ್ತ ನೋಡನೋಡುತ್ತಿದ್ದಂತೆಯೇ ಕ್ಷಣಮಾತ್ರದಲ್ಲಿ ಕರ್ಣನ ಕುತ್ತಿಗೆಯನ್ನು ಕತ್ತರಿಸಿ ರಕ್ತವನ್ನು ಆಕಾಶದೆತ್ತರಕ್ಕೆ ಚಿಮ್ಮಿಸಿ  ರುಂಡವನ್ನು ನೆಲಕ್ಕುರುಳಿಸಿಬಿಟ್ಟಿತು.  ಅದು ದಿವ್ಯಾಸ್ತ್ರವಾದುದರಿಂದ ಕರ್ಣನಿಂದ ಅದನ್ನು ತಡೆಯಲೂ ನಿಗ್ರಹಿಸಲೂ ಸಾಧ್ಯವಾಗಲಿಲ್ಲ.

ಗದ್ಯ: ಅಂತು ತಲೆ ನೆಲದೊಳುರುಳ್ದೊಡೆ ಲೋಕಕ್ಕೆಲ್ಲಮಗುಂದಲೆಯಾದ ಬೀರಮೆಸೆಯೆ ಪ್ರಾಣಮೊಡಲಿಂದಂ ತೊಲಗೆಯುಂ ತೊಲಗದ ನನ್ನಿಯನುದಾಹರಿಸುವಂತೆ ಪತ್ತೆಂಟು ಕೋಲನೆಚ್ಚಟ್ಟೆಯುಂ ನೆಲದೊಳಾಚಂದ್ರಸ್ಥಾಯಿಯಾಗೆ ಚತುರ್ದಶ ಭುವನಂಗಳಂ ಪಸರಿಸಿ ನಿಂದೊಡೆಸೆದುದಾಹರಣಮೊಳ್ಪಿನುದಾಹರಣಮುಮಾಗೆ ಗುಣಾರ್ಣವನ ಶರ ಪರಿಣತಿಯಿಂದೆ ಕುಲಶೈಲಂ ಬೀೞ್ವಂತೆ ನೆಲನದಿರೆ ಬಿೞ್ದಾಗಳ್ –

ಗದ್ಯದ ಅನ್ವಯಕ್ರಮ:

ಅಂತು ತಲೆ ನೆಲದೊಳ್ ಉರುಳ್ದೊಡೆ, ಲೋಕಕ್ಕೆಲ್ಲಂ ಅಗುಂದಲೆಯಾದ ಬೀರಂ ಎಸೆಯೆ, ಪ್ರಾಣಂ ಒಡಲಿಂದಂ ತೊಲಗೆಯುಂ ತೊಲಗದ ನನ್ನಿಯನ್ ಉದಾಹರಿಸುವಂತೆ ಪತ್ತೆಂಟು ಕೋಲನ್ ಎಚ್ಚಟ್ಟೆಯುಂ ನೆಲದೊಳ್ ಆಚಂದ್ರಾಸ್ಥಾಯಿಯಾಗೆ ಚತುರ್ದಶ ಭುವನಂಗಳಂ ಪಸರಿಸಿ ನಿಂದೊಡೆ ಎಸೆದ ಉದಾಹರಣಂ ಒಳ್ಪಿನ ಉದಾಹರಣಮುಂ ಆಗೆ ಗುರ್ಣಾರ್ಣವನ ಶರ ಪರಿಣತಿಯಿಂದೆ ನೆಲನ್ ಅದಿರೆ ಕುಲಶೈಲಂ ಬೀೞ್ವಂತೆ ಬಿೞ್ದಾಗಳ್-

ಪದ-ಅರ್ಥ:

ಅಂತು-ಹಾಗೆ;  ನೆಲದೊಳುರುಳ್ದೊಡೆ-ನೆಲದ ಮೇಲೆ ಉರುಳಿ ಬಿದ್ದಾಗ;  ಲೋಕಕ್ಕೆಲ್ಲಂ-ಸಮಸ್ತ ಜಗತ್ತಿಗೆ;  ಅಗುಂದಲೆಯಾದ-ಅತಿಶಯವಾದ; ವಿಶೇಷವಾದ;  ಬೀರಮೆಸೆಯೆ-ಪರಾಕ್ರಮವೇ ಶೋಭಿಸುವಂತೆ;  ಪ್ರಾಣಮೊಡಲಿಂದಂ ತೊಲಗೆಯುಂ-ಆತ್ಮವು ದೇಹದಿಂದ ಹೊರಟುಹೋಗಿದ್ದರೂ;  ತೊಲಗದ-ಹೊರಟುಹೋಗದ;  ನನ್ನಿಯನುದಾಹರಿಸುವಂತೆ-ಸತ್ಯವನ್ನು ಜಾಹೀರುಗೊಳಿಸುವಂತೆ;  ಪತ್ತೆಂಟು-ಹತ್ತಾರು, ಹಲವಾರು;   ಕೋಲನೆಚ್ಚಟ್ಟೆಯುಂ-ಬಾಣಗಳನ್ನು ಪ್ರಯೋಗಿಸಿದರೂ;  ನೆಲದೊಳಾಚಂದ್ರ ಸ್ಥಾಯಿಯಾಗೆ-ಭೂಮಿಯಲ್ಲಿ ಸೂರ್ಯ ಚಂದ್ರರು ಇರುವಲ್ಲಿಯವರೆಗೆ ಸ್ಥಿರವಾಗಲು;  ಚತುರ್ದಶ ಭುವನಂಗಳಂ-ಹದಿನಾಲ್ಕು ಲೋಕಗಳಲ್ಲಿಯೂ;  ಪಸರಿಸಿ ನಿಂದೊಡೆ-ವ್ಯಾಪಿಸಿಕೊಂಡು;  ಎಸೆದುದಾಹರಣಂ-ಬಾಣ ಪ್ರಯೋಗಿಸಿದ ದೃಷ್ಟಾಂತವು;  ಒಳ್ಪಿನುದಾಹರಣಮುಮಾಗೆ-ಒಳಿತಿಗೆ ದೃಷ್ಟಾಂತವಾಗುವಂತೆ;  ಗುಣಾರ್ಣವನ-ಅರ್ಜುನನ;  ಶರ ಪರಿಣತಿಯಿಂದೆ-ಬಾಣಪ್ರಯೋಗ ನಿಪುಣತೆಯಿಂದ;  ಕುಲಶೈಲಂ ಬೀೞ್ವಂತೆ-ಕುಲಪರ್ವತೆವೇ ನೆಲಕ್ಕುರುಳುವಂತೆ;   ನೆಲನದಿರೆ – ಭೂಮಿ ಕಂಪಿಸುವಂತೆ;  ಬಿೞ್ದಾಗಳ್-ಬಿದ್ದ ಹೊತ್ತಿನಲ್ಲಿ.

            ಹಾಗೆ ಶಿರವು ನೆಲದ ಮೇಲೆ ಉರುಳಿಬಿದ್ದಾಗ ಸಮಸ್ತ ಜಗತ್ತಿಗೆ ಅತಿಶಯವಾದ ಪರಾಕ್ರಮ ಶೋಭಿಸುವಂತಾಗಲು ಕರ್ಣನ ದೇಹದಿಂದ ಪ್ರಾಣವು ತೊಲಗಿಹೋದರೂ ತೊಲಗಿ ಹೋಗದ ಸತ್ಯವನ್ನು ಉದಾಹರಿಸುವಂತೆ ಮತ್ತೆ  ಹತ್ತೆಂಟು ಬಾಣಗಳನ್ನು ಪ್ರಯೋಗಿಸಿ, ಈ ಭೂಮಿಯಲ್ಲಿ ಸೂರ್ಯ ಚಂದ್ರರು ಇರುವಲ್ಲಿಯವರೆಗೆ ಸ್ಥಿರವಾಗಿ  ಹದಿನಾಲ್ಕು ಲೋಕಗಳಲ್ಲಿಯೂ ವ್ಯಾಪಿಸಿಕೊಂಡಿರುವಂತೆ ಬಾಣಪ್ರಯೋಗಿಸಿದ ದೃಷ್ಟಾಂತವು ಒಳಿತಿನ ದೃಷ್ಟಾಂತವಾಗುವಂತಿರಲು ಅರ್ಜುನನ ಬಾಣಪ್ರಯೋಗ ಪರಿಣತಿಯಿಂದಾಗಿ ಕುಲಪರ್ವತವೇ ಬೀಳುವಂತೆ  ಕರ್ಣನ ದೇಹ ನೆಲಕ್ಕುರುಳಿ ಬಿತ್ತು. ಆ ಹೊತ್ತಿನಲ್ಲಿ-

            ಹಾಗೆ ಅರ್ಜುನನ ಅಂಜನಾಸ್ತ್ರದ ಹೊಡೆತಕ್ಕೆ ಕ್ಷಣದೊಳಗೆ ಕರ್ಣನ ತಲೆ ನೆಲಕ್ಕೆ ಉರುಳಿಬಿದ್ದು ಅರ್ಜುನನ ಪರಾಕ್ರಮವು ಜಗತ್ತಿಗೆ ಅತಿಶಯವಾಗಿ ಶೋಭಿಸುವಂತಾಯಿತು. ಕರ್ಣನ ತಲೆ ನೆಲಕ್ಕುರುಳಿ ಬಿದ್ದರೂ ಪ್ರಾಣ ಆತನ ದೇಹದಿಂದ ತೊಲಗಿಹೋದರೂ ಸತ್ಯವೆಂಬುದು ಮಾತ್ರ ಆತನ ದೇಹದಿಂದ ತೊಲಗಲಿಲ್ಲವೇನೋ  ಎಂಬಂತೆ ಅಚಲವಾಗಿ  ನಿಂತಿತು.  ಸತ್ಯ, ನ್ಯಾಯ, ನಿಷ್ಠೆಗಳನ್ನು ಮೈಗೂಡಿಸಿಕೊಂಡ ಕರ್ಣನ ದೇಹ ರುಂಡವನ್ನು ಕಳೆದುಕೊಂಡರೂ ಅಲುಗಾಡದೆ ಸ್ಥಿರವಾಗಿತ್ತು.  ಅರ್ಜುನ ಮತ್ತೆ ಹತ್ತಾರು ಬಾಣಗಳನ್ನು ಪ್ರಯೋಗಿಸಿ ಕರ್ಣನ ದೇಹವನ್ನು ನೆಲಕ್ಕುರುಳಿಸಬೇಕಾಯಿತು. ಕರ್ಣನ ದೇಹ ಹಾಗೂ ಅದರೊಳಗೆ ಸ್ಥಿರವಾಗಿರುವ ಸತ್ಯ, ನ್ಯಾಯ, ನಿಷ್ಠೆಗಳು ಸುಲಭವಾಗಿ ತೊಲಗಲಾರವು. ಈ ಭೂಮಿಯಲ್ಲಿ ಸೂರ್ಯ ಚಂದ್ರರು ಇರುವಲ್ಲಿಯವರೆಗೆ ಸ್ಥಿರವಾಗಿ ನಿಲ್ಲುವಂತೆ, ಹದಿನಾಲ್ಕು ಲೋಕಗಳಲ್ಲಿಯೂ ಪಸರಿಸಿ ನಿಲ್ಲುವಂತೆ, ಅದನ್ನು ಭಂಗಿಸಲು ಅರ್ಜುನನ ಬಾಣಪ್ರಯೋಗದ ಚಾಕಚಕ್ಯತೆಗಳು ಒಳಿತಿನ ದೃಷ್ಟಾಂತವಾಗಿ ಲೋಕಕ್ಕೆ ಜಾಹೀರುಗೊಳ್ಳುವಂತಾಯಿತು. ಅರ್ಜುನನ ಬಾಣಾಘಾತಕ್ಕೆ ಒಳಗಾದ ಕರ್ಣದ  ದೇಹವು  ಭೂಮಿಯೇ ಕಂಪಿಸುವಂತೆ ಕುಲಪರ್ವತ ನೆಲಕ್ಕುರುಳುವ ರೀತಿಯಲ್ಲಿ ನೆಲಕ್ಕುರುಳಿತು. ಆ ಹೊತ್ತಿನಲ್ಲಿ-

 

ಚಾಗದ ನನ್ನಿಯ ಕಲಿತನ

ದಾಗರಮೆನೆ ನೆಗೞ್ದ ಕರ್ಣನೊಡಲಿಂದೆಂತುಂ

ಪೋಗಲ್ಕಱಿಯದೆ ಸಿರಿ ಕರ

ಮಾಗಳ್ ಕರಿ ಕರ್ಣ ತಾಳ ಸಂಚಳೆಯಾದಳ್   ೯

ಪದ್ಯದ ಅನ್ವಯಕ್ರಮ:

ಚಾಗದ ನನ್ನಿಯ ಕಲಿತನದ ಆಗರಂ ಎನೆ ನೆಗೞ್ದ ಕರ್ಣನ ಒಡಲಿಂದ ಅದೆಂತುಂ ಪೋಗಲ್ಕೆ ಅಱಿಯದೆ ಆಗಳ್ ಸಿರಿ ಕರಂ ಕರಿ ಕರ್ಣ ತಾಳ ಸಂಚಳೆ ಆದಳ್.

ಪದ-ಅರ್ಥ:

ಚಾಗದ-ತ್ಯಾಗದ;  ನನ್ನಿಯ-ಸತ್ಯದ;  ಕಲಿತನದ-ಪರಾಕ್ರಮದ;  ಆಗರಮೆನೆ-ಆಶ್ರಯವೆನ್ನುವಂತೆ, ನೆಲೆಮನೆ ಎನ್ನುವಂತೆ;  ನೆಗೞ್ದ-ಪ್ರಸಿದ್ಧವಾದ;   ಒಡಲಿಂದ-ದೇಹದಿಂದ;  ಅದೆಂತುಂ-ಅದು ಹೇಗೂ, ಯಾವ ರೀತಿಯಲ್ಲಿಯೂ;  ಪೋಗಲ್ಕಱಿಯದೆ-ಹೊರಟು ಹೋಗಲು ತಿಳಿಯದೆ;  ಸಿರಿ-ಲಕ್ಷ್ಮೀ;  ಕರಂ-ವಿಶೇಷವಾಗಿ;  ಆಗಳ್-ಆ ಹೊತ್ತಿನಲ್ಲಿ;  ಕರಿ ಕರ್ಣ ತಾಳ ಸಂಚಳೆಯಾದಳ್-ಆನೆಯ ಕಿವಿಗಳ ಹಾಗೆ ಚಂಚಲೆಯಾದಳು.

            ತ್ಯಾಗದ, ಸತ್ಯದ, ಪರಾಕ್ರಮದ ನೆಲೆಮನೆ ಎನ್ನುವಂತೆ ಲೋಕಪ್ರಸಿದ್ಧನಾದ ಕರ್ಣನ ದೇಹದಲ್ಲಿ ನೆಲೆಸಿರುವ ಲಕ್ಷ್ಮೀಯು ಅಲ್ಲಿಂದ ಯಾವ  ರೀತಿಯಲ್ಲಿಯೂ ಹೊರಟುಹೋಗಲು ತಿಳಿಯದೆ ಆ ಹೊತ್ತಿನಲ್ಲಿ ಆನೆಯ ಕಿವಿಗಳ ಹಾಗೆ ಚಂಚಲೆಯಾದಳು.

            ಕರ್ಣ ತ್ಯಾಗ, ಸತ್ಯ, ಪರಾಕ್ರಮ, ನಿಷ್ಠೆ, ದಾನ ಮೊದಲಾದವುಗಳಲ್ಲಿ ಲೋಕಪ್ರಸಿದ್ಧನಾದವನು. ಇವೆಲ್ಲ ಮೌಲ್ಯಗಳು ಆತನ ದೇಹದೊಳಗೆ ಅಡಕವಾಗಿವೆ. ಅಥವಾ ಇವೆಲ್ಲ ಮೌಲ್ಯಗಳಿಗೆ ಆತನ ದೇಹವು ನೆಲೆಮನೆಯಾಗಿದೆ. ಇಂತಹ ದೇಹದಲ್ಲಿ ಲಕ್ಷ್ಮೀಯು ಇದುವರೆಗೆ ಸಂತಸದಿಂದ  ನೆಲೆಸಿದ್ದಳು. ಈಗ ಯುದ್ಧರಂಗದಲ್ಲಿ  ಅರ್ಜುನನ ಬಾಣಗಳಿಗೆ ತುತ್ತಾಗಿ ಕರ್ಣನ ತಲೆ ಹಾರಿದೆ, ದೇಹ ನೆಲಕ್ಕುರುಳಿದೆ. ಕರ್ಣನ ಪ್ರಾಣ ಆತನ ದೇಹದಿಂದ ಹೊರಟುಹೋಗಿದ್ದರೂ ಆತನ ದೇಹವನ್ನೇ ನೆಲೆಮನೆಯನ್ನಾಗಿ ಮಾಡಿಕೊಂಡಿರುವ ಲಕ್ಷ್ಮೀಗೆ ಅಲ್ಲಿಂದ ಹೊರಟುಹೋಗಲು ಮನಸ್ಸಾಗದೆ ಅವಳು ಹಿಂದೆ ಮುಂದೆ ಅಲೆದಾಡುತ್ತ ಏನು ಮಾಡಬೇಕೆಂದು ತಿಳಿಯದೆ ಚಂಚಲೆಯಾದಳು.

 

ಕುಡುಮಿಂಚಿನ ಸಿಡಿಲುರುಳಿಯೊ

ಳೊಡಂಬಡಂ ಪಡೆಯೆ ಕರ್ಣನೊಡಲಿಂದಾಗಳ್

ನಡೆ ನೋಡೆ ನೋಡೆ ದಿನಪನೊ

ಳೊಡಗೂಡಿದುದೊಂದು  ಮೂರ್ತಿ ತೇಜೋರೂಪಂ  ೧೦

ಪದ್ಯದ ಅನ್ವಯಕ್ರಮ:

ಒಂದು ಮೂರ್ತಿ ಕುಡುಮಿಂಚಿನ ಸಿಡಿಲ ಉರುಳಿಯೊಳ್ ಒಡಂಬಡಂ ಪಡೆಯೆ ಆಗಳ್ ಕರ್ಣನ ಒಡಲಿಂದ ನಡೆ ನೋಡೆ ನೋಡೆ ತೇಜೋರೂಪದಿಂ ದಿನಪನೊಳ್ ಒಡಗೂಡಿದುದು.

ಪದ-ಅರ್ಥ:

ಕುಡುಮಿಂಚಿನ-ಕೋಲ್ಮಿಂಚಿನ, ವಕ್ರವಾದ ಮಿಂಚಿನ;  ಸಿಡಿಲುರುಳಿಯೊಳ್-ಸಿಡಿಲಿನ ಸುರುಳಿಯ ರೂಪದಲ್ಲಿ;  ಒಡಂಬಡಂ ಪಡೆಯೆ-ಸಾಮ್ಯತೆಯನ್ನು ಪಡೆದುಕೊಂಡು, ಸಾದೃಶ್ಯವನ್ನು ಪಡೆದುಕೊಂಡು;  ನಡೆ-ಹೊರನಡೆಯುತ್ತ;  ನೋಡೆ ನೋಡೆ-ನೋಡನೋಡುತ್ತಿದ್ದಂತೆಯೇ, ಕ್ಷಣಮಾತ್ರದಲ್ಲಿ;  ದಿನಪನೊಳ್-ಸೂರ್ಯನಲ್ಲಿ;  ಒಡಗೂಡಿದುದು-ಸೇರಿಕೊಂಡಿತು; ಒಂದು  ಮೂರ್ತಿ-ಒಂದು ರೂಪ;   ತೇಜೋರೂಪದಿಂ-ಪ್ರಕಾಶಮಾನವಾದ ರೂಪದಲ್ಲಿ.

            ಮೂರ್ತಿಯೊಂದು ಕೋಲ್ಮಿಂಚಿನ ಸಿಡಿಲಿನ ಸುರುಳಿಯ ರೂಪದ ಸಾಮ್ಯತೆಯನ್ನು ಪಡೆದುಕೊಂಡು ಕರ್ಣನ ದೇಹದಿಂದ ಹೊರನಡೆಯುತ್ತ ನೋಡನೋಡುತ್ತಿದ್ದಂತೆಯೇ ಪ್ರಕಾಶಮಾನವಾದ ರೂಪದಲ್ಲಿ ಹೊರಟು ಸೂರ್ಯನನ್ನು ಸೇರಿಕೊಂಡಿತು.

            ಕರ್ಣ, ದೂರ್ವಾಸ ಮುನಿಗಳು ನೀಡಿದ ಸೂರ್ಯಮಂತ್ರದ ಮುಖೇನ ವಿವಾಹಪೂರ್ವದಲ್ಲಿ ಕುಂತಿಯಲ್ಲಿ ಜನಿಸಿದವನು. ಈಗ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನಿಂದ ಹತನಾದ ಮೇಲೆ ಆತನ ದೇಹದಲ್ಲಿದ್ದ ಆತ್ಮವು ಒಂದು ಮೂರ್ತಿರೂಪದಲ್ಲಿ ಕೋಲ್ಮಿಂಚಿನ ಸಿಡಿಲ ಸಾಮ್ಯತೆಯನ್ನು ಪಡೆದುಕೊಂಡು ಕರ್ಣನ ದೇಹದಿಂದ ಹೊರನಡೆಯುತ್ತ ಕ್ಷಣಮಾತ್ರದಲ್ಲಿ ಸೂರ್ಯನಲ್ಲಿಗೆ ಹೋಗಿ ಸೇರಿಕೊಂಡಿತು. ಆತನ ಪ್ರಾಣ ಅಸಾಮಾನ್ಯವಾದುದು. ಸೂರ್ಯನಿಂದಲೇ ದೇಹವನ್ನು ಪಡೆದ ಆತ್ಮ ಮತ್ತೆ ಸೂರ್ಯನಲ್ಲಿ ಲೀನವಾಯಿತು.

 

ಪಿಡಿದನೆ ಪುರಿಗಣೆಯನೆರ

ೞ್ನುಡಿದನೆ ಬಳ್ಕಿದನೆ ತಾನೆ ತನ್ನನೆ ಚಲಮಂ

ಪಿಡಿದೞಿದನೆಂದು ದೇವರ

ಪಡೆ ಗಡಣದೆ ಪೊಗೞ್ದುದಿನತನೂಜನ ಗಂಡಂ  ೧೧

ಪದ್ಯದ ಅನ್ವಯಕ್ರಮ:

ಪಿಡಿದನೆ ಪುರಿಗಣೆಯನ್ ಎರೞ್ ನುಡಿದನೆ, ಬಳ್ಕಿದನೆ, ತಾನೆ ತನ್ನನೆ ಚಲಮಂ ಪಿಡಿದು ಅೞಿದನ್ ಎಂದು ಇನತನೂಜನ ಗಂಡಂ ದೇವರ ಪಡೆ ಗಡಣದೆ ಪೊಗೞ್ದುದು.

ಪದ-ಅರ್ಥ:

ಪಿಡಿದನೆ ಪುರಿಗಣೆಯನ್-ದಿವ್ಯಾಸ್ತ್ರವನ್ನು ಪ್ರಯೋಗಿಸಿದನೆ;  ಎರೞ್ನುಡಿದನೆ-ಕೊಟ್ಟ ಮಾತಿಗೆ ಮೀರಿದನೆ;  ಬಳ್ಕಿದನೆ-ಹೆದರಿದನೆ;  ತಾನೆ ತನ್ನನೆ-ತಾನು ತನ್ನಿಚ್ಛೆಯಂತೆ;  ಚಲಮಂ ಪಿಡಿದು-ಛಲವನ್ನು ನೆಚ್ಚಿಕೊಂಡು;  ಅೞಿದನೆಂದು-ಸತ್ತುಹೋದನೆಂದು;  ದೇವರ ಪಡೆ-ದೇವತೆಗಳ ಸಮೂಹ; ಗಡಣದೆ-ಒಟ್ಟುಸೇರಿಕೊಂಡು; ಪೊಗೞ್ದುದು-ಹೊಗಳಿತು, ಕೊಂಡಾಡಿತು;  ಇನತನೂಜನ – ಕರ್ಣನ;   ಗಂಡಂ– ಶೌರ್ಯವನ್ನು.

            ಕರ್ಣ ಯುದ್ಧದ ಸಂದರ್ಭದಲ್ಲಿ ದಿವ್ಯಾಸ್ತ್ರವನ್ನು ಪ್ರಯೋಗಿಸಿದನೆ? ಕೊಟ್ಟ ಮಾತಿಗೆ ಮೀರಿದನೆ? ಯುದ್ಧರಂಗದಲ್ಲಿ ಹೆದರಿದನೆ? ತಾನು ತನ್ನಿಚ್ಛೆಯಂತೆ ತನ್ನ ಛಲವನ್ನು ನೆಚ್ಚಿಕೊಂಡು ಸತ್ತುಹೋದನಲ್ಲಾ! ಎಂದುಕೊಳ್ಳುತ್ತ ಆಕಾಶದಲ್ಲಿ ದೇವತೆಗಳ ಸಮೂಹವು ಒಟ್ಟುಸೇರಿಕೊಂಡು ಸೂರ್ಯಪುತ್ರನಾದ ಕರ್ಣನ ಶೌರ್ಯವನ್ನು ಕೊಂಡಾಡಿತು.

            ಕರ್ಣ ಒಂದರ್ಥದಲ್ಲಿ ಯುದ್ಧರಂಗದಲ್ಲಿ ಅಸಹಾಯಕನಾಗಿದ್ದ. ಒಂದು ಕಡೆ ಸಾರಥಿ ರಥದಿಂದ ಇಳಿದುಹೋಗಿದ್ದ. ಇನ್ನೊಂದೆಡೆ ಆತನ ರಥ ಭೂಮಿಯಲ್ಲಿ ಹೂತುಹೋಗಿತ್ತು. ತಾನೊಬ್ಬನೇ ಒಂದೆಡೆ ರಥವನ್ನು ಓಡಿಸುತ್ತ, ಇನ್ನೊಂದೆಡೆ ಯುದ್ಧಮಾಡಬೇಕಾದ ಅನಿವಾರ್ಯ ಪತಿಸ್ಥಿತಿ ಒದಗಿತ್ತು. ಆದರೂ ಕರ್ಣ ಎದೆಗುಂದದೆ ಒಬ್ಬಂಟಿಯಾಗಿಯೇ ಅರ್ಜುನನನೊಂದಿಗೆ ಹೋರಾಡಿನು. ಅಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದರೂ ಕರ್ಣ ತನ್ನನ್ನು ರಕ್ಷಿಸಿಕೊಳ್ಳುವುದಕ್ಕೆ ಮತ್ತು ಎದುರಾಳಿಯಾದ ಅರ್ಜುನನನ್ನು ಸೋಲಿಸುವುದಕ್ಕೆ ಯಾವುದೇ ದಿವ್ಯಾಸ್ತ್ರವನ್ನು ಪ್ರಯೋಗಿಸಲಿಲ್ಲ. ತಾನು ಕುಂತಿಗೆ ಕೊಟ್ಟ ಮಾತನ್ನೂ ಮೀರಲಿಲ್ಲ. ಅಸಹಾಯಕ ಪರಿಸ್ಥಿತಿಯಲ್ಲಿಯೂ ಹೆದರಿಕೊಳ್ಳಲಿಲ್ಲ. ಸಮಸ್ತ ದೇವತೆಗಳ ಸಮೂಹವೇ ಆಕಾಶದಲ್ಲಿ ನೆರೆದುಕೊಂಡು ತನ್ನ ಛಲವನ್ನೇ ನಂಬಿ ತನ್ನಿಚ್ಛೆಯಂತೆ ಏಕಾಂಗಿಯಾಗಿ ಯುದ್ಧರಂಗದಲ್ಲಿ ಹೋರಾಡಿ ಸತ್ತುಹೋದ ರೀತಿಯನ್ನು, ಆತನ ಶೌರ್ಯವನ್ನು ಕೊಂಡಾಡಿದರು.

 

ನೆನೆಯದಿರಣ್ಣ ಭಾರತದೊಳಿಂ ಪೆಱರಾರುಮನೊಂದೆ ಚಿತ್ತದಿಂ

ನೆನೆವೊಡೆ ಕರ್ಣನಂ ನೆನೆಯ ಕರ್ಣನೊಳಾರ್ ದೊರೆ ಕರ್ಣನೇಱು ಕ

ರ್ಣನ ಕಡು ನನ್ನಿ ಕರ್ಣನಳವಂಕದ ಕರ್ಣನ ಚಾಗಮೆಂದು ಕ

ರ್ಣನ ಪಡೆಮಾತಿನೊಳ್ ಪುದಿದು ಕರ್ಣ ರಸಾಯನಮಲ್ತೆ ಭಾರತಂ  ೧೨

ಪದ್ಯದ ಅನ್ವಯಕ್ರಮ:

ಭಾರತದೊಳ್ ಪೆಱರಾರುಮನ್ ನೆನೆಯದಿರಣ್ಣ, ನೆನೆವೊಡೆ ಒಂದೆ ಚಿತ್ತದಿಂ  ಕರ್ಣನಂ ನೆನಯ, ಕರ್ಣನೊಳ್ ಆರ್ ದೊರೆ, ಕರ್ಣನ ಏಱು, ಕರ್ಣನ ಕಡು ನನ್ನಿ, ಕರ್ಣನ ಅಳವು, ಅಂಕದ ಕರ್ಣನ ಚಾಗಂ ಎಂದು ಕರ್ಣನ ಪಡೆಮಾತಿನೊಳ್ ಪುದಿದು ಭಾರತಂ ಕರ್ಣ ರಸಾಯನಂ ಅಲ್ತೆ.

ಪದ-ಅರ್ಥ:

ನೆನೆಯದಿರಣ್ಣ-ನೆನೆಯಬೇಡಿ;  ಭಾರತದೊಳಿಂ– ಇನ್ನು ಮುಂದೆ ಮಹಾಭಾರತದಲ್ಲಿ, ಇನ್ನು ಮುಂದೆ ಭಾರತಯುದ್ಧದಲ್ಲಿ;  ಪೆಱರಾರುಮನ್ – ಬೇರೆ ಯಾರನ್ನೂ; ಒಂದೆ ಚಿತ್ತದಿಂ-ಒಂದೇ ಮನಸ್ಸಿನಿಂದ;  ನೆನೆವೊಡೆ-ನೆನೆಯುವುದಾದರೆ, ಸ್ಮರಿಸುವುದಾದರೆ;  ಕರ್ಣನಂ ನೆನೆಯ-ಕರ್ಣನನ್ನು ಸ್ಮರಿಸಿರಿ;  ಕರ್ಣನೊಳಾರ್ ದೊರೆ-ಕರ್ಣನಿಗೆ ಯಾರು ಸಮಾನರು;  ಕರ್ಣನೇಱು-ಕರ್ಣನ ಪರಾಕ್ರಮ;  ಕರ್ಣನ ಕಡು ನನ್ನಿ-ಕರ್ಣನ ಸತ್ಯನಿಷ್ಠೆ;  ಕರ್ಣನ ಅಳವು-ಕರ್ಣನ ಶಕ್ತಿ;  ಅಂಕದ ಕರ್ಣನ ಚಾಗ-ಯುದ್ಧವೀರನಾದ ಕರ್ಣನ ತ್ಯಾಗ;  ಕರ್ಣನ ಪಡೆಮಾತಿನೊಳ್-ಕರ್ಣನ ಕೀರ್ತಿಯಲ್ಲಿ;  ಪುದಿದು-ಸೇರಿಕೊಂಡು, ಒಳಗೊಂಡು;  ಭಾರತಂ-ಮಹಾಭಾರತವು;  ಕರ್ಣ ರಸಾಯನಮಲ್ತೆ-ಕಿವಿಗಳಿಗೆ ರಸಾಯನವಲ್ಲವೇ.   

            ಇನ್ನು ಮುಂದೆ ಮಹಾಭಾರತದಲ್ಲಿ ಬೇರೆ ಯಾರನ್ನೂ ನೆನೆಯಬೇಡಿ. ನೆನೆಯುವುದಾದರೆ ಒಂದೇ ಮನಸ್ಸಿನಿಂದ ಕರ್ಣನನ್ನು ನೆನೆಯಿರಿ. ಕರ್ಣನಿಗೆ ಯಾರು ಸಮಾನರು? ಕರ್ಣನ ಪರಾಕ್ರಮ, ಕರ್ಣನ ಸತ್ಯನಿಷ್ಠೆ, ಕರ್ಣನ ಶಕ್ತಿ, ಯುದ್ಧವೀರನಾದ ಕರ್ಣನ ತ್ಯಾಗಗಳೆಲ್ಲವೂ ಕರ್ಣನ ಕೀರ್ತಿಯೊಂದಿಗೆ ಸೇರಿಕೊಂಡು ಸಮಸ್ತ ಭಾರತವೇ ಕೇಳುಗರ ಕಿವಿಗಳಿಗೆ ರಸಾಯನವಲ್ಲವೇ!

            ಸಮಸ್ತ ಮಹಾಭಾರತದಲ್ಲಿ ಕರ್ಣನಂತಹ ಪರಾಕ್ರಮಶಾಲಿ ಮತ್ತೊಬ್ಬರಿಲ್ಲ ಎಂಬುದು ಪಂಪನ ಅಭಿಪ್ರಾಯ. ಇನ್ನು ಮುಂದೆ ಮಹಾಭಾರತ ಕಾವ್ಯವನ್ನು ಓದುವಾಗ ಅದರಲ್ಲಿನ ಯಾವ ಪರಾಕ್ರಮಶಾಲಿಯನ್ನೂ ಸ್ಮರಿಸಿಕೊಳ್ಳಬೇಕಾಗಿಲ್ಲ. ಸ್ಮರಿಸಿಕೊಳ್ಳುವುದಾದರೆ ಒಂದೇ ಮನಸ್ಸಿನಿಂದ ಕರ್ಣನೊಬ್ಬನನ್ನು ಮಾತ್ರ ಸ್ಮರಿಸಿಕೊಳ್ಳಿ ಎಂದು ಪಂಪ ಕರ್ಣನನ್ನು ಮುಕ್ತ ಕಂಠದಿಂದ ಕೊಂಡಾಡಿದ್ದಾನೆ. ಆತನ ಪ್ರಕಾರ ಮಹಾಭಾರತದಲ್ಲಿ  ಕರ್ಣನಿಗೆ ಸರಿಸಮಾನರಾದವರು ಯಾರೂ ಇಲ್ಲ. ಕರ್ಣನ ಪರಾಕ್ರಮ, ಸತ್ಯನಿಷ್ಠೆ, ಶಕ್ತಿ, ಏಕಾಂಗಿಯಾದರೂ ಆತ ತೋರಿದ ಯುದ್ಧನೈಪುಣ್ಯ, ಆತನ ತ್ಯಾಗ, ಕೊಟ್ಟ ಮಾತನ್ನು ಮೀರದೆ ಪರಿಪಾಲಿಸುವ ಗುಣ ಮೊದಲಾದವುಗಳಲ್ಲಿ ಕರ್ಣನ ಕೀರ್ತಿ ಹಾಸುಹೊಕ್ಕಾಗಿ ಸೇರಿಕೊಂಡಿದೆ. ಅಂತಹ ಪರಾಕ್ರಮಶಾಲಿಯಾದ ಕರ್ಣನ ಸಾಹಸಗಾಥೆಯನ್ನು ಕೇಳಿದರೆ ಅದು ಸಹೃದಯರ ಕಿವಿಗಳಿಗೆ ರಸಾಯದಷ್ಟು ಮಾಧುರ್ಯವನ್ನು, ತೃಪ್ತಿಯನ್ನು, ಹಿತವನ್ನು, ಆಹ್ಲಾದವನ್ನು ನೀಡುತ್ತದೆ ಎಂಬುದು ಪಂಪನ ನಿಲುವು.  ಅರ್ಜುನ ತನ್ನ ಕಾವ್ಯದ ನಾಯಕನಾದರೂ ಕರ್ಣಾವಸಾನದ ಸಂದರ್ಭದಲ್ಲಿ ಅರ್ಜುನನನ್ನು ಮರೆತು ಕರ್ಣನನ್ನೇ ಕೊಂಡಾಡಿದ್ದಾನೆ.

ಡಾ. ವಸಂತ್ ಕುಮಾರ್, ಉಡುಪಿ.

*****

Leave a Reply

Your email address will not be published. Required fields are marked *